Advertisement

ಪ್ರವಾಹ ತಡೆಗೆ 185 ಕೆರೆಗಳಿಗೆ ಗೇಟ್‌

10:23 AM Dec 02, 2022 | Team Udayavani |

ಬೆಂಗಳೂರು: ಪ್ರಸಕ್ತ ವರ್ಷದ ಮಳೆಗಾಲದಲ್ಲಿ ನಗರದ ಹಲವು ಬಡಾವಣೆಗಳು ಪ್ರವಾಹಕ್ಕೆ ತುತ್ತಾಗಿ ಸಂಕಷ್ಟ ಎದುರಾಗಿತ್ತು. ಇನ್ನು ಮುಂದೆ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವುದನ್ನು ತಡೆಯಲು ಕೆರೆಗಳಿಗೆ ಡ್ಯಾಂಗಳಲ್ಲಿನ ಕ್ರಸ್ಟ್‌ ಗೇಟ್‌ ಮಾದರಿಯ ಗೇಟ್‌ಗಳ ಅಳವಡಿಕೆಗೆ ಬಿಬಿಎಂಪಿ ಮುಂದಾಗಿದೆ.

Advertisement

ಪ್ರತಿ ಬಾರಿ ಮಳೆ ಬಂದಾಗಲು ಬೆಂಗಳೂರಿನ ಹಲವು ಬಡಾವಣೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಈ ವರ್ಷ ಮಳೆಯ ಪ್ರಮಾಣ ಹೆಚ್ಚಾಗಿ ನಗರದ 60ಕ್ಕೂ ಹೆಚ್ಚಿನ ಬಡಾವಣೆಗಳು ಒಂದಿಲ್ಲೊಂದು ಬಾರಿ ಪ್ರವಾಹಕ್ಕೆ ತುತ್ತಾಗಿವೆ. ಹೀಗೆ ಪದೇ ಪದೆ ಪ್ರವಾಹ ಸೃಷ್ಟಿಯಾಗಲು ರಾಜಕಾಲುವೆಗಳ ನಿರ್ವಹಣೆಯ ಲೋಪ ಒಂದೆಡೆಯಾದರೆ, ಕೆರೆಗಳು ಭರ್ತಿಯಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದ್ದು ಮತ್ತೂಂ ದು ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಕೆರೆಗಳಿಂದ ಹರಿಯುವ ನೀರನ್ನು ನಿಯಂತ್ರಿಸುವ ಸಲುವಾಗಿ ನಗರದಲ್ಲಿನ 185 ಕೆರೆಗಳಿಗೆ ಗೇಟ್‌ಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 219 ಕೆರೆಗಳಿವೆ. ಅವುಗಳಲ್ಲಿ 100ಕ್ಕೂ ಹೆಚ್ಚಿನ ಕೆರೆಗಳ ಹೂಳು ತೆಗೆ ಯುವುದು, ಕೆರೆ ದಂಡೆಯನ್ನು ಸದೃಢಪಡಿಸುವುದು, ಕೆರೆ ಸುತ್ತ ಬೇಲೆ ಹಾಕುವುದು ಸೇರಿ ಇನ್ನಿತರ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಅಲ್ಲದೆ ಮುಂದಿನ ಕೆಲ ವರ್ಷಗಳಲ್ಲಿ ಎಲ್ಲ 219 ಕೆರೆಗಳ ಅಭಿವೃದ್ಧಿ ಮಾಡುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ಅದಕ್ಕೂ ಮುನ್ನ 219 ಕೆರೆಗಳ ಪೈಕಿ 185 ಕೆರೆ ಗಳಿಂದ ರಾಜಕಾಲುವೆಗೆ ನೀರು ಹರಿಯುವುದನ್ನು ನಿಯಂತ್ರಿಸಲು ಗೇಟ್‌ಗಳನ್ನು ಅಳವಡಿಸಲಾಗುತ್ತಿದೆ.

ಮಳೆ ಬಂದಾಗ ಗೇಟ್‌ ಬಂದ್‌: ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಮಳೆ ಬಂದಾಗ ನಗರದಲ್ಲಿನ 50ಕ್ಕೂ ಹೆಚ್ಚಿನ ಕೆರೆಗಳು ಭರ್ತಿಯಾಗಿ ಹೆಚ್ಚಿನ ಪ್ರಮಾಣದ ನೀರು ರಾಜಕಾಲುವೆಗೆ ಹರಿದಿತ್ತು. ಕೆರೆಗಳಿಂದ ಹರಿದ ನೀರಿನ ಮಟ್ಟವನ್ನು ರಾಜಕಾಲುವೆಗಳು ತಡೆಯಲಾಗದ ಕಾರಣ ನೀರು ಅಕ್ಕಪಕ್ಕದ ಬಡಾವಣೆಗಳಿಗೆ ಹರಿದಿತ್ತು. ಹೀಗಾಗಿ ಕೆರೆಗಳಿಂದ ರಾಜಕಾಲುವೆಗೆ ನೀರು ಹರಿಯುವ ಜಾಗದಲ್ಲಿ ಗೇಟ್‌ ಅಳವಡಿಸಲಾಗುತ್ತದೆ. ಮಳೆ ಬಂದಾಗ ಕೆರೆಯಲ್ಲಿ ಶೇಖರಣೆಯಾಗುವ ನೀರಿನ ಪ್ರಮಾಣ ಹೆಚ್ಚಾಗುವುದು ಕಂಡು ಬಂದಾಗ ನೀರು ಹೊರಗೆ ಹೋಗುವ ಗೇಟ್‌ನ್ನು ಬಂದ್‌ ಮಾಡಲಾಗುತ್ತದೆ. ಅದರಿಂದ ರಾಜಕಾಲುವೆಗಳ ಮೇಲೆ ಒತ್ತಡ ಹೆಚ್ಚುವುದು ನಿಲ್ಲುತ್ತದೆ.

ಮಳೆ ನಿಂತು ರಾಜಕಾಲುವೆಯಲ್ಲಿ ನೀರು ಹರಿಯುವ ಪ್ರಮಾಣ ಕಡಿಮೆಯಾದ ನಂತರ ಗೇಟ್‌ನ್ನು ತೆರೆಯಲಾಗುತ್ತದೆ. ಅದರಿಂದ ಕೆರೆಯ ನೀರು ರಾಜಕಾಲುವೆ ಮೂಲಕ ಹರಿದು ಖಾಲಿಯಾಗುತ್ತದೆ. ಮತ್ತೆ ಮಳೆ ಬಂದಾಗ ಕೆರೆಯಲ್ಲಿ ನೀರು ಶೇಖರಣೆ ಮಾಡುವುದಕ್ಕೆ ಸ್ಥಳಾವಕಾಶ ಇರುವಂತೆ ಮಾಡಲಾಗುತ್ತದೆ.

Advertisement

ಜನವರಿಯಿಂದ ಕಾಮಗಾರಿ ಆರಂಭ

ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳು ರೂಪಿಸಿರುವ ಯೋಜನೆಗೆ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಯಿಂದ ಅನುಮೋದನೆ ದೊರೆತಿದೆ. ಯೋಜನೆಗಾಗಿ ಕೆರೆ ವಿಭಾಗಕ್ಕೆ ಈ ಬಾರಿ ನೀಡಿದ ಅನುದಾನದಲ್ಲಿ 35 ಕೋಟಿ ರೂ. ವ್ಯಯಿಸಲಾಗುತ್ತದೆ. ಅಲ್ಲದೆ ಟೆಂಡರ್‌ ಪ್ರಕ್ರಿಯೆ ನಡೆಸಿ ಗೇಟ್‌ ಅಳವಡಿಕೆಗೆ ಖಾಸಗಿ ಸಂಸ್ಥೆಯನ್ನು ನೇಮಿಸಲಾಗುತ್ತದೆ. ಇನ್ನೊಂದು ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಯಲಿದ್ದು, ಜನವರಿಯಿಂದ ಗೇಟ್‌ ಅಳವಡಿಕೆ ಕಾರ್ಯ ಆರಂಭವಾಗಲಿದೆ. 2023ರ ಮಳೆಗಾಲ ಆರಂಭಕ್ಕೂ ಮುನ್ನ ಅಂದರೆ ಮೇ ತಿಂಗಳ ಅಂತ್ಯದೊಳಗೆ ನಿಗದಿಪಡಿಸಿರುವ 185 ಕೆರೆಗಳಲ್ಲೂ ಗೇಟ್‌ ಅಳವಡಿಸುವ ಕಾರ್ಯ ಪೂರ್ಣಗೊಳಿಸಲಾಗುತ್ತದೆ. ಅದರಿಂದ ಮುಂದಿನ ಮಳೆಗಾಲದಲ್ಲಿ ಕೆರೆಗಳಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವುದನ್ನು ತಡೆಯಲು ನಿರ್ಧರಿಸಲಾಗಿದೆ.

ನಗರದಲ್ಲಿ ಸೃಷ್ಟಿಯಾಗುತ್ತಿರುವ ಪ್ರವಾಹ ಪರಿಸ್ಥಿತಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುತ್ತಿದೆ. ಪ್ರಮುಖ ವಾಗಿ ಮಳೆ ಬಂದಾಗ ಕೆರೆಗಳಿಂದ ರಾಜಕಾಲುವೆಗೆ ಹರಿವ ನೀರಿನ ಪ್ರಮಾಣ ಹೆಚ್ಚಾಗುವುದರಿಂದಲೂ ಪ್ರವಾಹ ಸೃಷ್ಟಿಗೆ ಕಾರಣವಾಗಿದೆ. ಹೀಗಾಗಿ ಮಳೆ ಬಂದಾಗ ಕೆರೆಗಳಿಂದ ನೀರು ಹೊರಗೆ ಹರಿಯದಂತೆ ತಡೆಯಲು ಗೇಟ್‌ಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿ ಅದನ್ನು ಜಾರಿ ಮಾಡಿ, ಮುಂದಿನ ವರ್ಷದಿಂದ ಪ್ರವಾಹ ನಿಯಂತ್ರಿಸಲಾಗುವುದು. ● ಶಶಿಕುಮಾರ್‌, ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಕೆರೆ ವಿಭಾಗ)

● ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next