Advertisement

ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವ 

04:53 PM Apr 03, 2017 | |

ಮುಂಬಯಿ: ಯಕ್ಷಗಾನವು ಶ್ರೇಷ್ಠ ಕಲೆಯಾಗಿದ್ದು, ನೀತಿ-ಬೋಧನೆಯನ್ನು ಸಾರಿ ಜ್ಞಾನವನ್ನು ಹೆಚ್ಚಿಸುತ್ತದೆ. ಯಕ್ಷಗಾನವು ಕೇವಲ ಪ್ರದರ್ಶನದ ಕಲೆಯಾಗಿರದೆ ಅದು ನಿದರ್ಶನದ ಕಲೆಯಾಗಬೇಕು. ಕಳೆದ ಐವತ್ತು ವರ್ಷಗಳಿಂದ ಯಕ್ಷಗಾನ ಕಲಾಸೇವೆಯನ್ನು ಮಾಡಿ ಮಂಡಳಿಯನ್ನು ಮುನ್ನಡೆಸಿದ  ರೀತಿ ಅನನ್ಯವಾಗಿದೆ. ಇಂದು ಸಮ್ಮಾನಿತರಾದ ಹಿರಿಯ ಮದ್ದಳೆವಾದಕ ಕೆ. ಕೆ. ದೇವಾಡಿಗ ಅವರ ಕಲಾಭಿಮಾನ ಇಂದಿನ ಯುವಕರಿಗೆ ಪ್ರೇರಣೆಯಾಗಿದೆ ಎಂದು ಜ್ಯೋತಿಷಿ, ಪುರೋಹಿತ ಸದಾಶಿವ ಶಾಂತಿ ಅವರು ಅಭಿಪ್ರಾಯಿಸಿದರು.

Advertisement

ಮಾ. 25ರಂದು ಘಾಟ್‌ಕೋಪರ್‌ ಪಶ್ಚಿಮದ ಅಸಲ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದ ರಂಗಮಂಟಪದಲ್ಲಿ ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ಚೆಂಡೆವಾದಕ ಕೃಷ್ಣಪ್ಪ ಕೆ. ದೇವಾಡಿಗ ಮತ್ತು ಕುಟುಂಬಸ್ಥರ ಸೇವಾರ್ಥದಲ್ಲಿ ಕೋಟಿ-ಚೆನ್ನಯ ಯಕ್ಷಗಾನ ಪ್ರದರ್ಶನದ ಮಧ್ಯೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚೆಂಡೆವಾದಕ ಕೆ. ಕೆ. ದೇವಾಡಿಗರ ದೇಹಕ್ಕೆ ಪ್ರಾಯವಾಗಿರಬಹುದು. ಆದರೆ ಅವರಲ್ಲಿ ಅಡಗಿರುವ ಕಲಾ ಮನಸ್ಸಿಗೆ ಪ್ರಾಯವಾಗಿಲ್ಲ. ಅವರಿಂದ ಮತ್ತಷ್ಟು ಕಲಾಸೇವೆ ಮಾಡುವ ಸೌಭಾಗ್ಯವನ್ನು ಕಲಾಮಾತೆ ಕರುಣಿಸಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಹಿರಿಯ ಚೆಂಡೆವಾದಕ ಕೃಷ್ಣ ಕೆ. ದೇವಾಡಿಗ ಪರಿವಾರದವರನ್ನು ಯಕ್ಷಗುರು  ಬಾಲಕೃಷ್ಣ ಶೆಟ್ಟಿ ಅಜೆಕಾರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಶಾಲು  ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ನಾದಲೋಲ ಬಿರುದಾಂಕಿತ ಭಾಗವತ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ ಅವರು ಅಭಿನಂದನ ಭಾಷಣಗೈದು, ಕೆ. ಕೆ. ದೇವಾಡಿಗರು ನಗರದ ಪ್ರಸಿದ್ಧ ಚೆಂಡೆ ವಾದಕರಾಗಿದ್ದು, ಕಳೆದ ಐದು ದಶಕಗಳಿಂದ ಕೆ. ಕೆ. ದೇವಾಡಿಗರು ಹಿಮ್ಮೇಳದ ಉಸ್ತುವಾರಿ ನೋಡಿಕೊಂಡು ಹಲವಾರು ಭಾಗವತರ ಜೊತೆ ಚೆಂಡೆವಾದಕರಾಗಿ ಕಲಾ ಸೇವೆಗೈದಿದ್ದಾರೆ. ಅವರ ಕಲಾಸೇವೆ ಅವಿಸ್ಮರಣೀಯವಾಗಿದೆ. ಅವರ ಕಲಾ ಸೇವೆಯ ಸ್ಫೂರ್ತಿ ಬತ್ತದೆ ಇರಲಿ. ಅವರಿಂದ ಯಕ್ಷಲೋಕ ಇನ್ನಷ್ಟು ಶ್ರೀಮಂತಗೊಳ್ಳಲಿ ಎಂದರು.

ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಅಧ್ಯಕ್ಷ ಸುಧಾಕರ ಪೂಜಾರಿ ಅವರು ಮಾತನಾಡಿ, ಕೆ. ಕೆ. ದೇವಾಡಿಗರು ಮುಂಬಯಿ ಮಹಾನಗರದ ಅನುಭವಿ ಹಾಗೂ ಶ್ರೇಷ್ಠ  ಚೆಂಡೆವಾದಕರಾಗಿದ್ದಾರೆ. ಶ್ರೀ ಗೀತಾಂಬಿಕಾ ಅಲ್ಲದೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಅವರ ಸೇವೆ ನಿರಂತರವಾಗಿದೆ. ಅವರಿಂದ ಇನ್ನಷ್ಟು ಕಲಾ ಸೇವೆ ನಡೆಯಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.

Advertisement

ಯಕ್ಷಗಾನ ತಾಳಮದ್ದಳೆಯ ಹಿರಿಯ ಅರ್ಥದಾರಿ ಕೆ. ಕೆ. ಶೆಟ್ಟಿ ಅವರು ಮಾತನಾಡಿ, ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯನ್ನು ಅಭಿನಂದಿಸುತ್ತೇನೆ. ಈ ಮಂಡಳಿಯ ಉದ್ಧಾರಕ್ಕಾಗಿ ದುಡಿದ ಎಲ್ಲರನ್ನೂ ಸ್ಮರಿಸಿ ವಂದಿಸುತ್ತೇನೆ. ಯಾವುದೇ ಸಂಘ-ಸಂಸ್ಥೆ ಬೆಳೆದಂತೆ ಅದು ಗಟ್ಟಿಯಾಗುತ್ತದೆ. ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯು ಭವಿಷ್ಯದಲ್ಲಿ ಶತಮಾನೋತ್ಸವವನ್ನು ಕಾಣುವಂತಾಗಲಿ ಎಂದು ಹಾರೈಸಿದರು.

ಬಂಟರವಾಣಿಯ ಪ್ರಧಾನ ಸಂಪಾದಕ ರಂಗನಟ ಅಶೋಕ್‌ ಶೆಟ್ಟಿ ಪಕ್ಕಳ ಅವರು ಮಾತನಾಡಿ, ಮಹಾನಗರದ ಯಾಂತ್ರಿಕ ಬದುಕಿನ ನಡುವೆಯೂ ಯಕ್ಷಗಾನ ಮಂಡಳಿಯನ್ನು ಕಟ್ಟಿ ಕಲಾ ಸೇವೆಯೊಂದಿಗೆ 50 ವರ್ಷಗಳಷ್ಟು ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯು ಪೂರೈಸಿರುವುದು ಅಭಿನಂದನೀಯ. ಕಲಾಮಾತೆಯ ಸೇವೆಯನ್ನು ನೀಡುವ ಭಾಗ್ಯ ನಮಗೆಲ್ಲ ಒದಗಿ ಬಂದಿರುವುದು ಹೆಮ್ಮೆ ಎನಿಸುತ್ತಿದೆ ಎಂದರು.

ಘಾಟ್‌ಕೋಪರ್‌ ಕನ್ನಡ ವೆಲ್ಫೆàರ್‌ ಅಸೋಸಿಯೇಶನ್‌ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಾಬಾಳಿಕೆ ಅವರು ಮಾತನಾಡಿ, ಶ್ರೀ ಗೀತಾಂಬಿಕಾ ಮಂಡಳಿಗೂ ಕನ್ನಡ ವೆಲ್ಫೆರ್‌ ಅಸೋಸಿಯೇಶನ್‌ಗೂ ನಿಕಟವಾದ ಸಂಬಂಧವಿದೆ. ಇವೆರಡೂ ಸಂಸ್ಥೆಗಳು ಒಟ್ಟೊಟ್ಟಿಗೆ ಸ್ಥಾಪನೆಗೊಂಡು ಸುವರ್ಣ ಮಹೋತ್ಸವ ಸಂಭ್ರಮದಲ್ಲಿವೆ. ನಿಮ್ಮೆಲ್ಲರನ್ನೂ ಜತೆ ಸೇರಿಸಿಕೊಂಡು ಅಸೋಸಿಯೇಶನ್‌ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ನುಡಿದರು.

ಪೊವಾಯಿ ಕನ್ನಡ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಮಾತನಾಡಿ, ಐದು ದಶಕಗಳ ಕಲಾಸೇವೆಯನ್ನು ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯು ಮಾಡಿರುವುದು ದೊಡ್ಡ ಸಾಧನೆಯಾಗಿದೆ. ಕೆ. ಕೆ. ದೇವಾಡಿಗ ಅವರ ಕಲಾ ಸೇವೆಯನ್ನು ಗುರುತಿಸಿ ಸಮ್ಮಾನಿಸಿರುವುದು ಅರ್ಥಪೂರ್ಣವಾಗಿದೆ ಎಂದರು.

ಅತಿಥಿಗಳನ್ನು ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಗೌರವಿಸಿದರು. ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಕಣಂಜಾರು ಸುರೇಶ್‌ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಮಂಡಳಿಯ ಸುನಿಲ್‌ ಅಮೀನ್‌, ಶ್ರೀ ಗೀತಾಂಬಿಕಾ ದೇವಸ್ಥಾನದ ಸುರೇಶ್‌ ಕೋಟ್ಯಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next