Advertisement

ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡದಿದ್ದರೆ ಉಗ್ರ ಹೋರಾಟ

02:27 PM Aug 13, 2020 | sudhir |

ಬಳ್ಳಾರಿ: ವಿಘ್ನಗಳ ನಿವಾರಕ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ಜಿಲ್ಲಾಡಳಿತ, ರಾಜ್ಯ ಸರ್ಕಾರ ಅನುಮತಿ ನೀಡಬೇಕು ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಸಂಜೀವ ಮರಡಿ ಆಗ್ರಹಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಂಪ್ರದಾಯದಲ್ಲಿ ಗಣೇಶನನ್ನು ಪ್ರಥಮ ಪೂಜಾ ಆರಾಧಕ,
ವಿಘ್ನಗಳ ನಿವಾರಕ ಎಂದೇ ಕರೆಯಲಾಗುತ್ತದೆ. ಆ.22 ರಂದು ಗಣೇಶ ಹಬ್ಬವಿದ್ದು, ಕಳೆದ ನೂರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದರು. ಕೆಲವೊಂದು ಜಿಲ್ಲಾಡಳಿತಗಳು ಕೋವಿಡ್‌ ನೆಪವೊಡ್ಡಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ನಿರ್ಬಂಧ ಹೇರುತ್ತಿವೆ. ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಸಹ ಸಾರ್ವಜನಿಕ ಗಣೇಶ ಉತ್ಸವ ಆಚರಿಸಲು
ಅಧಿಸೂಚನೆ ಹೊರಡಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ. ರಂಜಾನ್‌, ಬಕ್ರೀದ್‌ ಹಬ್ಬದಂದು ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಲು 50 ಜನರಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಗಣೇಶ ಹಬ್ಬ ಆಚರಿಸಲು ನಿರ್ಬಂಧ
ಹೇರುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದಲ್ಲಿ ಕೋವಿಡ್‌ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಸಹ ಕೈಗೊಳ್ಳುತ್ತೇವೆ ಎಂದವರು ಕೋರಿದರು.

ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸುವ ಗಣಪತಿ ಮಂಡಳಿಯವರು ಕಡ್ಡಾಯವಾಗಿ ಸಾಮಾಜಿಕ ಅಂತರ (ಬಾಕ್ಸ್ಗಳನ್ನು ಹಾಕಬೇಕು) ಕಾಪಾಡಬೇಕು. ಮಾಸ್ಕ್ ಧರಿಸಬೇಕು. ದರ್ಶನದ ವೇಳೆ ಗಲಾಟೆ, ಗದ್ದಲವಾಗದಂತೆ ಸರತಿ ಸಾಲು ವ್ಯವಸ್ಥೆ ಮಾಡಬೇಕು. ದರ್ಶನಕ್ಕೆ ಬರುವ ಭಕ್ತರಿಗೆ ಮಂಡಳಿಯಿಂದಲೇ ಸ್ಯಾನಿಟೈಸರ್‌, ಥರ್ಮಲ್‌ ಸ್ಕಾನರ್‌ ವ್ಯವಸ್ಥೆ ಮಾಡಬೇಕು. ಈ ಕುರಿತು ಸೋಂಕಿತರ ಲಕ್ಷಣಗಳುಳ್ಳವರ ಮಾಹಿತಿಯನ್ನು ಅಲ್ಲಿ ನಿಯೋಜಿಸಲಾಗಿದ್ದ ಪೊಲೀಸ್‌, ಆಶಾ  ಕಾರ್ಯಕರ್ತೆಯರಿಗೆ ನೀಡಲಾಗುವುದು. ಜತೆಗೆ ಗಣೇಶ ವಿಸರ್ಜನಾ ಮೆರವಣಿಗೆಯನ್ನು ಅತ್ಯಂತ ಕಡಿಮೆ ಜನರಿಂದ ನೆರವೇರಿಸಲಾಗುವುದು.

ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಕರಪತ್ರ, ಭಿತ್ತಿಪತ್ರಗಳನ್ನು ವಿತರಿಸಲಾಗುವುದು. ಈ ಮೊದಲಿನಂತೆ 7, 9, 11 ದಿನಗಳ ಬದಲಿಗೆ 5 ದಿನಗಳ ಕಾಲ ಪ್ರತಿಷ್ಠಾಪಿಸಲು ಅನುಮತಿ ನೀಡಬೇಕು ಎಂದವರು ಕೋರಿದ್ದಾರೆ. ಒಂದುವೇಳೆ ಅನುಮತಿ ನೀಡದಿದ್ದರೂ ಸಾರ್ವಜನಿಕ ಗಣೇಶಗಳನ್ನು ಪ್ರತಿಷ್ಠಾಪಿಸಲಾಗುವುದು. ಹಿಂದುತ್ವದ ಹೆಸರಿನಲ್ಲಿ ಜಯಗಳಿಸಿರುವ ಶಾಸಕರು, ಸಂಸದರು ಅನುಮತಿ ನೀಡುವಂತೆ ಜಿಲ್ಲಾಡಳಿತ, ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದವರು ಎಚ್ಚರಿಸಿದರು.

ನಾಗರಾಜ್‌ ಕುಂದಾಪುರ, ಬಸವರಾಜ್‌ ಬಿಸಿಲಹಳ್ಳಿ, ದರೂರು ಶಾಂತನಗೌಡ, ವೆಂಕಟೇಶ್‌ ಹೊಸಪೇಟೆ, ದುಗೇìಶ್‌, ಹೇಮಂತ್‌, ಭರತ್‌ ರಾಮ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next