Advertisement

Gadaga: ಕವಿತೆಗಳು ಮಾನವೀಯ ಅಂತಃಕರಣದ ಒರತೆಗಳಾಗಲಿ-ಜಯಂತ ಕಾಯ್ಕಿಣಿ

05:46 PM Dec 14, 2023 | Team Udayavani |

ಗದಗ: ಜೀವನಾನುಭವಗಳನ್ನು ಎರಕ ಹೊಯ್ದ ಕಾವ್ಯ ಬಹುಕಾಲ ಬಾಳುತ್ತದೆ. ಕವಿಯಾದವನು ಸುತ್ತಲಿನ ಜಗತ್ತನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅನೇಕ ಸಂಗತಿಗಳು ಗೋಚರಿಸುತ್ತವೆ. ಅವುಗಳನ್ನೇ ವಸ್ತುವಾಗಿಸಿಕೊಂಡಾಗ ಸಾಮಾಜಿಕ
ಸಂಬಂಧದೊಂದಿಗೆ ಕವಿತೆ ಹೊಸೆಯಲ್ಪಡುತ್ತದೆ. ಇಂತಹ ಕವಿತೆಗಳು ಮಾನವೀಯ ಅಂತಃಕರಣದ ಒರತೆಗಳಾಗಿ ಗೋಚರಿಸುತ್ತವೆ ಎಂದು ಕವಿ, ಕತೆಗಾರ ಜಯಂತ ಕಾಯ್ಕಿಣಿ ಹೇಳಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅನ್ವೇಷಣೆ ಪ್ರಕಾಶನ ಗದಗ ಸಹಯೋಗದಲ್ಲಿ ನಗರದ ಡಿ.ಜಿ.ಎಂ. ಆಯುರ್ವೇದ
ಮಹಾವಿದ್ಯಾಲಯದಲ್ಲಿ ಜರುಗಿದ ಸಂತೋಷ ಅಂಗಡಿ ಅವರು ಬರೆದ ಭವದ ಅಗುಳಿ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅಂತರಂಗದ ನುಡಿಗಳಿಗೆ ಅಕ್ಷರ ತೋರಣ ಕಟ್ಟುವ ಕಾರ್ಯ ಯುವ ಬರಹಗಾರರಿಂದ ಜರುಗಬೇಕು. ಭವದ ಅಗುಳಿ ಕವಿತಾ ಸಂಕಲನ ಮೂಲಕ ಸಂತೋಷ ಅಂಗಡಿಯವರು ಭರವಸೆಯ ಕವಿಯಾಗಿ ಹೊರ ಹೊಮ್ಮಿದ್ದಾರೆ. ಗಂಗಾಧರ ಚಿತ್ತಾಲ, ಸು.ರಂ.ಎಕ್ಕುಂಡಿ ಮತ್ತು ವಿ.ಜಿ. ಭಟ್ಟರ ಅವರ ಕವಿತೆಗಳನ್ನು ಜನ್ಮಶತಮಾನೋತ್ಸವ ಅಂಗವಾಗಿ ಮೆಲಕು ಹಾಕುವ ಕಾರ್ಯ ನಡೆಯಬೇಕು ಎಂದರು.

ವಿಮರ್ಶಕ ಜಿ.ಪಿ. ಬಸವರಾಜು ಮಾತನಾಡಿ, ಕಾವ್ಯ ಸಂಕ್ಷಿಪ್ತತೆ, ನಿಖರತೆ ಮತ್ತು ರೂಪಕಗಳನ್ನು ಹೊಂದಿ ಭಾಷಾ ಸೊಗಡಿನಿಂದ ಕೂಡಿರಬೇಕು. ಜೀವಪರ ಕಾಳಜಿ ಕವಿಯ ಧ್ಯೇಯವಾಗಿರಬೇಕು. ಭವದ ಅಗುಳಿಯ ಕವಿತೆಗಳು ಕಾವ್ಯದ ಜತೆಗೆ ಮುಖಾಮುಖಿ ಯಾಗುವ ಸಂದರ್ಭವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ ಎಂದರು.

ಅನ್ವೇಷಣೆ ಪ್ರಕಾಶನದ ಆರ್‌.ಜಿ. ಹಳ್ಳಿ ನಾಗರಾಜ ಮಾತನಾಡಿ, ಸಾಹಿತ್ಯ ಪತ್ರಿಕೆಗಳ ಸಂಖ್ಯೆ ಕಡಿಮೆಯಾಗಿವೆ. ಅನ್ವೇಷಣೆ ಸಾಹಿತ್ಯ
ಪತ್ರಿಕೆ ಓದುಗರಲ್ಲಿ ಸಾಹಿತ್ಯಾಭಿರುಚಿ ಬೆಳೆಸಿ ಚಿಂತನೆಗೆ ಹಚ್ಚುವಲ್ಲಿ ಕಾರ್ಯ ಮಾಡುತ್ತಿದೆ. ಯುವಬರಹಗಾರರನ್ನು ಗುರುತಿಸಿ
ಪ್ರೋತ್ಸಾಹಿಸುವ, ಕೃತಿ ಪ್ರಕಟಿಸುವ ಕಾರ್ಯ ಮಾಡುತ್ತಿದೆ. ಭರವಸೆಯ ಬರಹಗಾರರು ಕನ್ನಡ ಸಾಹಿತ್ಯವನ್ನು ಹೊಸದಿಕ್ಕಿನತ್ತ ಕೊಂಡೊಯ್ಯುವ ಕಾರ್ಯ ಮಾಡಬೇಕು ಎಂದರು.

Advertisement

ಚಂದ್ರಶೇಖರ ವಸ್ತ್ರದ ಮಾತನಾಡಿ, ಗದಗ ಪರಿಸರ ಸಾಹಿತ್ಯ ಸಂಸ್ಕೃತಿಗೆ ಪ್ರಾಚೀನ ಕಾಲದಿಂದಲೂ ಹೆಸರುವಾಸಿಯಾಗಿದೆ. ಈ
ಹಿನ್ನೆಲೆಯಲ್ಲಿ ಸಂತೋಷ ಅಂಗಡಿಯವರು ತಮ್ಮ ಕಾವ್ಯದ ಮೂಲಕ ಹೊಸ ಭರವಸೆಯ ಕವಿಯಾಗಿ ಹೊಮ್ಮಿರುವುದು ಉತ್ತಮ ಬೆಳವಣಿಗೆಯಾಗಿದೆ. ಮತ್ತಷ್ಟು ಮೌಲಿಕ ಕೃತಿಗಳು ಅವರಿಂದ ಹೊರ ಬರಲಿ ಎಂದು ಆಶಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಸಂತೋಷ ಬೆಳವಡಿ, ಕವಿ ಸಂತೋಷ ಅಂಗಡಿ, ರವಿ ದೇವರಡ್ಡಿ ಮಾತನಾಡಿದರು. ನಿರ್ಮಲಾ ಶೆಟ್ಟರ ನಿರೂಪಿಸಿದರು.

ಕೆ.ಎಚ್‌. ಬೇಲೂರ, ಅನ್ನದಾನಿ ಹಿರೇಮಠ, ದತ್ತಪ್ರಸನ್ನ ಪಾಟೀಲ, ಜಿ.ಬಿ. ಪಾಟೀಲ, ಎಚ್‌.ಬಿ. ಪೂಜಾರ, ರತ್ನಕ್ಕ ಪಾಟೀಲ, ಎಂ.ಜಿ. ಗಚ್ಚಣ್ಣವರ, ಆರ್‌.ಎಲ್‌. ಪೋಲಿಸಪಾಟೀಲ, ಬಿ.ಎ. ಕೆಂಚರಡ್ಡಿ, ಪುಂಡಲೀಕ ಕಲ್ಲಿಗನೂರ, ಟಿ.ಎಸ್‌.ಗೊರವರ, ನಿಂಗು ಸೊಲಗಿ, ಮಂಜುಳಾ ವೆಂಕಟೇಶಯ್ಯ, ಶಿಲ್ಪಾ ಮ್ಯಾಗೇರಿ, ಪದ್ಮಾ ಕಬಾಡಿ, ಬಸವರಾಜ ಗಣಪ್ಪನವರ ಇದ್ದರು. ಡಾ|ಚಿದಾನಂದ ಕಮ್ಮಾರ ಪರಿಚಯಿಸಿದರು. ಭಾಗ್ಯ ಪತ್ತಾರ ಹಾಡಿದರು. ಕಿಶೋರಬಾಬು  ನಾಗರಕಟ್ಟಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next