Advertisement

ತಂತ್ರಾಂಶ ಬಳಸಿ ಭವಿಷ್ಯದ ಕನ್ನಡ ಕಟ್ಟಿ: ಟಿ.ಎಸ್‌.ನಾಗಾಭರಣ

05:00 PM Jan 19, 2021 | Team Udayavani |

ಕಲಬುರಗಿ: ಕನ್ನಡ ನಾಡು, ನುಡಿಯ ಈ ಹಿಂದಿನ ವೈಭವವನ್ನು ಮೆಲುಕು ಹಾಕುವುದಷ್ಟೇ ನಮ್ಮ ಕೆಲಸವಾಗಬಾರದು. ಭವಿಷ್ಯದ ಕನ್ನಡ ಕಟ್ಟುವ ಹೊಣೆ
ನಮ್ಮ ಮೇಲಿದ್ದು, ಇದಕ್ಕಾಗಿ ಕನ್ನಡದ ತಂತ್ರಾಂಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ ಎಂದು ಖ್ಯಾತ ನಿರ್ದೇಶಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹೇಳಿದರು.

Advertisement

ಗುಲಬರ್ಗಾ ವಿಶ್ವವಿದ್ಯಾಯಲದ ಹರಿಹರ ಸಭಾಂಗಣದಲ್ಲಿ ಸೋಮವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾ ರ ಮತ್ತು ವಿವಿಯ ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ “ಕವಿರಾಜಮಾರ್ಗ ಪರಿಸರದ ಭಾಷೆ ಮತ್ತು ಸಂಸ್ಕೃತಿ’ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಪ್ರತಿಯೊಬ್ಬರ ಕೈಗಳಲ್ಲೂ ಮೊಬೈಲ್‌ಗ‌ಳು ಇವೆ. ಈ ಹಿಂದೆ  ಚಂದಮಾಮವನ್ನು ತೋರಿಸಿ ಮಗುವಿಗೆ ತುತ್ತು ನೀಡುತ್ತಿದ್ದ ತಾಯಿ ಸಹ, ಈಗ ಆ ಮಗುವಿನ ಕೈಯಲ್ಲಿ ಮೊಬೈಲ್‌ ಕೊಟ್ಟು ಅನ್ನ ತಿನ್ನಿಸುತ್ತಿದ್ದಾಳೆ. ಇಂಗ್ಲಿಷ್‌ ಪದ್ಯ ಕೇಳುತ್ತಾ ಮಗು ಅನ್ನ ತಿನ್ನುತ್ತದೆ. ಆ ಮಗು ಅದೇ ಇಂಗ್ಲಿಷ್‌ ಪದ್ಯ ಹಾಡಲು
ಶುರು ಮಾಡುತ್ತದೆ. ಇಲ್ಲಿ ಇಂಗ್ಲಿಷ್‌ ಹಾಡು, ಪದ್ಯ ಹಚ್ಚುವ ಬದಲು ಕನ್ನಡದ ಪದ್ಯ ಹಚ್ಚಿಕೊಡಿ. ಈ ಮೂಲಕ ಅನ್ನದ ತುತ್ತಿನ ಜತೆಗೆ ಕನ್ನಡವನ್ನೂ ಮಗುವಿಗೆ ತಿನ್ನಿಸಬೇಕಿದೆ ಎಂದು ಸಲಹೆ ನೀಡಿದರು.

ಶಿಲಾಯುಗದಲ್ಲಿ ಸಂವಹನಕ್ಕಾಗಿ ಚಿತ್ರ, ಸನ್ನೆಗಳನ್ನು ಬಳಸಲಾಗುತ್ತಿತ್ತು. ಇಂದಿನ ಸಾಮಾಜಿಕ ಜಾಲತಾಣಗಳು, ಆ್ಯಪ್‌ ಗಳಲ್ಲಿ ಅಂತಹದ್ದೇ ಭಾಷೆ ಪುನರಾವರ್ತನೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ರೋಬೋಟ್‌ಗಳೇ ಎಲ್ಲ ಕೆಲಸವನ್ನು ಮಾಡುವ ಕಾಲ ಬರಬಹುದು. ಹೀಗಾಗಿ ನಮ್ಮ ಮುಂದಿನ ಸವಾಲು ಹಾಗೂ ನಮಗೆ ಉಳಿದ ಸಾಧ್ಯತೆಗಳೇನು ಎಂಬುದನ್ನು ಮುಂದಾಲೋಚನೆ ಮಾಡಬೇಕಿದೆ.

ಕನ್ನಡದಲ್ಲಿ ಲಭ್ಯವಿರುವ ಆ್ಯಪ್‌ಗ್ಳು, ಕನ್ನಡತವನ್ನು ಹೆಚ್ಚು-ಹೆಚ್ಚು ಬಳಕೆಗೆ ಈಗಿನಿಂದಲೇ ನಾವು ಒಗ್ಗಿಕೊಳ್ಳಬೇಕು ಎಂದರು. ಕೇವಲ ರಸ್ತೆ ಮತ್ತು ಕಟ್ಟಡಗಳಿಂದ
ಅಭಿವೃದ್ಧಿ ಅಳೆಯಲು ಬರುವುದಿಲ್ಲ. ನಮ್ಮ ಕನ್ನಡ ಸಂಸ್ಕೃತಿ, ಪರಂಪರೆ ಉಳಿಸಿಕೊಂಡು ಹೋಗುವುದೇ ಅಭಿವೃದ್ಧಿ. ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯೇ ನಿಜವಾದ ಅಭಿವೃದ್ಧಿ ಎಂದು ಪ್ರತಿಪಾದಿಸಿದರು.

ರಾಷ್ಟ್ರಕೂಟರ ಕವಿರಾಜ ಮಾರ್ಗಕಾರ ಇಡೀ ನಾಡಿನ ಸಾಹಿತ್ಯ, ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದ್ದಾನೆ. ಈ ನೆಲದ ಕಲೆ, ಸಾಹಿತ್ಯ, ಸಂಗೀತವೇ ಕರ್ನಾಟಕಕ್ಕೆ ಹೆದ್ದಾರಿಯಾಗಿದೆ. ಶತಮಾನದಿಂದಲೂ ಕನ್ನಡಿಗರು ಎಲ್ಲವನ್ನೂ ಒಳಗೊಳ್ಳುವ ಮನೋಭಾವ ಹೊಂದಿದವರೇ ಆಗಿದ್ದಾರೆ. ಮೈಸೂರು ಕರ್ನಾಟಕ, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಎಂದು ಹೀಗೆ ಹರಿದು ಹಂಚಿ ಹೋಗಿರುವ ಮನೋಭಾವ, ಮನಃ ಸ್ಥಿತಿ ಬಿಟ್ಟು ನಾವೆರಲ್ಲೂ ಒಂದೇ ಎಂದು ಒಗ್ಗೂಡುವ ಕೆಲಸ ಆಗಬೇಕಿದೆ ಎಂದರು.

Advertisement

ಆಶಯ ಭಾಷಣ ಮಾಡಿದ ವಿಶ್ರಾಂತ ಪ್ರಾಧ್ಯಾಪಕ ಶಾಂತಿನಾಥ ದಿಬ್ಬದ, ರಾಷ್ಟ್ರಕೂಟರ ಕಾಲದಲ್ಲಿ ರಚನೆಯಾದ “ಕವಿರಾಜಮಾರ್ಗ’ ಕೃತಿ ಕನ್ನಡದ ಅಸ್ತಿತ್ವದ ದೊಡ್ಡ ದಾಖಲೆಯಾಗಿದೆ. ಕನ್ನಡ ನಾಡಿನ ಪರಿಪೂರ್ಣ ಕತೆ ಈ ಕೃತಿಯಲ್ಲಿ ಇದೆ. ಕವಿರಾಜಮಾರ್ಗಕಾರ ತನಗಿಂತಲೂ ಮುಂಚೆ 10 ಕನ್ನಡ ಕವಿಗಳು ಇದ್ದರು ಎಂದು ಕೃತಿಯಲ್ಲಿ ದಾಖಲಿಸಿದ್ದಾನೆ. ಈಗಿನ ಸಂಶೋಧಕರು 20 ಕಿ.ಮೀಗೆ ಭಾಷೆ ಶೈಲಿ ಬದಲಾಗುತ್ತದೆ ಹೇಳುತ್ತಾರೆ. ಇದನ್ನು ಆಗಲೇ ಕವಿರಾಜ ಮಾರ್ಗದ ಕೃತಿ ದಾಖಲಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗುವಿವಿ ಪ್ರಭಾರಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ.ಪೋತೆ ಮಾತನಾಡಿದರು. ನಂತರ ಎರಡು ಗೋಷ್ಠಿಗಳು ನಡೆದವು. “ಕವಿರಾಜ ಮಾರ್ಗಕಾರನ ಪರಿಸರದ ಕನ್ನಡ ಮತ್ತು ಭಾಷೆ ಮತ್ತು ಸಂಸ್ಕೃತಿ’ ಬಗ್ಗೆ ಹಂಪಿಯ ಕನ್ನಡ ವಿವಿ ಡಾ.ಕೆ. ರವೀಂದ್ರನಾಥ ಮತ್ತು “ಕವಿರಾಜ ಮಾರ್ಗೋತ್ತರ ಪರಿಸರದ ಪರಿಸರದ ಕನ್ನಡ ಮತ್ತು ಭಾಷೆ ಮತ್ತು ಸಂಸ್ಕೃತಿ’ ಬಗ್ಗೆ ಡಾ.ಶ್ರೀಶೈಲ ನಾಗರಾಳ, “ಕಲಬುರಗಿ ಕನ್ನಡದ ಮೇಲೆ ಅನ್ಯಭಾಷೆ ಪ್ರಭಾವ’ ಕುರಿತು ಕರ್ನಾಟಕ ಕೇಂದ್ರೀಯ ವಿವಿಯ ಡಾ.ಟಿ.ಡಿ.ರಾಜಣ್ಣ ಮತ್ತು “ಗಡಿನಾಡ ಕನ್ನಡ ಭಾಷೆ, ಸಾಮರಸ್ಯ’ ಬಗ್ಗೆ ಹಿರಿಯ ಪತ್ರಕರ್ತ ಡಾ.ಶ್ರೀನಿವಾಸ ಸಿರನೂರಕರ ವಿಚಾರ ಮಂಡಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಗುವಿವಿ ಸಿಂಡಿಕೇಟ್‌ ಸದಸ್ಯ ಲಕ್ಷ್ಮಣ ರಾಜನಾಳಕರ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ರಾಜೇಂದ್ರ ಯರನಾಳೆ, ಬಸವಲಿಂಗಪ್ಪ ಅಲ್ಹಾಳ, ಡಾ.ಸೂರ್ಯಕಾಂತ ಸುಜ್ಯಾತ್‌, ಪ್ರೊ. ಈಶ್ವರ ಇಂಗನ್‌, ಡಾ.ಬಿ.ಎಂ.ಕನಹಳ್ಳಿ ಸೇರಿ ಹಲವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next