Advertisement

ಕಸದಿಂದ ಮುಕ್ತಿ ಸಿಗಲಿ; ತೋಡುಗಳು ಸ್ವಚ್ಛವಾಗಲಿ

11:38 PM Apr 23, 2019 | Team Udayavani |

ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವಚ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ, ಕಾನೂನು ವ್ಯಾಜ್ಯದ ದೂರು ಅಥವಾ ವಿವಾದದಲ್ಲಿರುವ ವಿಷಯಗಳನ್ನು ಪರಿಗಣಿಸುವುದಿಲ್ಲ. ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು ಪೂರಕವೆನಿಸುವ ಒಂದು ಪೋಟೊ ಜತೆ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಅಂಚೆ, ಇಮೇಲ್‌ ಅಥವಾ ವಾಟ್ಸಪ್‌ ಮೂಲಕ ಕಳುಹಿಸಬಹುದು. ಅರ್ಹ ದೂರುಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸುದಿನ ಮಾಡಲಿದೆ.

Advertisement

ಸ್ವಚ್ಛ ಮಂಗಳೂರಿನಲ್ಲಿ ಗಲೀಜು!
ಮಂಗಳೂರು ಸ್ವಚ್ಛ ಹಾಗೂ ಸುಂದರ ಎಂದು ಹೇಳಲಾಗುತ್ತಿದೆ. ಆದರೆ, ಮಂಗಳೂರಿನ ಹೃದಯ ಭಾಗದಲ್ಲಿರುವ ಒಂದೊಂದು ಸ್ಥಳವೂ ಸುಂದರವಾಗಿದೆಯೇ? ಎಂಬುದು ಸದ್ಯದ ಪ್ರಶ್ನೆ. ನಗರದ ಪ್ರತಿಷ್ಠಿತ ಸಿಟಿ ಸೆಂಟರ್‌ನ ಮುಂಭಾಗದಲ್ಲಿರುವ ರಸ್ತೆ ಬದಿಯ ಸಣ್ಣ ಡ್ರೈನೇಜ್‌ ಇದಕ್ಕೆ ಸಾಕ್ಷಿಯಾಗಿಯೇ ಕಾಣುತ್ತಿದೆ. ಸ್ವಚ್ಛತೆ ಇಲ್ಲಿ ಮರೆಯಾಗಿದೆ. ಕಸದ, ತ್ಯಾಜ್ಯವೇ ತೋಡಿನಲ್ಲಿ ಹರಡಿಕೊಂಡಿದೆ. ಆಡಳಿತ ವ್ಯವಸ್ಥೆ ಮಾತ್ರ ಇದನ್ನು ಕಂಡೂ ಕಾಣದಂತೆ ಇದೆ. ಪರಿಣಾಮವಾಗಿ ಸ್ಮಾರ್ಟ್‌ ಸಿಟಿಯ ನಿಜ ದರ್ಶನ ಮುಖ್ಯ ನಗರದಲ್ಲಿಯೇ ಆಗುವಂತಾಗಿದೆ. ಇನ್ನಾದರೂ, ಸಂಬಂಧಪಟ್ಟವರು ಇದನ್ನು ಸರಿಪಡಿಸುವ ಮನಸ್ಸು ಮಾಡಲಿ.
-ಸ್ಥಳೀಯರು, ಮಂಗಳೂರು

ತಲೆಗೆ ತಾಗುತ್ತಿದೆ ಡಬ್ಬ
ಮಂಗಳೂರಿನ ಎಲ್ಲ ವ್ಯವಸ್ಥೆಗಳು ಕೂಡ ಸುಂದರವಾಗಿರಬೇಕು. ಸವಾರರಿಗೆ, ಪಾದಚಾರಿಗಳಿಗೆ ಯಾವುದೇ ಸಮಸ್ಯೆ ಆಗಕೂಡದು ಎಂಬುದು ಲೆಕ್ಕಾಚಾರ. ಆದರೆ, ಬಿಜೈ ರಸ್ತೆಯ ಡಿವೈಡರ್‌ನಲ್ಲಿ ತಲೆಗೆ ತಾಗುವ ಅಪಾಯವೊಂದಿದೆ. ಮೆಸ್ಕಾಂಗೆ ಸಂಬಂಧಿಸಿದ ಡಬ್ಬವೊಂದು ತಲೆಗೆ ತಾಗುವ ರೀತಿಯಲ್ಲಿದೆ. ಸ್ಕೂಟರ್‌-ಬೈಕ್‌ನಲ್ಲಿ ಡಿವೈಡರ್‌ ಪಕ್ಕದಲ್ಲಿ ವಾಹನ ಕೊಂಡು ಹೋದರೆ ಅಪಾಯ ಗ್ಯಾರಂಟಿ. ಹಾಗೆಂದು ಇದೇ ಭಾಗದಲ್ಲಿ ನೋಡದೆ ನಡೆಯುತ್ತ ಹೋದರೂ ಅಪಾಯ ಕಟ್ಟಿಟ್ಟಬುತ್ತಿ. ಅಷ್ಟು ಡೇಂಜರ್‌ ರೂಪದಲ್ಲಿದೆ ಡಬ್ಬ. ಇದನ್ನು ಅತ್ಯಂತ ಭದ್ರವಾಗಿ ಯಾರಿಗೂ ಸಮಸ್ಯೆ ಆಗದಂತೆ ಇರಿಸಬೇಕಾದದ್ದು ಸಂಬಂಧಪಟ್ಟವರ ಕರ್ತವ್ಯ.
– ಸದಾಶಿವ ರಾವ್‌ , ಬಿಜೈ

ಅಪಾಯಕಾರಿ ಫುಟ್‌ಪಾತ್‌ !
ಬಿಜೈ ಚರ್ಚ್‌ ರಸ್ತೆಯ ಫುಟ್‌ಪಾತ್‌ ಈಗ ಹೊಸ ಸಮಸ್ಯೆ ಹುಟ್ಟುಹಾಕಿದೆ. ಕೆಲವೆಡೆ ಫುಟ್‌ಪಾತ್‌ ಇಲ್ಲ ಎಂಬ ಅಪಾಯ ಇರುವಾಗಲೇ, ಬಿಜೈ ಫುಟ್‌ಪಾತ್‌ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಫುಟ್‌ಪಾತ್‌ನ ಸ್ಲಾಬ್‌ ಮುರಿದುಬಿದ್ದು ನಡೆದುಕೊಂಡು ಹೋಗಲು ಕಷ್ಟವಾಗಿದೆ. ಮಕ್ಕಳು- ಮಹಿಳೆಯರಿಗೆ ಇಲ್ಲಿ ನಡೆಯುವುದೇ ಡೇಂಜರ್‌ ಆಗಿದೆ. ಸಂಜೆ ವೇಳೆ ಕತ್ತಲು ಆವರಿಸಿದಾಗ ಈ ಡೇಂಜರ್‌ ಸ್ಪಾಟ್‌ ಬಗ್ಗೆ ತಿಳಿಯದೆ ಕೆಲವರು ಕಾಲು ಮುರಿದುಕೊಂಡಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಇದರ ಗಂಭೀರತೆಯನ್ನು ತಿಳಿದು ಸಮಸ್ಯೆ ಪರಿಹರಿಸಲಿ.
– ಹಿರಿಯ ನಾಗರಿಕರು, ಬಿಜೈ

ತೋಡು ಸ್ವಚ್ಛವಾಗಲಿ
ಬೋಂದೆಲ್‌ ಸಮೀಪದ ಕೃಷ್ಣನಗರದಲ್ಲಿರುವ ಸಣ್ಣ ತೋಡು ಈಗ ವಾಸನೆಯಿಂದ ಸ್ಥಳೀಯರಿಗೆ ಸಮಸ್ಯೆ ಸೃಷ್ಟಿಸಿದೆ. ಕಸ-ಕಡ್ಡಿಗಳನ್ನು ತೋಡಿಗೆ ಹಾಕುವ ಕಾರಣದಿಂದ ಇಲ್ಲಿ ವಾಸನೆ ತುಂಬಿಕೊಂಡಿದೆ. ತೋಡಿನ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಮೂಗಿಗೆ ಕೈಯಿಡಬೇಕಾದ ಅಗತ್ಯ ಎದುರಾಗಿದೆ. ಜತೆಗೆ ಸೊಳ್ಳೆ ಕೂಡ ಇಲ್ಲಿ ಜಾಸ್ತಿಯಾಗಿದ್ದು, ಆರೋಗ್ಯದ ಮೇಲೂ ಪರಿಣಾಮ ಬೀಳಲಿದೆ. ಹೀಗಾಗಿ ಸಂಬಂಧಪಟ್ಟವರು ತೋಡು ಸ್ವಚ್ಛಗೊಳಿಸುವ ಬಗ್ಗೆ ಗಮನಹರಿಸಲಿ.
– ಸ್ಥಳೀಯರು, ಕೃಷ್ಣನಗರ

Advertisement

ನೀರು ಪೋಲಾಗುತ್ತಿದೆ
ಮಂಗಳೂರು ನಗರ ಪ್ರಸ್ತುತ ನೀರಿನ ಸಮಸ್ಯೆ ಎದುರಿಸುತ್ತಿದೆ. ನೀರಿನ ರೇಷನಿಂಗ್‌ ಕೂಡ ಆರಂಭವಾಗಿದೆ. ನೀರಿನ ಬಳಕೆ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಬೇಕು; ಹನಿ ನೀರೂ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸುವ ಬಗ್ಗೆ ಆಡಳಿತ ನಡೆಸುವವರು ಕೋರಿಕೊಳ್ಳುತ್ತಿದ್ದಾರೆ. ಆದರೆ, ಬಹುತೇಕ ಭಾಗದಲ್ಲಿ ನೀರು ಸೋರಿಕೆಯಾಗಿರುವುದಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಭಾರೀ ಪ್ರಮಾಣದಲ್ಲಿ ಕುಡಿಯುವ ನೀರು ವ್ಯರ್ಥವಾಗುವ ಹಲವು ಸ್ಥಳ ಮಂಗಳೂರು ವ್ಯಾಪ್ತಿಯಲ್ಲಿ ಇನ್ನೂ ಇವೆ. ಚಿತ್ರದಲ್ಲಿ ಕಾಣುವುದು ಕೊಟ್ಟಾರ ಚೌಕಿ ಬಳಿಯ ಪ್ರದೇಶ. ಕಾಮಗಾರಿಯ ಕಾರಣದಿಂದ ಕಟ್‌ ಆದ ಸಣ್ಣ ಪೈಪ್‌ನಿಂದ ಕುಡಿಯುವ ನೀರು ವ್ಯರ್ಥವಾಗಿ ತೋಡು ಸೇರುತ್ತಿದೆ. ಕಂಟ್ರಾಕ್ಟರ್‌ದಾರನನ್ನು ಸಂಪರ್ಕಿಸಿದಾಗ ಆತ ಫೋನ್‌ಗೆ ಸಿಗಲಿಲ್ಲ. ಸಂಬಂಧಪಟ್ಟವರಿಗೆ ಹೇಳಿದರೂ ಕ್ಯಾರೇ ಮಾಡಲಿಲ್ಲ. ಆದರೆ, ಇಂತಹ ಹನಿ ಹನಿ ನೀರು ಕೂಡ ಅತ್ಯಂತ ಅಮೂಲ್ಯ ಎಂದು ಸಾರಿಹೇಳಬೇಕಾದ ಈ ಕಾಲದಲ್ಲಿ ನೀರು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ.
-ನಾಗರಿಕರು, ಉರ್ವಾಸ್ಟೋರ್‌

ಗುಜ್ಜರಕೆರೆ ಸಮೀಪದ ತೋಡಿನಲ್ಲಿ ಡ್ರೈನೇಜ್‌
ಗುಜ್ಜರಕೆರೆಯ ಕೆರೆಯ ಸಮಸ್ಯೆಗೆ ಇನ್ನೂ ಪರಿಹಾರ ಕಾಣುತ್ತಿಲ್ಲ. ಮಂಗಳೂರಿಗೆ ನೀರುಣಿಸಲು ಶಕ್ತವಾಗಿರುವ ಈ ಕೆರೆಗೆ ಡ್ರೈನೇಜ್‌ ನೀರು ನುಗ್ಗುವ ಪರಿಣಾಮ ಕೆರೆ ಪೂರ್ಣ ಹಾಳಾಗಿದ್ದು, ಸರಿಮಾಡಲು ಬಗೆ ಬಗೆಯಲ್ಲಿ ಪ್ರಯತ್ನ ಮಾಡಿದರೂ ಸರಿಯಾಗುವ ಹಂತ ಕಾಣುತ್ತಿಲ್ಲ. ಇದರ ಮಧ್ಯೆಯೇ ಡ್ರೈನೇಜ್‌ ನೀರು ಗುಜ್ಜರಕೆರೆಯ ಸಮೀಪದ ಚರಂಡಿಯಲ್ಲಿ ಹರಿಯುತ್ತಿರುವುದು ಇನ್ನೂ ನಿಂತಿಲ್ಲ. ಮಾರಿಯಮ್ಮ ಕಟ್ಟೆ ಸಮೀಪದ ತೋಡಿನಲ್ಲಿ ಈ ದೃಶ್ಯ ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿ ವರ್ಗ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.
-ನೇಮು ಕೊಟ್ಟಾರಿ, ಸ್ಥಳೀಯರು

ಇಲ್ಲಿಗೆ ಕಳುಹಿಸಿ
“ಸುದಿನ-ಜನದನಿ’ ವಿಭಾಗ, ಉದಯವಾಣಿ, ಮಾನಸ ಟವರ್‌, ಮೊದಲ ಮಹಡಿ, ಎಂಜಿ ರಸ್ತೆ, ಪಿವಿಎಸ್‌ ವೃತ್ತ ಸಮೀಪ, ಕೊಡಿಯಾಲ್‌ಬೈಲ್‌, ಮಂಗಳೂರು-575003. ವಾಟ್ಸಪ್‌ ನಂಬರ್‌-9900567000. ಇ-ಮೇಲ್‌: mlr.sudina@udayavani.com

Advertisement

Udayavani is now on Telegram. Click here to join our channel and stay updated with the latest news.

Next