Advertisement

ಆಟೋ, ಕ್ಯಾಬ್‌ ಡ್ರೈವರ್‌ಗಳಿಗೆ ಗುಡ್‌ ನ್ಯೂಸ್‌

10:32 PM Aug 04, 2023 | Team Udayavani |

ಬೆಂಗಳೂರು: ಸರ್ಕಾರ ಇದೀಗ ಆಟೋ ಮತ್ತು ಮ್ಯಾಕ್ಸಿ ಕ್ಯಾಬ್‌ ಡ್ರೈವರ್‌ಗಳ ಹಿತಕಾಯಲು ಮುಂದಾಗಿದೆ.

Advertisement

“ನೋ ಲಾಸ್‌ ನೋ ಪ್ರಾಫಿಟ್‌” ಪರಿಕಲ್ಪನೆಯಲ್ಲಿ ಸಾರಿಗೆ ಇಲಾಖೆ ಶೀಘ್ರದಲ್ಲೇ ಹೊಸ ಆ್ಯಪ್‌ ಪರಿಚಯಿಸಲು ರೂಪುರೇಷೆ ಸಿದ್ಧಪಡಿಸುತ್ತಿದೆ. ಆ್ಯಪ್‌ ಆಧಾರಿತ ಸಾರಿಗೆ ಸೇವೆ ನೀಡುತ್ತಿರುವ ಕೆಲವು ಖಾಸಗಿ ಸಂಸ್ಥೆಗಳು ಆಟೋ ಮತ್ತು ಮ್ಯಾಕ್ಸಿ ಕ್ಯಾಬ್‌ ಚಾಲಕರಿಗೆ ಕಡಿಮೆ ಹಣ ನೀಡಿ ತಾವು ಹೆಚ್ಚಿನ ಲಾಭ ಪಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಸರ್ಕಾರ ತೀರ್ಮಾನಿಸಿದೆ. ಬೆಂಗಳೂರಿನಲ್ಲಿ ಕೆಲವೇ ತಿಂಗಳಲ್ಲಿ ಹೊಸ ಆ್ಯಪ್‌ನ ಪ್ರಾಥಮಿಕ ಪ್ರಯೋಗಕ್ಕೆ ಚಾಲನೆ ಸಿಗಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಈ ಹಿಂದೆ ಆಟೋ ಯೂನಿಯನ್‌ಗಳು ಸಾರಿಗೆ ಸಂಸ್ಥೆಯಿಂದ ಒಂದು ಆ್ಯಪ್‌ ಸಿದ್ಧಪಡಿಸುವಂತೆ ಒತ್ತಾಯಿಸಿದ್ದವು. ಆಟೋ ಯೂನಿಯನ್‌ಗಳ ಸಭೆಯಲ್ಲೂ ಸರ್ಕಾರವೇ ಆ್ಯಪ್‌ ಮಾಡಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳ ಜತೆಗೆ ಮಾತನಾಡಿದ್ದು, ಆ್ಯಪ್‌ ಸಿದ್ಧಪಡಿಸಲು ಒಪ್ಪಿಗೆ ನೀಡಿರುವುದಾಗಿ ಹೇಳಿದರು.

ಹೊಸ ಆ್ಯಪ್‌ನಲ್ಲಿ ಆಟೋ, ಟ್ಯಾಕ್ಸಿ ಸೇರಿ ಎಲ್ಲ ಸಾರಿಗೆ ವ್ಯವಸ್ಥೆಯನ್ನು ಅಳವಡಿಕೆ ಮಾಡುವಂತೆ ಸೂಚಿಸಲಾಗಿದೆ. ದರ ನಿಗದಿ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ. ಈಗಾಗಲೇ ಖಾಸಗಿ ಸಂಸ್ಥೆಗಳು ಅಧಿಕ ಹಣ ಪಡೆದು ಚಾಲಕರಿಗೆ ಕಡಿಮೆ ಹಣ ನೀಡುತ್ತಿವೆ. ಗ್ರಾಹಕರಿಗೆ 850 ರೂ. ಚಾರ್ಜ್‌ ಮಾಡಿದರೆ ಡ್ರೈವರ್‌ಗಳಿಗೆ 450 ರೂ. ನೀಡುತ್ತಾರೆ. ನಾವು ಆ ರೀತಿ ಮಾಡಲಾಗದು, “ನೋ ಲಾಸ್‌, ನೋ ಪ್ರಾಫಿಟ್‌’ ಪರಿಕಲ್ಪನೆಯಲ್ಲಿ ಆ್ಯಪ್‌ ಪರಿಚಯಿಸಲಾಗುವುದು ಎಂದರು.

ನಾಲ್ಕೈದು ತಿಂಗಳಲ್ಲಿ ಆ್ಯಪ್‌ ಸಿದ್ಧ: ಸರ್ಕಾರಕ್ಕೆ ಆಟೋ, ಮ್ಯಾಕ್ಸಿಕ್ಯಾಬ್‌ ಚಾಲಕರಿಂದ ಯಾವುದೇ ರೀತಿ ಲಾಭ ಬೇಕಾಗಿಲ್ಲ. ಆ್ಯಪ್‌ ನಡೆಸಿಕೊಂಡು ಹೋಗಲು ಎಷ್ಟು ಆಗುತ್ತಿದೆಯೋ ಅಷ್ಟು ದರ ಸಿಕ್ಕರೆ ಸಾಕು. ಬೆಂಗಳೂರಿನಲ್ಲಿ ಆ್ಯಪ್‌ನ ಪ್ರಾಥಮಿಕ ಪ್ರಯೋಗ ನಡೆಯಲಿದ್ದು ಆ ನಂತರ ಅದನ್ನು ಇತರೆ ಕಡೆ ವಿಸ್ತರಿಸುವ ಆಲೋಚನೆ ಇದೆ. ನಾಲ್ಕೈದು ತಿಂಗಳಲ್ಲಿ ಆ್ಯಪ್‌ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ತಿಳಿಸಿದರು.

Advertisement

ಪೀಕ್‌ ಅವರ್ಸ್‌ ಇರೋದಿಲ್ಲ
ಕೆಲವು ಆಟೋ, ಮ್ಯಾಕ್ಸಿ ಕ್ಯಾಬ್‌ಗಳು ಪ್ರಯಾಣಿಕರಿಗೆ ಪೀಕ್‌ ಅವರ್ಸ್‌ ನಿಗದಿ ಮಾಡುವ ಪದ್ಧತಿ ಇದ್ದು, ಆ ರೀತಿ ಮಾಡುವುದು ತಪ್ಪು. ಆ ವ್ಯವಸ್ಥೆ ನಮ್ಮ ಸಾರಿಗೆ ಸಂಸ್ಥೆಯ ಆ್ಯಪ್‌ನಲ್ಲಿ ಇರೋದಿಲ್ಲ. ಸಾರ್ವಜನಿಕರು ಸಂಜೆ ಅಥವಾ ರಾತ್ರಿ ವೇಳೆ ಪ್ರಯಾಣಿಸಿದರೆ ಡಬಲ್‌ ಹಣ ನೀಡಬೇಕಾಗುವ ವ್ಯವಸ್ಥೆ ಇದೆ. ಆದರೆ ಅಂತಹ ವ್ಯವಸ್ಥೆ ಇಲ್ಲಿ ಇರುವುದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

ಸಕಾಲಕ್ಕೆ ಸಾರಿಗೆ ಸಿಬ್ಬಂದಿ ಸಂಬಳ ಪಾವತಿ
ಸಾರಿಗೆ ಸಂಸ್ಥೆಯ ಎಲ್ಲ ನಿಗಮಗಳಿಗೆ ಸಕಾಲಕ್ಕೆ ಸರಿಯಾಗಿ ಸಿಬ್ಬಂದಿಗಳ ವೇತನ ಪಾವತಿ ಮಾಡಿರುವ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ ಸಚಿವ ರಾಮಲಿಂಗಾರೆಡ್ಡಿ, ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಪ್ರತಿ ತಿಂಗಳು 1ನೇ ತಾರೀಖೀಗೆ, ಬಿಎಂಟಿಸಿ ಸಿಬ್ಬಂದಿಗೆ ಪ್ರತಿ ತಿಂಗಳು 7ನೇ ತಾರೀಖೀಗೆ, ವಾಕರಸಾ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಮಗದ ಸಿಬ್ಬಂದಿಗೆ ಪ್ರತಿ ತಿಂಗಳ 17ನೇ ತಾರೀಖೀಗೆ ವೇತನ ಪಾವತಿ ಮಾಡಲಾಗುತ್ತಿದೆ. ಪ್ರತಿ ವರ್ಷದಂತೆ ಈ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಸ್ಮಾರ್ಟ್‌ ಕಾರ್ಡ್‌ ಜಿಲ್ಲಾವಾರು ಗುತ್ತಿಗೆ ಟೆಂಡರ್‌
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸ್ಮಾರ್ಟ್‌ಕಾರ್ಡ್‌ ಕೊಡುವ ಆಲೋಚನೆಯಿದೆ. ಜಿಲ್ಲಾವಾರು ಟೆಂಡರ್‌ ಕರೆದು ಸ್ಮಾರ್ಟ್‌ ಕಾರ್ಡ್‌ ಹಂಚಿಕೆ ಕೆಲಸ ಶೀಘ್ರ ನಡೆಯಲಿದೆ. ಸಾರಿಗೆ ಸಂಸ್ಥೆಯ ಕಚೇರಿಯಲ್ಲೇ ಈ ಪ್ರಕ್ರಿಯೆ ನಡೆಯಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರತಿ ದಿನ ಸರಾಸರಿ 59.55 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಪ್ರಯಾಣಕ್ಕೆ ಸದ್ಯ ಆಧಾರ್‌ ಮತ್ತು ವೋಟರ್‌ ಕಾರ್ಡ್‌ ಅನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಸ್ಮಾರ್ಟ್‌ ಕಾರ್ಡ್‌ ವಿತರಿಸುವ ವರೆಗೂ ಈ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next