Advertisement

ಪತಿ-ಪತ್ನಿ ಸಮ್ಯಕ್‌ ಬಂಧ

12:30 AM Feb 01, 2019 | Team Udayavani |

ದಾಂಪತ್ಯವೆನ್ನುವುದು ಸೂಜೀದಾರದಂತೆ. ದಾರವೇ ಹರಿದರೂ ಅಥವಾ ಸೂಜಿ ಮುರಿದರೂ ಒಲವೆನ್ನುವ ಅರಿವೆಯ ಹೊಲಿಯಲಾಗುವುದಿಲ್ಲ. ಒಂದು ಪಕ್ಷ ನಾವು ಹೀಗೆ ಇರುವುದನ್ನೇ, ಇರುವಂತೆಯೇ ಹೊದೆಯುತ್ತೇವೆ ಎಂದು ಹೊರಟರೆ ಮಾನ-ಅವಮಾನದ ಜೊತೆಗೆ ಸಂಸಾರದ ಜೀವ, ಅದಕ್ಕಂಟಿಕೊಂಡ ರೆಂಬೆಕೊಂಬೆಗಳು ಒಳಗೊಳಗೇ ಕಾಯಿಲೆ ಬೀಳುತ್ತವೆ, ಮಾನಸಿಕವಾಗಿ ಕಮರಿಹೋಗುತ್ತವೆ. ಜೊತೆಯಿರುವ ವ್ಯಕ್ತಿಯ ವೈಯಕ್ತಿಕ ವ್ಯಕ್ತಿತ್ವವನ್ನು ಪರಸ್ಪರ ಗೌರವಿಸಿದರೆ ಮಾತ್ರ ಒಲುಮೆಯ ಮರ ಚಿಗುರುತ್ತದೆ. ದಿನದಿಂದ ದಿನಕ್ಕೆ ಹೆಮ್ಮರವಾಗುತ್ತ ಸಾಗುತ್ತದೆ.

Advertisement

ಆವತ್ತು ನಾಗರಪಂಚಮಿ. ಹುತ್ತದ ಪೂಜೆ ಮಾಡಲೆಂದು ಊರಿಗೆ ಹೋಗಿದ್ದೆವು. ನಮ್ಮಂತೆಯೇ ಹಲವಾರು ಜನರು ಅಲ್ಲಿಗೆ ಪೂಜೆಗೆಂದು ಬಂದಿದ್ದರು. ಅದರಲ್ಲಿದ್ದ ಒಂದು ಕುಟುಂಬದ ಯಜಮಾನ ಹೆಂಡತಿಯನ್ನು ಜೋರು ಜೋರಾಗಿ ಬೈಯ್ಯುತ್ತಿದ್ದ. ಅಕ್ಕಪಕ್ಕ ನಿಂತಿದ್ದವರು, “”ಇಲ್ಲಿ ಬಂದರೂ ಇವರ ರಾಮಾಯಣ ಮುಗಿಯಲಿಲ್ಲವಲ್ಲಾ…” ಎಂದು ಗುಸುಗುಸು ಪಿಸುಪಿಸು ಮಾತನಾಡುತ್ತಿದ್ದರು. ಕ್ಷಣಹೊತ್ತು ಆ ಕಡೆ ನಮ್ಮ ಗಮನವೂ ಹರಿಯಿತು. ಅಷ್ಟು ಹೊತ್ತಿಗೆ “ಮುಂದೆ ನೋಡಿಕೊಂಡು ಪೂಜೆ ಮುಗಿಸಿ’ ಎಂದು ಚಿಕ್ಕಪ್ಪಗಡುಸಾಗಿ ಮಾತನಾಡಿದ್ದ ಕಂಡು ನಮ್ಮ ಪಾಡಿಗೆ ನಾವು ಪೂಜೆಯಲ್ಲಿ ತೊಡಗಿದೆವು. ಬೇಡವೆಂದರೂ ಅವನ ಬೈಗುಳಗಳು ಕೇಳಿಸುತ್ತಲೇ ಇದ್ದವು.

“”ಮೂದೇವಿ, ಒಂದು ಬೆಂಕಿಪೊಟ್ಟಣ್ಣ ತರೋದು ನೆನಪಿಲ್ಲವೇ. ಅದೇನು ಅಂತ ಸಂಸಾರ ಮಾಡ್ತೀಯೋ. ನಿಮ್ಮಪ್ಪ-ಅಮ್ಮ ಭಾರ ಇಳಿಸಿಕೊಳ್ಳಲು ನಿನ್ನನ್ನು ನನ್ನ ತಲೆಗೆ ತಂದು ಕಟ್ಟಿದರು. ಈಗ ನಾನು ಹೆಣಗಬೇಕಾಗಿದೆ…”  ಹೀಗೆ ಸಾಗಿದ್ದವು. ಅಲ್ಲಿದ್ದವರಲ್ಲಿ ಯಾರೂ ಅಲ್ಲೇನೂ ನಡೆಯುತ್ತಲೇ ಇಲ್ಲವೇನೋ ಎನ್ನುವಂತೆ ಸುಮ್ಮನೆ ತಮ್ಮ ಕೆಲಸಗಳಲ್ಲಿ ತೊಡಗಿದ್ದರು. ಒಬ್ಬ ಪುಟ್ಟ ಹುಡುಗ ಬಂದು ನಮ್ಮ ಹತ್ತಿರ ಬೆಂಕಿಪೊಟ್ಟಣ ತೆಗೆದುಕೊಂಡು ಹೋದ, ಬಹುಶಃ ಅವರ ಮಗ ಅನ್ನಿಸುತ್ತದೆ. ಪೂಜೆ ಮುಗಿಸಿ ಬರುವ ದಾರಿಯಲ್ಲಿ, “”ಯಾರೂ ಆ ಹೆಂಗಸಿನ ಪರವಾಗಿ ಮಾತನಾಡಲಿಲ್ಲವೇಕೆ ? ಯಾರಾದರೂ ಒಬ್ಬರು ಅವನನ್ನು ಹೀಗೆಲ್ಲ ಚಿಕ್ಕ ಚಿಕ್ಕ ವಿಷಯಕ್ಕೆ ನಡುರಸ್ತೆಯಲ್ಲಿ ಬೈಯಬಾರದು ಎಂದು ಹೇಳಬಹುದಿತ್ತಲ್ಲ” ಎಂದು ಚಿಕ್ಕಮ್ಮನನ್ನು ಕೇಳಿದೆ.

“”ಇವೆಲ್ಲ ನಿನಗೆ ಅರ್ಥ ಆಗುವುದಿಲ್ಲ ಕಣೆ ಪುಟ್ಟಿ. ಆ ಮನುಷ್ಯ ಹಾಗೇನೇ, ಯಾರಾದರೂ ಅವರ ಜಗಳದಲ್ಲಿ ಮೂಗು ತೂರಿಸಿದರೆ ಮುಗಿಯಿತು. ಅವರ ಜೊತೆಗೇ ಅವಳ ಸಂಬಂಧ ಕಟ್ಟಿಯೋ… ಇನ್ನೇನೋ ಕೊಂಕು ಮಾತನಾಡಿಯೋ ರಾದ್ಧಾಂತ ಮಾಡಿಬಿಡುತ್ತಾನೆ. ಇದೆಲ್ಲ ಬೇಕಾ… ಎಂದು ಯಾರೂ ಅವರ ತಂಟೆಗೆ ಹೋಗುವುದಿಲ್ಲ. ಪಾಪ ಆ ಹುಡುಗಿ ಏನಂತಾ ಅವನನ್ನು ಕಟ್ಟಿಕೊಂಡಳ್ಳೋ ಗೊತ್ತಿಲ್ಲ. ನನ್ನ ಕಣ್ಣೆದುರಿಗೇ ಅವಳ ಮದುವೆಯಾಯಿತು. ದಿನವೂ ಒಂದಲ್ಲ ಒಂದು ಕಾರಣಕ್ಕೆ ಅವನು ಅನ್ನುತ್ತಲೇ ಇರುತ್ತಾನೆ, ಇವಳು ಕೇಳುತ್ತಲೇ ಇರುತ್ತಾಳೆ. ಮದುವೆಯಾದ ಹೊಸದರಲ್ಲಿ ಒಂದೆರಡು ಬಾರಿ ಅವಳು ತಿರುಗಿಸಿ ಹೇಳಿದ್ದಳು. ಆವತ್ತು ಅವನ ಬೈಗುಳಗಳು ತಾರಕಕ್ಕೇರಿದ್ದವು. ಅಂದು ಹೆತ್ತವರೂ ಬಂದಿದ್ದರು, ಸಂಧಾನ ಮಾಡಲು. ಅದೇನಾಯೊ¤à ಏನೋ ಅವತ್ತಿನಿಂದ ಅವಳ ಬಾಯಿಂದ ಒಂದು ಎತ್ತರದ ಮಾತೂ ಬರುವುದಿಲ್ಲ. ಅವನು ಬೈಯ್ಯುತ್ತಲೇ ಇರುತ್ತಾನೆ. ಇವಳು ಕೇಳುತ್ತಲೇ ಇರುತ್ತಾಳೆ. ಕಿವುಡಿಯ ಹಾಗೆ. ಪಾಪ! ಇವೆಲ್ಲದರ ನಡುವೆ ಅವರ ಮಕ್ಕಳು ಮಾನಸಿಕವಾಗಿ ನೋಯುತ್ತಿದ್ದಾರೆ. ಅದಕ್ಕೇ ನೋಡು ಓದಬೇಕು. ಒಳ್ಳೆ ಕೆಲಸದಲ್ಲಿ ಇರಬೇಕು ಅನ್ನುವುದು. ಆರ್ಥಿಕವಾಗಿ ಹೆಣ್ಣುಮಕ್ಕಳು ಸ್ವತಂತ್ರರಾದರೆ ಇಂತಹ ಪರಿಸ್ಥಿತಿ ಬರುವುದಿಲ್ಲ” ಚಿಕ್ಕಮ್ಮ ಹೇಳುತ್ತಲೇ ಇದ್ದರು. ನನ್ನ ನೆನಪುಗಳು ಶರ್ಮಿಳಾಳ ಜೊತೆ ಕೆಲಸ ಮಾಡುತ್ತಿದ್ದ ದಿನಗಳಿಗೆ ತಿರುಗಿದವು.

ಆವತ್ತು ಮಾರ್ಚ್‌ ತಿಂಗಳ ಕೊನೆಯ ದಿನ. ವರ್ಷದ ಲೆಕ್ಕ ಪತ್ರಗಳ ತಾಳೆ ನೋಡುವ ಕಾರ್ಯ ಸಾಗಿತ್ತು. ಚಾರ್ಟರ್ಡ್‌ ಅಕೌಂಟೆಂಟ… ಕಂಪೆನಿಯಾಗಿದ್ದರಿಂದ ನನ್ನನ್ನು , ಶರ್ಮಿಳಾಳನ್ನು ಸೇರಿಸಿ ಎಲ್ಲರೂ ಕೆಲಸ ಮಾಡುತ್ತಿದ್ದೆವು. ಅದಾಗಲೇ ಮನೆಗೆ ಬರುವುದು ತಡವಾಗುತ್ತದೆ ಎಂದು ಎಲ್ಲರೂ ಫೋನು ಮಾಡಿ ತಿಳಿಸಿದ್ದೂ ಆಗಿತ್ತು. ಇದ್ದಕ್ಕಿದ್ದಂತೆ ಶರ್ಮಿಳಾಳ ಕ್ಯಾಬಿನ್ನಿಗೆ ಬಂದ ಅವಳ ಗಂಡ ಜೋರುಜೋರಾಗಿ ಬೈಯುತ್ತಲಿದ್ದ. ಅದೆಷ್ಟೇ ಅವಳು ಧ್ವನಿ ತಗ್ಗಿಸಲು ಹೇಳಿದರೂ ಮಾರಾಯ ಇನ್ನೂ ಹೆಚ್ಚು ಮಾಡಿದ. “”ಏನು ಸಮಯದ ಪ್ರಜ್ಞೆ ಇದೆಯೋ ಇಲ್ಲವೋ, ಆಗಲೇ ಗಂಟೆ ಎಂಟಾಯ್ತು, ಬರುವುದು ಲೇಟಾಗುತ್ತದೆ ಎಂದು ಫೋನ್‌ ಮಾಡ್ತೀಯ, ಅದೇನು ಘನಂದಾರಿ ಕೆಲಸ ಕಿಸಿಯುತ್ತೀಯೋ, ಭಯ-ಭಕ್ತಿ ಇಲ್ಲದೋಳೆ” ಎಂದು ಏರುಧ್ವನಿಯಲ್ಲಿ ಕೂಗುತ್ತಲೇ ಇದ್ದ. ಆಫೀಸಿನಲ್ಲಿದ್ದವರೆಲ್ಲ ಅವಳತ್ತಲೇ ನೋಡುತ್ತಿದ್ದುದರಿಂದ ಮುಜುಗರಗೊಂಡು ಬ್ಯಾಗನ್ನು ತೆಗೆದುಕೊಂಡು ಅವನ ಜೊತೆಯಲ್ಲಿ ಹೊರಟೇ ಹೋದಳು. ಆಗ ಅವಳನ್ನು ಮಾತನಾಡಿಸಲು ಕೂಡ ಎಲ್ಲರೂ ಹೆದರಿದ್ದರು. ಮರುದಿನ ಆ ಘಟನೆ ನಡೆದೇ ಇಲ್ಲವೇನೋ ಎನ್ನುವಂತೆ ಮಾಮೂಲಿ ಬದುಕಿಗೆ ಮರಳಿದ್ದಳು ಶರ್ಮಿಳಾ.

Advertisement

ಮೇಲಿನ ಎರಡೂ ಪ್ರಕರಣಗಳಲ್ಲಿ ಗಂಡನೆನಿಸಿಕೊಂಡವನು ಅವಳ ಗೌರವಕ್ಕೆ ಧಕ್ಕೆ ಬರುವಂತೆ ಅಷ್ಟೊಂದು ಜನರ ಮಧ್ಯೆ ಕೂಗಾಡಿದ್ದ. ಅವಳು ಅವನನ್ನು ಪ್ರತಿದಿನ ಅದ್ಹೇಗೆ ಸಹಿಸಿಕೊಳ್ಳುತ್ತಾಳ್ಳೋ ಎಂದೆನಿಸಿ ಅವಳ ಬಗ್ಗೆ ಕನಿಕರ ಬಂದರೂ ಯಾರೂ ಅವಳ ಪರ ನಿಲ್ಲಲಿಲ್ಲ. ಅವಮಾನವೆಂಬ ಬಾಣಲೆಯಲ್ಲಿ ಕುದಿಯುತ್ತಿದ್ದರೂ ಅದರಿಂದ ಉಕ್ಕಿ ಹೊರ ಬರುವ ಸ್ಥಿತಿಯಲ್ಲಿಲ್ಲ ಅವಳು. ಅವನಿಗಿಲ್ಲದ ಮಾನ- ಅವಮಾನ ನನಗೇಕೆ? ನಾನೇಕೆ ಪ್ರತಿ ಬಾರಿಯೂ ಸೋಲಬೇಕು ಎಂದು ಅವನ ಹೀಯಾಳಿಕೆಗೆ, ಬೈಗುಳಗಳಿಗೆ ತಿರುಗಿ ನೀಡಲು ಪದಗಳಿದ್ದರೂ ಎಲ್ಲಿ ನನ್ನನ್ನು ಗಂಡ ಬಿಟ್ಟವಳೆನ್ನುತ್ತಾರೋ ಎನ್ನುವ ಭಯ, ಮಕ್ಕಳ ಭವಿಷ್ಯದ ಚಿಂತೆ ಅಥವಾ ಮತ್ತಿನ್ನೇನೋ ಅವಳನ್ನು ಕಿವುಡಿಯಾಗಿಸಿ ಅದೇ ನರಕದಲ್ಲಿ ಜೀವನ ತಳ್ಳುವಂತೆ ಮಾಡಿದೆ. 

ಹೀಗೆ ಸಮಾಜದ ಮುಂದೆ ಹೆಣ್ಣನ್ನು ಮಾನಸಿಕವಾಗಿ ಕೆಲವೊಮ್ಮೆ ದೈಹಿಕವಾಗಿ ಹಿಂಸಿಸುವ ಗಂಡಸರಿಂದ ಅದನ್ನು ಅನುಭವಿಸುತ್ತ, ಕುಗ್ಗುತ್ತ  ಬಾಳುವ ಹೆಂಗಸರಲ್ಲಿ ವಿದ್ಯಾವಂತರು, ಅವಿದ್ಯಾವಂತರೆನ್ನುವ ಯಾವುದೇ ವ್ಯತ್ಯಾಸವಿಲ್ಲ. ಬಡವ-ಶ್ರೀಮಂತ ಎನ್ನುವ ಹೋಲಿಕೆ ಇಲ್ಲ. ಇದು ಕೇವಲ ಒಬ್ಬರನ್ನು ಕೆಳಮಟ್ಟದಲ್ಲಿ ತೋರಿಸಬೇಕು ಅಥವಾ ಅವಳು ನನಗಿಂತ ಎಂದಿಗೂ ಕಡಿಮೆಯೇ, ನನ್ನ ಹದ್ದುಬಸ್ತಿನÇÉೇ ಇರಬೇಕು ಎಂದು ಆಶಿಸುತ್ತ¤, ನಂಬಿ ಹಿಂದೆ ಬಂದ ಜೀವಕ್ಕೆೆ ನೋವುಮಾಡುವುದಷ್ಟೆ ಇಂಥವರ ಉದ್ದೇಶ. ಇಂತಹ ನಡವಳಿಕೆಯವರ ಜೊತೆ ಬದುಕುವುದು ಒಂದು ಸವಾಲೇ ಸರಿ. ಇದೊಂಥರಾ ವಿಕೃತಿ ಎನಿಸಿದರೂ ಅದರಿಂದ ಹೊರಬರುವುದಕ್ಕೆ ಯೋಚಿಸುವುದಷ್ಟೇ, ಕಾರ್ಯ ರೂಪಕ್ಕೆ ತರಲು ಅಸಾಧ್ಯ ನಮ್ಮ ಸಂಸ್ಕೃತಿಯ ಹೆಣ್ಣುಮಕ್ಕಳಿಗೆ. ಅವನಿಗೆ ತನ್ನ ತಪ್ಪಿನ, ವಿಚಿತ್ರ, ಅನಾಗರಿಕ ನಡವಳಿಕೆಯ ಅರಿವಾಗಿ ತಿದ್ದಿಕೊಂಡಾಗ ಮಾತ್ರ ಅವರಿಬ್ಬರ ಬದುಕು ಹಸನಾಗುವುದು. 

ಎಲ್ಲ ಗಂಡಸರೂ ಹೀಗಲ್ಲ. ಆದರೆ, ಈ ರೀತಿ ಅನಾಗರಿಕರಾಗಿ ನಡೆದುಕೊಳ್ಳುವ ಮಂದಿಯೂ ಇ¨ªಾರೆ ಎನ್ನುವುದು ವಿಪರ್ಯಾಸ. ಗಂಡು, ಗಂಡನೆನ್ನುವ ಅಧಿಕಾರವ ನಾಲ್ಕು ಜನರೆದುರಿಗೆ ತೋರಿಸಿಕೊಳ್ಳುವ ಅಗತ್ಯವಾದರೂ ಏನು? ಈ ರೀತಿ ಮಾಡಿದರೆ ಅವಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಭ್ರಮೆಯಾದರೂ ಏತಕ್ಕೆ ? 

ಮದುವೆ ಸರಿಸಮನಾದ ಎರಡು ಮನಸ್ಥಿತಿಗಳ ನಡುವೆ ಏರ್ಪಡುವ ಸಂಬಂಧ. ಯಾರೋ ಅಧಿಕಾರ ಚಲಾಯಿಸುವ ಗುಂಗಿನಲ್ಲಿ ಮತ್ತೂಬ್ಬರು ನೋವು, ಹಿಂಸೆ, ಅವಮಾನವನ್ನು ಅನುಭವಿಸಿದರೆ ಅವರಿಬ್ಬರ ನಡುವಿನ ಮದುವೆ ಸೃಷ್ಟಿಸಿದ ಸಂಬಂಧ ಕೇವಲ ಸಮಾಜದ ತೋರಿಕೆಗಾಗಿ ಅಷ್ಟೇ. ಮಾನಸಿಕವಾಗಿ ಗಂಡ-ಹೆಂಡಿರಿಬ್ಬರೂ ಯಾವತ್ತೂ ಒಂದಾಗಲಾರರು. 

ದಾಂಪತ್ಯವೆನ್ನುವುದು ಸೂಜೀದಾರದಂತೆ. ದಾರವೇ ಹರಿದರೂ ಅಥವಾ ಸೂಜಿ ಮುರಿದರೂ ಒಲವೆನ್ನುವ ಅರಿವೆಯ ಹೊಲಿಯಲಾಗುವುದಿಲ್ಲ. ಒಂದು ಪಕ್ಷ ನಾವು ಹೀಗೆ ಇರುವುದನ್ನೇ, ಇರುವಂತೆಯೇ ಹೊದೆಯುತ್ತೇವೆ ಎಂದು ಹೊರಟರೆ ಮಾನ-ಅವಮಾನದ ಜೊತೆಗೆ ಸಂಸಾರದ ಜೀವ, ಅದಕ್ಕಂಟಿಕೊಂಡ ರೆಂಬೆಕೊಂಬೆಗಳು ಒಳಗೊಳಗೇ ಕಾಯಿಲೆ ಬೀಳುತ್ತವೆ, ಮಾನಸಿಕವಾಗಿ ಕಮರಿಹೋಗುತ್ತವೆ. ಜೊತೆಯಿರುವ ವ್ಯಕ್ತಿಯ ವೈಯಕ್ತಿಕ ವ್ಯಕ್ತಿತ್ವವನ್ನು ಪರಸ್ಪರ ಗೌರವಿಸಿದರೆ ಮಾತ್ರ ಒಲುಮೆಯ ಮರ ಚಿಗುರುತ್ತದೆ. ದಿನದಿಂದ ದಿನಕ್ಕೆ ಹೆಮ್ಮರವಾಗುತ್ತ ಸಾಗುತ್ತದೆ.

ಜಮುನಾರಾಣಿ ಎಚ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next