Advertisement

ಸ್ಮಶಾನದಲ್ಲಿ ಉದ್ಯಾನ!

11:15 PM Apr 12, 2019 | mahesh |

ಸ್ಮಶಾನ ಎಂಬ ಹೆಸರು ಕೇಳಿದರೆ ಸಾಕು; ನಿಂತಲ್ಲೇ ನಡುಕ ಶುರುವಾಗುತ್ತದೆ. ಆದರೆ, ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಪಟ್ಟಣದ ಶರಾವತಿ ನದಿಯ ದಡದಲ್ಲಿರುವ ಶರಾವತಿ ಮುಕ್ತಿ ಧಾಮದಲ್ಲಿ ಹಚ್ಚ ಹಸಿರಿನ ಉದ್ಯಾನವನವಿದೆ. ಹತ್ತಾರು ಬಗೆಯ ಹೂಡಿ ಬಳ್ಳಿಗಳು, ತೆಂಗಿನ ಮರಗಳ ಸಾಲೂ ಇದೆ.

Advertisement

ಸ್ಮಶಾನವೆಂದರೆ ಮೌನ, ಭಯದ ವಾತಾವರಣ, ರಣ ರಣ ಹೊಡೆಯುವ ಲಕ್ಷಣವಿರುವುದು ಸರ್ವೇ ಸಾಮಾನ್ಯ. ಆದರೆ ಇಲ್ಲಿರುವ ಸ್ಮಶಾನ ಇವೆಲ್ಲದಕ್ಕಿಂತ ಭಿನ್ನ-ವಿಭಿನ್ನ. ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರಿನ ತಂಪಾದ ವಾತಾವರಣ, ಬೆಳೆದು ನಿಂತ ಬಗೆಬಗೆಯ ಗಿಡಗಳು, ಸುವಾಸನೆ ಬೀರುವ ಹೂಗಳು, ಅಷ್ಟೇ ಅಲ್ಲ, ನೀರಿನ ವ್ಯವಸ್ಥೆ, ಪೂಜೆಗೆ ವ್ಯವಸ್ಥೆ, ಸ್ವತ್ಛತೆ ಇಲ್ಲಿರುವ ವಿಶೇಷ.

ಇಂತಹ ಸ್ಮಶಾನವಿರುವುದು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಪಟ್ಟಣದ ಶರಾವತಿ ನದಿ ದಡದಲ್ಲಿ. ಶರಾವತಿ ಮುಕ್ತಿ ಧಾಮ ಎಂಬ ಹೆಸರಿನ ಈ ಸ್ಮಶಾನ ಸುಮಾರು 22 ಗುಂಟೆ ಜಾಗದಲ್ಲಿ ನಿರ್ಮಾಣಗೊಂಡಿದೆ. ಈ ಸ್ಮಶಾನದಲ್ಲೇ ಇರುವ ಉದ್ಯಾನವನದ ತುಂಬಾ ಬಗೆಬಗೆಯ ಹೂವಿನ ಗಿಡಗಳು ಕಂಗೊಳಿಸುತ್ತಿವೆ. ತೆಂಗಿನ ಮರಗಳೂ ಫಲ ನೀಡುತ್ತಿದೆ. ಒಟ್ಟಿನಲ್ಲಿ ಈ ಸ್ಮಶಾನಕ್ಕೆ ಬಂದರೆ ಯಾವುದೋ ಉದ್ಯಾನವನಕ್ಕೆ ಬಂದಂತೆ ಭಾಸವಾಗುತ್ತದೆ.

ಹೆಣ ಸುಡಲು ಇಲ್ಲಿ ಐದು ಕಡೆ ಜಾಗವಿದ್ದು. ಮಳೆ ಬಂದರೆ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ಶೀಟ್‌ ಅಳವಡಿಸಲಾಗಿದೆ. ಪಕ್ಕದಲ್ಲೇ ಹೆಣ ಹೂಳಲೂ ವ್ಯವಸ್ಥೆಯಿದೆ. ಈ ಜಾಗ ಬರೀ ಹೆಣ ಸುಡುವುದಕ್ಕಷ್ಟೇ ಸೀಮಿತವಾಗಿಲ್ಲ. ಹೆಣ ಸುಟ್ಟ ನಂತರ ನಡೆಯುವ ವಿವಿಧ ಧಾರ್ಮಿಕ ಆಚರಣೆಗಳಿಗೂ ಸಕಲ ವ್ಯವಸ್ಥೆಗಳಿವೆ. ಸ್ನಾನದ ನೀರಿಗೆ ಬಾವಿಯಿದೆ. ಪಕ್ಕದಲ್ಲಿ ಹೈಟೆಕ್‌ ಸ್ನಾನದ ಕೊಠಡಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಸುಟ್ಟ ಹೆಣದ ಬೂದಿಯನ್ನು ಪಕ್ಕದಲ್ಲೇ ಇರುವ ನದಿಯಲ್ಲಿ ಬಿಡುತ್ತಾರೆ. 9-10ನೇ ದಿನಕ್ಕೆ ಕ್ರಿಯಾಕರ್ಮಗಳನ್ನು ನಡೆಸಲು ಸಭಾಭವನವಿದೆ. ಅದೇ ರೀತಿ ಈಶ್ವರ, ಸತ್ಯ ಹರಿಶ್ಚಂದ್ರರ ಮೂರ್ತಿಗಳೂ ಇಲ್ಲಿವೆ.

ಆರು ಸೋಲಾರ್‌ ಲೈಟ್‌, ನಾಲ್ಕು ಹೈಮಾಸ್ಟ್‌ ಲೈಟ್‌ ಅಳವಡಿಸಲಾಗಿದೆ. ಇದರಿಂದ ರಾತ್ರಿ ವೇಳೆಯಲ್ಲಿ ಸ್ಮಶಾನ ಜಗಮಗಿಸುತ್ತದೆ. ಉದ್ಯಾನವನದ ಸುತ್ತಲೂ ಕಾಂಪೌಂಡ್‌ ಹಾಕಲಾಗಿದೆ. ಇಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಒಬ್ಬ ಕಾವಲುಗಾರ ಸೇವಾ ರೂಪದಲ್ಲಿ ಇದನ್ನು ನೋಡಿಕೊಳ್ಳುತ್ತಿದ್ದಾನೆ.

Advertisement

ಹಿಂದೆ ಈ ಸ್ಥಳಕ್ಕೆ ಸುತ್ತಲಿನ ಜನ ಹಗಲಿನಲ್ಲೂ ಬರಲು ಹೆದರುತ್ತಿದ್ದರು. ಸ್ಮಶಾನ ಜಾಗವಲ್ಲವೇ? ಅದೇ ಕಾರಣಕ್ಕೆ ಎಲ್ಲರಿಗೂ ವಿಪರೀತ ಭಯವಿರುತ್ತಿತ್ತು. ಆದರಿಂದು ಇಲ್ಲಿ ಆ ವಾತಾವರಣವಿಲ್ಲ. ಸೇವಾ ನಿವೃತ್ತರಾದ ಪಿ.ಸಿ.ಪೈ ಹಾಗೂ ರಾಯ್ಕರ ತಿಮ್ಮಣ ನಾಯ್ಕ ಇವರ ವಿಶೇಷ ಕಾಳಜಿ ಹಾಗೂ ಸ್ಥಳೀಯರ ಸಹಾಯ-ಸಹಕಾರದಿಂದ ಈ ಸ್ಥಳವಿಂದು ಸಂಪೂರ್ಣ ಬದಲಾಗಿದೆ. ಇವರಿಬ್ಬರೂ ಇದರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಸ್ಥಳೀಯರು ಹಾಗೂ ಸಂಘ-ಸಂಸ್ಥೆಗಳು ಇದರ ಅಭಿವೃದ್ಧಿಗೆ ಸಾಥ್‌ ನೀಡಿದ್ದಾರೆ. ರಾಯ್ಕರ ನಾಯ್ಕ ಇಲ್ಲಿನ ಗಿಡಗಳಿಗೆ ಪ್ರತಿದಿನ ನೀರುಣಿಸುತ್ತಿದ್ದಾರೆ. ದೂರದ ಊರಿಗೆ ಹೋದಾಗ ಅಲ್ಲಿಂದ ತಂದ ಗಿಡಗಳನ್ನು ಸ್ಮಶಾನದಲ್ಲಿ ನೆಟ್ಟು ಪೋಷಿಸುತ್ತಿದ್ದಾರೆ. ಹೀಗಾಗಿ, ಹಿಂದೆ ಇಲ್ಲಿಗೆ ಬರಲು ಹೆದರುತ್ತಿದ್ದ ಜನ ಈಗ ವಾಯುವಿಹಾರಿಗಳಾಗಿದ್ದಾರೆ. ಕೆಲ ಗಂಟೆಗಳ ಕಾಲ ಕುಳಿತು ಹರಟೆ ಹೊಡೆದು ಹೋಗುತ್ತಿದ್ದಾರೆ. ಇಷ್ಟೇ ಅಲ್ಲ, ದೂರದಿಂದ ಬಂದ ಪ್ರವಾಸಿಗರು ಸಹ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಒಟ್ಟಾರೆ, ಸ್ಮಶಾನವೆಂಬುದು ಸ್ವರ್ಗದಂತೆ ಭಾಸವಾಗುತ್ತಿದೆ.

ಸ್ಮಶಾನದಲ್ಲೂ ನಡೆಯುತ್ತೆ ಧಾರ್ಮಿಕ ಕಾರ್ಯ
ಶಿವರಾತ್ರಿ ಹಾಗೂ ನವರಾತ್ರಿ ಸಂದರ್ಭದಲ್ಲಿ ಇಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಶಿವರಾತ್ರಿ ಸಂದರ್ಭದಲ್ಲಿ ಸ್ಮಶಾನದೊಳಗಿನ ಶಿವನ ಮೂರ್ತಿಗೆ ವಿಶೇಷ ಅಭಿಷೇಕ-ಪೂಜೆಗಳು ನಡೆದರೆ, ನವರಾತ್ರಿ ಸಂದರ್ಭದಲ್ಲಿ ಸ್ಥಳೀಯ ಅಮ್ಮನವರ ದೇವರ ಪಲ್ಲಕ್ಕಿ ಇಲ್ಲಿಗೆ ಆಗಮಿಸಿ ವಿಶೇಷ ಪೂಜೆ ಪಡೆದು ಮುಂದೆ ಸಾಗುತ್ತದೆ.

ಸಾಮಾನ್ಯವಾಗಿ ಎಲ್ಲರೂ ಸಮಾಜ ಸೇವೆಯ ನೆಪದಲ್ಲಿ ದೇವಸ್ಥಾನ, ಶಾಲೆ ಪ್ರಾರಂಭ ಮಾಡುತ್ತಾರೆ. ಆದರೆ ದಿನಗಳೆದಂತೆ ಅದರಲ್ಲೇ ಜನರನ್ನು ಲೂಟಿ ಮಾಡಲು ಆರಂಭಿಸುತ್ತಾರೆ. ಆದರೆ ನಾವು ಸ್ಮಶಾನ ಅಭಿವೃದ್ಧಿ ಪಡಿಸಿ ಇದರಲ್ಲೇ ನೆಮ್ಮದಿ ಕಾಣುತ್ತಿದ್ದೇವೆ. ಇದರಲ್ಲಿ ಯಾವುದೇ ಲಾಭವಿಲ್ಲ. ನಾವು ಮಾಡುತ್ತಿರುವ ಪ್ರತಿ ಕೆಲಸವೂ ನಮ್ಮ ಮನಸ್ಸು ಸಂತೋಷಕ್ಕೆ ಮಾಡ್ತಾ ಇರೋದಷ್ಟೇ…
ಪಿ.ಸಿ. ಪೈ, ನಿವೃತ್ತ ಸಿಬ್ಬಂದಿ

-ವಿನಾಯಕ ಜಿ.ನಾಯ್ಕ, ತಾಳಮಕ್ಕಿ

Advertisement

Udayavani is now on Telegram. Click here to join our channel and stay updated with the latest news.

Next