Advertisement

ಅಸಲಿ ಚಿನ್ನ ಬರೀ 70 ಲಕ್ಷ  ರೂ.!

08:35 AM Aug 02, 2017 | Team Udayavani |

ಮಂಗಳೂರಿನ 4.5 ಕೋ.ರೂ. ನಕಲಿ ಚಿನ್ನ ಅಡವು ಪ್ರಕರಣ

Advertisement

ಮಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕಿಗೆ ಬರೋಬ್ಬರಿ 4.5 ಕೋಟಿ ರೂ. ವಂಚಿಸಿದ್ದ ಪ್ರಕರಣದಲ್ಲಿ ಅಸಲಿ ಚಿನ್ನದ ಮೌಲ್ಯ ಎಷ್ಟು ಗೊತ್ತೇ? ಕೇವಲ 70 ಲಕ್ಷ ರೂ. ಅಂದರೆ ಸರಿಸುಮಾರು 4 ಕೋಟಿ ರೂ. ಮೊತ್ತದ ಆಭರಣ ಬರೀ ಬೆಳ್ಳಿ ಮತ್ತು ತಾಮ್ರದ್ದು! ಆರೋಪಿ ವಿದ್ಯಾನಂದ ರಾವ್‌ 2016ರ ಆಗಸ್ಟ್‌ 20ರಿಂದ 2017 ಜು. 6ರ ತನಕ ಒಟ್ಟು 38 ಬಾರಿ ಹಾಗೂ ಲಲಿತಾ ಅವರು 9 ಬಾರಿ ನಕಲಿ ಚಿನ್ನವನ್ನು ಫ‌ಳ್ನೀರ್‌ನಲ್ಲಿರುವ ಕೇರಳ ಮೂಲದ ಕೆಥೋಲಿಕ್‌ ಸಿರಿಯನ್‌ ಬ್ಯಾಂಕ್‌ ಶಾಖೆಯಲ್ಲಿ ಅಡವಿಟ್ಟಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಅಡವಿಟ್ಟ ಆಭರಣಗಳ ಪೈಕಿ ಪ್ರತಿಯೊಂದರಲ್ಲೂ ಬೇರೆ ಬೇರೆ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ ಮತ್ತು ತಾಮ್ರದ ಅಂಶವಿದೆ. ಅವುಗಳಲ್ಲಿ ಚಿನ್ನ ಅಥವಾ ಬೆಳ್ಳಿಯ ಪ್ರಮಾಣ ಕನಿಷ್ಠವಾಗಿದ್ದು, ತಾಮ್ರದ ಅಂಶವು ಗರಿಷ್ಠವಾಗಿದೆ. ಚಿನ್ನದ ಲೇಪನ ಮಾತ್ರ ಇದೆ.

ಉದಾಹರಣೆಗೆ 190 ಗ್ರಾಂ ತೂಕದ ಒಂದು ಚೈನ್‌ನಲ್ಲಿ ಚಿನ್ನದ ಪ್ರಮಾಣ ಶೇ. 1.27, ಬೆಳ್ಳಿ ಶೇ. 2.80 ಹಾಗೂ ತಾಮ್ರ ಶೇ. 95.93ರಷ್ಟಿದೆ. ಇಲ್ಲಿನ ಚಿನ್ನದ ಕ್ಯಾರೆಟ್‌ 0.30 ಮಾತ್ರ ಇದೆ. 484.800 ಗ್ರಾಂ ತೂಕದ ಚೈನ್‌ನಲ್ಲಿ ಚಿನ್ನ ಶೇ. 5.49, ಬೆಳ್ಳಿ ಶೇ. 1.64 ಹಾಗೂ ತಾಮ್ರ ಶೇ. 77.87. ಇದರಲ್ಲಿ ಚಿನ್ನದ ಕ್ಯಾರೆಟ್‌ ಶೇ. 1.32ರಷ್ಟು ಇದೆ. ಇನ್ನು 1,331.800 ಗ್ರಾಂ ತೂಕದ ಚೈನ್‌ನಲ್ಲಿ ಚಿನ್ನ ಶೇ. 9.22, ಬೆಳ್ಳಿ ಶೇ. 2.61 ಹಾಗೂ ತಾಮ್ರ ಶೇ. 88.14ರಷ್ಟಿದೆ. ಚಿನ್ನದ ಕ್ಯಾರೆಟ್‌ ಶೇ. 2.21ರಷ್ಟು ಆಗಿರುತ್ತದೆ.

ಸಿರಿಯನ್‌ ಬ್ಯಾಂಕ್‌ ಮಂಗಳೂರು ಶಾಖೆಯಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಆರೋಪಿ ವಿದ್ಯಾನಂದ ರಾವ್‌ 3,73,54,750 ರೂ. ಹಾಗೂ ಅವರ ಪತ್ನಿ ಲಲಿತಾ ರಾವ್‌ 94,42,755 ರೂ. ಸೇರಿದಂತೆ ಒಟ್ಟು 4,67,97,505 ರೂ. ಸಾಲ ಪಡೆದಿದ್ದರು. ವಿದ್ಯಾನಂದ ರಾವ್‌ 2016 ಆಗಸ್ಟ್‌ 20 ರಿಂದ 2017 ಜು. 6ರ ತನಕ ಒಟ್ಟು 38 ಬಾರಿ ಹಾಗೂ ಲಲಿತಾ ಅವರು 9 ಬಾರಿ ನಕಲಿ ಚಿನ್ನವನ್ನು ಅಡವಿಟ್ಟಿದ್ದರು. ಬೆಳ್ಳಿ ಮತ್ತು ತಾಮ್ರದ ಆಭರಣಕ್ಕೆ ಚಿನ್ನದ ಲೇಪನ ನೀಡಿ ನಕಲಿ ಚಿನ್ನ ತಯಾರಿಸಿದ್ದರು. ಆರೋಪಿಗಳು ನಕಲಿ ಚಿನ್ನ ಅಡವಿಟ್ಟು 4.5 ಕೋಟಿ ರೂ. ಸಾಲ ಪಡೆದಿದ್ದು, ಅಡವಿಟ್ಟಿರುವ ಆಭರಣಗಳಲ್ಲಿ ಲಭ್ಯವಿರುವ ಚಿನ್ನದ ಒಟ್ಟು 70 ಲಕ್ಷ ರೂ. ಮಾತ್ರ ಎಂದು ಈ ಆಭರಣಗಳ ಪರೀಕ್ಷೆಯಿಂದ ತಿಳಿದು ಬಂದಿದೆ.

ಉಡುಪಿಯಲ್ಲಿ ಶಂಕರಾಚಾರ್ಯ ಅವರು ಸಹಕಾರಿ ಬ್ಯಾಂಕ್‌ ಒಂದರಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು 65 ಲಕ್ಷ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೆಥೋಲಿಕ್‌ ಸಿರಿಯನ್‌ ಬ್ಯಾಂಕ್‌ ತನ್ನಲ್ಲಿರುವ ಅಡವಿಟ್ಟ ಚಿನ್ನವನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ನಕಲಿ ಚಿನ್ನಾಭರಣ ಪತ್ತೆಯಾಗಿದೆ. ಕಳೆದ ಜು. 25ರಂದು ಈ ಬಗ್ಗೆ ಬಂದರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಲಾಗಿದೆ.

Advertisement

ಆರ್‌ಬಿಐಗೆ ಮಾಹಿತಿ
ಕೆಥೋಲಿಕ್‌ ಸಿರಿಯನ್‌ ಬ್ಯಾಂಕಿನಲ್ಲಿ ನಡೆದ ವಂಚನೆ ಪ್ರಕರಣದ ತನಿಖೆ ನಡೆಯುತ್ತಿದೆ. ಅಡವಿಟ್ಟ ಆಭರಣಗಳ ಚಿನ್ನ ಪರೀಕ್ಷಕರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಒಬ್ಬ ವ್ಯಕ್ತಿ ಎಷ್ಟು ಬಾರಿ ಚಿನ್ನವನ್ನು ಬ್ಯಾಂಕಿನಲ್ಲಿ ಅಡವು ಇರಿಸಬಹುದು, ಎಷ್ಟು ಪ್ರಮಾಣದ ಮತ್ತು ಎಷ್ಟು ಮೊತ್ತದ ಚಿನ್ನವನ್ನು ಗಿರವಿ ಇರಿಸಲು ಅವಕಾಶವಿದೆ, ಬಡ್ಡಿದರ ಎಷ್ಟು ನಿಗದಿ ಮಾಡಬಹುದು, ಈ ಕುರಿತಂತೆ‌ ನಿಯಮಗಳೇನಾದರೂ ಇವೆಯೇ, ನಿಯಮಗಳಿದ್ದರೆ ಅವುಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಕ್ರಮ ಜರಗಿಸಲು ಅವಕಾಶವಿದೆಯೇ ಇತ್ಯಾದಿ ಸಮಗ್ರ ವಿವರಗಳನ್ನು ನಮೂದಿಸಿ ವರದಿ ಒಪ್ಪಿಸುವಂತೆ ರಿಸರ್ವ್‌ ಬ್ಯಾಂಕಿಗೆ ಬರೆಯಲಾಗು ವುದು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಬಂದರು ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಶಾಂತಾರಾಮ ತಿಳಿಸಿದ್ದಾರೆ.

ಮಂಗಳೂರು ಟೆಸ್ಟಿಂಗ್‌ ಸೆಂಟರ್‌
ಅಡವಿಟ್ಟ ಆಭರಣಗಳು ನಕಲಿ ಎಂಬುದಾಗಿ ನಗರದ ಕಾರ್‌ಸ್ಟ್ರೀಟ್‌ನಲ್ಲಿರುವ ಮಂಗಳೂರು ಟೆಸ್ಟಿಂಗ್‌ ಸೆಂಟರ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಗೊತ್ತಾಗಿತ್ತು. ಈ ಪರೀಕ್ಷಾ ಕೇಂದ್ರಕ್ಕೆ ಬರುವ ಮೊದಲು ಕೆಥೋಲಿಕ್‌ ಸಿರಿಯನ್‌ ಬ್ಯಾಂಕಿನವರು ಹಲವು ಸ್ವರ್ಣಾಭರಣ ಮಳಿಗೆಗಳಿಗೆ ತೆರಳಿ ಈ ಚಿನ್ನವನ್ನು ಪರೀಕ್ಷಿಸಿದ್ದರು. ಆದರೆ ಯಾವುದೇ ಸ್ವರ್ಣಾಭರಣ ಮಳಿಗೆಯವರು ಇದು ನಕಲಿ ಚಿನ್ನ ಎಂದು ತಿಳಿಸುವ ಧೈರ್ಯವನ್ನು ಮಾಡಿಲ್ಲ. ಉದ್ದೇಶಪೂರ್ವಕವಾಗಿ ಅವರು ಹಾಗೆ ಮಾಡಿದರೇ ಅಥವಾ ಅವರ ಬಳಿ ಇರುವ ಚಿನ್ನ ಪರೀಕ್ಷಕ ಯಂತ್ರದ ಪರೀಕ್ಷಾ ಸಾಮರ್ಥ್ಯವೇ ಅಷ್ಟೇ? ಎಂಬುದು ಉತ್ತರಿಸಲಾಗದ ಪ್ರಶ್ನೆ.

ಮಂಗಳೂರು ಟೆಸ್ಟಿಂಗ್‌ ಸೆಂಟರ್‌ ಚಿನ್ನದ ನೈಜತೆಯನ್ನು ಆಳವಾಗಿ ಪರೀಕ್ಷಿಸಿ ಅದರ ಮೌಲ್ಯವನ್ನು ತಿಳಿಸುತ್ತದೆ. ನಕಲಿ ಚಿನ್ನವಾಗಿದ್ದರೆ ಅದರಲ್ಲಿ ಇರುವ ಚಿನ್ನ ಮತ್ತು ಇತರ ಎಲ್ಲ ಲೋಹಗಳ ನಿಖರವಾದ ಶೇಕಡಾವರು ಪ್ರಮಾಣವನ್ನು ತಿಳಿಸುವ ಅತ್ಯಾಧುನಿಕ ಯಂತ್ರವನ್ನು ಸಂಸ್ಥೆಯು ಹೊಂದಿದೆ.
‘ನಮ್ಮಲ್ಲಿ ಚಿನ್ನದ ನಿಖರತೆಯನ್ನು ತಿಳಿಸುವ ಅಮೆರಿಕದಿಂದ ತರಿಸಿದ ಅತ್ಯಾಧುನಿಕ ಯಂತ್ರೋಪಕರಣಗಳಿವೆ. ಫೋಟೊ ಸಮೇತ ಪರೀಕ್ಷೆ ಮಾಡಿ ಕೊಡಲಾಗುತ್ತದೆ. ಡಿಜಿಟಲ್‌ ವ್ಯವಸ್ಥೆ ಇರುವುದರಿಂದ ನಿಖರ ಮಾಹಿತಿ ಕೊಡಲು ಸಾಧ್ಯವಾಗುತ್ತದೆ. ಪರಿಶುದ್ಧತೆಯನ್ನು ಕ್ಯಾರೆಟ್‌ಗೆ ಪರಿವರ್ತಿಸಿ ಮೌಲ್ಯವನ್ನು ತಿಳಿಸಲಾಗುತ್ತದೆ. ಲೇಸರ್‌ ವೆಲ್ಡಿಂಗ್‌ ಸೌಲಭ್ಯವೂ ಇದೆ. ಕಳೆದ 7 ವರ್ಷಗಳಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಹಲವು ಬ್ಯಾಂಕುಗಳು, ಸಹಕಾರಿ ಸಂಸ್ಥೆಗಳು, ಸಾರ್ವಜನಿಕರು ಇಲ್ಲಿಗೆ ಬಂದು ಚಿನ್ನ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಯಂತ್ರವನ್ನು ಸ್ಥಳಕ್ಕೇ ಕೊಂಡೊಯ್ದು ಚಿನ್ನ ಪರೀಕ್ಷಿಸುವ ವ್ಯವಸ್ಥೆ ಇರುವುದರಿಂದ ಚಿನ್ನಾಭರಣಗಳನ್ನು ಹೊಂದಿರುವ ದೇವಸ್ಥಾನಗಳು ಇದರ ಪ್ರಯೋಜನ ಪಡೆಯಬಹುದು. ರಾಜ್ಯದಲ್ಲಿಯೇ ಇಂತಹ ಸೌಲಭ್ಯ ಬೇರೆ ಕಡೆ ಇಲ್ಲ. ಮುಜರಾಯಿ ಇಲಾಖೆಯ ಅಧೀನ ಇರುವ ದೇವಾಲಯಗಳಲ್ಲಿನ ಚಿನ್ನವನ್ನು ಪರೀಕ್ಷೆಗೆ ಒಳಪಡಿಸುವ ಬಗ್ಗೆ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಮಂಗಳೂರು ಟೆಸ್ಟಿಂಗ್‌ ಸೆಂಟರ್‌ನ ಪಾಲುದಾರ ಸತೀಶ್‌ ರಾವ್‌ ತಿಳಿಸಿದ್ದಾರೆ.

– ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next