Advertisement

ಹೂಗಳಿಂದ ಗಾಂಧೀಜಿ ಸತ್ಯದರ್ಶನ

10:48 AM Jan 17, 2019 | Team Udayavani |

ಬೆಂಗಳೂರು: ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘ ಗಣರಾಜ್ಯೋತ್ಸವದ ಅಂಗವಾಗಿ ಜ.18 ರಿಂದ 27ರ ವರೆಗೆ ‘ಲಾಲ್‌ಬಾಗ್‌ನಲ್ಲಿ ಫ‌ಲಪುಷ್ಪ ಪ್ರದರ್ಶನ- 2019’ ಹಮ್ಮಿಕೊಂಡಿದ್ದು, ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಈ ಬಾರಿಯ ಫ‌ುಲಪುಷ್ಪ ಪ್ರದರ್ಶನವನ್ನು ಗಾಂಧೀಜಿ ಅವರಿಗೆ ಅರ್ಪಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

Advertisement

ಈ ಹಿನ್ನೆಲೆಯಲ್ಲಿ ಹೂಗಳೇ ಗಾಂಧೀಜಿ ಅವರ ಬದುಕಿನ ಕುರಿತ ನೂರಾರು ಕಥೆಗಳನ್ನು ಹೇಳಲಿವೆ. ಬೃಹತ್‌ ಗಾಂಧಿ ಕನ್ನಡಕದ ಪ್ರತಿ ರೂಪದ ಪ್ರದರ್ಶನವೂ ಇರಲಿದೆ. ಈ ಬಾರಿಯ ಫ‌ಲಪುಷ್ಪ ಪ್ರದರ್ಶನಕ್ಕೆ 1.80 ಕೋಟಿ ರೂ. ವೆಚ್ಚಮಾಡಲಾಗಿದ್ದು, 5- 6 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆಯಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೋಟಗಾರಿಕೆ ಇಲಾಖೆಯ ನಿರ್ದೇಶಕ ವೈ.ಎಸ್‌. ಪಾಟೀಲ್‌, ಜ.18 ರಂದು ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಮೇಯರ್‌ ಗಂಗಾಂಬಿಕೆ ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ.

ಧ್ಯಾನ್ಯಸ್ಥ ಗಾಂಧಿ ಪ್ರತಿಮೆ: ಗಾಜಿನ ಮನೆಯನ್ನು ಪ್ರವೇಶಿಸುತ್ತಿದ್ದಂತೆ ನಾನಾ ವರ್ಣದ ಹೂಗಳಿಂದ ಸಿದ್ಧಪಡಿಸಿದ ಆರು ಅಡಿ ಪೀಠದ ಧ್ಯಾನಸ್ಥ ಗಾಂಧಿ ಪ್ರತಿಮೆ ಸಾರ್ವಜನಿಕರನ್ನು ಆಕರ್ಷಿಸಲಿದೆ. ಚಿತ್ರಕಲಾ ಪರಿಷತ್ತಿನ ಪ್ರಾಂಶುಪಾಲರಾದ ಪ್ರೊ.ಜಿತೇಂದ್ರ ಬಾವ್‌ನಿ ಫೈಬರ್‌ಗ್ಲಾಸ್‌ನಿಂದ ಇದನ್ನು ಸಿದ್ಧಪಡಿಸಿದ್ದಾರೆ.

ಜತೆ‌ಗೆ 6.4ಲಕ್ಷ ಹೂಗಳಿಂದ ಸಬರಮತಿ ಆಶ್ರಮ ರೂಪ ಪಡೆಯಲಿದ್ದು ಇದರ ಎಡಬದಿಗೆ ಹುಬ್ಬಳ್ಳಿಯ ಶಿವಲಿಂಗಪ್ಪ ಬಡಿಗೇರ್‌ ಸಿರಿಧಾನ್ಯಗಳಿಂದ ಸಿದ್ಧಪಡಿಸಿರುವ ಮೊಮ್ಮಗನೊಡನೆ ಗಾಂಧಿ ಪ್ರತಿಮೆ ನೋಡಗರನ್ನು ಆಕರ್ಷಿಸಲಿದೆ. ದೆಹಲಿಯ ರಾಜ್‌ ಘಾಟ್‌ನಲ್ಲಿರುವ ಮಹಾತ್ಮ ಗಾಂಧೀಜಿ ಅವರ ಮೂಲ ಸ್ಮಾರಕ ಪುಷ್ಪಾಂಲಕೃತ ಮಾದರಿಯನ್ನು ಯಥಾವತ್ತಾಗಿ ನಿರ್ಮಾಣವಾಗಲಿದೆ.

Advertisement

ದ್ವಿಮುಖ ಶಿಲ್ಪಕಲಾಕೃತಿ: ಗಾಜಿನ ಮನೆಯ ಹಿಂದಿನ ಭಾಗದ ಪ್ರದೇಶದಲ್ಲಿ ರಾಜ್‌ಘಾಟ್ ಎದುರಿಗೆ ಇರುವಂತೆ ಆರು ಅಡಿ ಎತ್ತರ ಪೀಠದ ಮೇಲೆ 3.5 ಅಡಿ ಎತ್ತರದ ಬಾ -ಬಾಪೂ ಅವರ ಮುಖಗಳನ್ನು ಒಳಗೊಂಡ, ಪ್ಲಾಸ್ಟರ್‌ ಆಫ್ ಪ್ಯಾರೀಸ್‌ ನಿಂದ ರೂಪಗೊಂಡ ದ್ವಿಮುಖ ಪ್ರತಿಮೆ ಪ್ರದರ್ಶನಗೊಳ್ಳಲಿದೆ.

ಚೆ‌ಂಡುಗಳಲ್ಲಿ ಅಮೂರ್ತ ಗಾಂಧಿ: ನೂರಾರು ಚೆಂಡುಗಳನ್ನು ಬಳಸಿ ನಿರ್ಮಿಸಲಾಗುವ ಗಾಂಧಿ ಅಮೂರ್ತ ಕಲಾಕೃತಿ ಇದಾಗಿದ್ದು, ಬರಿಗಣ್ಣಿಗೆ ಚಂಡುಗಳು ಮಾತ್ರ ಕಾಣುವಂತಿದ್ದು ಅರೆಗಣ್ಣು ಅಥವಾ ಕ್ಯಾಮರ ಕಣ್ಣಿನಿಂದ ನೋಡಿದಾಗ ಗಾಂಧೀಜಿ ಅವರ ಚಿತ್ರ ಗೋಚರವಾಗಲಿದೆ.

ಇದರ ಜತೆ ಪುಷ್ಪಗಳಿಂದ ನರ್ತಿಸುವ ರಾಷ್ಟ್ರಪಕ್ಷಿ ನವಿಲು ನೋಡುಗರನ್ನು ಆಕರ್ಷಿಸಲಿದೆ. ದುಬೈನ ಮಿರಾಕಲ್‌ ಗಾರ್ಡನ್ಸ್‌ನ ಹೃದಯಾಕಾರದ ಆಕರ್ಷಕ ಟೊರೇನಿಯಂ, ಇಂಪೇಶನ್ಸ್‌, ಪಿಟೊನಿಯಾ ಹೂ ಕುಂಡಗಳಿಂದ ಅಲಂಕೃತಗೊಂಡ ಪುಷ್ಪ ಕಮಾನುಗಳು ಪುಷ್ಪ ಪ್ರಿಯರನ್ನು ಆಕರ್ಷಿಸಲಿದೆ.

ಸಸ್ಯ ಸಂತೆ: ಪ್ರದರ್ಶನಕ್ಕೆ ಭೇಟಿ ನೀಡುವ ಸಸ್ಯ ಪ್ರೇಮಿಗಳಿಗೆ ಮತ್ತು ತೋಟಗಾರಿಕೆ ಆಸಕ್ತರಿಗಾಗಿ ಗಿಡಮೂಲಿಕೆಗಳು, ಅಲಂಕಾರಿಕ ಗಿಡಗಳು, ವಾಣಿಜ್ಯ ಹೂಗಳು, ಪ್ಲಾಂಟೇಷನ್‌ ಗಿಡಗಳು, ಬೊನ್ಸಾಯ್‌ ಮರಗಳು ಜತೆಗೆ ತೋಟಗಾರಿಕಾ ಪರಿಕರಗಳು ಫ‌ಲ ಪುಷ್ಪ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

ಸಾರ್ವಜನಿಕ ವಾಹನಗಳಿಗೆ ಪ್ರವೇಶವಿಲ್ಲ
ಫ‌ುಲ ಪುಷ್ಪ ಪ್ರದರ್ಶನದ ವೇಳೆ ಲಾಲ್‌ಬಾಗ್‌ನ ನಾಲ್ಕು ಪ್ರವೇಶ ದ್ವಾರಗಳ ಮುಖೇನ ಯಾವುದೇ ಸಾರ್ವಜನಿಕ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರು ವಾಹನಗಳನ್ನು ಶಾಂತಿನಗರ ಬಸ್‌ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಅಲ್‌-ಅಮೀನ್‌ ಕಾಲೇಜು ಮೈದಾನದಲ್ಲಿ ದ್ವಿಚಕ್ರವಾಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಲಾಲ್‌ಬಾಗ್‌ನ ಜೋಡಿ ರಸ್ತೆಯ ಮೈಸೂರು ಉದ್ಯಾನ ಕಲಾ ಸಂಘದ ಬಳಿ 5 ಎಕರೆ ಪ್ರದೇಶದಲ್ಲಿ ಕೇವಲ ಆಯ್ದ ವಾಹನಗಳು ನಿಲ್ಲಲು ಅವಕಾಶ ಕಲ್ಪಿಸಲಾಗಿದೆ. ಪ್ರದರ್ಶನ ವೀಕ್ಷಿಸಲು ಬರುವ ಶಾಲಾ ವಿದ್ಯಾರ್ಥಿಗಳ ವಾಹನಗಳಿಗೆ, ಅಂಬುಲೆನ್ಸ್‌ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಲಾಲ್‌ಬಾಗ್‌ ವೆಸ್ಟ್‌ ಗೇಟ್ ನಮ್ಮ ಮೆಟ್ರೊ ಸಂಪರ್ಕದಲ್ಲಿರುವುದರಿಂದ ಬೆಂಗಳೂರು ನಗರದ ಮೂಲೆ ಮೂಲೆಗಳಿಂದ ನಾಗರಿಕರು ಲಾಲ್‌ಬಾಗ್‌ ಅನ್ನು ತಲುಪಬಹುದು.

ಎಚ್ಚರಿಕೆ
•ನೀರಿನ ಬಾಟೆಲ್‌ಗ‌ಳು ಹಾಗೂ ಊಟಕ್ಕೆ ಉದ್ಯಾನದೊಳಗೆ ಅವಕಾಶವಿಲ್ಲ
•ಕುಡಿಯುವ ನೀರಿನ ಘಟಕ, ಮೊಬೈಲ್‌ ಶೌಚಾಲಯ ಉದ್ಯಾನದಲ್ಲೇ ವ್ಯವಸ್ಥೆ
•ಪ್ರತಿ 20 ನಿಮಿಷಕ್ಕೊಮ್ಮೆ ನೀರಿನ ಜಲಪಾತದ ವೀಕ್ಷಣೆ ವ್ಯವಸ್ಥೆ

ಕ್ಲಾಕ್‌ ರೂಂಗಳ ವ್ಯವಸ್ಥೆ
ಸಾರ್ವಜನಿಕರ ಅಗತ್ಯ ವಸ್ತುಗಳ ಭದ್ರತೆಗಾಗಿ ಲಾಲ್‌ಬಾಗ್‌ನ ನಾಲ್ಕು ಕಡೆಗಳಲ್ಲಿ ಕ್ಲಾಕ್‌ ರೂಂಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ 37 ಪ್ರಥಮ ಚಿಕಿತ್ಸಾ ಪಟ್ಟಿಗೆಗಳನ್ನು ಅಳವಡಿಕೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‌, ಹೋಂ ಗಾರ್ಡ್ಸ್‌ ಹಾಗೂ ಆಂತರಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 100 ಸಿಸಿ ಕ್ಯಾಮರಾವನ್ನೂ ಅಳವಡಿಸಲಾಗಿದೆ.

ಮಿಸ್ಟಿಂಗ್‌ ಸಿಸ್ಟಮ್‌
ಫ‌ಲಪುಷ್ಪ ಪ್ರದರ್ಶನದ ವೇಳೆ ಬಿಸಿಲಿನಿಂದಾಗಿ ಹೂಗಳು ಬಹುಬೇಗ ಬಾಡಬಾರದು ಎಂಬ ಕಾರಣಕ್ಕೆ ಗಾಜಿನ ಮನೆಯ ಒಳಾಂಗಣದಲ್ಲಿ ತಂಪಾದ ವಾತಾವರಣ ಕಲ್ಪಿಸಲು ಇಸ್ರೇಲ್‌ ಅತ್ಯಾಧುನಿಕ ತಂತ್ರಜ್ಞಾನದಿಂದ ವಿನ್ಯಾಸ ಗೊಂಡಿರುವ ‘ಮಿಸ್ಟಿಂಗ್‌ ಸಿಸ್ಟಂ’ ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next