Advertisement

ಗೋವಾ ಇಫಿ ಚಿತ್ರೋತ್ಸವ; ಸುವರ್ಣ ಅಧ್ಯಾಯ ತೆರೆಯಲಿಕ್ಕೆ ಆರೇ ಗಂಟೆಗಳು ಬಾಕಿ

12:54 PM Nov 25, 2019 | Mithun PG |

ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ(ಇಫಿ)ದ ಸುವರ್ಣ ಅಧ್ಯಾಯ ತೆರೆದುಕೊಳ್ಳಲಿಕ್ಕೆ ಆರು ಗಂಟೆಗಳು ಬಾಕಿ ಇವೆ.

Advertisement

ಗೋವಾದ ರಾಜಧಾನಿ ಪಣಜಿಯ ಐನಾಕ್ಸ್ ಹಾಗೂ ಕಲಾ ಅಕಾಡೆಮಿಯ ಆವರಣದಲ್ಲಿ ಈಗಾಗಲೇ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ. ಪಣಜಿ ನಗರದ ಹಲವು ವೃತ್ತಗಳು ಚಿತ್ರೋತ್ಸವದ ಭಿತ್ತಿಪತ್ರ ಹಾಗೂ ಬ್ಯಾನರ್ ಗಳಿಂದ ಕಂಗೊಳಿಸುತ್ತಿದೆ. ಐನಾಕ್ಸ್ ಥಿಯೇಟರ್ ಇರುವ ಎಂಟರ್‌ಟೈನ್‌ಮೆಂಟ್ ಸೊಸೈಟಿ ಗೋವಾದ ಕಟ್ಟಡವಂತೂ ವಿದ್ಯುತ್ ದೀಪಾಲಂಕಾರದಿಂದ ಸುಂದರಗೊಂಡಿದೆ.

ಸೋಮವಾರ ಸಂಜೆ ಚಿತ್ರೋತ್ಸವದ ಕುರಿತು ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಚಿತ್ರೋತ್ಸವದ ಸಿದ್ಧತೆ ಪೂರ್ಣಗೊಂಡಿದೆ. ಇದು ಐವತ್ತನೆ ವರ್ಷವಾದ ಕಾರಣ ಹೆಚ್ಚು ಸಂಭ್ರಮದಿಂದ ಆಚರಿಸಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ಗೋವಾದ 200 ಕ್ಕೂ ಹೆಚ್ಚು ಕಲಾ ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದರು.

ಬುಧವಾರ ಅಪರಾಹ್ನ 3 ಕ್ಕೆ ಚಿತ್ರೋತ್ಸವಕ್ಕೆ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದೆ. ಇದೇ ಸಂದರ್ಭದಲ್ಲಿ ತಮಿಳು ಭಾಷೆಯ ಚಿತ್ರನಟ ರಜನೀಕಾಂತ್ ಅವರಿಗೆ ಸುವರ್ಣ ಮಹೋತ್ಸವ ಗೌರವ ನೀಡಿ ಅಭಿನಂದಿಸಲಾಗುವುದು. ಹಿಂದಿಯ ಚಿತ್ರನಟ ಅಮಿತಾಬ್ ಬಚ್ಚನ್ ಅವರಿಗೆ  ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿರುವ ಹಿನ್ನೆಲೆಯಲ್ಲಿ ಅವರನ್ನೂ ಚಿತ್ರೋತ್ಸವಕ್ಕೆ ಆಹ್ವಾನಿಸಲಾಗಿದೆ. ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಈ ಬಾರಿ ಇಬ್ಬರು ಹಿರಿಯ ನಟರು ಕಂಗೊಳಿಸುತ್ತಿರುವುದು ವಿಶೇಷ. ಕರಣ್ ಜೋಹರ್ ಇಡೀ ಕಾರ್ಯಕ್ರಮವನ್ನು ನಿರೂಪಿಸಲಿದ್ದು, ಅಮಿತಾಬ್ ಬಚ್ಚನ್ ಕಾರ್ಯಕ್ರಮ ಉದ್ಘಾಟಿಸುವರು.

Advertisement

ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ಫ್ರಾನ್ಸ್‌ನ ಸಿನಿಮಾ ನಟಿ ಹೆಸ್ಬೆಲ್ಲಾ ಹುಪರ್ಟ್ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಮಾರಂಭದಲ್ಲಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮತ್ತಿತರರು ಪಾಲ್ಗೊಳ್ಳುವರು. ಉದ್ಘಾಟನಾ ಚಿತ್ರವಾಗಿ ಇಟಲಿ ಭಾಷೆಯ ಗೋರನ್ ಪಕ್ಲಜೆವಿಕ್ ನಿರ್ದೇಶನದ ಱಡೆಸ್ಪೈಟ್ ದಿ ಫಾಗ್‌ೞ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ.

ಪ್ರತಿನಿಧಿಗಳ ನೋಂದಣಿ

ಇದುವರೆಗೂ ಸುಮಾರು 9, 300 ಕ್ಕೂ ಹೆಚ್ಚು ಸಿನಿಮಾಸಕ್ತರು ಹೆಸರು ನೋಂದಣಿ ಮಾಡಿದ್ದಾರೆ. ಐವತ್ತನೇ ವರ್ಷವಾದ ಕಾರಣ, ಸುಮಾರು 12 ಸಾವಿರ ಮಂದಿ ಪ್ರತಿನಿಧಿಗಳನ್ನು ನಿರೀಕ್ಷಿಸಲಾಗಿದೆ. ಐವತ್ತನೇ ವರ್ಷದ ವಿಶೇಷವೆಂಬಂತೆ ವಿವಿಧ ವಿಭಾಗಗಳನ್ನು ಪರಿಚಯಿಸಲಾಗುತ್ತಿದೆ. ಒಟ್ಟೂ 9 ದಿನಗಳ ಉತ್ಸವದಲ್ಲಿ 78 ದೇಶಗಳ 200 ಕ್ಕೂ ಹೆಚ್ಚು ಚಲನಚಿತ್ರಗಳು ಹತ್ತು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿವೆ. ಈ ಬಾರಿ ಮಾಲ್‌ವೊಂದರಲ್ಲೂ ಚಿತ್ರ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.

ಕಾಗದ ರಹಿತ ವ್ಯವಸ್ಥೆ

ಮೊದಲ ಬಾರಿಗೆ ಕಾಗದ ರಹಿತ ಟಿಕೆಟ್ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ. ಪ್ರತಿನಿಧಿಯ ಇಮೇಲ್ ಗೆ ನೇರವಾಗಿ ಟಿಕೆಟ್ ನ ವಿದ್ಯುನ್ಮಾನ ಪ್ರತಿ ಕಳಿಸಲಾಗುವುದು. ಹಾಗೆಯೇ ಪ್ರತಿನಿಧಿಯ ಗುರುತಿನ ಚೀಟಿಯ ಸಂಖ್ಯೆಯ ಖಾತೆಯಲ್ಲಿ ಎಲ್ಲ ಮಾಹಿತಿಗಳೂ ಇರಲಿವೆ. ಸಂಘಟಕರು ಬಾರ್ ಕೋಡ್ ರೀಡರ್ ಸಹಾಯದಿಂದ ಪರಿಶೀಲಿಸಿ ಪ್ರತಿನಿಧಿಗಳನ್ನು ಚಿತ್ರ ಮಂದಿರಗಳ ಒಳಗೆ ಬಿಡುವರು.

ಐವತ್ತನೇ ವರ್ಷ ಸಿನಿಮಾಗಳು

ಐವತ್ತರ ನೆನಪಿಗೆ 1969 ರಲ್ಲಿ ಭಾರತೀಯ ಭಾಷೆಯಲ್ಲಿ ಬಿಡುಗಡೆಯಾದ ಹನ್ನೊದುಂ ಚಲನಚಿತ್ರಗಳನ್ನು  ಪ್ರದರ್ಶಿಸಲಾಗುತ್ತಿದೆ. ಈ ಪೈಕಿ ಕನ್ನಡದ ಉಯ್ಯಾಲೆ (ಎನ್. ಲಕ್ಷ್ಮೀನಾರಾಯಣ್ ನಿರ್ದೇಶನ) ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಇದರೊಂದಿಗೆ ತಮಿಳು, ತೆಲುಗು, ಮಲಯಾಳಂ, ಮರಾಠಿ, ಅಸ್ಸಾಮಿ ಸೇರಿದಂತೆ ಇತರೆ ಭಾಷೆಗಳ ಚಲನಚಿತ್ರಗಳೂ ಪ್ರದರ್ಶನಗೊಳ್ಳಲಿವೆ.

ಕನ್ನಡದ ಕಥೆ

ಈ ಬಾರಿಯೂ ಕನ್ನಡದ ಕಥೆಯನ್ನು ಇಲ್ಲಿ ಕೇಳುವವರಿಲ್ಲವಾಗಿದೆ. ಹೊಸ ಅಲೆಯ ಚಲನಚಿತ್ರಗಳನ್ನು ನೆನಪಿಸಿಕೊಳ್ಳುವ ಒಂದು ವಿಶೇಷ ವಿಭಾಗವಿದ್ದು, ಅದರಲ್ಲಿ ಕನ್ನಡದ ಯಾವ ಚಿತ್ರಗಳಿಗೂ ಅವಕಾಶ ಸಿಕ್ಕಿಲ್ಲ. ಸಂಸ್ಕಾರವಾಗಲೀ, ಘಟಶ್ರಾದ್ಧವಾಗಲೀ ಸ್ಥಾನ ಪಡೆದಿಲ್ಲ. ಆದರೆ, ಹಿಂದಿಯ ಎರಡೆರಡು ಚಿತ್ರಗಳು ಸ್ಥಳ ಪಡೆದಿವೆ. ಉಳಿದಂತೆ ಮಲಯಾಳಂ ಚಿತ್ರಕ್ಕೂ ಅವಕಾಶ ಸಿಕ್ಕಿದೆ. ಭಾರತೀಯ ಭಾಷೆಗಳ ಚಲನಚಿತ್ರ ಪ್ರಪಂಚದಲ್ಲಿ ಹೊಸ ಅಲೆಯ ಚಿತ್ರಗಳಿಗೆ ಒಂದು ಪ್ರಮುಖ ಸ್ಥಾನ ತಂದುಕೊಟ್ಟ ಕನ್ನಡಕ್ಕೆ ಒಂದೂ ಅವಕಾಶ ಸಿಗದಿರುವುದು ಕೊಂಚ ಬೇಸರಕ್ಕೆ ಕಾರಣವಾಗಿದೆ.

ಕಾರ್ನಾಡರು ನೆನಪಾದರು !

ಹೊಸ ಅಲೆಯ ಚಲನಚಿತ್ರಗಳು ಸಂಘಟಕರಿಗೆ ನೆನಪಾಗದಿದ್ದರೂ, ಅದೃಷ್ಟವಶಾತ್ ಕೆಲವು ತಿಂಗಳ ಹಿಂದೆ ನಿಧನರಾದ ನಾಟಕಕಾರ ಗಿರೀಶ್ ಕಾರ್ನಾಡರು ಮರೆತು ಹೋಗಿಲ್ಲ. ಶ್ರದ್ಧಾಂಜಲಿ ಸಲ್ಲಿಸುವ ವಿಭಾಗದಲ್ಲಿ ಗಿರೀಶ್ ಕಾರ್ನಾಡರ ಕಾನೂರು ಸುಬ್ಬಮ್ಮ ಹೆಗ್ಗಡತಿ ಪ್ರದರ್ಶನಗೊಳ್ಳುತ್ತಿದೆ.

ಈ ಬಾರಿಯ ಹೈಲೈಟ್ಸ್

1)  76 ದೇಶಗಳ 200 ಕ್ಕೂ ಹೆಚ್ಚು ಚಿತ್ರಗಳು

2)  ಆಸ್ಕರ್ ಸ್ಪರ್ಧೆಯಲ್ಲಿರುವ 26 ಚಿತ್ರಗಳು

3)   ರಜನೀಕಾಂತ್‌ಗೆ ಸುವರ್ಣ ಗೌರವ

4)   ಅಮಿತಾಬ್ ಬಚ್ಚನ್ ನ ಚಿತ್ರಗಳ ಪುನರಾವಲೋಕನ

5)   ಐವತ್ತನೇ ವರ್ಷದ ಚಲನಚಿತ್ರಗಳ ಪ್ರದರ್ಶನ

Advertisement

Udayavani is now on Telegram. Click here to join our channel and stay updated with the latest news.

Next