Advertisement

 ಸಿಂಧನೂರು ನಗರಸಭೆಯಲ್ಲಿ ಬಿಲ್‌ ಕಲೆಕ್ಟರ್‌ ಕೈ ಚಳಕ ಬಯಲು ­

07:52 PM Mar 18, 2021 | Team Udayavani |

ಸಿಂಧನೂರು: ಸ್ವತಃ ಪೌರಾಯಕ್ತರು ಕಡತಕ್ಕೆ ಒಪ್ಪಿಗೆ ನೀಡಿದ ಮೇಲೂ ಅರ್ಜಿದಾರರಿಗೆ ಫಾರಂ ನಂ.3 ಲಭಿಸಿಲ್ಲ. ಕಂದಾಯ ಅಧಿಕಾರಿಯಂತೂ ಕಣ್ತೆರೆದು ನೋಡಿಲ್ಲ. ಆಡಳಿತಾತ್ಮಕವಾಗಿ ಇಡೀ ನಗರಸಭೆಯೇ ಪರಾಧೀನ (ಸಿಬ್ಬಂದಿ) ಸ್ಥಿತಿಯಲ್ಲಿರುವ ಪರಿಣಾಮ ಅರ್ಜಿದಾರರು ಸುಸ್ತಾಗುವಂತಾಗಿದ್ದು, ಅಧ್ಯಕ್ಷರು, ಪೌರಾಯುಕ್ತರಿಗೆ ಸಿಬ್ಬಂದಿಯ ಕಾರ್ಯವೈಖರಿ ತಲೆನೋವಾಗಿ ಪರಿಣಮಿಸಿದೆ.

Advertisement

ಇಲ್ಲಿನ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ 8 ಜನ ಬಿಲ್‌ ಕಲೆಕ್ಟರ್‌ಗಳಿಗೆ ನಗರದ 31 ವಾರ್ಡ್‍ಗಳನ್ನು ಅವರ ಕಾರ್ಯ ವ್ಯಾಪ್ತಿಗೆ ಹಂಚಿಕೆ ಮಾಡಲಾಗಿದೆ. ಆಯಾ ವಾರ್ಡ್‌ನ ಅರ್ಜಿ ಸ್ವೀಕರಿಸಿದ ಬಳಿಕ ವಿಲೇವಾರಿಗೊಳಿಸಬೇಕಾದ ಜವಾಬ್ದಾರಿ ಅವರದು. ಆದರೆ, ಬಿಲ್‌ ಕಲೆಕ್ಟರ್‌ ಒಬ್ಬರು ತಮಗೆ ವಹಿಸಿದ ವಾರ್ಡ್‌ಗಳನ್ನು ಹೊರತುಪಡಿಸಿ ನಗರದ ಬಹುತೇಕ ವಾರ್ಡ್‌ಗಳನ್ನು ಕಬಳಿಸಿ ಅರ್ಜಿ ಸ್ವೀಕರಿಸಿ ತಮ್ಮ ಕಬೋರ್ಡ್‌ನಲ್ಲಿ ಹಾಕಿ ಸಾರ್ವಜನಿಕರನ್ನು ದಿಕ್ಕು ತಪ್ಪಿಸಿದ ಪ್ರಕರಣ ಬಯಲಾಗಿದೆ.

ಮ್ಯುಟೇಶನ್‌, ಫಾರಂ.3 ಹಂಚಿಕೆ, ತಿದ್ದುಪಡಿ ಪ್ರಕರಣಗಳಲ್ಲಿ ಭಾರೀ ಗೋಲ್‌ಮಾಲ್‌ ನಡೆಯುತ್ತಿರುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದ್ದು, ತಿಂಗಳಲ್ಲಿ ಇತ್ಯರ್ಥವಾಗಬೇಕಾದ ಅರ್ಜಿಗಳನ್ನು ಎರಡು ವರ್ಷಗಳ ಕಾಲ ತಡೆ ಹಿಡಿದ ಅಚ್ಚರಿಗೆ ಆಸ್ಪದ ನೀಡಿದೆ.

ಬಿಲ್‌ ಕಲೆಕ್ಟರ್‌ನಿಂದಲೇ ಜಪ್ತಿ: ಅಚ್ಚರಿ ಎಂದರೆ ಸಾರ್ವಜನಿಕ ದೂರುಗಳು ಹೆಚ್ಚಾದ ನಂತರ ಪೌರಾಯುಕ್ತ ಆರ್‌. ವಿರೂಪಾಕ್ಷಮೂರ್ತಿ ಅವರು, ಬಿಲ್‌ ಕಲೆಕ್ಟರ್‌ ಅಮರೇಶ ಅವರು ಕುಳಿತ ಜಾಗಕ್ಕೆ ಹೋಗಿ ಅವರಲ್ಲಿನ ಕಡತಗಳನ್ನು ಪರಿಶೀಲಿಸಿದ್ದಾರೆ. ಆದರೆ, ಇದನ್ನೊಪ್ಪದ ಸ್ಥಿತಿಯಲ್ಲಿ ನಗರಸಭೆ ಸಿಬ್ಬಂದಿ ಇರುವ ಕಾರಣಕ್ಕೆ ಇಲಾಖೆ ಮುಖ್ಯಸ್ಥರೇ ತಮ್ಮ ಕೆಲಸವನ್ನು ಪಂಚನಾಮೆಯಲ್ಲಿ ನಿಭಾಯಿಸಿದ್ದಾರೆ. ಈ ವೇಳೆ ಅವಧಿ ಮೀರಿದ 59 ಕಡತಗಳು ಪತ್ತೆಯಾಗಿದ್ದು,ಅವುಗಳನ್ನು ಜಪ್ತಿ ಮಾಡಲಾಗಿದೆ. ಹಿರಿಯ ಆರೋಗ್ಯ ಆರೋಗ್ಯ ನಿರೀಕ್ಷಕ ಕಿಶನರಾವ್‌, ಕಂದಾಯ ಅಧಿಕಾರಿ ಸುಬ್ರಮಣ್ಯಶೆಟ್ಟಿ, ಸಿಬ್ಬಂದಿಗಳಾದ ಬಸವರಾಜ ದೇವರಗುಡಿ, ಸುಧಾ ಹಿರೇಮಠ, ಲಕ್ಷ್ಮಿಪತಿ, ಮಾರುತಿ ಅಲ್ಲಿ ನಡೆದ ಪಂಚನಾಮೆಗೆ ಸಹಿ ಹಾಕಿದ್ದಾರೆ. ಸಾರ್ವಜನಿಕರಿಗೆ ಸಂಬಂಧಿಸಿದ ಕಡತಗಳನ್ನು ಇತ್ಯರ್ಥಗೊಳಿಸದ ಕೇಸ್‌ನಲ್ಲೂ ಈ ಪ್ರಮಾಣದಲ್ಲಿ ನಗರಸಭೆ ಸಿಬ್ಬಂದಿಯೇ ಸಾಕ್ಷಿ ಹಾಕಿಸಿ, ಜಪ್ತಿ ಮಾಡಿದ ಬೆಳವಣಿಗೆ ಭಾರಿ ಸಂಚಲನ ಸೃಷ್ಟಿಸಿದೆ.

ಇಟ್ಟಿದ್ದಾದರೂ ಯಾಕೆ?: ನಗರದ ಆದರ್ಶ ಕಾಲೋನಿ ನಿವಾಸಿ ಕೆ.ರಾಮಬಾಬು ಅವರು ಫಾರಂ.3ಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಫೆ.17, 2021ರಂದು ಕಡತಕ್ಕೆ ಪೌರಾಯುಕ್ತರು ಸಹಿ ಹಾಕಿದ್ದಾರೆ. ಆದರೆ, ಆ ಕಡತವನ್ನು ತಿಂಗಳು ಕಳೆದರೂ ಲಾಗಿನ್‌ಗೆ ಹಾಕಿಲ್ಲ. ವಾರ್ಡ್‌ ನಂ.16ರಲ್ಲಿ ಬರುವ ನೀಲಕಂಠಾರ್ಯ ಎನ್ನುವವರು ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದು, ಇದಕ್ಕೂ ಕಮಿಷನರ್‌ ಸಹಿ ಹಾಕಿದ್ದಾರೆ. ಮಾರ್ಚ್‌ 10, 2021ರಂದೇ ಅಂತಿಮಗೊಂಡರೂ ಅರ್ಜಿದಾರರಿಗೆ ಫಾರಂ.3 ನೀಡಿಲ್ಲ. ರೋಷನ್‌ಬೀ ಎನ್ನುವವರು ಫೆ.24ರಂದೇ ಅರ್ಜಿ ಸಲ್ಲಿಸಿದ್ದರೂ ಆ ಕಡತವನ್ನು ಕಂದಾಯ ಅಧಿಕಾರಿಗೆ ಸಲ್ಲಿಕೆ ಮಾಡಿಲ್ಲ. ಫಾರೂಕ್‌ ಎನ್ನುವವರು ಕಳೆದ ವರ್ಷವೇ ಫಾರಂ.3ಕ್ಕೆ ಅರ್ಜಿ ನೀಡಿದ್ದು, ಅದಕ್ಕೆ ಎಲ್ಲರ ಸಹಿ ಬಿದ್ದರೂ ವಿಲೇವಾರಿಯಾಗಿಲ್ಲ. ಬರೋಬ್ಬರಿ 59 ಕಡತಗಳನ್ನು ಒಬ್ಬರೇ ಬಿಲ್‌ ಕಲೆಕ್ಟರ್‌ ಬಾಕಿ ಉಳಿಸಿಕೊಂಡಿದ್ದು, ತನಿಖೆಯಲ್ಲಿ ಪತ್ತೆಯಾಗಿದೆ. ಆದರೆ, ಉಳಿದ 7 ಜನ ಬಿಲ್‌ಕಲೆಕ್ಟರ್‌ಗಳು ಕೂಡ ಇಂತಹದೇ ಕೆಲಸಗಳಲ್ಲಿ ಶಾಮೀಲಾಗಿದ್ದು, ಅವರ ಬಗ್ಗೆಯೂ ತನಿಖೆಯಾಗಬೇಕು ಎಂದು ಚುನಾಯಿತ ಸದಸ್ಯರು ಧ್ವನಿ ಎತ್ತಿದ್ದಾರೆ.

Advertisement

ಹಣಕ್ಕಾಗಿ ಸಿಬ್ಬಂದಿ ರಾಜಕೀಯ: ನಿಗದಿತ ಕಾಲಾವಧಿಯಲ್ಲಿ ಅರ್ಜಿಗಳನ್ನು ಇತ್ಯರ್ಥ ಪಡಿಸಲು ಸರಕಾರದ ಆನ್‌ಲೈನ್‌ ವ್ಯವಸ್ಥೆ ಬಂದ ಮೇಲೂ ಇಲ್ಲಿನ ಬಿಲ್‌ಕಲೆಕ್ಟರ್‌ಗಳು ಆಯಾ ವಾರ್ಡ್‌ನ ರಾಜಕಾರಣಿಗಳ ಜತೆ ಶಾಮೀಲಾಗಿ, ಸ್ಥಳೀಯವಾಗಿ ರಾಜಕಾರಣಕ್ಕೆ ಕೈ ಹಾಕಿದ ಪರಿಣಾಮ ಇಂತಹ ವಿಳಂಬ ತಲೆದೋರಿದೆ. ಎಂಟು ಬಿಲ್‌ಕಲೆಕ್ಟರ್‌ ಹತ್ತು ಸದಸ್ಯರು ಧ್ವನಿ ಎತ್ತುವ ಮಟ್ಟಿಗೆ ಈ ಲಾಬಿ ಬೆಳೆದಿದೆ. ಇಲಾಖೆ ಮುಖ್ಯಸ್ಥರಾದ ಪೌರಾಯುಕ್ತರು ಸಹಿ ಹಾಕಿದ ಬಳಿಕವೂ ಸಾರ್ವಜನಿಕರಿಗೆ ಫಾರಂ.3 ಸಿಗದಂತೆ ಮೂಲೆಗೆ ಎಸೆದಿರುವ ಹಲವು ಪ್ರಕರಣಗಳೇ ಇದಕ್ಕೆ ಸಾಕ್ಷಿಯಾಗಿವೆ. ಮ್ಯುಟೇಶನ್‌, ಫಾರಂ.3 ಹಂಚಿಕೆ, ತಿದ್ದುಪಡಿ ಪ್ರಕರಣದಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೆಲವು ತಿಂಗಳ ಹಿಂದೆ ಭ್ರಷ್ಟಾಚಾರ ನಿಗ್ರಹ ದಳವೇ ನಗರಸಭೆಯ ಮೇಲೆ ದಾಳಿ ನಡೆಸಿತ್ತು. ಆಗ ಏನೊಂದು ಪತ್ತೆಯಾಗಿರಲಿಲ್ಲ. ಇದೀಗ ದೊಡ್ಡಮಟ್ಟದ ಪ್ರಕರಣವೊಂದು ಪತ್ತೆಯಾಗಿದ್ದು, ಮುಂದಿನ ತನಿಖೆ ಹಾಗೂ ತಪ್ಪಿತಸ್ಥರ ಮೇಲೆ ಕೈಗೊಳ್ಳಲಿರುವ ಕ್ರಮದ ಬಗ್ಗೆ ನಗರಸಭೆ ಆಡಳಿತವೇ ಮೌನ ಮುರಿಯಬೇಕಿದೆ.

ಯಮನಪ್ಪ ಪವಾರ 

Advertisement

Udayavani is now on Telegram. Click here to join our channel and stay updated with the latest news.

Next