Advertisement

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ನೀಡಿ

01:25 PM Jan 15, 2020 | Suhan S |

ಬೆಳಗಾವಿ: ಗುಡಿ ಗುಂಡಾರಗಳಲ್ಲಿ ತಂದಿರಿಸಲಾಗಿರುವ ಕಲ್ಪಿತ ದೇವರುಗಳ ಬದಲಾಗಿ, ಬಸವಣ್ಣನವರ ನೇತೃತ್ವದಲ್ಲಿ ಅಗೋಚರ ದೇವರನ್ನೇ ತಮ್ಮ ಬಳಿ ಕರೆಸಿಕೊಂಡು ತಾವೇ ದೇವ ಮಾನವರಾದ ಶೋಷಿತ ಸಮುದಾಯಗಳ ಅಗಣಿತ ಮಹಾನ್‌ ಶರಣರು ಕಟ್ಟಿಕೊಟ್ಟಿರುವ ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಸಿಗಬೇಕು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಆಗ್ರಹಿಸಿದರು.

Advertisement

ಬಸವಭೀಮ ಸೇನೆಯ ವತಿಯಿಂದ ನಗರದ ಶ್ರೀ ಬಸವೇಶ್ವರ ಉದ್ಯಾನದಲ್ಲಿಯ ಬಸವಣ್ಣನವರ ಪ್ರತಿಮೆಯ ಬಳಿ ಮಂಗಳವಾರ ಆಯೋಜಿಸಲಾಗಿದ್ದ ಲಿಂಗಾಯತ ಧರ್ಮದ 866 ನೇ ಧರ್ಮ ಸಂಸ್ಥಾ‌ಪನಾ ದಿನ ಹಾಗೂ ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ದೊರಕಿಸಿಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ 1.96 ಲಕ್ಷ ಪತ್ರ ಬರೆಯುವ ಪತ್ರ ಚಳವಳಿಗೆಚಾಲನೆ ನೀಡಿ ಮಾತನಾಡಿದ ಅವರು, ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ದೊರೆಯಬೇಕು. ನಾವುಮತ್ತೆ ಕಾಯಕ ಜೀವಿಗಳೊಂದಿಗೆ ನಮ್ಮ ಧರ್ಮವನ್ನು ಸಂಭ್ರಮಿಸಬೇಕು ಎಂದರು.

ಧರ್ಮಗುರು ಬಸವಣ್ಣನವರು 1155 ರಲ್ಲಿಯೇ ಇಷ್ಟಲಿಂಗವನ್ನು ಗುರುವಾಗಿಸಿ, ಅವೈದಿಕ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ. ಲಿಂಗಾಯತ ಧರ್ಮದ ಸ್ಥಾಪನೆಯಾಗಿ ಇಂದಿಗೆ 866 ವರ್ಷಗಳಾಗಿವೆ. ಲಿಂಗಾಯತ ಹೊಸ ಧರ್ಮ ಅಲ್ಲ ಎಂಬುದನ್ನು ಧರ್ಮ ವಿರೋಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ನ್ಯಾಯವಾದಿ ಚನ್ನಬಸಪ್ಪಬಾಗೇವಾಡಿ ಮಾತನಾಡಿ, ಬಸವಣ್ಣವರು ಸ್ಥಾಪಿಸಿರುವ ಲಿಂಗಾಯತ ಧರ್ಮವು ಸಮಾನತೆ ಸಾರುವ ಮಾನವೀಯ ಧರ್ಮ. ಈ ಸಮಾನತೆಯ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಕೊಡಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಸವ ಸಮಾಜದ ಋಣ ತೀರಿಸಬೇಕು ಎಂದರು.

ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಬಿ.ಜಿ.ಕುಂಬಾರ ಮಾತನಾಡಿ, ಧರ್ಮಗಳಿಂದ ದೂರ ತಳ್ಳಲ್ಪಟ್ಟಿದ್ದ ಶೋಷಿತ ಸಮುದಾಯಗಳ ಕಾಯಕ ಜೀವಿಗಳನ್ನು ಬಸವಣ್ಣನವರು ಒಂದುಗೂಡಿಸಿ ಕಟ್ಟಿಕೊಟ್ಟಿರುವ ಲಿಂಗಾಯತ ಧರ್ಮವು ಕಾಯಕ ಜೀವಿಗಳ ಧರ್ಮವಾಗಿದೆ. ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ನೀಡುವ ಮೂಲಕ ಅದನ್ನು ವಿಶ್ವ ಧರ್ಮವನ್ನಾಗಿಸಬೇಕು ಎಂದು ಹೇಳಿದರು.

ಪರಿಶಿಷ್ಟ ಜಾತಿ-ಜನಾಂಗ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಾಜು ಕೋಲ್ಕಾರ ಮಾತನಾಡಿದರು. ಬಿ.ಎ.ಪಾಟೀಲ, ಬಿ.ಡಿ.ಪಾಟೀಲ, ಅಪ್ಪಾಸಾಹೇಬ ದೇಸಾಯಿ, ಅಶೋಕ ಬೆಂಡಿಗೇರಿ, ಮೋಹನ ಗುಂಡೂÉರ, ಸಿದ್ದರಾಮ ಸಾವಳಗಿ, ಬಸವರಾಜಪಾಟೀಲ, ಅಡಿವೆಪ್ಪ ಕುಂದರಗಿ, ಜಿ.ಎಂ. ಬಳ್ಳಾರಿ, ಬಿ.ಸಿ.ಹುಮನಾಬಾದಿಮಠ, ಆಕಾಶ ಹಲಗೇಕರ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next