Advertisement

“ಎತ್ತಣ ವಿಜ್ಞಾನ ಎತ್ತಣ ಹವನ|ಇತ್ತಣಿಂದತ್ತ ಸಂಬಂಧವಯ್ಯ||’

09:41 PM Aug 30, 2019 | Sriram |

ಉಡುಪಿ: ಬೆಳಗ್ಗೆ ಸೂರ್ಯೋದಯ ಮತ್ತು ಸೂರ್ಯಾಸ್ತಮಾನದಲ್ಲಿ ಅಗ್ನಿಹೋತ್ರವೆಂಬ ಕೆಲವೇ ನಿಮಿಷಗಳ ಸರಳ ಹೋಮ ಪ್ರಕ್ರಿಯೆಯನ್ನು ನಡೆಸಿದರೆ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚುತ್ತದೆ ಎಂಬ ಪ್ರಾಚೀನರ ಉಲ್ಲೇಖಗಳನ್ನು ಆಧರಿಸಿ ಪುಣೆಯ ಫ‌ರ್ಗ್ಯುಸನ್‌ ಕಾಲೇಜಿನಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿ ಇದನ್ನು ದೃಢಪಡಿಸಲಾಗಿದೆ. ವಾತಾವರಣ ಶುದ್ಧಿಯಾಗುವುದಲ್ಲದೆ ಇದರ ಬೂದಿ ಉತ್ತಮ ಕೀಟನಾಶಕ, ಸಸಿಗಳಿಗೆ ಉತ್ತಮ ಗೊಬ್ಬರವೆನ್ನುವುದೂ ಸಾಬೀತಾಗಿದೆ. ಇದನ್ನು ಜಾತಿಮತ ಭೇದವಿಲ್ಲದೆ ಜನಸಾಮಾನ್ಯರೂ ಮಾಡಿ ಅನುಭವ ಪಡೆದುಕೊಂಡ ಉದಾಹರಣೆ ಇದೆ. ಕೆಲವು ವರ್ಷಗಳ ಹಿಂದೆ ಭಾರತೀಯ ಕಿಸಾನ್‌ ಸಂಘದಂತಹ ಸಂಘಟನೆಗಳೂ ಇದನ್ನು ಪ್ರಚುರಪಡಿಸಿದ್ದವು.

Advertisement

ಕೆಲವು ಹೋಮಗಳಿಗೆ ತುಪ್ಪ, ಎಳ್ಳು, ಪಾಯಸ, ಪಂಚಗಜ್ಜಾಯ ಹೀಗೆ ದ್ರವ್ಯಗಳನ್ನು ನಿವೇದಿಸುತ್ತಾರೆ. ತುಪ್ಪ, ಎಳ್ಳು ಇತ್ಯಾದಿ ದ್ರವ್ಯಗಳನ್ನು ಹಾಕಿದಾಗ ಬೆಂಕಿ ಸಹಜವಾಗಿ ಜ್ವಲಿಸುತ್ತದೆ. ಪಾಯಸ, ಪಂಚಗಜ್ಜಾಯ ಎನ್ನುವಾಗ ಅದನ್ನು ಬೆಂಕಿಯಾಗಿ ಕರಗಿಸುವಷ್ಟು ಕಟ್ಟಿಗೆಗಳು ಇಲ್ಲದಾಗ ಹೊಗೆ ಉತ್ಪತ್ತಿಯಾಗುತ್ತದೆ. ಹೊಗೆಯಲ್ಲಿ ಇಂಗಾಲದ ಡೈಯಾಕ್ಸೆ„ಡ್‌ ಮತ್ತು ಮೊನಾಕ್ಸೆ„ಡ್‌ ಇರುತ್ತದೆ. ಡಯಾಕ್ಸೆ„ಡ್‌ನ್ನು ಸಸ್ಯಗಳು ಹೀರಿಕೊಂಡು ಆಮ್ಲಜನಕವಾಗಿ ಕೊಡುತ್ತವೆ. ಇದು ಜೀವಿಗಳಿಗೆ ಅಗತ್ಯ. ಆದರೆ ಮೊನಾಕ್ಸೆ„ಡ್‌ ಅತೀ ಕೆಟ್ಟ ಅನಿಲ. ಕಣ್ಣು ತೆರೆಯಲಾಗದ ಸ್ಥಿತಿ ಇದ್ದರೆ ಅಲ್ಲಿ ಮೊನಾಕ್ಸೆ„ಡ್‌ ಇದೆ ಎಂದರ್ಥ ಎನ್ನುವುದನ್ನು ಭೌತ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಉಡುಪಿಯ ಡಾ| ಎ.ಪಿ.ಭಟ್‌ ಬೆಟ್ಟು ಮಾಡುತ್ತಾರೆ.

ಕಟ್ಟಿಗೆಯಲ್ಲೂ ಅಶ್ವತ್ಥ, ಆಲ, ಹಲಸು, ಹೆಬ್ಬಲಸು ಇತ್ಯಾದಿ ವೃಕ್ಷಗಳ ಕಟ್ಟಿಗೆ ಶ್ರೇಷ್ಠ. ಪ್ರಾಚೀನ ಕ್ರಮದಲ್ಲಿ ಅಗ್ನಿಹೋತ್ರವನ್ನು ಅಶ್ವತ್ಥ, ಆಲದ ಕಟ್ಟಿಗೆಯಿಂದ ಮಾಡಬೇಕೆಂದಿದೆ. ಕಟ್ಟಿಗೆ ಎಂದರೆ ಕಡಿದು ಮಾಡಿದ ಕಟ್ಟಿಗೆಯಲ್ಲ. ಒಬ್ಬ ಅಗ್ನಿಹೋತ್ರ ಮಾಡುವಷ್ಟು ಕಟ್ಟಿಗೆಯನ್ನು ಅಶ್ವತ್ಥ, ಆಲದ ಮರಗಳು ನಿತ್ಯವೂ ಒಣಗಿಸಿ ಬೀಳಿಸುತ್ತವೆ ಎಂಬ ಮಾತನ್ನು ಹಿರಿಯ ವಿದ್ವಾಂಸ ಪ್ರೊ| ಕೆ.ಎಸ್‌.ನಾರಾಯಣಾಚಾರ್ಯ ಉಪನ್ಯಾಸದಲ್ಲಿ ಉಲ್ಲೇಖೀಸುವುದುಂಟು. ಹೀಗೆ ಬಿದ್ದ ಕಟ್ಟಿಗೆಯನ್ನು ಸಂಗ್ರಹಿಸಿಟ್ಟರೆ ಸಾಕಷ್ಟು ಹೋಮ ಹವನಗಳನ್ನು ಮಾಡಲು ಸಾಧ್ಯ. ಆದರೆ ನಾವಿದನ್ನು ಮಾಡುವುದಿಲ್ಲ.

ಈಗ ಗಣೇಶ ಚತುರ್ಥಿ ಬಂದಿದೆ. ಬಹುತೇಕ ಕಡೆ 1008 ಕಾಯಿ ಗಣಪತಿಹೋಮ, 108 ಕಾಯಿ ಗಣಪತಿಹೋಮ, 12 ಕಾಯಿ ಗಣಪತಿಹೋಮಗಳು ನಡೆಯುತ್ತವೆ. ಆದರೆ ಈ ಹೋಮಗಳು ಹುಟ್ಟಿದ್ದು ಪರಿಸರವನ್ನು ಶುದ್ಧಗೊಳಿಸಲು. ಆದರೆ ಕಾಲ ಕ್ರಮೇಣ ಹೋಮ ಮಾಡುವವರಿಗೆ ವಿಜ್ಞಾನದ ಅರಿವು ಇಲ್ಲ, ವಿಜ್ಞಾನದ ಅರಿವು ಇರುವವರಿಗೆ ಹೋಮದ ಅರಿವು ಇಲ್ಲ. ಇವೆರಡೂ ಪೂರಕವಾಗಿ ಇರಬೇಕಾದ ಕ್ಷೇತ್ರಗಳು ಕ್ರಮೇಣ ವೈರಿಗಳಂತೆ ಕಂಡುಬರುವುದೂ ಇದೆ. ಇದಕ್ಕೆ ಇನ್ನೂ ಅನೇಕ ಕಾರಣಗಳಿವೆ. ಅದನ್ನು ಬಿಡಿ…
ಆಧುನಿಕ ಕಾಲದಲ್ಲಿ ನಾವು ಎಲ್ಲವನ್ನೂ ಹೈಬ್ರಿಡ್‌ ದೃಷ್ಟಿಯಲ್ಲಿಯೇ ನೋಡುತ್ತಿದ್ದೇವೆ. ಇದನ್ನು ನಿಯಂತ್ರಿಸದಿದ್ದಲ್ಲಿ ನಾವು ಯಾವ ಉದ್ದೇಶವನ್ನು ಇಟ್ಟುಕೊಂಡು ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದೇವೆಯೋ ಅದರ ಮೌಲ್ಯವೇ ಇಲ್ಲದಾಗುತ್ತದೆ.
ವಚನಕಾರ ಅಲ್ಲಮಪ್ರಭು ಅವರು “ಎತ್ತಣ ಮಾಮರ ಎತ್ತಣ ಕೋಗಿಲೆ| ಎತ್ತಣಿಂದೆತ್ತ ಸಂಬಂಧವಯ್ಯ?’ ಎಂದು ಹೇಳಿದರು. ನಾವೀಗ “ಎತ್ತಣ ವಿಜ್ಞಾನ ಎತ್ತಣ ಹವನ| ಇತ್ತಣಿಂದತ್ತ ಸಂಬಂಧವಯ್ಯ||’ ಎಂದು ಹೇಳಬಹುದು.

- ಸ್ವಾಮಿ

Advertisement
Advertisement

Udayavani is now on Telegram. Click here to join our channel and stay updated with the latest news.

Next