ಕೇಂದ್ರದ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರಿಗೆ ಟ್ವಿಟರ್ ಮೂಲಕ 88ನೇ ಹುಟ್ಟಿದ ಹಬ್ಬದ ಶುಭಾಶಯವನ್ನು ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ. ದೇಶದ ಪ್ರಜಾಪ್ರಭುತ್ವಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡಿದ್ದಾರೆ. ಸದ್ಯ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಹಿನ್ನೆಲೆಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಯನ್ನಾಗಲಿ, ಅವರ ಸುತ್ತಮುತ್ತಲು ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಅರಿತುಕೊಳ್ಳುವ ಯಾವುದೇ ಚೈತನ್ಯವನ್ನು ಅವರು ಹೊಂದಿಲ್ಲ. ಈ ಸ್ಥಿತಿಗೆ ಬರುವ ಮುನ್ನ ಅವರು ಪಾದರಸದಂತೆ ಚುರುಕಾಗಿ ಕೆಲಸ ಮಾಡಿದವರು.
ಐದು ದಶಕಗಳ ಕಾಲ ಜನಸಾಮಾನ್ಯರಿಗಾಗಿ ಜಾರ್ಜ್ ದುಡಿದಿದ್ದಾರೆ. ಆದರೇನು ಮಾಡೋಣ? ಸಾರ್ವಜನಿಕ ವಾಗಿ ಇಂಥ ವ್ಯಕ್ತಿಗಳ ಬಗ್ಗೆ ನೆನಪು ಕಡಿಮೆಯೇ ಇರುತ್ತದೆ. ಕರ್ನಾಟಕದಲ್ಲಿ ಹುಟ್ಟಿ ಮುಂಬೈನಲ್ಲಿ ಪ್ರವರ್ಧಮಾನಕ್ಕೆ ಬಂದ ಜಾರ್ಜ್ ಫೆರ್ನಾಂಡಿಸ್ ನನ್ನ ಬಾಲ್ಯದ ಹೀರೋ. ಈ ದಿನಮಾನಕ್ಕೂ ಕೂಡ ಅವರು ನನ್ನ ಹೀರೋ ಎಂದು ಹೇಳಿಕೊಳ್ಳಲು ಹಿಂಜರಿಕೆಯೇನಿಲ್ಲ. ಮುಂಬೈನಲ್ಲಿ ಅವರು ಇರುತ್ತಿದ್ದ ಕಚೇರಿ ನನ್ನ ಮನೆಯ ಸಮೀಪದಲ್ಲಿಯೇ ಇತ್ತು. 204, ಚಾರ್ನಿ ರಸ್ತೆ ಎಂಬ ವಿಳಾಸವನ್ನು ಅದು ಹೊಂದಿತ್ತು. ಮರಾಠಿಯಲ್ಲಿ “ದೋನ್ಸೆ ಚಾರ್’ ಎಂದೂ ಪ್ರಸಿದ್ಧಿ ಯಾಗಿತ್ತು. ಮಂಗಳೂರಿನಲ್ಲಿ ಹುಟ್ಟಿ, ಮುಂಬೈನ ಹೊಟೇಲ್ಗಳಲ್ಲಿ ಕಾರ್ಮಿಕನಾಗಿ ದುಡಿದು, ರಸ್ತೆಯ ಬದಿಯಲ್ಲೇ ಮಲಗಿ ನಿದ್ರಿಸಿದ್ದ ದಿನಗಳು ಅವರದ್ದಾಗಿತ್ತು.
ಮಂಗಳೂರಿನವರೇ ಆಗಿದ್ದ ಪ್ಲಾಸಿಡ್ ಡಿ’ಮೆಲ್ಲೋ ಬೃಹನ್ಮುಂಬೈ ಮುನಿಸಿಪಲ್ ಮಜ್ದೂರ್ ಯೂನಿಯನ್ (ಎಂಎಂಯು), ಟ್ಯಾಕ್ಸಿ ಚಾಲಕರ ಯೂನಿಯನ್ ಹೀಗೆ ಕಾರ್ಮಿಕರ ಹಲವು ಸಂಘಟನೆಗಳನ್ನು ಅವರು ರೂಪಿಸಿದ್ದರು. ಅವರ ಪರಿಚಯದ ಬಳಿಕ ಜಾರ್ಜ್ ತಿರುಗಿ ನೋಡಲಿಲ್ಲ. ಡಿ’ಮೆಲ್ಲೋ ಪ್ರಭಾವ ಹೇಗಿತ್ತು ಎಂದರೆ ಅವರು ವಾಣಿಜ್ಯ ನಗರಿಯ ವಹಿವಾಟಿನ ಮೇಲೆ ಪ್ರಭಾವ ಬೀರುವಷ್ಟು ಶಕ್ತಿ ಹೊಂದಿದ್ದರು.
ಇಂಥ ಒಬ್ಬ ವ್ಯಕ್ತಿ ದೇಶಕ್ಕೆ ಪರಿಚಯವಾಗಿದ್ದೇ 1967ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಅಂದಿನ ಪ್ರಭಾವಿ ಮುಖಂಡ ಎಸ್.ಕೆ.ಪಾಟೀಲ್ ವಿರುದ್ಧ ಜಯಗಳಿಸುವ ಮೂಲಕ. ಪಾಟೀಲ್ ಅವರು ದೇಶದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರೂರ ಆಪ್ತರಲ್ಲಿ ಒಬ್ಬರಾಗಿದ್ದರು. ಅವರ ಜಯದ ಶ್ರೀಕಾರ ಈ ಫಲಿತಾಂಶದಿಂದ ಆರಂಭವಾಯಿತು. ಹೀಗಾಗಿಯೇ “ಜೈಂಟ್ ಕಿಲ್ಲರ್’ ಎಂಬ ಹೆಗ್ಗಳಿಕೆಯೂ ಬಂತು.
– ನಿತಿನ್ ವಾಗ್ಲೆ