Advertisement

ಗಾಂಧಿ-ಶಾಸ್ತ್ರಿ ಜಗತ್ತಿನ ಶ್ರೇಷ್ಠ ನಾಯಕರು

04:35 PM Oct 03, 2017 | Team Udayavani |

ದಾವಣಗೆರೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರು ತಮ್ಮ ತತ್ವಾದರ್ಶ, ಚಿಂತನೆಗಳ ಮೂಲಕ ಜಗತ್ತಿನ ನಾಯಕರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.
ಎಸ್‌. ಮಲ್ಲಿಕಾರ್ಜುನ್‌ ಬಣ್ಣಿಸಿದ್ದಾರೆ.

Advertisement

ಸೋಮವಾರ ಮಹಾನಗರ ಪಾಲಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. 

ಮಹಾತ್ಮ ಗಾಂಧೀಜಿ ಸತ್ಯ ಮತ್ತು ಅಹಿಂಸಾ ಮಂತ್ರದ ಪ್ರತೀಕವಾಗಿದ್ದಾರೆ. ಲಾಲ್‌ ಬಹದ್ದೂರ್‌ ಶಾಸ್ತ್ರಿ ಸರಳತೆ ಮತ್ತು ಸೌಜನ್ಯ, ಗೌರವಕ್ಕೆ ಇನ್ನೊಂದು ಹೆಸರೇ ಆಗಿದ್ದಾರೆ ಎಂದರು. 

ಪೋರಬಂದರಿನ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಗಾಂಧೀಜಿ ಇಂಗ್ಲೆಂಡ್‌ನ‌ಲ್ಲಿ ಉನ್ನತ ವಿದ್ಯಾಭ್ಯಾಸ
ಮಾಡಿ, ದಕ್ಷಿಣಾ ಆಫ್ರೀಕಾದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಾ ಅಲ್ಲಿ ಅಹಿಂಸಾ ಮಾರ್ಗದ ಹೋರಾಟ ಆರಂಭಿಸಿದರು.

ಭಾರತದ ಸ್ವಾತಂತ್ರ್ಯಕ್ಕಾಗಿ ಅದೇ ಮಾರ್ಗ ಮುಂದುವರಿಸಿದರು. ಅಸ್ಪೃಶ್ಯತೆ, ಜಾತಿ, ವರ್ಗ, ಅಸಮಾನತೆ ನಿರ್ಮೂಲನೆಗೆ ಅಪಾರ ಕಾಣಿಕೆ ಸಲ್ಲಿಸಿದರು. ಸಂಪೂರ್ಣ ಸ್ವರಾಜ್ಯ ಹಾಗೂ ರಾಮರಾಜ್ಯದ ಕನಸು ಕಂಡಿದ್ದ ಗಾಂಧೀಜಿಯವರು ಅದಕ್ಕಾಗಿಯೇ ಹೋರಾಟ ನಡೆಸಿದರು.  ಇಂದಿನ ಅನೇಕ ಜಟಿಲತೆ, ಸಮಸ್ಯೆಗೆ ಅವರ ಅನೇಕ ಚಿಂತನೆಗಳೇ ಉತ್ತಮ ಪರಿಹಾರೋಪಾಯ ಮಾರ್ಗಗಳಂತೆ ಇವೆ ಎಂದು ತಿಳಿಸಿದರು.

Advertisement

ಜೈ ಜವಾನ್‌ ಎಂಬ ಘೋಷಣೆ ಮೂಲಕ ಅನ್ನದಾತರಲ್ಲಿ, ಜೈ ಕಿಸಾನ್‌ ಘೋಷಣೆ ಮೂಲಕ ಸೈನಿಕರಲ್ಲಿ ಸ್ಫೂರ್ತಿ,
ಪ್ರೋತ್ಸಾಹ ತುಂಬಿದ ಮಾಜಿ ಪ್ರಧಾನಿ ಲಾಲ್‌ ಬಹದ್ದೂರು ಶಾಸ್ತ್ರಿಯವರು ಇಡೀ ಭಾರತವೇ ನೆನಪಿನಲ್ಲಿಟ್ಟುಕೊಳ್ಳುವಂತಹ ಸ್ಮರಣೀಯ ಆಡಳಿತ ನೀಡಿದ್ದಾರೆ. ಸರಳತೆ, ಸಜ್ಜನಿಕೆ, ಗೌರವದ ಪ್ರತೀಕವಾಗಿದ್ದಾರೆ.

ಇಬ್ಬರು ಮಹಾನ್‌ ನಾಯಕರು ಕಂಡಂತಹ ಗ್ರಾಮಾಭಿವೃದ್ಧಿಯ ಕನಸು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಸಾಗೋಣ ಎಂದು ಮನವಿ ಮಾಡಿದ ಅವರು ರಾಜ್ಯ ಸರ್ಕಾರ, ಜಿಲ್ಲಾಡಳಿತ ಅ ನಿಟ್ಟಿನಲ್ಲಿ
ಶ್ರಮಿಸುತ್ತಿದೆ ಎಂದು ತಿಳಿಸಿದರು.

ಉಪನ್ಯಾಸ ನೀಡಿದ ಡಾ| ಗಂಗಾಧರಯ್ಯ ಹಿರೇಮಠ, ದಕ್ಷಿಣಾ ಆಫ್ರೀಕಾದಿಂದ 1914 ರಲ್ಲಿ ಭಾರತಕ್ಕೆ ಹಿಂದಿರುಗಿ ಬಂದ ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ 34 ವರ್ಷಗಳ ಕಾಲ ನೀಡಿದ ಕಾಣಿಕೆ ಮರೆಯಲಿಕ್ಕೆ ಆಗದು. ಪ್ರತಿಯೊಬ್ಬರೂ ಒಗ್ಗೂಡಿ ಆಚರಿಸುವ ಯಾವುದಾದರೂ ಜಯಂತಿ ಇದ್ದರೆ ಅದು ಗಾಂಧಿ ಜಯಂತಿ ಮಾತ್ರ. ಇಡೀ ಭಾರತದ ಉದ್ಧಾರದ ಕನಸು ಕಂಡಿದ್ದ ಗಾಂಧೀಜಿ ನಿದ್ದೆ-ಊಟ- ಬಟ್ಟೆ ಇಲ್ಲದೆ ದೇಶದ ಸೇವೆಗೆ ತಮ್ಮನ್ನೇ ತೊಡಗಿಸಿಕೊಂಡವರು ಎಂದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಹಾತ್ಮಗಾಂಧೀಜಿ, ಶಾಸ್ತ್ರಿಯವರು ನೀಡಿದ ಮೌಲ್ಯಗಳು ಸದಾ ಪ್ರಸ್ತುತ. ಅವರು ಕಂಡಂತಹ ರಾಮರಾಜ್ಯದ ಕನಸು ನನಸಾಗಿಸುವ ಹಾದಿಯಲ್ಲಿ ತತ್ವಾದರ್ಶಗಳೊಂದಿಗೆ ಮುನ್ನಡೆಯೋಣ ಎಂದು ತಿಳಿಸಿದರು.

ಇಸ್ಲಾಂ ಧರ್ಮಗುರು ಇಬ್ರಾಹಿಂ ಸಖಾಫಿ ಮಾತನಾಡಿ, ದಾವಣಗೆರೆ ಕೋಮುಸಾಮರಸ್ಯ ಕಾಪಾಡಿಕೊಂಡು ಬರುತ್ತಿರುವ ವಿಭಿನ್ನ ಜಿಲ್ಲೆಯಾಗಿದೆ. ಇನ್ನೂ ಹೆಚ್ಚು ಸಾಮರಸ್ಯವ ಸಾಧಿಸುವ ಮೂಲಕ ಇಡೀ ದೇಶಕ್ಕೆ ಮಾದರಿ
ಜಿಲ್ಲೆಯನ್ನಾಗಿ ಮಾಡೋಣ ಎಂದು ಮನವಿ ಮಾಡಿದರು.

ರವಡೆಂಟ್‌ ಫಾ| ಸೀವನ್‌ ಡೆಸಾ ಮಾತನಾಡಿ, ಅದೃಶ್ಯವಾಗಿರುವ ದೇವರು ನಮಗೆ ಮಹಾತ್ಮಗಾಂಧೀಜಿ ರೂಪದಲ್ಲಿ ಸದೃಶ್ಯವಾಗಿ ಕಾಣ ಸಿಗುತ್ತಾರೆ. ನಮ್ಮ ಆಲೋಚನೆ, ಕೆಲಸ, ನಿಷ್ಟೆ, ಪ್ರಾಮಾಣಿಕತೆಯಲ್ಲಿ ಸ್ವತ್ಛತೆಯ ಕಾಪಾಡಿಕೊಳ್ಳುವ ಮೂಲಕ ರಾಮ ಹಾಗೂ ಸ್ವರ್ಗ ಸಾಮ್ರಾಜ್ಯವನ್ನೇ ನಿರ್ಮಾಣ ಮಾಡೋಣ ಎಂದು ಆಶಿಸಿದರು.

ಲಲಿತ್‌ಕುಮಾರ್‌ ಜೈನ್‌ ಮಾತನಾಡಿ, ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ಜೀವನ ಸಾಗಿಸುವಂತಾಗಬೇಕು. ನಾವು ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಬೇಕು ಎಂದು ಮನವಿ ಮಾಡಿದರು. ವಿಧಾನ ಪರಿಷತ್‌ ಸದಸ್ಯ ಕೆ. ಅಬ್ದುಲ್‌
ಜಬ್ಟಾರ್‌, ಮೇಯರ್‌ ಅನಿತಾಬಾಯಿ, ಉಪ ಮೇಯರ್‌ ಜಿ. ಮಂಜುಳಮ್ಮ, ಸದಸ್ಯರಾದ ದಿನೇಶ್‌ ಕೆ. ಶೆಟ್ಟಿ, ಜಿ.ಬಿ. ಲಿಂಗರಾಜ್‌, ಆವರಗೆರೆ ಉಮೇಶ್‌, ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಇತರರು ಇದ್ದರು. ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ, ಈಶ್ವರಮ್ಮ ಶಾಲಾ ಮಕ್ಕಳು ಸರ್ವ ಧರ್ಮ ಪ್ರಾರ್ಥಿಸಿದರು. ಬಿ.ಎಲ್‌.
ಗಂಗಾಧರ್‌ ನಿಟ್ಟೂರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next