ಗದಗ: ಮಲಪ್ರಭೆ ಹಾಗೂ ಬೆಣ್ಣಿಹಳ್ಳ ಸೃಷ್ಟಿಸಿದ್ದ ಪ್ರವಾಹ ನರಗುಂದ ಮತ್ತು ರೋಣ ತಾಲೂಕಿನ ವಿವಿಧ ಗ್ರಾಮಗಳ ಜನರ ಜೀವನದ ಮೇಲಷ್ಟೇ ಪರಿಣಾಮ ಬೀರಿಲ್ಲ. ಜೊತೆಗೆ ಈ ಭಾಗದ ಶಾಲಾ ಮಕ್ಕಳ ಶೈಕ್ಷಣಿಕ ಹಕ್ಕನ್ನೇ ಕಸಿದುಕೊಂಡಿದೆ. ವಿವಿಧೆಡೆ ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಶಾಲೆಗಳು ಇಂದೋ-ನಾಳೆಯೋ ಬೀಳುವ ಹಂತಕ್ಕೆ ತಲುಪಿದ್ದು, ಸಾವಿರಾರು ವಿದ್ಯಾರ್ಥಿಗಳನ್ನು ಬೀದಿಗೆ ತಂದು ನಿಲ್ಲಿಸಿದೆ.
Advertisement
ಜಿಲ್ಲೆಯ ನರಗುಂದ ತಾಲೂಕಿನ 8 ಮತ್ತು ರೋಣ ತಾಲೂಕಿನ 16 ಗ್ರಾಮಗಳಲ್ಲಿ ಮಲಪ್ರಭಾ ನದಿ ಹಾಗೂ ಬೆಣ್ಣಿಹಳ್ಳದಿಂದ ಉಂಟಾಗಿದ್ದ ನೆರೆಯಿಂದ ಆದ ಹಾನಿ ಅಷ್ಟಿಷ್ಟಲ್ಲ. ಜಿಲ್ಲೆಯ 23 ಗ್ರಾಮಗಳ ನೂರಾರು ಮನೆಗಳೊಂದಿಗೆ ಆಯಾ ಗ್ರಾಮ ಶಾಲಾ ಕೊಠಡಿಗಳು ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ಜನರನ್ನು ನವ ಗ್ರಾಮಗಳಿಗೆ ಸ್ಥಳಾಂತರಿಸಲಾಗಿದೆ. ಗ್ರಾಮಸ್ಥರೊಂದಿಗೆ ಶಾಲೆಗಳೂ ಸ್ಥಳಾಂತರವಾಗಿದ್ದರೂ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಟ್ಟಡಗಳಿಲ್ಲ. ಹೀಗಾಗಿ ಒಂದೇ ತರಗತಿ ಕೊಠಡಿಯಲ್ಲಿ ಎರೆಡು-ಮೂರು ತರಗತಿಗಳು ನಡೆದರೆ, ಇನ್ನಿತರೆ ಶಾಲೆಗಳಲ್ಲಿ ಮಕ್ಕಳು ಕಾರಿಡಾರ್ನಲ್ಲೇ ಕುಳಿತು ಪಾಠ ಕೇಳುವ ಅನಿವಾರ್ಯತೆ ಸೃಷ್ಟಿಸಿದೆ.
Related Articles
Advertisement
ಆ ಪೈಕಿ ನರಗುಂದ ತಾಲೂಕಿನ 8 ಗ್ರಾಮಗಳ 21 ಸರಕಾರಿ ಪ್ರಾಥಮಿಕ, 3 ಅನುದಾನಿ ಹಾಗೂ 3 ಅನುದಾನ ರಹಿತ ಮತ್ತು ಪ್ರೌಢ ಶಾಲೆಗಳಲ್ಲಿ 3 ಸರಕಾರಿ, 4 ಅನುದಾನಿತ ಶಾಲೆಗಳು ಸೇರಿದಂತೆ 3,997 ಮಕ್ಕಳ ಪುಸ್ತಕಗಳು ಹಾನಿಯಾಗಿವೆ. ರೋಣ ತಾಲೂಕಿನ 16 ಗ್ರಾಮಗಳ 23 ಸರಕಾರಿ ಶಾಲೆಗಳ ಸುಮಾರು 2 ಸಾವಿರ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳು ನೆರೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಕೆಲವರು ಪ್ರವಾಹ ಇಳಿದ ಬಳಿಕ ಮನೆಯಲ್ಲಿ ಅಳಿದುಳಿದ ಪುಸ್ತಕಗಳನ್ನು ತಂದು, ಬಿಸಿಲಿಗಿ ಒಣಗಿಸಿಕೊಂಡಿದ್ದಾರೆ. ಹೀಗಾಗಿ ಶಾಲೆಯ ಬೆರಳೆಣಿಕೆಯಷ್ಟು ಮಕ್ಕಳಲ್ಲಿ ಒಂದೆರಡು ಪಠ್ಯ ಪುಸ್ತಕಗಳಿದ್ದರೆ ಅದೇ ಹೆಚ್ಚು. ಪಠ್ಯ ಪುಸ್ತಕಗಳಿಲ್ಲದ ಮಕ್ಕಳು ಸಹಪಾಠಿಗಳಿಂದ ಪುಸ್ತಕಗಳನ್ನು ಪಡೆದು ಅಧ್ಯಯನ ನಡೆಸುವಂತಾಗಿದೆ. ಪುಸ್ತಕಗಳ ಕೊರತೆಯಿಂದ ತಾವು ಮಾಡುವ ಬೋಧನೆಯೂ ಪರಿಣಾಮಕಾರಿಯಾಗುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಶಿಕ್ಷಕರು.