Advertisement

UP ದರೋಡೆಕೋರ ಅತೀಕ್ ಅಹ್ಮದ್, ಸಹೋದರ ಪೊಲೀಸರ ಸಮ್ಮುಖದಲ್ಲೇ ಗುಂಡಿಗೆ ಬಲಿ

12:46 AM Apr 16, 2023 | Team Udayavani |

ಪ್ರಯಾಗ್ ರಾಜ್ : ಕನಿಷ್ಠ 100 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಉತ್ತರ ಪ್ರದೇಶದ ದರೋಡೆಕೋರ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್ ರನ್ನು ಶನಿವಾರ ರಾತ್ರಿ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳ ಸೋಗಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡಿನ ಮಳೆಗೆರೆದು ಸ್ಥಳದಲ್ಲೇ ಹತ್ಯೆಗೈದಿದ್ದಾರೆ. ದಾಳಿಯ ಭೀಕರ ಹತ್ಯೆಯ ದೃಶ್ಯಗಳು
ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿವೆ. ಮಾನ್ ಸಿಂಗ್‌ ಎನ್ನುವ ಒಬ್ಬ ಪೊಲೀಸ್ ಪೇದೆ ಮತ್ತು ಪತ್ರಕರ್ತರೊಬ್ಬರೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Advertisement

ಎರಡು ದಿನಗಳ ಹಿಂದೆಯಷ್ಟೇ ಯುಪಿಯ ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಅತೀಕ್ ಅಹ್ಮದ್ ಪುತ್ರ ಅಸದ್ ಮತ್ತು ಇನ್ನೋರ್ವ ಕೂಡ  ಹತರಾಗಿದ್ದರು.

ಹತ್ಯೆಗೀಡಾದ ದರೋಡೆಕೋರನ ವಕೀಲ ವಿಜಯ್ ಮಿಶ್ರಾ ಮಾತನಾಡಿ, ಜನರ ಗುಂಪಿನಿಂದ ಯಾರೋ ಅತಿಕ್ ಅಹ್ಮದ್ ಮತ್ತು ಅವರ ಸಹೋದರನ ಮೇಲೆ ಹತ್ತಿರದಿಂದಲೇ ಗುಂಡು ಹಾರಿಸಿದ್ದಾರೆ. ಅವರು ಗುಂಡಿಕ್ಕಿ ಕೊಲ್ಲಲ್ಪಟ್ಟಾಗ ಅವರ ಪಕ್ಕದಲ್ಲಿ ನಿಂತಿದ್ದರು ಎಂದು ಮಿಶ್ರಾ ಹೇಳಿದ್ದಾರೆ.

ದಾಳಿ ನಡೆಸಿದ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದ ಎಂಎಲ್‌ಎನ್ ವೈದ್ಯಕೀಯ ಕಾಲೇಜು ಆವರಣದ ಬಳಿ ಗುಂಡಿನ ದಾಳಿ ನಡೆದಿದೆ.

ಮೂವರು ಶೂಟರ್‌ಗಳನ್ನು ಲವಲೇಶ್ ತಿವಾರಿ, ಸನ್ನಿ ಮತ್ತು ಅರುಣ್ ಮೌರ್ಯ ಎಂದು ಗುರುತಿಸಲಾಗಿದೆ.

ಘಟನೆಯ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಪ್ರಶಾಂತ್ ಕುಮಾರ್ ಅವರನ್ನು ಕರೆಸಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

Advertisement

ಘಟನೆಯ ದೃಶ್ಯಗಳಲ್ಲಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಸುದ್ದಿಗಾರರೊಂದಿಗೆ ಮಾತನಾಡುತ್ತ ನಡೆದುಕೊಂಡು ಹೋಗುತ್ತಿರುವಾಗ ಯಾರೋ ದರೋಡೆಕೋರನ ತಲೆಯ ಮೇಲೆ ಗುಂಡು ಹಾರಿಸಿದ್ದಾರೆ. ಮರುಕ್ಷಣವೇ ಆತನ ಸಹೋದರನ ಮೇಲೂ ಗುಂಡಿಕ್ಕಲಾಗಿದೆ.

ಅತೀಕ್ ಅಹ್ಮದ್ ಸಮಾಜವಾದಿ ಪಕ್ಷದ ಸಂಸದರಾಗಿದ್ದರು, ಅಪಹರಣ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ. 2005 ರಲ್ಲಿ ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ ಕೊಲೆ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಕೊಲೆಯಾದ ಶಾಸಕರ ವಕೀಲ ಉಮೇಶ್ ಪಾಲ್ ಅವರ ಹತ್ಯೆಯಲ್ಲೂ ಪ್ರಮುಖ ಆರೋಪಿಯಾಗಿದ್ದ.

ಯುಪಿಯಲ್ಲಿ ಅಪರಾಧವು ಉತ್ತುಂಗಕ್ಕೇರಿದೆ ಮತ್ತು ಅಪರಾಧಿಗಳ ನೈತಿಕತೆ ಹೆಚ್ಚಾಗಿದೆ. ಪೊಲೀಸ್ ಸಿಬಂದಿಯ ಭದ್ರತೆಯ ನಡುವೆಯೇ ಕೆಲವರು ಗುಂಡು ಹಾರಿಸಿದಾಗ ಸಾಮಾನ್ಯ ಜನರ ಸುರಕ್ಷತೆಯ ಸ್ಥಿತಿ ಏನು? ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತಿದ್ದು, ಕೆಲವರು ಉದ್ದೇಶಪೂರ್ವಕವಾಗಿ ಇಂತಹ ವಾತಾವರಣ ಸೃಷ್ಟಿಸುತ್ತಿರುವಂತಿದೆ ಎಂದು ಎಸ್ಪಿ ಮುಖ್ಯಸ್ಥ,ಮಾಜಿ ಸಿಎಂ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಯೋಗಿಯವರ ಕಾನೂನು ಮತ್ತು ಸುವ್ಯವಸ್ಥೆಯ ದೊಡ್ಡ ವೈಫಲ್ಯಕ್ಕೆ ಪರಿಪೂರ್ಣ ಉದಾಹರಣೆ. ಎನ್‌ಕೌಂಟರ್‌ ರಾಜ್‌ ಆಚರಿಸುವವರೂ ಈ ಹತ್ಯೆಗೆ ಅಷ್ಟೇ ಹೊಣೆಗಾರರು. ಕೊಲೆಯನ್ನು ಆಚರಿಸುವ ಸಮಾಜದಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಿಂದ ಏನು ಪ್ರಯೋಜನ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ.

ಯುಪಿ ಪೊಲೀಸರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಬೇಸರ ತಂದಿದೆ. ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆಯನ್ನು ನೀಡುತ್ತದೆ. ಈ ಕೊಲೆ ರಾಜ್ಯ ಸರ್ಕಾರದ ಅಧಿಕಾರಕ್ಕೆ ಸವಾಲಾಗಿದೆ. ಇದು ಶುದ್ಧ ಅರಾಜಕತೆ ಎಂದು ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಪ್ರತಿಕ್ರಿಯಿಸಿದ್ದಾರೆ.

ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಸ್ಥಳಕ್ಕೆ ತಲುಪಿದೆ. ಪ್ರಯಾಗ್‌ರಾಜ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸಮೀಪದ ಜಿಲ್ಲೆಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಸೇರಿದಂತೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next