Advertisement

ನಮ್ಮ ಬಜೆಟ್‌ ಹೀಗಿದ್ರೆ ಚಂದ!

12:30 AM Feb 04, 2019 | Team Udayavani |

ಬಜೆಟ್‌ ಪ್ಲ್ರಾನ್‌ ಮಾಡುವುದು ಎಂದರೆ ಖರ್ಚುಗಳಿಗೆ ಕಡಿವಾಣ ಹಾಕುವುದು ಎಂಬ ನಂಬಿಕೆ ನಮ್ಮಲ್ಲಿದೆ. ಆದರೆ ಬಜೆಟ್‌ನ ಅರ್ಥ ಅದಲ್ಲ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು. ಇನ್ನೊಂದರ್ಥದಲ್ಲಿ ಸ್ಮಾರ್ಟಾಗಿ ಖರ್ಚು ಮಾಡುವುದು. 

Advertisement

ಮೊನ್ನೆಯಷ್ಟೇ ಕೇಂದ್ರ ಬಜೆಟ್‌ ಮಂಡನೆಯಾಗಿದೆ. ಹೊಸ ಬಜೆಟ್‌ನಿಂದ ಆಗಲಿರುವ ಲಾಭ ನಷ್ಟಗಳು ಏನೇನು ಎಂಬುದರ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಒಂದರ್ಥದಲ್ಲಿ ಇಡೀ ಭಾರತವೇ ಬಜೆಟ್‌ ಧ್ಯಾನದಲ್ಲಿ ಮುಳುಗಿದೆ. ವರ್ಷಂಪ್ರತಿ ಮಂಡಿಸಲಾಗುವ ಸರಕಾರಿ ಬಜೆಟ್‌ಗಳಿಗೆ ಪ್ರಾಮುಖ್ಯತೆ ನೀಡಬೇಕಾದ್ದೇ. ಅದರ ಜೊತೆಗೆ ಮನೆಗಳಲ್ಲಿ ನಾವು ಮಾಡಿಟ್ಟುಕೊಳ್ಳುವ ಬಜೆಟ್‌ ಕೂಡಾ ಅಷ್ಟೇ ಮುಖ್ಯ. ಸಾಮಾನ್ಯವಾಗಿ ಬಜೆಟ್‌ ಎಂದರೆ ಖರ್ಚುಗಳಿಗೆ ಕಡಿವಾಣ ಹಾಕುವುದು ಎಂಬ ನಂಬಿಕೆ ನಮ್ಮಲ್ಲಿದೆ. ಆದರೆ ಬಜೆಟ್‌ನ ಅರ್ಥ ಅದಲ್ಲ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು. ಇನ್ನೊಂದರ್ಥದಲ್ಲಿ ಸ್ಮಾರ್ಟಾಗಿ ಖರ್ಚು ಮಾಡುವುದು. ಈ ಕುರಿತೇ ಜಗತøಸಿದ್ದ ಆರ್ಥಿಕ ತಜ್ಞ ಕಾರ್ಲ್ ರಿಚರ್ಡ್ಸ್‌ “ಒಂದು ಒಳ್ಳೆಯ ಬಜೆಟ್‌ ನಿಮ್ಮ ಜೀವನಕ್ಕೆ ಅತ್ಯಗತ್ಯವಾಗಿ ಬೇಕಿರುವ ಸಂಗತಿಗಳತ್ತ ಮಾತ್ರ ಗಮನ ಹರಿಸುತ್ತದೆ’ ಎಂದು ಹೇಳಿದ್ದಾರೆ.

ಶಾಪಿಂಗ್‌ ವ್ಯಸನಿಗಳಾಗದಿರಿ
ಅಪನಗದೀಕರಣ(ಡಿಮಾನಿಟೈಸೇಷನ್‌)ದ ನಂತರ ವ್ಯವಹಾರಗಳೆಲ್ಲ ಕ್ಯಾಶ್‌ಲೆಸ್‌ ಮಾದರಿಯಲ್ಲಿ ನಡೆಯುತ್ತಿರುವುದರಿಂದ ನಮ್ಮ ಖರ್ಚುವೆಚ್ಚಗಳನ್ನು ಟ್ರ್ಯಾಕ್‌ ಮಾಡುವುದು ತುಂಬಾ ಸುಲಭವಾಗಿಬಿಟ್ಟಿದೆ. ಅದೇನೋ ಒಳ್ಳೆಯದೇ ಆದರೆ ಕ್ಯಾಶ್‌ಲೆಸ್‌ ಪದ್ಧತಿಯಿಂದಾಗಿ ಖರ್ಚುಗಳೂ ಹೆಚ್ಚುತ್ತಿರುವುದೂ ಸುಳ್ಳಲ್ಲ. ಪರ್ಸ್‌ ತೆಗೆದು ನೋಟುಗಳನ್ನು ನೀಡುವಾಗ ಅಳೆದು ತೂಗಿ, ತುಂಬಾ ಯೋಚನೆ ಮಾಡಿ ಖರ್ಚು ಮಾಡುತ್ತೇವೆ. ಅದೇ ಪೇಟಿಎಂನಲ್ಲಾದರೆ ಒಂದೇ ಗುಂಡಿ ಅಮುಕಿದಾಗ ಪಟ್ಟೆಂದು ಹಣ ಹೋಗಿಬಿಡುತ್ತದೆ, ನಮ್ಮ ಅನುಭವಕ್ಕೇ ನಿಲುಕದಂತೆ. ಹೀಗಾಗಿ ಆನ್‌ಲೈನ್‌ ವ್ಯವಹಾರಗಳ ಕುರಿತು ಜಾಗರೂಕರಾಗಿರಬೇಕು. ಶಾಪಿಂಗ್‌ ವ್ಯಸನಿಗಳಾಗಬಾರದು.

ಉಳಿತಾಯಕ್ಕೆ ಸರಿಯಾದ ಸಮಯ
ದುಡ್ಡಿನ ಮಹತ್ವ ಗೊತ್ತಿರುವವರ ಎಷ್ಟೋ ಮನೆಗಳಲ್ಲಿಯೂ ಮನೆ ನಿರ್ವಹಣೆಗೆ ಸರಿಯಾದ ಬಜೆಟ್‌ ರೂಪಿಸಿರುವುದಿಲ್ಲ ಎನ್ನುವುದು ಸಂಶೋಧನೆಯಿಂದ ತಿಳಿದುಬಂದ ವಿಪರ್ಯಾಸದ ಸಂಗತಿ. ಬಜೆಟ್‌ ರೂಪಿಸಿದ ಮನೆಯವರು, ರೂಪಿಸದವರಿಗಿಂತ ಹೆಚ್ಚು ಉಳಿತಾಯ ಮಾಡಿದ ಮಾಹಿತಿಯನ್ನೂ ಸಂಶೋಧನೆ ಹೊರ ಹಾಕಿತ್ತು. ಇದು ಹೇಗೆ ಸಾಧ್ಯವಾಯಿತು ಎಂದರೆ, ತಿಂಗಳಿಗೆ ಇಂತಿಷ್ಟು ಮೊತ್ತವನ್ನು ಎತ್ತಿಟ್ಟರೆ, ಅಥವಾ ಹೂಡಿಕೆಯಲ್ಲಿ ತೊಡಗಿಸಿದರೆ ಪ್ರತಿ ತಿಂಗಳು ತನ್ನಿಂದ ತಾನೇ ಜಮಾ ಅಗುತ್ತಿರುತ್ತದೆ. ಇತ್ತಕಡೆ ಬಜೆಟ್‌ ಹೊಂದಿರದ ಮನೆಯವರು ಬ್ಯಾಂಕ್‌ ಖಾತೆಯಲ್ಲಿ ದುಡ್ಡಿರುವುದನ್ನು ಕಂಡು ಕಾಲ ಕಾಲಕ್ಕೆ ಖರ್ಚು ಮಾಡುತ್ತಾ, ಭವಿಷ್ಯದ ಯೋಚನೆಯನ್ನೇ ಬಿಟ್ಟಿರುತ್ತಾರೆ. ಮುಂದೆ ದುಡ್ಡಿನ ಅವಶ್ಯಕತೆ ಬಂದಾಗ ಅವರಿಗೆ ಅರಿವಾಗುವಷ್ಟರಲ್ಲಿ ಸಮಯ ಮೀರಿರುತ್ತದೆ. ಹೀಗಾಗಿ ಉಳಿತಾಯಕ್ಕೆ ಸರಿಯಾದ ಸಮಯವೆಂದರೆ “ಈಗಲೇ’!

50: 30: 20 ನಿಯಮ
ನಿಮ್ಮದೇ ಬಜೆಟ್‌ ರೂಪಿಸುವ ಮುನ್ನ ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಆದಾಯದ ಮೂಲಗಳನ್ನು ಮೊದಲು ಬರೆದಿಟ್ಟುಕೊಳ್ಳುವುದು. ಸಂಬಳ, ಬಾಡಿಗೆ, ಠೇವಣಿ ಮೇಲಿನ ಬಡ್ಡಿ, ಡಿವಿಡೆಂಡ್‌ ಮುಂತಾದವೆಲ್ಲಾ ಅದರಲ್ಲಿ ಸೇರಿರಬೇಕು. ನಂತರ ತಿಂಗಳ ಖರ್ಚು ವೆಚ್ಚಗಳನ್ನು ಪಟ್ಟಿ ಮಾಡಬೇಕು. ಅವಕ್ಕೆಲ್ಲಾ ತಗಲುವ ಮೊತ್ತವನ್ನು ಜೊತೆಯಲ್ಲೇ ನಮೂದಿಸಬೇಕು. ದಿನಸಿ ಬಿಲ್‌ಗ‌ಳು, ಕರೆಂಟ್‌- ವಾಟರ್‌ ಬಿಲ್‌, ಮನೆಗೆಲಸದಾಕೆಗೆ ನೀಡುವ ಸಂಬಳ, ಪೆಟ್ರೋಲ್‌- ಡೀಸೆಲ್‌ ಬಿಲ್‌, ವಾಹನದ ಇ.ಎಂ.ಐ ಹೀಗೆ ನಿಮ್ಮ ಜೇಬಿನಿಂದ ಹೊರ ಹೋದ ಪ್ರತಿ ಮೊತ್ತವೂ ಪಟ್ಟಿಯಲ್ಲಿರಬೇಕು. ಕೆಲ ಖರ್ಚುಗಳು ಪ್ರತಿ ತಿಂಗಳೂ ಬರುವುದಿಲ್ಲ ಉದಾಹರಣೆಗೆ ಮಕ್ಕಳ ಸ್ಕೂಲ್‌ ಫೀಸು, ಗ್ಯಾಸ್‌ ಬಿಲ್‌, ಇನ್‌ಶುರೆನ್ಸ್‌ ಪ್ರೀಮಿಯಂ ಮುಂತಾದವು. ಹೀಗಾಗಿ ಅವೆಲ್ಲವನ್ನೂ ತಿಂಗಳ ಲೆಕ್ಕಕ್ಕೆ ಸರಿದೂಗುವಂತೆ ಭಾಗಿಸಿ ಪಟ್ಟಿಯಲ್ಲಿ ಬರೆದಿಡಬೇಕು. ಕೌಟುಂಬಿಕ ಬಜೆಟ್‌ ವಿಷಯದಲ್ಲಿ 50: 30: 20 ಎಂಬ ಹೆಸರುವಾಸಿ ನಿಯಮವಿದೆ. ಅದು ಏನನ್ನುತ್ತದೆಯೆಂದರೆ ಶೇ. 50ರಷ್ಟು ಆದಾಯವನ್ನು ಮೂಲಭೂತ ಅಗತ್ಯಗಳಿಗಾಗಿ(ಆಹಾರ, ಮನೆ, ಬಟ್ಟೆ) ಖರ್ಚು ಮಾಡಬೇಕು. ಶೇ. 30ರಷ್ಟನ್ನು ಇತರೆ ಖರ್ಚುಗಳಿಗಾಗಿ ವ್ಯಯಿಸಬೇಕು. ಉಳಿದ ಶೇ. 20ರಷ್ಟು ಮೊತ್ತವನ್ನು ಉಳಿತಾಯದ ಖಾತೆಗೆ ಜಮಾ ಮಾಡಬೇಕು. ಇದೊಂದು ಮಾದರಿಯಷ್ಟೆ. ಇದನ್ನು ಗಮನದಲ್ಲಿರಿಸಿಕೊಂಡು ಮುನ್ನಡೆದರೆ ಸಾಕು.

Advertisement

ಹೆಚ್ಚದಿರಲಿ ಇ.ಎಂ.ಐ
ನಾವು ಪ್ರತಿ ತಿಂಗಳು ಕಟ್ಟುವ ಸಾಲದ ಕಂತು, ಯಾವತ್ತೂ ನಮ್ಮ ಆದಾಯದ ಶೇ. 50ರಷ್ಟನ್ನು ಮೀರಬಾರದು. ಈ ಕಾರಣಕ್ಕೇ ಸಾಲ ಕೊಡುವ ಮಂದಿ ಬ್ಯಾಂಕ್‌ ಸ್ಟೇಟ್‌ಮೆಂಟ್‌ನಲ್ಲಿ ಎಷ್ಟು ಇ.ಎಂ.ಐ ಕಟ್ಟುತ್ತಿದ್ದಾರೆ ಎಂಬುದನ್ನು ಪರೀಕ್ಷಿಸುವುದು. ತಿಂಗಳು ತಿಂಗಳು ಕಡಿತಗೊಳ್ಳುವ ಮನೆ ಲೋನ್‌ ಆದಾಯದ ಶೇ. 50ರಷ್ಟಿದ್ದರೆ ತೊಂದರೆಯಿಲ್ಲ. ಆದರೆ ಕಾರ್‌ ಇ.ಎಂ.ಐ ಆದಾಯದ ಶೇ. 15ರಷ್ಟನ್ನೂ ಮೀರಬಾರದು, ವೈಯಕ್ತಿಕ ಲೋನ್‌ ಶೇ. 10ರಷ್ಟನ್ನು ಮೀರಿರಬಾರದು. ಇ.ಎಂ.ಐಗಳು ಹೆಚ್ಚಿದಂತೆಲ್ಲಾ ಭವಿಷ್ಯದ ಯೋಜನೆಗಳಿಗೆ ದುಡ್ಡು ಸಾಲದಿರುವ ಅಪಾಯವಿರುತ್ತದೆ. ಮುಂದೆ ಮಕ್ಕಳ ವಿದ್ಯಾಭ್ಯಾಸಕ್ಕೂ ಅಡಚಣೆಯಾಗಬಹುದು. ಇಂಥ ಸಮಯದಲ್ಲಿ ರಿಟೈರ್‌ವೆುಂಟ್‌ ಫ‌ಂಡ್‌ಅನ್ನು ಇನ್ನಿತರೆ ಅವಶ್ಯಕತೆಗಳಿಗೆ ಬಳಸಿಕೊಳ್ಳಬೇಕಾಗಿ ಬರಬಹುದು. ಒಂದು ಉದ್ದೇಶಕ್ಕೆಂದು ಮೀಸಲಾದ ಹಣವನ್ನು ಇನ್ನೊಂದಕ್ಕೆ ಬಳಸುವುದರಿಂದ   ಹೀಗಾಗಿ ಇ.ಎಂ.ಐ ಗಳನ್ನು ಕಡಿಮೆ ಮಾಡಿಕೊಂಡಷ್ಟೂ ಒಳ್ಳೆಯದು. ಬಜೆಟ್‌ ಪ್ಲಾನ್‌ ಮಾಡುವುದರಿಂದ ಆಗುವ ಒಂದು ಲಾಭವೆಂದರೆ ಇ.ಎಂ.ಐಗಳ ಮೇಲೆ ನಿಗಾ ವಹಿಸಬಹುದು.

ಅಮೆರಿಕಾದ ಖ್ಯಾತ ಅರ್ಥ ಶಾಸ್ತ್ರಜ್ಞ ಜೇಮ್ಸ… ಡ್ನೂಸನºರಿ ಪ್ರತಿಪಾದಿಸಿರುವಂತೆ ಒಬ್ಬ ವ್ಯಕ್ತಿಯ ಆದಾಯ ಹೆಚ್ಚಾದಂತೆ ಅವನ ವೆಚ್ಚವೂ ಹೆಚ್ಚುತ್ತದೆ ಆದರೆ ಅದೇ ಆದಾಯ ಕಡಿಮೆಯಾದರೆ ವೆಚ್ಚ ಹೆಚ್ಚಿದ ಪ್ರಮಾಣದಲ್ಲಿ ಕಡಿಮೆಯಾಗುವುದಿಲ್ಲ. ಉದಾಹರಣೆಗೆ ಆದಾಯ 10% ಹೆಚ್ಚಾದರೆ ವೆಚ್ಚ 5- 6% ಆದರೂ ಹೆಚ್ಚುತ್ತದೆ ಆದರೆ ಆದಾಯ 10%  ಕಡಿಮೆಯಾದರೆ ವೆಚ್ಚವನ್ನು ಮತ್ತೂಮ್ಮೆ ಕೆಳಗಿಳಿಸುವುದು ಕಷ್ಟ. ಆದಾಯ ಒಮ್ಮೆ ಹೆಚ್ಚಾದರೆ ನಾವು ಮೇಲಿನ ಹಂತದ ಅನುಭೋಗಕ್ಕೆ ಏರಿದಾಗ ಆ ಹಂತದಿಂದ ಕೆಳಗಿಳಿಯುವುದು ಕಷ್ಟ ಸಾಧ್ಯ. ಇದೇ ಹಿಂದಿರುಗಲಾಗದ/ ಬದಲಾಯಿಸಲಾಗದ ಅನುಭೋಗ ಮಟ್ಟ(irreversible consumption pattern) ಆದ್ದರಿಂದ ಆದಾಯ ಹೆಚ್ಚಾದಾಗ ನಾವು ಅದನ್ನು ಉಳಿತಾಯದತ್ತ ತಿರುಗಿಸುವುದು ಜಾಣತನ. ಅದಕ್ಕೆ ಬೇಕಾದುದು ಬಜೆಟ್‌ ಪ್ಲಾನ್‌. ಸರ್ಕಾರಿ ಬಜೆಟ್‌ ಹೇಗೆ ದೇಶದ ಭವಿಷ್ಯವನ್ನು ರೂಪಿಸುವುದೋ ಅದೇ ರೀತಿ ಕೌಟುಂಬಿಕ ಬಜೆಟ್‌ ನಮ್ಮೆಲ್ಲರ ಜೀವನವನ್ನು ಕೈ ಹಿಡಿದು ನಡೆಸುವುದು. ಆರ್ಥಿಕ ಸ್ವಾತಂತ್ರ್ಯ ನೀಡಿ ನಮ್ಮನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವುದು.

ಮನೆಯ ಸಮತೋಲನಕ್ಕೆ ಐದು ಸೂತ್ರಗಳು
1. ಮನೆ ಅಥವಾ ನಿವೇಶನ ಕೊಂಡು ತಿಂಗಳಕಂತು(ಇ.ಎಮ….ಐ) ತಿಂಗಳಆದಾಯದ25% ಮೀರಬಾರದು
2. ಮನೆಯ ಬಾಡಿಗೆ ವೆಚ್ಚ ಇಲ್ಲದಿದ್ದರೆ ಮಾತ್ರ ಮಾಸಿಕ ಕಂತು35%ರವರೆಗೆ ಇರಬಹುದು
3. ಒಂದು ತಿಂಗಳ ಆದಾಯದಷ್ಟು ಹಣ ಯಾವಾಗಲೂ ಬ್ಯಾಂಕ್‌ ಖಾತೆಯಲ್ಲಿರಬೇಕು
4. 25% ತಿಂಗಳ ಆದಾಯವನ್ನು ಉಳಿತಾಯ ಮಾಡುವುದು ಸುರಕ್ಷಿತ ಭವಿಷ್ಯದ ಮುನ್ನುಡಿ
5. ಮನೆಯ ಬಾಡಿಗೆ ಆದಾಯದ 15% ಮೀರದಂತಿದ್ದರೆ ಉತ್ತಮ

ಹಣ ಉಳಿಸಿ, ಬೆಳೆಸಿ
ಇದೀಗ ತಾನೇ ಕೆಲಸಕ್ಕೆ ಸೇರಿರುವ ಯುವಜನತೆ ಶುರುವಿನ ಉಳಿತಾಯದ ಸುವರ್ಣ ಸಮಯವನ್ನು ಕಳೆದುಕೊಳ್ಳಬಾರದು. ಈಗ ತಾನೇ ದುಡಿಯಲು ಶುರುಮಾಡಿದ್ದೇವೆ. ಇಷ್ಟು ಬೇಗ ಯಾಕೆ ಉಳಿತಾಯ ಎಂದು ನಿರ್ಲಕ್ಷ್ಯ ತೋರಬಾರದು. ಉಳಿತಾಯದ ಮೊತ್ತ ಚಿಕ್ಕದಿರಲಿ, ದೊಡ್ಡದಿರಲಿ; ಸಂಬಳದಲ್ಲಿ ಇಂತಿಷ್ಟು ಎಂದು ನಿಗದಿ ಪಡಿಸಿಬಿಟ್ಟರೆ ಭವಿಷ್ಯದಲ್ಲಿ ಕೋಟ್ಯಂತರ ರುಪಾಯಿಯಷ್ಟಾಗುತ್ತದೆ. ಅದೇ ವಯಸ್ಸಾದ ನಂತರ ಉಳಿತಾಯ ಶುರು ಮಾಡಿದರೆ ಚಿಕ್ಕ ಮೊತ್ತವಷ್ಟೇ ನಿಮ್ಮ ಭವಿಷ್ಯದ ಯೋಜನೆಗಳಿಗೆ ಸಿಗುತ್ತದೆ. ಉದಾಹರಣೆಗೆ, 30ನೇ ವರ್ಷದಿಂದಲೇ ತಿಂಗಳಿಗೆ ಸುಮಾರು 10,000 ರು.ಯಷ್ಟು ಉಳಿತಾಯ ಶುರುಮಾಡಿದರೆ ನಿವೃತ್ತಿ ಹೊಂದುವ ವೇಳೆಗೆ 2.16 ಕೋಟಿ ರು.ಯಷ್ಟಾಗುವ ಸಾಧ್ಯತೆ ಇದೆ. ಐದು ವರ್ಷ ತಡವಾಗಿ ಅಂದರೆ 35ನೇ ವಯಸ್ಸಿಗೆ ಉಳಿತಾಯ ಶುರುಮಾಡಿದರೆ ಕಡೆಯಲ್ಲಿ ಒಂದು ಕೋಟಿ ಜಮೆಯಾಗಿರುತ್ತದೆ. ಕೇವಲ 5 ವರ್ಷ ತಡ ಮಾಡಿದ್ದಕ್ಕೆ ಅರ್ಧಕ್ಕರ್ಧ ಲಾಭದಿಂದ ವಂಚಿತರಾಗಬೇಕಾಗುತ್ತದೆ ಎನ್ನುವ ಸಂಗತಿಯಿಂದಲೇ ಉಳಿತಾಯ ಮತ್ತು ಸಮಯದ ಮಹತ್ವವನ್ನು ನಾವು ತಿಳಿದುಕೊಳ್ಳಬಹುದು. 

– ಆದರ್ಶ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next