Advertisement

ಮಾರುತಿ ದೇವಸ್ಥಾನಕ್ಕೆ ಮಹಾದ್ವಾರ ಸಮರ್ಪಣೆ

11:11 AM May 17, 2022 | Team Udayavani |

ಶಿರಸಿ: ತಾಲೂಕಿನ ಪ್ರಸಿದ್ಧ ಪವಿತ್ರ ಕ್ಷೇತ್ರ ಕೊಳಗಿಬೀಸ್‌ ಮಾರುತಿ ದೇವಸ್ಥಾನ ಪ್ರವೇಶದ ಮಹಾದ್ವಾರ ಸಮರ್ಪಣೆ, ಮಹಾರುದ್ರಯಾಗ, ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಮೇ 20, 21, 22ರಂದು ಕೊಳಗಿಬೀಸ್‌ನಲ್ಲಿ ನಡೆಯಲಿದೆ.

Advertisement

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ್‌ ಹಾಗೂ ಇತರ ಪ್ರಮುಖರು ಮೂರು ದಿನಗಳಲ್ಲಿ 13 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದರು.

ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ ಭಟ್ಟ ಮಾತನಾಡಿ, ಮೇ 20ರ ಸಂಜೆ 5ಕ್ಕೆ ಮಹಾದ್ವಾರದ ಸಮರ್ಪಣೆ ನಡೆಯಲಿದೆ. ಅದೇ ದಿನ ಮುಂಜಾನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, 21ಕ್ಕೆ 151 ವೈದಿಕರಿಂದ ಮಹಾರುದ್ರ ಕಾರ್ಯಕ್ರಮ, ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ. ನಾಲ್ಕು ನೂರಕ್ಕೂ ಅಧಿಕ ಕಾರ್ಯಕರ್ತರು ಮೂರು ದಿನಗಳ ವ್ಯವಸ್ಥೆ ನಿರ್ವಹಣೆಯಲ್ಲಿ ಜೊತೆಯಾಗಲಿದ್ದಾರೆ.

21ರ ಸಂಜೆ 6ಕ್ಕೆ ಭಕ್ತಿಭಾವ ಲಹರಿ ಕಾರ್ಯಕ್ರಮ ಸಾದ್ವಿನಿ ಕೊಪ್ಪ, ಶ್ರಾವಣಿ ಕೊಪ್ಪ ತಂಡದಿಂದ ನಡೆಯಲಿದೆ. ರಾತ್ರಿ 8ರಿಂದ ಗಣಪತಿ ಹೆಗಡೆ ತೋಟಿಮನೆ, ಸುಬ್ರಹ್ಮಣ್ಯ ಚಿಟ್ಟಾಣಿ, ಸರ್ವೇಶ್ವರ ಮೂರೂರು ಸಂಗಡಿಗರಿಂದ ಲಂಕಾದಹನ ನಡೆಯಲಿದೆ ಎಂದರು.

ಮೇ 22ರಂದು ಸಂಜೆ 5ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಆರ್‌.ವಿ. ದೇಶಪಾಂಡೆ, ವಿಸ್ತಾರ ಮೀಡಿಯಾದ ಎಚ್‌.ವಿ. ಧರ್ಮೇಶ, ಸಿಇಒ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೇಮನೆ ಭಾಗವಹಿಸಲಿದ್ದಾರೆ. ಐದು ಸಾವಿರ ಜನರು ಕುಳಿತು ವೀಕ್ಷಿಸಬಹುದಾದ ಸಿದ್ಧತೆ ಮಾಡಿದ್ದೇವೆ.

Advertisement

ಬೆಳಗಿನಿಂದ ಪ್ರಸಾದ ಸೇವೆ ನಿರಂತರ ಇರಲಿದೆ ಎಂದ ಅವರು, ಹಳೆ ಬೇರು ಹೊಸ ಚಿಗುರು ಗಾನ ವೈವಿಧ್ಯದಲ್ಲಿ ಭಾಗವತ ರಾಘವೇಂದ್ರ ಜನ್ಸಾಲೆ, ಗಾಯಕ ವಿನಾಯಕ ಮುತ್ಮುರ್ಡು, ತಬಲಾ ವಾದಕ ಲಕ್ಷ್ಮೀಶ ರಾವ್‌ ಕಲ್ಗುಂಡಿಕೊಪ್ಪ, ಮದ್ದಲೆವಾದಕ ಶಂಕರ ಭಾಗವತ, ವಾಯಲಿನ್‌ ವಾದಕ ಶಂಕರ ಕಬಾಡಿ, ಕೊಳಲು ವಾದಕ ಸಮರ್ಥ ತಂಗಾರಮನೆ, ಚಂಡೆ ವಾದಕ ಗಣೇಶ ಗಾಂವಕರ, ಹಾರ್ಮೋನಿಯಂ ವಾದಕ ಅಜಯ ವರ್ಗಾಸರ ಭಾಗವಹಿಸುವರು ಎಂದರು.

ರಾತ್ರಿ 8ಕ್ಕೆ ಉದಪಾ 2 ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕೊಳಲುವಾದಕ ಅಮಿತ್‌ ನಾಡಿಗ ಸಂಯೋಜನೆಯಲ್ಲಿ ಸಿದ್ದಾರ್ಥ ಬೆಳ್ಮಣ್ಣು, ಅನೂರು ವಿನೋದ ಶ್ಯಾಮ, ಕಾರ್ತಿಕ ಮಣಿ, ರೂಪಕ ಕಲ್ಲೂರಕರ, ಸುನಾದ ಅನೂರ ಭಾಗವಹಿಸುವರು ಎಂದೂ ತಿಳಿಸಿದರು.

ಮಹಾದ್ವಾರವನ್ನು ಹೇಮಾ ಹೆಬ್ಟಾರ್‌, ಶ್ರೀನಿವಾಸ ಹೆಬ್ಟಾರ್‌, ನಿವೇದಿತಾ, ಅಕ್ಷಯ ಹೆಗಡೆ, ಅವನಿ ಜೊತೆಯಾಗಿ ನಿರ್ಮಾಣ ಮಾಡಿದ್ದಾರೆ.

ಕೊಳಗಿಬೀಸ್‌ ದೇವಸ್ಥಾನದಲ್ಲಿ ಮಹಾರುದ್ರಯಾಗವು 20ರ ಬೆಳಗಿನಿಂದಲೇ ಆರಂಭವಾಗಲಿದೆ. ಸಂಜೆ 5ಕ್ಕೆ ಪ್ರವೇಶ ಮಹಾದ್ವಾರದ ಅಂಗವಾಗಿ ದೇವರ ಸವಾರಿ ಉತ್ಸವ, ಮಹಾದ್ವಾರ ಮಂಟಪದಲ್ಲಿ ಕುಳಿತು ಹವನ ಜೊತೆ ಶಿಖರ ಕಳಶ ಸ್ಥಾಪನೆ ನಡೆಯಲಿದೆ. ಪ್ರವೇಶ ದ್ವಾರ ಸಮರ್ಪಣೆ ನಡೆಯಲಿದೆ. ದೇವರ ಪ್ರವೇಶ ವೇಳೆ ಪೂರ್ಣಕುಂಭ, ದೀಪಾಲಂಕಾರ, ಪಂಚವಾದ್ಯ ಜೊತೆ ನಡೆಯಲಿದೆ. 21ರಂದು 11 ಕುಂಡದಲ್ಲಿ 121 ಋತ್ವಿಜರಿಂದ ಆಹುತಿ ಸಲ್ಲಿಸುವ ಮಹಾ ರುದ್ರಯಾಗ ನಡೆಯಲಿದೆ ಎಂದೂ ವಿವರಿಸಿದರು.

ಸ್ವರ್ಣವಲ್ಲೀ ಸಂಸ್ಥಾನದ ಕರೂರು ಸೀಮಾ ಅಧ್ಯಕ್ಷ ಉಮಾಪತಿ ಭಟ್ಟ, ದೇವಸ್ಥಾನದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ, ಉಪಾಧ್ಯಕ್ಷ ನರಸಿಂಹ ಹೆಬ್ಬಲಸು, ಶ್ರೀಧರ ಭಟ್ಟ ಕೊಳಗಿಬೀಸ್‌, ಗಿರಿಧರ ಕಬ್ನಳ್ಳಿ ಇತರರು ಇದ್ದರು.

ಭಗವಾನ್‌ ಶ್ರೀಧರರ, ಶ್ರೀ ಸಹಜಾನಂದ ಅವಧೂತರ ಮೂರ್ತಿ ದ್ವಾರದ ಮೇಲ್ಭಾಗದಲ್ಲಿ ಕುಳಿಸಲಾಗಿದೆ. 200 ಅಡಿ ಉದ್ದ 18 ಅಡಿ ಎತ್ತರದ ಮುಖ್ಯದ್ವಾರ ಇದಾಗಿದೆ. ಪ್ರವೇಶ ದ್ವಾರದ ಆಕರ್ಷಕ ಗೋಪುರ 30 ಅಡಿ ಎತ್ತರ ಇದೆ. ಇಷ್ಟದ ದೇವರಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ಪುಣ್ಯ. –ಶ್ರೀನಿವಾಸ ಹೆಬ್ಟಾರ, ಅಧ್ಯಕ್ಷರು ಜೀವಜಲ ಕಾರ್ಯಪಡೆ, ಶಿರಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next