Advertisement

ಕರಾವಳಿಯಲ್ಲಿ ಮಳೆ, ಕೆಲವೆಡೆ ಹಾನಿ

12:44 AM Mar 19, 2022 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ  ಶುಕ್ರವಾರ ಮಳೆಯಾಗಿದೆ. ದ.ಕ. ಜಿಲ್ಲೆಯ ಶಿಬಾಜೆಯಲ್ಲಿ ಮನೆಯ ಮೇಲೆ ತೆಂಗಿನ ಮರ ಬಿದ್ದು ಶೀಟ್‌ ಹಾಗೂ ಜೀಪಿಗೆ ಹಾನಿಯಾಗಿದೆ.

Advertisement

ಧರ್ಮಸ್ಥಳ ಸಹಿತ ಬೆಳ್ತಂಗಡಿ ತಾಲೂಕಿನಾದ್ಯಂತ ಸುಮಾರು ಅರ್ಧ ಗಂಟೆ ಕಾಲ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಮಡಂತ್ಯಾರು, ಉಜಿರೆ, ಮುಂಡಾಜೆ, ಕೊಕ್ಕಡ, ಅರಸಿನಮಕ್ಕಿ, ಶಿಬಾಜೆ, ನಾರಾವಿ, ಅಳದಂಗಡಿ, ಮದ್ದಡ್ಕ, ಮುಂತಾದ ಕಡೆ ಅರ್ಧ ತಾಸಿಗೂ ಅಧಿಕ ಮಳೆಯಾಗಿದೆ.

ಕೊಲ್ಪದಬೈಲು ಪೆಟ್ರೋಲ್‌ ಪಂಪ್‌ ಬಳಿ ಭಾರೀ ಗಾತ್ರದ ಮರ ಗಾಳಿ ಮಳೆಗೆ ಬಿದ್ದು ವಿದ್ಯುತ್‌  ವಯರಿನ ಮೇಲೆ ಬಿದ್ದು ಹಾನಿಯಾಗಿದೆ.

ತೋಟತ್ತಾಡಿಯಲ್ಲಿ ಸಾಮಾನ್ಯ ಮಳೆ ಹಾಗೂ ಚಾರ್ಮಾಡಿಯಲ್ಲಿ ಗುಡುಗು ಸಹಿತ ಹನಿ ಹನಿ ಮಳೆಯಾಗಿದೆ. ಸಂಜೆ ಬಳಿಕ ಮೋಡ ಕವಿದ ವಾತಾವರಣ ಕಂಡು ಬಂದಿದ್ದು ಬಳಿಕ ಮಳೆ ಸುರಿಯಲಾರಂಭಿಸಿತು. ಕಳೆದ ಕೆಲವು ದಿನಗಳಿಂದ ಬಿಸಿಲಿನ ಬೇಗೆ ತೀವ್ರವಾಗಿದ್ದು ಮಳೆಯಿಂದ ವಾತಾವರಣ ತಂಪಾಗಿದೆ.

ಮೂಡುಬಿದಿರೆ ಮತ್ತು ಕಿನ್ನಿಗೋಳಿ ಹಾಗೂ ಸುಬ್ರಹ್ಮಣ್ಯ, ಪಂಜ, ಕಲ್ಮಡ್ಕ ಪ್ರದೇಶಗಳಲ್ಲಿ  ಗುಡುಗು ಸಹಿತ ಹನಿ ಮಳೆಯಾಗಿದೆ. ಉಳಿದಂತೆ ಜಿಲ್ಲೆಯ ಮಂಗಳೂರು, ಬಂಟ್ವಾಳ , ಉಳ್ಳಾಲ, ಮೂಲ್ಕಿ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇತ್ತು.

Advertisement

ಉಡುಪಿ: ತುಂತುರು ಮಳೆ :

ಉಡುಪಿ: ಜಿಲ್ಲೆಯಾದ್ಯಂತ ಶುಕ್ರವಾರ ಸಾಯಂಕಾಲ ತುಂತುರು ಮಳೆಯಾಗಿದೆ. ಉಡುಪಿ ನಗರದಲ್ಲಿ ಯೂ ಸಾಧಾರಣ ಮಳೆ ಸುರಿದಿದೆ.

ಮಣಿಪಾಲ, ನಾಲ್ಕೂರು, ಕೊಕ್ಕರ್ಣೆ, ಕೆಂಜೂರು, ಪರ್ಕಳ, ಬೆಳ್ವೆ, ಕೋಟ, ಗೋಳಿಯಂಗಡಿ, ಆರ್ಡಿ, ಹೆಬ್ರಿ, ಹಿರಿಯಡ್ಕ, ಕಾರ್ಕಳ ಮೊದಲಾದ ಪ್ರದೇಶಗಳಲ್ಲಿ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣವಿದ್ದು ಸಾಯಂಕಾಲ ಸಾಧಾರಣ ಮಳೆಯಾಗಿದೆ.

ಇನ್ನೂ ಕೆಲವು ದಿನ ಮಳೆ :

ಇದು ಪೂರ್ವ ಮುಂಗಾರು ಮಳೆ ಆಗಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ವಿವಿಧ ಭಾಗಗಳಲ್ಲಿ  ಇನ್ನೂ ಕೆಲವು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಗಾವಸ್ಕರ್‌ ಅವರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಮುಂದಿನ 48 ಗಂಟೆಗಳ ಅವಧಿ ಯಲ್ಲಿ  ಅಂದರೆ ಮಾ. 20 ರ ತನಕವೂ ಕರಾವಳಿಯ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ.

ಅಕಾಲಿಕ ಮಳೆ ಬಂದ ಕಾರಣ ಜಿಲ್ಲೆಯ ವಿವಿಧ ಕಡೆ ಅಡಿಕೆ ಬೆಳೆಗಾರರು ಒಣಗಲು ಹಾಕಿದ ಅಡಿಕೆ ಕೆಲವು ಕಡೆ ಮಳೆ ನೀರಿನಿಂದ ತೊಯ್ದಿದೆ. ಎಡೆ ಕೊಳಕೆ ಭತ್ತ  ಬೆಳೆಸಿದವರಿಗೂ ಈ ಮಳೆಯಿಂದ ತೊಂದರೆ ಉಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next