Advertisement

ಮಹಿಳೆಯರಿಗೆ ಭದ್ರತೆ ನೀಡಿ

12:37 AM Sep 23, 2021 | Team Udayavani |

ವಿಧಾನಮಂಡಲ: ಅತ್ಯಾಚಾರ ಹಾಗೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪರಿಣಾಮಕಾರಿ ಕಾಯ್ದೆ ರೂಪಿಸಬೇಕು. ಹೆಣ್ಣು ದೇವತೆಯ ಸ್ವರೂಪ ಎಂದು ಅಕ್ಷರಗಳಲ್ಲಿ ಬರೆಯುವ ಬದಲು ಗೌರವ ಮತ್ತು ರಕ್ಷಣೆ ನೀಡುವ ಕೆಲಸ ಮಾಡಬೇಕು ಎಂದು ಪಕ್ಷಾತೀತವಾಗಿ ಉಭಯ ಸದನಗಳಲ್ಲಿ  ಆಗ್ರಹ ಕೇಳಿಬಂದಿತು.

Advertisement

ಮೈಸೂರು ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ಮಾತನಾಡಿದ ಮಹಿಳಾ ಸದಸ್ಯರು, ಸರಕಾರ ಯಾವುದೇ ಇರಲಿ.  ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆಯಾಗಬೇಕು. ಹೆಣ್ಣು ಮಕ್ಕಳ  ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಪೊಲೀಸರು ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಪ್ರಕರಣಗಳ ಬಗ್ಗೆ ಪ್ರಸ್ತಾವಿಸುವಾಗ ಭಾವುಕರಾದರು.

ರಕ್ತ ಕುದಿಯುತ್ತದೆ:

ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ರೂಪಕಲಾ ಶಶಿಧರ್‌ ಅವರು ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಂದ ಹೆಣ್ಣು ಮಕ್ಕಳಿಗೆ ಅಭದ್ರತೆಯ ನೋವು ಕಾಡುತ್ತಿದೆ ಎಂದರು.

ಮರಣದಂಡನೆಗೆ ಕ್ರಮ :

Advertisement

ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಮ್ಮ ಪೊಲೀಸರ ಬದ್ಧತೆ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರು ಮುಂಬಯಿಗೆ ಹೋಗಿ ಮೈಸೂರಿನ ಅತ್ಯಾಚಾರ ಸಂತ್ರಸ್ತೆಯ ಹೇಳಿಕೆ ಪಡೆದುಕೊಂಡು ಬಂದಿದ್ದಾರೆ. ಈ ಪ್ರಕರಣದಲ್ಲಿ ಸ್ಪೆಷಲ್‌ ಪ್ರಾಸಿಕ್ಯೂಟರ್‌ ನೇಮಕ ಮಾಡಿ ಮರಣದಂಡನೆ ಆಗುವಂತೆ ಮಾಡಲಾಗುವುದು ಎಂದು ಹೇಳಿದರು.

ಎಫ್ಐಆರ್‌ ದಾಖಲಿಸುವಲ್ಲಿ ಪೊಲೀಸರು ತಡ ಮಾಡಿದರು, ಗೃಹ ಸಚಿವರು ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂಬ ಆರೋಪ ಸರಿಯಲ್ಲ. ಸಾಕ್ಷ್ಯವೇ ಇಲ್ಲದ ಈ ಪ್ರಕರಣದಲ್ಲಿ ಘಟನೆ ನಡೆದ 80 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಲಾಗಿದ್ದು ಪ್ರಕರಣದ ಗಂಭೀರತೆಯೇ ಇದಕ್ಕೆ ಸಾಕ್ಷಿ ಎಂದು ಮುಖ್ಯಮಂತ್ರಿ ಸಮರ್ಥನೆ ಮಾಡಿಕೊಂಡರು.

ಚಿತ್ರದುರ್ಗದಲ್ಲಿ 13 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಒಬ್ಬ ತಾಯಿಯಾಗಿ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಒಂದು ವರ್ಷ ಕಾಲ ಆ ಹೆಣ್ಣುಮಗು ನಿರಂತರ ನೋವು ಅನುಭವಿಸಿದೆ. ಪೊಲೀಸರಿಗೆ ದೂರು ಕೊಡಲು ಭಯ ಪಟ್ಟಿದೆ ಎಂದರು.

ಶಿಕ್ಷೆ ಪ್ರಮಾಣ ಕಡಿಮೆ:

ಸೌಮ್ಯಾ ರೆಡ್ಡಿ ಮಾತನಾಡಿ, ಅತ್ಯಾಚಾರ ವಿಚಾರವನ್ನು ಲಘುವಾಗಿ ತೆಗೆದು ಕೊಳ್ಳಬೇಡಿ. ಅತ್ಯಾಚಾರದಲ್ಲಿ ಉತ್ತರ ಪ್ರದೇಶದ ಅನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ಉತ್ತರ ಪ್ರದೇಶದಲ್ಲಿ 11,097 ಪ್ರಕರಣ ನಡೆದಿದ್ದರೆ ಕರ್ನಾ ಟಕದಲ್ಲಿ 10,741 ಪ್ರಕರಣಗಳು ನಡೆದಿವೆ. ನಮ್ಮ ಶಿಕ್ಷೆಯ ಪ್ರಮಾಣವೂ ಕಡಿಮೆ  ಎಂದರು. ಡಾ| ಅಂಜಲಿ ನಿಂಬಾಳ್ಕರ್‌ ಮಾತನಾಡಿ, ಮೈಸೂರು ಘಟನೆ ಸಹಿತ  ರಾಜ್ಯ ದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ನನಗೆ ತೀವ್ರ ನೋವಾಗಿದೆ. ಒಬ್ಬ ವೈದ್ಯೆಯಾಗಿ ಸ್ತ್ರೀ ತಜ್ಞೆಯಾಗಿ ಅತ್ಯಾಚಾರ ಸಂತ್ರಸ್ತರ ನೋವು ಕೇಳಿದ್ದೇನೆ. ಅಂತಹ ಸ್ಥಿತಿ ಯಾರಿಗೂ ಬರಬಾರದು. ಅತ್ಯಾಚಾರದ ಆಘಾತ ಅನುಭವಿಸಿದವರು ಜೀವನವೇ ನರಕದಂತಾಗಿದೆ ಎಂದು ತಿಳಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ನಾಮಕರಣ ಸದಸ್ಯೆ ವಿನಿಶಾ ನೆರೋ, ಅತ್ಯಾಚಾರ ಹಾಗೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರಿಗೆ ಕಠಿನ ಶಿಕ್ಷೆಯಾಗಬೇಕು. ಸೂಕ್ತ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next