Advertisement

ನೀರೆಯರ ಅಂದ ಹೆಚ್ಚಿಸುವ ನೂಲಿನ ಸೀರೆಯ ಮಾಂತ್ರಿಕ ಗಾಡ್ವಿನ್‌ ಮಾಬೆನ್‌

07:00 AM Apr 06, 2018 | |

ಮನೆಗೆ ಅಂಟಿ ಹೊರಚಾಚಿಕೊಂಡಂತೆ, ಮಂದ ಬೆಳಕಿನ, ತುಂಬಾ ಪುರಾತನವೇನಲ್ಲದ ಕೋಣೆ. ಆಧುನಿಕತೆಯ ಪ್ರತೀಕವಾಗಿ ಹೊಳೆಯುತ್ತಿರುವ ಏಕೈಕ ದೀಪದ ಬಲ್ಬ್ ಮತ್ತು ಹೊಳಪುಗಣ್ಣುಗಳ, ಅತ್ತಿಂದಿತ್ತ ಕುಣಿಯುವ ನಾಲ್ಕು-ಐದರ ಮೊಮ್ಮಗ. ಒಳ ಹೊಕ್ಕ ಕೂಡಲೇ ಕಾಣಸಿಗುವುದು ಕೈಮಗ್ಗದ ಯಂತ್ರ. ಕೈ-ಕಣ್ಣಿನ ಹೊಂದಾಣಿಕೆ ಹಾಗೂ ಮಗ್ನತೆ ಸಾಕು ಇದಕ್ಕೆ. ಕೈಮಗ್ಗದ ಎದುರು ತೆಳ್ಳಗೆ, ನೀಳ ಮೈಕಟ್ಟಿನ, ತೀಕ್ಷ್ಣ ಕಣ್ಣುಗಳ ಎಪ್ಪತ್ತೂಂಬತ್ತರ ಗಾಡ್ವಿನ್‌ ಮಾಬೆನ್‌. ಇವರು ಇಲ್ಲೇ ಹಗಲು ರಾತ್ರಿ ಮಗ್ಗದೆದುರು ಕುಳಿತು 80 ಕೌಂಟಿನ/80 ನಂಬರಿನ ಸೀರೆ ನೇಯುತ್ತಿರುತ್ತಾರೆ. 

Advertisement

ಇತ್ತೀಚೆಗಷ್ಟೇ ಮಾಬೆನ್ನರ ಕುರಿತು ತಿಳಿದದ್ದು. ಉಡುಪಿ ಪ್ರೈಮರಿ ವೀವರ್ಸ್‌ ಸರ್ವಿಸ್‌ ಕೋಆಪರೇಟಿವ್‌ ಸೊಸೈಟಿಯಲ್ಲಿ ದೊರೆಯುವ 80 ನಂಬರಿನ ಚಂದದ ಸೀರೆಗಳ ಈಗಿನ ಏಕೈಕ ಕತೃì ಮಾಬೆನ್ನರೊಬ್ಬರೇ. ನನ್ನ ವಿದ್ಯಾಗುರು ಗಾಯತ್ರಿ ಪ್ರಭುರವರು ಒಂದು ದಿನ ಈ ಸೀರೆಯನ್ನು ನೇಯುವ ಕೈಗಳು ವೃದ್ಧಾಪ್ಯದ ಅಂಚಿನಲ್ಲಿವೆ ಎಂದು ತಿಳಿಸಿದಾಗ- ಯಾರು? ಏನು? ಎತ್ತಗಳ ತಿಳಿಯುವ ತವಕದಲ್ಲಿ ನಾವು ಉಡುಪಿಯ ಮಾರ್ಪಳ್ಳಿಯಲ್ಲಿರುವ ಅವರ ಮನೆ ಬಾಗಿಲಿಗೆ ತಲುಪಿದೆವು.  

ಈ 80 ನಂಬರಿನ ಸೀರೆಯೆಂದರೆ ವಿಶೇಷ ಆಕರ್ಷಣೆ, ಕೈಮಗ್ಗದ ಸೀರೆಯ ಅಭಿಮಾನಿಗಳಿಗೆ. ಒಂದು ಇಂಚಿಗೆ ಎಂಬತ್ತು ನೂಲುಗಳಿಂದ ಸಿದ್ಧಪಡಿಸುವ ಮನಸ್ಸಿಗೆ ಹಿತವೆನಿಸುವ ಬಣ್ಣದ, ಮೃದು ಗುಣಮಟ್ಟದ ಸೀರೆಯೇ 80 ನಂಬರಿನ ಸೀರೆ. ಕೆಲವರಿಗೆ ಅಜ್ಜಿಯ ಮೈಯ ಘಮ, ಮಲ್ಲಿಗೆಯಂಥ ನೆನಪುಗಳ ತಲುಪಿಸುವ ದೂತನಂತೆ, ಇನ್ನೂ ಕೆಲವರಿಗೆ – ಅದರ ಮೇಲಿನ ನಾಜೂಕಿನ ಬುಟ್ಟಾಗಳು ಹಾಗೂ ಅಂಚುಗಳು ಗತಲೋಕದ ಕೊಂಡಿಗಳಂತೆ, ಈಗಿನ ಆಧುನಿಕ ಭಾರತದ ಹೊಸ ಅಸ್ಮಿತೆಯಂತೆ. 

ಸುಮಾರು 10-13ರ ವಯಸ್ಸಿನಲ್ಲಿ ಬಡತನದ ಬಿಸಿ ತಟ್ಟುತ್ತಲೇ ನೇಕಾರರಾಗಿದ್ದ ತಂದೆಯವರನ್ನು ನೋಡಿ, ಕಲೆ ಕಲಿತು ಮನೆಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡವರು ಇಂದಿಗೂ ನೇಯುವಿಕೆಯನ್ನು ನಿಲ್ಲಿಸಿಲ್ಲ. ದಶಕಗಳ ಕಾಲ ನೇಕಾರಿಕೆಗೆ ಜೊತೆಯಾದ ಧರ್ಮಪತ್ನಿಯವರು ಈಗಿಲ್ಲ. ನಾಲ್ಕು ಮಕ್ಕಳ ತಂದೆಯಾದ ಇವರು ತಾವು 1965ನೆ ಇಸವಿಯಲ್ಲಿ ಖರೀದಿಸಿದ ಜಾಗದಲ್ಲಿ ಮನೆಕಟ್ಟಿ, ಮಗ, ಸೊಸೆ, ಮೊಮ್ಮಗನೊಂದಿಗೆ ವಾಸಿಸುತ್ತಿದ್ದಾರೆ. ಪ್ರಿಯದರ್ಶಿನಿ ಹ್ಯಾಂಡ್‌ಲೂಮ್ಸ…, ಉಡುಪಿಯ ಚಿಟಾ³ಡಿ ಬಳಿಯ ಕೈಮಗ್ಗದ ಕಾರ್ಖಾನೆಗಳಲ್ಲಿ, ಶಿವಳ್ಳಿ ಸೊಸೈಟಿ- ಹೀಗೆ ಹಲವು ಮಾರಾಟ ಕೇಂದ್ರಗಳಲ್ಲಿ ಉದ್ಯೋಗಿಯಾಗಿ ದುಡಿದಿರುವ ಮಾಬೆನ್ನರು ಕಳೆದ ಹಲವು ವರ್ಷಗಳಿಂದ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸರಕಾರಿ ಸಂಘದ (ಉಡುಪಿ ಪ್ರೈಮರಿ ವೀವರ್ಸ್‌ ಸರ್ವಿಸ್‌ ಕೋಆಪರೇಟಿವ್‌ ಸೊಸೈಟಿ) ಉದ್ಯೋಗಿಯಾಗಿದ್ದಾರೆ. 

ಸೊಸೈಟಿಯಲ್ಲಿ ನೀಡಲಾಗುವ ಸಾಮಗ್ರಿಗಳನ್ನು ತಂದು ಕನಿಷ್ಠ ಮೂರು ಮಂದಿಯ ಸಹಾಯದೊಂದಿಗೆ ದಿನಗಟ್ಟಲೆ ದುಡಿದು ಸಿದ್ಧಪಡಿಸಬೇಕಾದ ಸೀರೆಗಳನ್ನು ತಾವೊಬ್ಬರೇ ಕುಳಿತು ಮಾಬೆನ್ನರು ನೇಯುತ್ತಾರೆ. ಇತ್ತೀಚೆಗೆ ವೈದ್ಯರೊಬ್ಬರು ತಪ್ಪಾಗಿ ಡಯಾಗ್ನೊàಸ್‌ ಮಾಡಿದ ಪರಿಣಾಮವಾಗಿ ಅಲರ್ಜಿಯಾಗಿ ಕಾಲಿನಲ್ಲಿ ಹುಟ್ಟಿದ ಗಾಯ ಇನ್ನೂ ಮಾಗದೆ ಕೀವುಂಟಾಗಿದ್ದರೂ, ಆಗಾಗ ಕಣ್ಣುಗಳು ನೋಯುತ್ತಿದ್ದರೂ ಈ ಮಾಗಿದ ಜೀವಕ್ಕೆ ಅದರ ಪರಿವೆ ಇಲ್ಲ. ಕಾಯಕವೇ ಕೈಲಾಸ ಇವರಿಗೆ. ಒಂದು ಸೀರೆ ಸಿದ್ಧಗೊಳ್ಳಲು ಒಂದು ವಾರಕ್ಕೂ ಹೆಚ್ಚು ಸಮಯಾವಧಿ ಹಿಡಿಯಬಹುದು. ಸೆರಗನ್ನು ನೇಯಲು ಹೆಚ್ಚಿನ ಸಮಯ ಹಿಡಿಯುತ್ತದೆ ಎನ್ನುತ್ತಾರೆ ಮಾಬೆನ್ನರು. ಮುಂಜಾನೆ ಸುಮಾರು ಒಂಬತ್ತಕ್ಕೆ ನೇಯುವಿಕೆ ಆರಂಭಿಸಿದರೆ, ಊಟಕ್ಕೊಂದು ವಿರಾಮ ಬಿಟ್ಟು ಕತ್ತಲಾಗುವ ತನಕವೂ ನೇಯುವಿಕೆಯೇ ಧ್ಯಾನ ಇವರದು. ಮುಗಿದ ನಂತರ ತಾವೇ ಉಡುಪಿ ಸೊಸೈಟಿಗೆ ಸೀರೆಗಳನ್ನು ತಲುಪಿಸಿ ಅದಕ್ಕೆ ಸಂದಾಯವಾಗುವ ಹಣ ಪಡೆದು ಮನೆಗೆ ಹಿಂದಿರುಗುತ್ತಾರೆ, ಮತ್ತೂಂದು ಕಾವ್ಯದಂಥ ಸೀರೆ ನೇಯಲು. 

Advertisement

ಗಿಳಿಪಚ್ಚೆ, ನೀಲಿ, ಕಡುಗೆಂಪು – ಹೀಗೆ ಆಹ್ಲಾದಕರ ಬಣ್ಣಗಳ ಸೀರೆಗಳ ಮೇಲೆ ಮಾಬೆನ್ನರ ಅಪೂರ್ವ ಛಾಪು ಹೇಗಿದೆಯೆಂದರೆ ಸೊಸೈಟಿಗೆ ಸೀರೆಗಳು ತಲುಪಿದ ದಿನವೇ ಮಾರಾಟವಾಗಿರುತ್ತವೆ. ಮತ್ತೆ ಸೀರೆ ಸರಬರಾಜಾಗಲು ತಾಳ್ಮೆಯಿಂದ ಕಾಯುತ್ತಾರೆ ಇವರ ಗ್ರಾಹಕರು. ಉಡುಪಿಯ ಕೈಮಗ್ಗ ಕೈಗಾರಿಕೆ ಕ್ಷೇತ್ರದ ಎಲ್ಲಾ ಮಜಲುಗಳನ್ನು ಕಂಡಿರುವ ಜನರಲ್ಲೊಬ್ಬರು ಇವರು ಎಂದರೆ ತಪ್ಪಾಗಲಾರದು. ಸುಮಾರು 1970-80ರ ದಶಕಗಳಲ್ಲಿ ಇವರು ದುಡಿಯಲು ಆರಂಭಿಸಿದ ದಿನಗಳಲ್ಲಿ 800ಕ್ಕೂ ಹೆಚ್ಚು ಕೈ ಮಗ್ಗಗಳಿದ್ದ ಊರು ಉಡುಪಿ. ಪಾರಂಪರಿಕ ನೇಕಾರ  ಕುಟುಂಬಗಳಲ್ಲಿ ಎರಡು-ಮೂರು ಮಗ್ಗಗಳಲ್ಲಿ ಮನೆಯವರೆಲ್ಲರೂ ಸೇರಿ ಸೀರೆ ನೇಯ್ದು ಸಂಘಗಳಿಗೆ ಮಾರುತ್ತಿದ್ದರು. 80-ಕೌಂಟ್, 60-ಕೌಂಟ್, 40-ಕೌಂಟ್‌ ಹೀಗೆ ವಿವಿಧ ಬಗೆಯ ಸೀರೆಗಳು ಸಿದ್ಧಗೊಳ್ಳುತ್ತಿದ್ದರೂ ಬೇಡಿಕೆ ಹೆಚ್ಚಿರಲಿಲ್ಲ. 

ನೇರ ಮಾತುಗಳ ಮಾಬೆನ್ನರ ಏಕಾಗ್ರತೆ ಎಂಥವರನ್ನೂ ವಿಸ್ಮಿತಗೊಳಿಸಬಲ್ಲದು. ತಮ್ಮ ಕೆಲಸದ ನಡುನಡುವೆ ಬಿಡುವು ಮಾಡಿಕೊಂಡು ಮಾತಿಗಿಳಿದ ಅವರಲ್ಲಿ ಕೈಮಗ್ಗದ ಕೈಗಾರಿಕೆ ನಶಿಸಿ ಹೋಗುವ ಬಗ್ಗೆ ಆತಂಕಗಳಿದ್ದವು. ಕೈಮಗ್ಗ ಸೀರೆಯ ನೇಕಾರರು ಹಲವಾರು ಕಾರಣಗಳಿಂದಾಗಿ ಕಷ್ಟ-ನಷ್ಟಗಳನ್ನು ಅನುಭವಿಸಿದ್ದಾರೆ. ಕಡಿಮೆ ಆದಾಯ, ಕೈಮಗ್ಗದ ಮೇಲೆ ನವಕಾಲೀನ ಪವಲೂìಮಿನ ಅಟ್ಟಹಾಸ ಒಂದೆಡೆಯಾದರೆ, ಆಡಳಿತದಲ್ಲಿನ ಒಳರಾಜಕೀಯಗಳು, ಪದೇ ಪದೇ ಬದಲಾಗುತ್ತಿದ್ದ ನಿಯಮಗಳು ಇನ್ನೊಂದೆಡೆ ಎಂದು ಹಿಂದಿನ ದಿನಗಳನ್ನು ನೆನೆಯುತ್ತಾರೆ ಮಾಬೆನ್ನರು.  

ಇಂದು ಹೆಚ್ಚು ಶ್ರಮ ಕಡಿಮೆ ಲಾಭದ ಕೈಮಗ್ಗದ ಕೈಗಾರಿಕೆ ಮಾಬೆನ್ನರಂತ ಹಲವು ನುರಿತ ನೇಕಾರರ ದಶಕಗಳ ಶ್ರಮಕ್ಕೆ ಸಾಕ್ಷಿಯಾಗಿದೆ. ಹಲವು ಕೈಗಾರಿಕಾ ಕೇಂದ್ರಗಳಲ್ಲಿ ದುಡಿದ ಅನುಭವವಿರುವ ಇವರಿಗೆ ಈಗಿನ ಕಾಲದಲ್ಲಿ ಕೈಮಗ್ಗದಿಂದ ಬರುವ ಆದಾಯದಿಂದ ಜೀವನ ನಡೆಸುವುದು ಅಸಾಧ್ಯ ಎನ್ನುವ ಕಹಿಸತ್ಯದ ಅರಿವಿದೆ. 

ಕಷ್ಟವನ್ನೇ ಅನುಭವಿಸಿ, ಅನುಭವಿಸಿ ಸುಖದ ನೆನಪೇ ಇಲ್ಲ ಎನ್ನುವ ಮಾಬೆನ್ನರ ಮಾತುಗಳಲ್ಲಿ ಕಂಡದ್ದು ವಿಷಣ್ಣತೆಯೋ, ದಣಿವೋ ತಿಳಿಯಲಿಲ್ಲ. ಉಡುಪಿಯಲ್ಲಷ್ಟೇ ಅಲ್ಲ, ರಾಜ್ಯದ ಹಲವೆಡೆಯ ಕೈಮಗ್ಗದ ಕ್ಷೇತ್ರಕ್ಕೆ ಪುನರುಜ್ಜೀವನದ ಅಗತ್ಯವಿದೆ. ಈ ಹಿಂದೆ ಉತ್ಪಾದನಾ ಪ್ರಮಾಣ ಹೆಚ್ಚಿತ್ತು. 1970-85ರಲ್ಲಿ ತಿಂಗಳಿಗೆ ಸುಮಾರು 7,000 ಸೀರೆಗಳು ಸಿದ್ಧಗೊಳ್ಳುತ್ತಿದ್ದವಾದರೂ ಬೇಡಿಕೆ ಹೆಚ್ಚಿರಲಿಲ್ಲ. ಈಗ ಕೈಮಗ್ಗದ ಸೀರೆಗಳಿಗೆ ಅಪಾರ ಬೇಡಿಕೆಯೇನೋ ಇದೆ ಆದರೆ ತಯಾರಿಸುವ ಕೈಗಳು ಕಡಿಮೆ, ಉತ್ಪಾದನಾ ಪ್ರಮಾಣವೂ ಕಡಿಮೆ ಎಂದು ಹೇಳುತ್ತಾರೆ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸರಕಾರಿ ಸಂಘದ ಎಂ.ಡಿ. ಸದಾನಂದ ಕಾಂಚನರು. ಉಡುಪಿಯ ಕೈಮಗ್ಗದ ಸವಿಸ್ತಾರ ಇತಿಹಾಸವನ್ನು ನಮಗೊದಗಿಸಿಕೊಟ್ಟ ಕಾಂಚನರು ಸರಕಾರ ಕೇವಲ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಿದರಷ್ಟೇ ಸಾಲದು, ನೇಕಾರರನ್ನು ಮುಖ್ಯವಾಹಿನಿಗೆ ತರುವ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಿದರಷ್ಟೇ ಕೈಮಗ್ಗದ ಕೈಗಾರಿಕೆಗೆ ಮರುಜೀವ ಸಿಗುವುದು ಸಾಧ್ಯ ಎನ್ನುತ್ತಾರೆ. ತರಬೇತಿ ಕೇಂದ್ರಗಳು ಯುವ ಜನಾಂಗವನ್ನು ಆಕರ್ಷಿಸಲು ಹೆಚ್ಚು ತರಬೇತಿ, ಭತ್ಯೆ ನೀಡಬೇಕಿದೆ. ಪ್ರತ್ಯೇಕ ಕೈಮಗ್ಗ ಸಂಸ್ಥೆ ಸ್ಥಾಪಿಸಿ ಜೊತೆಯಲ್ಲಿ ನಿವಾಸ ಮತ್ತಿನ್ನಿತರ ಸವಲತ್ತುಗಳನ್ನು ನೀಡಿದಲ್ಲಿ ಉದ್ಯೋಗ ಸೃಷ್ಟಿಯ ಜೊತೆಗೆ ನಿಪುಣ ನೇಕಾರರೂ ಕ್ಷೇತ್ರಕ್ಕೆ ದೊರೆಯಬಹುದು ಎಂಬ ಅನಿಸಿಕೆ ಅವರದು. ಬಹುಶಃ ಈಗಾಗಲೇ ನಷ್ಟದಲ್ಲಿರುವ ಉಡುಪಿ ಸೊಸೈಟಿಗೂ ಅನುಕೂಲಕರ ದಿನಗಳು ಬರಬಹುದೇನೋ. 

ಆಧುನಿಕತೆಯ ನಡುವೆ ಕೈಮಗ್ಗ ಕಳೆದುಹೋಗುವ ಮುನ್ನ ಹೊಸ ಉತ್ಸಾಹಿಗಳನ್ನು ಹುಡುಕಿ ಅವರಿಗೆ ತರಬೇತಿ ನೀಡಬೇಕಿದೆ. ಆರ್ಥಿಕ ಸಹಾಯ ನೀಡಿ ಕೈಮಗ್ಗವೇ ಕುಲಕಸುಬಾಗಿರುವ ನೇಕಾರರಿಗೆ ಮತ್ತಷ್ಟು ಉತ್ತೇಜನ ನೀಡಬೇಕಿದೆ. ಕೈಮಗ್ಗದ ಸೀರೆಗಳನ್ನು ಪ್ರತಿನಿತ್ಯ ಅತ್ಯಂತ ಇಷ್ಟಪಟ್ಟು ಉಡುವ ಗಾಯತ್ರಿಯವರಿಗೂ, ಕೈಮಗ್ಗದ ಕ್ಷೇತ್ರದ ವಾಸ್ತವವನ್ನು ಹತ್ತಿರದಿಂದ ಇದೀಗಷ್ಟೇ ಅರಿತ ಈ ಲೇಖಕಿಗೂ ಕೈಮಗ್ಗದ ಜಗತ್ತಿನ ಒಳಮಜಲುಗಳನ್ನು, ಬದುಕಿನ ಕಟು ವಾಸ್ತವಗಳನ್ನು ಲಾಳಿಯ ಜೀಕಾಟದ, ಕಾಲುಮಣೆಯ ನಿರಂತರ ಸದ್ದಿನ ನಡುವೆ ಈ ಹಿರಿಯ ಜೀವ ಕಲಿಸಿಕೊಟ್ಟರು. ಅವರು ನೂಲನ್ನೆಳೆಯುವ ಪರಿಯಲ್ಲೇ ಸಮಯವನ್ನೂ ಎಳೆದು ನಿಲ್ಲಿಸುವುದು ಸಾಧ್ಯವಾಗಿದ್ದರೆ! ಎಂದು ಅನ್ನಿಸಿದ್ದು ಸತ್ಯ. 

ಈ ಕುಶಲಕರ್ಮಿ ಮಾಬೆನ್ನರ ನಂತರ ಇನ್ನಾರು? ಉತ್ತರ ಸದ್ಯಕ್ಕೆ ಯಾರ ಬಳಿಯೂ ಇಲ್ಲ. ಮಾಬೆನ್ನರ ಲೋಕದಿಂದ ಹೊರಬಂದು ನೋಡಿದರೆ ಅವರ ಪಾದರಸದಂಥ ಮೊಮ್ಮಗ ದೂರದರ್ಶನದ ಮಾಯಾಲೋಕದಲ್ಲಿ ಮುಳುಗಿದ್ದ. 

ಸ್ನೇಹಜಯಾ ಕಾರಂತ

Advertisement

Udayavani is now on Telegram. Click here to join our channel and stay updated with the latest news.

Next