ಮೈಸೂರು: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದ್ದು, ಹೀಗಾಗಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕುಲಪತಿ ಸ್ಥಾನಕ್ಕೆ ಶೇ.50 ಮಹಿಳಾ ಮೀಸಲಾತಿ ನೀಡಬೇಕೆಂದು ಮೈಸೂರು ವಿವಿ ಕುಲಸಚಿವೆ ಡಾ.ಭಾರತಿ ಹೇಳಿದರು.
ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಗುರುವಾರ ಮಾನಸ ಗಂಗೋತ್ರಿಯ ರಾಣಿ ಬಹದ್ಧೂರ್ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಹಿಳೆಯ ಸಮಕಾಲೀನ ಅಗತ್ಯಗಳು ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಂದ¸ìದಲ್ಲಿ ಮಹಿಳೆ ಶೈಕ್ಷಣಿಕವಾಗಿ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾಳೆ.
ಹೀಗಿದ್ದರೂ ವಿವಿಗಳ ಕುಲಪತಿ ಸ್ಥಾನಕ್ಕೆ ಹೆಚ್ಚಾಗಿ ಪುರಷರೇ ಆಯ್ಕೆಯಾಗುತ್ತಲಿದ್ದು, ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಮಾತ್ರ ಮಹಿಳಾ ಕುಲಪತಿಗಳನ್ನು ನೇಮಿಸಲಾಗುತ್ತದೆ. ಹಿರಿಯ ಮಹಿಳಾ ಪ್ರಾಧ್ಯಾಪಕರು ಸಾಕಷ್ಟಿದ್ದರೂ, ಮಹಿಳಾ ಕುಲಪತಿಗಳನ್ನು ಮಹಿಳಾ ವಿವಿಗೆ ಮಾತ್ರ ಸೀಮಿತಗೊಳಿಸದೆ, ರಾಜ್ಯ ಎಲ್ಲಾ ವಿವಿಗಳಿಗೂ ಮಹಿಳಾ ಕುಲಪತಿಯನ್ನು ನೇಮಿಸಲು ಸರ್ಕಾರ ಶೇ.50 ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಸಮಾಜದಲ್ಲಿ ಮಹಿಳಾ ಪಾತ್ರ ಹಿರಿದು: ಮಹಿಳಾ ಸಬಲೀಕರಣ ಎಂಬುದು ಇತ್ತೀಚೆಗೆ ಆದಂತಹ ಬೆಳವಣಿಗೆಯಲ್ಲ. ಭಾರತದ ಸಂಸ್ಕೃತಿಯಲ್ಲಿ ಆದಿ ಕಾಲದಿಂದಲೂ ಮಹಿಳಾ ಸಬಲೀಕರಣವಿದ್ದು, ಇದಕ್ಕೆ ನಮ್ಮ ಸಂಸ್ಕೃತಿಯಲ್ಲಿ ಸಾಕಷ್ಟು ನಿದರ್ಶನಗಳಿವೆ. ಭಾರತೀಯ ಸಮಾಜದಲ್ಲಿ ಮಹಿಳೆಯರ ಪಾತ್ರ ಪ್ರಧಾನವಾಗಿದ್ದು, ಇಂದು ಮಹಿಳೆ ಸಮಾಜದ ಮುಂದುವರೆದ ಭಾಗದಲ್ಲಿದ್ದಾಳೆ.
ಆದರೆ ಮಹಿಳೆ ಎಷ್ಟೇ ಪ್ರಗತಿ ಸಾಧಿಸಿದ್ದರೂ, ಸಮಾಜದಲ್ಲಿ ಮಹಿಳೆಯರ ಬಗ್ಗೆ ಕುಹಕದ ಮಾತುಗಳನ್ನು ಆಡುವ ಪ್ರವೃತ್ತಿ ಇಂದಿಗೂ ನಿಂತಿಲ್ಲ. ಪುರುಷರು ಮಹಿಳೆಯರ ಬಗೆಗಿನ ಯೋಚನಾ ಲಹರಿಯನ್ನು ಬದಲಿಸಿಕೊಳ್ಳಬೇಕಿದ್ದು, ಮಹಿಳೆಯ ಡ್ರೆಸ್ಕೋಡ್ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸುವ ಅಗತ್ಯವಿಲ್ಲ ಎಂದರು.
ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂ¸ದಲ್ಲಿ ಮಹಿಳಾ ಹಕ್ಕುಗಳ ಜಾಗೃತಿ, ಮಹಿಳಾ ಸಂರಕ್ಷಣೆ ಸಾಧ್ಯತೆಗಳು, ಮಹಿಳಾ ಆರೋಗ್ಯ ಸಂರಕ್ಷಣೆ, ಮಹಿಳೆಯರ ಮತದಾನದ ಸಾಂವಿಧಾನಿಕ ಹಕ್ಕುಗಳು ಹಾಗೂ ಮಹಿಳಾ ಉದ್ಯಮಶೀಲತೆ ವಿಷಯಗಳ ಕುರಿತು ವಿಷಯ ಮಂಡಿಸಲಾಯಿತು.
ಸಮಾರಂಭದಲ್ಲಿ ನಟಿ ಮಾಳವಿಕಾ ಅವಿನಾಶ್, ಮಹಿಳಾ ರಕ್ಷಣಾ ವಿಭಾಗದ ಆಡಳಿತಾಧಿಕಾರಿ ಕ್ಯಾಪ್ಟನ್ ಪ್ರತಿಬಾ ತಿವಾರಿ, ಮಹಿಳಾ ಉದ್ಯಮಿ ಛಾಯಾನಂಜಪ್ಪ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಅಧ್ಯಕ್ಷೆ ಪ್ರೊ.ಎನ್.ಉಷಾರಾಣಿ, ಮೈಸೂರು ವಿವಿ ಪ್ರಾಧ್ಯಾಪಕರಾದ ಪ್ರೊ.ಮಹೇಶ್ ಚಂದ್ರಗುರು, ಪ್ರೊ.ನಿರಂಜನ ವಾನಳ್ಳಿ, ಡಾ.ಎಂ.ಎಸ್.ಸಪ್ನಾ, ಡಾ.ಎನ್.ಮಮತ, ಡಾ.ಲೋಲಾಕ್ಷಿ ಇನ್ನಿತರರು ಹಾಜರಿದ್ದರು.