Advertisement

Karnataka Rajyotsava ವೈಭವಯುತ ರಾಜ್ಯೋತ್ಸವ, ಸಾಂಸ್ಕೃತಿಕ ಉತ್ಸವ

07:39 PM Nov 25, 2023 | Team Udayavani |

ಅಂದು ಶ್ರೀವಿಜಯನು ಕನ್ನಡ ನಾಡು ಕಾವೇರಿಯಿಂದ ಗೋದಾವರಿ ತೀರದವರಗೆ ಇತ್ತೆಂದು ಬಣ್ಣಿಸಿದ್ದನ್ನು. ಈ ಬಾರಿಯ ಸಿರಿಗನ್ನಡಕೂಟ ಮ್ಯೂನಿಕ್‌ನ ಕರ್ನಾಟಕ ರಾಜ್ಯೋತ್ಸವ ಸಂಭ್ರಮ 2023 ಅನ್ನು ನೋಡಿದಾಗ ಕಾವೇರಿಯಿಂದ ಮ್ಯೂನಿಕ್‌ನ ಇಸಾರ್‌ (ಮ್ಯೂನಿಕ್‌ನಲ್ಲಿ ಹರಿಯುವ ನದಿ) ನದಿವರೆಗೆ ಕನ್ನಡವಿದೆಯೇನೋ ಎಂದೆನಿಸುತ್ತಿತ್ತು. ಅಬ್ಬಾ. . . ಏನು ಜನಸಾಗರ! ಏನು ವೈಭವ ! ಏನು ಕನ್ನಡ ಸಂಸ್ಕೃತಿಯ ಮೆರುಗು ! ಹಬ್ಬದೂಟ !! ಅಬ್ಬಬ್ಬಾ….

Advertisement

ನ. 4ರಂದು ಸಿರಿಗನ್ನಡಕೂಟ ಮ್ಯೂನಿಕ್‌ನ ವತಿಯಿಂದ ಇಲ್ಲಿನ ಬ್ಯುರ್ಗರ್‌ಹೌಸ್‌ (ಸಮುದಾಯ ಭವನ) ಗಾರ್ಷಿಂಗ್‌ನ ರಂಗಮಂದಿರದಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವವನ್ನು, ಸಾಂಸ್ಕೃತಿಕವಾಗಿ, ವೈಭವದಿದಂದ ಆಚರಿಸಲಾಯಿತು. ಸಿರಿಗನ್ನಡಕೂಟ ಮ್ಯೂನಿಕ್‌ಗೆ ಇದು 12ನೇ ರಾಜ್ಯೋತ್ಸವ ಆಚರಣೆ. ಮ್ಯೂನಿಕ್‌ ನಗರದ ಭಾರತೀಯ ಕಾನ್ಸುಲೇಟ್‌ನ ಕಾನ್ಸುಲೇಟ್‌ ಜನರಲ್‌ ಆಫ್‌ ಇಂಡಿಯಾ ಮೋಹಿತ್‌ ಯಾದವ್‌, ಕಾನ್ಸುಲ್‌ ಫಾರ್‌ ಕಲ್ಚರಲ್‌ ನಿರಂಜನ್‌ ಮತ್ತು ಗಾರ್ಷಿಂಗ್‌ ನಗರದ ಮೇಯರ್‌ ಜುರ್ಗೆನ್‌ ಆಶೆರ್ಲ್ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ವಿಶೇಷವೆಂದರೆ ಕನ್ನಡಿಗರಲ್ಲದೆ ಕನ್ನಡೇತರರು ಹಾಗೂ ಭಾರತೀಯರೇತರರು ಸೇರಿ ಸರಿಸುಮಾರು 650ಕ್ಕೂ ಹೆಚ್ಚು ಪ್ರೇಕ್ಷಕರು ರಾಜ್ಯೋತ್ಸವ ಸಂಭ್ರಮದಲ್ಲಿ ಭಾಗವಹಿಸಿದ್ದರು. ಕರ್ನಾಟಕ ಪ್ರವಾಸೋದ್ಯಮದ ವತಿಯಿಂದ ರಂಗಮಂದಿರದ ಮುಂಭಾಗದಲ್ಲಿ ಕರ್ನಾಟಕದ 31ಜಿಲ್ಲೆಯ ವಿಶೇಷತೆಗಳನ್ನು ಪ್ರದರ್ಶಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಮ್ಯೂನಿಕ್‌ ನಗರದ ಭಾರತೀಯ ಕಾನ್ಸುಲೇಟ್‌ ನ ಕಾನ್ಸುಲ್‌ ಜೆನೆರಲ್‌ ಆಫ್‌ ಇಂಡಿಯಾ ಶ್ರೀ ಮೋಹಿತ್‌ ಯಾದವ್‌ ರವರು ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮೂಲಕ ಸಿರಿಗನ್ನಡಕೂಟ ಮ್ಯೂನಿಕ್‌ನ ಅರ್ಥಪೂರ್ಣ ರಾಜ್ಯೋತ್ಸವ ಆಚರಣೆಯನ್ನು ಶ್ಲಾಘಿಸಿದರು.

ಸಿರಿಗನ್ನಡಕೂಟ ಮ್ಯೂನಿಕ್‌ನ ಅಧ್ಯಕ್ಷರಾದ ಕಾರ್ತಿಕ್‌ ಮಂಜುನಾಥ್‌ ಅವರು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ, ” ಕಾರ್ಯಕ್ರಮದ ಯೋಜನಾ ಹಂತದಿಂದ ಯಶಸ್ವಿಯಾಗಿ ಕಾರ್ಯಗತಗೊಳಿಸುವ ತನಕ ಕಾರಣೀಕರ್ತರಾದ ಮಂಡಳಿಯ ಎಲ್ಲ ಸದಸ್ಯರುಗಳಿಗೂ, ಕಾರ್ಯಕ್ರಮದ ಆಧಾರ ಸ್ತಂಭಗಳಾದ ಸ್ವಯಂಸೇವಾ ಕಾರ್ಯಕರ್ತರಿಗೂ, ಪ್ರೇಕ್ಷಕ ವರ್ಗದವರಿಗೂ ಮತ್ತು ತೆರೆಮರೆಯಲ್ಲಿ ಕೈ ಜೋಡಿಸಿ ಸಹಕರಿಸಿದ ಸಕಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.’

ಕನ್ನಡ ಆಡುಭಾಷೆಯಾಗಿ, ಬಳಕೆಯ ಭಾಷೆಯಾಗಿ, ಸಾಹಿತ್ಯಿಕ ಅಭಿವ್ಯಕ್ತಿಯಾಗಿ, ಸಾಂಸ್ಕೃತಿಕ ಭೂಮಿಕೆಯಾಗಿ, ಕನ್ನಡದ ಅಸ್ಮಿತೆ ತನ್ನ ಛಾಪು ಮತ್ತು ಹೊಳಪನ್ನು ಕನ್ನಡೇತರ ನಾಡುಗಳಲ್ಲಿಯೂ ಉಳಿಸಿಕೊಂಡು, ನಮ್ಮ ತನದ ನಂಟನ್ನು ಮತ್ತದರ ಜಾಡನ್ನು ಬೆಳೆಸಿಕೊಂಡು, ಮುಂದಿನ ಪೀಳಿಗೆಗೆ ತಿಳಿಸಲು ಒಂದು ದೊಡ್ಡ ಸಮುದಾಯದ ಸಹಾಯವೇ ಬೇಕಾಗುತ್ತದೆ. ವಿದೇಶಿ ನೆಲಗಳಲ್ಲಿ ಕನ್ನಡ ಸಂಘಗಳು ಅತೀ ಮುಖ್ಯವಾಗುವುದು ಇಲ್ಲಿಯೇ. ಇದೇ ನಿಟ್ಟಿನಲ್ಲಿ ಈ ಬಾರಿಯ ಸಿರಿಗನ್ನಡಕೂಟ ಮ್ಯೂನಿಕ್‌ ಸಂಘದ ವತಿಯಿಂದ ಆಚರಿಸಲ್ಪಟ್ಟ ಕರ್ನಾಟಕ ರಾಜ್ಯೋತ್ಸವ ವೈವಿಧ್ಯಮಯ ಮತ್ತು ಅತ್ಯಂತ ವಿಶೇಷವಾಗಿತ್ತು.

Advertisement

ವೈಭವಯಾನ
ಓಂ ಧೋಲ್‌ ಥಾಷಾ ಪಾಠಕ್‌ ಜರ್ಮನಿಯ ತಂಡದೊಂದಿಗೆ ಡೊಳ್ಳು ಕುಣಿತದ ಮುಖೇನ ತಾಯಿ ಭುವನೇಶ್ವರಿಯನ್ನು ರಥೋತ್ಸವದ ಮೂಲಕ ಕರೆತಂದು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಬಾರಿಯ ಸಂಭ್ರಮ 2023ರಲ್ಲಿ ಕರುನಾಡಿನ ಇತಿಹಾಸದ ಹೆಮ್ಮೆಯ ಯಶೋಗಾಥೆಯನ್ನು “ವೈಭವಯಾನ’ ಎಂಬ ವಿಶೇಷ-ವೈವಿಧ್ಯಪೂರ್ಣ ನಾಟಕದ ನಿರೂಪಣೆಯಲ್ಲಿ ಅತ್ಯಂತ ಸೊಗಸಾಗಿ ಪ್ರಸ್ತುತ ಪಡಿಸಲಾಯಿತು.

“ಮಾಲ್ಗುಡಿ ಚಾ ಅಂಗಡಿ’ಯಲ್ಲಿ ಅಂಗಡಿಯ ಮಾಲಕರಾದ ಚಂದ್ರಿಕಾ (ಶ್ರೀದೇವಿ ಹೊಸೂರ್‌), ಇತಿಹಾಸದ ಮೇಷ್ಟ್ರು (ಗಿರೀಶ್‌ ರಾವಂದೂರ್‌), ಸೌಮ್ಯ ನಾಯಕ್‌ ಮತ್ತು ಸಿದ್ದಣ್ಣ (ಅರವಿಂದ ಬಾಯರಿ) ನೆಂಬ ಚಿರಪರಿಚಿತ ಗ್ರಾಹಕರ ಮಧ್ಯೆ ನಡೆಯುವ ಕರ್ನಾಟಕದ ಇತಿಹಾಸದ ವಿಚಾರಧಾರೆಯ ಸಂಭಾಷಣೆ ಮತ್ತು ಆಯಾ ಸಾಮ್ರಾಜ್ಯಗಳ ಇತಿಹಾಸವನ್ನು ಭರತನಾಟ್ಯ, ನೃತ್ಯ, ನಾಟಕ, ಹಾಡುಗಳ ಮೂಲಕ ಪ್ರೇಕ್ಷಕರಿಗೆ ಕರ್ನಾಟಕದ ಇತಿಹಾಸ ಪರಂಪರೆಯನ್ನು ನೆನೆದು ಸಂಭ್ರಮಿಸುವಲ್ಲಿ ಯಶಸ್ವಿಯಾಗಿ ನಿರೂಪಿಸಲಾಯಿತು.

80ಕ್ಕೂ ಹೆಚ್ಚು ಕಲಾವಿದರು ಭಾಗಿ
ಕರ್ನಾಟಕದ ಹೆಮ್ಮೆಯ ರಾಜವಂಶಗಳಾದ ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಗಂಗ, ಹೊಯ್ಸಳ, ವಿಜಯ ನಗರದ ಅರಸರು, ಮೈಸೂರು ಅರಸರು, ವೀರ ಪುರುಷರು, ವೀರ ವನಿತೆಯರು, ಮಯೂರವರ್ಮ, ಪುಲಿಕೇಶಿ, ನೃಪತುಂಗ, ವಿಷ್ಣುವರ್ಧನ, ಕೃಷ್ಣದೇವರಾಯ,ಶ್ರೀ ರಾಘವೇಂದ್ರ ಸ್ವಾಮಿಗಳು, ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ… ಮುಂತಾದ ಕನ್ನಡದ ಮಣ್ಣಿನಲ್ಲಿ ಮೆರೆದು, ನಾಡನ್ನು ಆಳಿ ಸಿರಿ ಸಮೃದ್ಧವಾದ ನೆಲವನ್ನು ಮತ್ತಷ್ಟು ಸಮೃದ್ಧವನ್ನಾಗಿಸಿ ಕರ್ನಾಟಕವನ್ನು ಮೆರೆಸಿದವರನ್ನು ಈ ವೈಭವಯಾನದ ಮೂಲಕ ಸ್ಮರಿಸಲಾಯಿತು. ಸುಮಾರು 3 ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ 19 ಭಾರತೀಯ ಸಮುದಾಯ ಸಂಘಗಳನ್ನೊಳಗೊಂಡ 80ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದರು.

ಮಕ್ಕಳ ಹಾಗೂ ಯುವಕ ಯುವತಿಯರ ಮನೋರಂಜನೀಯ ಹಾಡು, ನೃತ್ಯ, ನಾಟಕ ಕಾರ್ಯಕ್ರಮಗಳು, “ರಾಗ ಕಲೆಕ್ಟೀವ್‌’ ಎಂಬ ಸಂಗೀತ ಬ್ಯಾಂಡ್‌ನ‌ ಸುಮಧುರ ಸಂಗೀತ ಪ್ರೇಕ್ಷಕರ ಮನ ಸೆಳೆದವು. ವೈಷ್ಣವಿ ಕುಲಕರ್ಣಿ ಹಾಗೂ ಚಂದನಾ ಮಾವಿನಕೆರೆ ಅವರು ಸಕ್ಕೂ ಮತ್ತು ಶೇಷು ಎಂಬ ಪಾತ್ರಧಾರಿಗಳ ರೂಪದಲ್ಲಿ ಅತ್ಯಂತ ಉತ್ಸಾಹ ಹಾಗೂ ಹಾಸ್ಯಭರಿತವಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅಕ್ಟೋಬರ್‌ ತಿಂಗಳು ದಿನಂಪ್ರತಿ “ಕರ್ನಾಟಕದ ಇತಿಹಾಸದಲೀ’ ಎಂಬ ಬಹು ಆಯ್ಕೆ ಆನ್‌ಲೈನ್‌ ರಸಪ್ರಶ್ನೆ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು. ಮ್ಯೂನಿಕ್‌ ನಗರವಲ್ಲದೇ ಜರ್ಮನಿಯ ಮತ್ತಿತರ ನೆರೆಯ ರಾಜ್ಯಗಳಿಂದಲೂ ಆಸಕ್ತರು ಭಾಗವಹಿಸಿ ಸಿರಿಗನ್ನಡಕೂಟ ಮ್ಯೂನಿಕ್‌ನ ಈ ಪ್ರಯತ್ನವನ್ನು ಪ್ರಶಂಸಿಸಿದರು.

ರಾಜ್ಯೋತ್ಸವ ಆಚರಣೆಯ ಅನಂತರ 10 ದಿನಗಳ ಕಾಲ ಸಾಹಿತ್ಯ ಸಂಭ್ರಮ 2023 ಎಂಬ ಉಪಕಾರ್ಯಕ್ರಮದಲ್ಲಿ 8 ರಿಂದ 16ನೇ ಶತಮಾನದ ಆಯ್ದ ಕವಿಗಳನ್ನು ನೆನೆಪಿಸಿಕೊಳ್ಳುತ್ತಾ “ಕವಿ-ಕಾವ್ಯ ನಮನ’ದ ನಾಮಾಂಕಿತದಲ್ಲಿ ಆದಿಕವಿ ಪಂಪ, ರನ್ನ, ಪೊನ್ನ, ಜನ್ನ, ಹರಿಹರ, ರಾಘವಾಂಕ, ರತ್ನಾಕರವರ್ಣಿ, ಕುಮಾರವ್ಯಾಸ ಮತ್ತು ಸರ್ವಜ್ಞರ “ಕವಿ-ಕಾವ್ಯ’ ಪರಿಚಯವನ್ನು ನೀಡಿ, ಆಯ್ದ ಒಂದು ಕವಿತೆಯ ವಾಚನ ಪ್ರಸ್ತುತ ಪಡಿಸುವುದರ ಮೂಲಕ ಈ ಬಾರಿಯ ರಾಜ್ಯೋತ್ಸವ ಸಂಭ್ರಮವು ನಿಜಕ್ಕೂ ವಿಶೇಷ, ವೈವಿಧ್ಯಮಯ ಮತ್ತು ಅತ್ಯಂತ ಅರ್ಥಪೂರ್ಣವಾದ ಆಚರಣೆಯಾಗಿತ್ತು.

-ಕಮಲಾಕ್ಷ ಎಚ್‌.ಎ., ಮ್ಯೂನಿಕ್‌

Advertisement

Udayavani is now on Telegram. Click here to join our channel and stay updated with the latest news.

Next