ಶಹಾಪುರ: ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಹಾಗೂ ಜೀವನ ಪರ್ಯಂತ ಕಲಿಕೆಯ ಸದಾವಕಾಶಗಳನ್ನು ಖಾತ್ರಿಯಾಗಿ ಒದಗಿಸಿಕೊಡುವ ಉದ್ದೇಶ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ಅಡಗಿದ್ದು, ಪ್ರತಿಯೊಬ್ಬ ಶಿಕ್ಷಕರ ಮಹತ್ವಪೂರ್ಣ ಯೋಜನೆಯನ್ನು ಸಾರ್ಥಕ ಪಡಿಸುವಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ತಿಳಿಸಿದರು.
ನಗರದ ಹೊರವಲಯದ ಆದರ್ಶ ವಿದ್ಯಾಲಯದಲ್ಲಿ ಶಿಕ್ಷಣ ಇಲಾಖೆ ಜಿಲ್ಲಾ ಮತ್ತು ಶಿಕ್ಷಣ ತರಬೇತಿ ಸಂಸ್ಥೆ, ಅಜೀಂ ಪ್ರೇಮ್ಜೀ ಫೌಂಡೇಶನ್ ವತಿಯಿಂದ ಶಿಕ್ಷಕರಿಗಾಗಿ ಕಲಿಕಾ ಚೇತರಿಕೆ ಉಪಕ್ರಮ ಕಾರ್ಯಕ್ರಮದ ತರಬೇತಿ ಆಯೋಜಿಸಿದ್ದ ಸಂದರ್ಭದಲ್ಲಿ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜ್ಞಾನಕ್ಷೇತ್ರದಲ್ಲಿ ಇಂದು ಪ್ರಪಂಚ ಅಪಾರ ಬದಲಾವಣೆಗಳಿಗೆ ಒಳಗಾಗುತ್ತಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪ್ರಸ್ತುತವಾಗಿರುವ ಕಲಿಕಾ ಕ್ರಮವನ್ನು ಇನ್ನು ಪ್ರಾಯೋಗಿಕ, ಸಮಗ್ರವಾಗಿ ಕಲಿಯುವವರನ್ನು ಕೇಂದ್ರವಾಗಿಟ್ಟುಕೊಂಡು, ಸುಧಾರಣೆ ತರುವ ಪ್ರಯತ್ನಕ್ಕೆ ಎಲ್ಲ ಶಿಕ್ಷಕ ಸಮುದಾಯದವರ ಕಾಳಜಿ ಅಗತ್ಯವಾಗಿದೆ. ಶಿಕ್ಷಕರ ಅವಿರತ ಪರಿಶ್ರಮವೇ ವಿದ್ಯಾರ್ಥಿಗಳ ವಿಕಾಸಕ್ಕೆ ಮೇಲ್ಪಂಕ್ತಿಯಾಗಲಿದ್ದು, ತರಬೇತಿಯ ಸದ್ಬಳಕೆ ಪಡೆಯಬೇಕು ಎಂದು ತಿಳಿಸಿದರು.
ಡಯಟ್ ಉಪನ್ಯಾಸಕ ಇಂದಿರಾ ಬಡಿಗೇರ, ಕ್ಷೇತ್ರ ಸಮನ್ವಯಾಧಿ ಕಾರಿ ರೇಣುಕಾ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶಂಕರಪ್ಪ, ಚಂದಪ್ಪಸಾಬ್ ರೆಡ್ಡಿ ಸೇರಿದಂತೆ ಶಿಕ್ಷಣ ಸಂಯೋಜಕರು, ಸಂಪನ್ಮೂಲ ವ್ಯಕ್ತಿಗಳು, ತರಬೇತಿ ಶಿಕ್ಷಕರಿದ್ದರು.