Advertisement

ಮುಜರಾಯಿ ದೇಗುಲಗಳಲ್ಲಿ ಗೋ ಸಂರಕ್ಷಣೆ ಕೇಂದ್ರ

10:23 AM Feb 26, 2020 | Team Udayavani |

ಕೋಟ: ರಾಜ್ಯದ “ಎ’ ದರ್ಜೆಯ 25 ಶ್ರೀಮಂತ ದೇಗುಲಗಳಲ್ಲಿ ಮುಜರಾಯಿ ಇಲಾಖೆ ವತಿಯಿಂದ ಗೋ ಸಂರಕ್ಷಣೆ ಕೇಂದ್ರ ತೆರೆಯಲು ಇಲಾಖೆ ನಿಶ್ಚಯಿಸಿದ್ದು, ಪ್ರಸ್ತಾವನೆ ಸಲ್ಲಿಕೆಯಾಗಿದೆ. ದೇಶೀ ಗೋ ಸಂರಕ್ಷಣೆ ಇದರ ಪ್ರಮುಖ ಉದ್ದೇಶ. ಜತೆಗೆ ಅಕ್ರಮ ಸಾಗಾಟ ಸಂದರ್ಭ ವಶಪಡಿಸಿಕೊಂಡ ಜಾನುವಾರುಗಳು, ಅತಿವೃಷ್ಟಿ, ಅನಾವಷ್ಟಿಯಿಂದ ಮೇವಿನ ಕೊರತೆಯಾಗಿ ಸಾವನ್ನಪ್ಪುವ ಸ್ಥಿತಿಯಲ್ಲಿರುವವು, ವಯಸ್ಕ, ಕಾಯಿಲೆಪೀಡಿತ ಗೋವುಗಳ ರಕ್ಷಣೆಯೂ ಸೇರಿದೆ.

Advertisement

ಹೊಸನಗರ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಗೋಸ್ವರ್ಗದ ಪರಿ
ಕಲ್ಪನೆ ಮತ್ತು ಗೋಸೇವೆಯಲ್ಲಿ ತೊಡಗಿಸಿಕೊಂಡ ನಾಡಿನ ಇತರ ಸಾಧು-
ಸಂತರು, ಧಾರ್ಮಿಕಮುಖಂಡರ ಮಾರ್ಗದರ್ಶನದಲ್ಲಿ ಯೋಜನೆಗೆ ಅಂತಿಮರೂಪ ನೀಡಲಾಗುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಆರಂಭದಲ್ಲಿ 25 ದೇಗುಲ
ಪ್ರಾರಂಭಿಕ ಹಂತದಲ್ಲಿ ಕೇಂದ್ರ ಸ್ಥಾಪನೆಗೆ ಉಡುಪಿ ಜಿಲ್ಲೆಯ ಮಂದಾರ್ತಿ ದೇವಸ್ಥಾನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೊಲ್ಲೂರು ದೇಗುಲದಲ್ಲಿ ಈಗಿರುವ ಗೋ ಕೇಂದ್ರವನ್ನು ವ್ಯವಸ್ಥಿತಗೊಳಿಸಲಾಗುತ್ತದೆ. ಕಟೀಲು, ಕುಕ್ಕೆ ಸುಬ್ರಹ್ಮಣ್ಯ, ಸವದತ್ತಿ ಎಲ್ಲಮ್ಮ ಸೇರಿದಂತೆ 25 ಕಡೆಗಳಲ್ಲಿ ಸ್ಥಾಪನೆಯಾಗಲಿದ್ದು, ಗ್ರಾಮೀಣ ಭಾಗದ ದೇಗುಲಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ದೇಗುಲದ ಅಥವಾ ಸಮೀಪದ ಗೋಮಾಳ, ಇತರ ಸರಕಾರಿ ಕನಿಷ್ಠ 10ಎಕ್ರೆ ಸ್ಥಳ ಮೀಸಲಿಡಲಾಗುತ್ತದೆ.

ರಾಜ್ಯದ ಕೆಲವು ಗೋಸರಂಕ್ಷಣ ಕೇಂದ್ರಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ, ಜಾನುವಾರುಗಳು ಸಂಕಷ್ಟದಲ್ಲಿವೆ ಎನ್ನುವ ದೂರು ಆಗಾಗ ಕೇಳಿಬರುತ್ತಿದೆ. ಮುಜರಾಯಿ ಇಲಾಖೆಯಿಂದಲೇ ಸ್ಥಾಪನೆಯಾಗುವ ಕೇಂದ್ರಗಳಲ್ಲಿ ಅಂತಹ ಅವ್ಯವಸ್ಥೆ ಆಗಬಾರದು ಎಂಬುದಕ್ಕಾಗಿ ಆಹಾರ, ನೆಲೆ ಮತ್ತು ಆರೈಕೆಯಲ್ಲಿ ಯಾವುದೇ ಕೊರತೆ ಎದುರಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ತಜ್ಞರ ಸಲಹೆ ಪಡೆದು ಸೌಲಭ್ಯಗಳ ಕುರಿತು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.

ಹಲವು ದಶಕಗಳ ಬೇಡಿಕೆ
ಸರಕಾರದ ವತಿಯಿಂದ ಪ್ರತೀ ತಾಲೂಕುಗಳಲ್ಲಿ ಗೋಶಾಲೆ ತೆರೆದು ಜಾನುವಾರು ಸಂರಕ್ಷಣೆ ನಡೆಸಬೇಕು ಎನ್ನುವುದು ಹಿಂದೂ ಸಂಘಟನೆ ಸೇರಿದಂತೆ ರೈತರು, ಗೋಪ್ರೇಮಿಗಳ ಹಲವು ದಶಕಗಳ ಬೇಡಿಕೆ. ಹಿಂದಿನ ಅವಧಿಯ ಬಿಜೆಪಿ ಸರಕಾರದಲ್ಲೂ ಈ ಪ್ರಸ್ತಾವನೆ ಇತ್ತು. ಈಗ ಮುಜರಾಯಿ ಇಲಾಖೆಯ ಮೂಲಕ ಈಡೇರುತ್ತಿದೆ.

Advertisement

ಗೋಸಂರಕ್ಷಣೆಗಾಗಿ ಮುಜರಾಯಿ ಇಲಾಖೆಯ ಎ ದರ್ಜೆಯ 25 ದೇಗುಲಗಳಲ್ಲಿ ಪ್ರಾಯೋಗಿಕವಾಗಿ ಗೋಶಾಲೆಗಳನ್ನು ತೆರೆದು ಬಳಿಕ ಹಂತಹಂತವಾಗಿ ವಿಸ್ತರಿಸಲಾಗುವುದು. ಇದಕ್ಕೆ ಹಣಕಾಸಿನ ಸಮಸ್ಯೆ ಎದುರಾಗದು. ಶೀಘ್ರವಾಗಿ ಯೋಜನೆ ಕಾರ್ಯಗತಗೊಳ್ಳಲಿದೆ.
– ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಮುಜರಾಯಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next