Advertisement

ಮತದಾನ ಅರಿವಿಗೆ ಕೈ ಜೋಡಿಸಿದ ಭಾವಿ ಪ್ರಜೆಗಳು

11:27 AM Apr 05, 2019 | pallavi |
ಬೆಂಗಳೂರು: ಪ್ರಜಾಪ್ರಭುತ್ವ, ಚುನಾವಣೆ ಬಗ್ಗೆ “ಎಸಿ ಕೊಠಡಿ’ಗಳಲ್ಲಿ ಕುಳಿತು ಚರ್ಚೆ ಮಾಡುತ್ತಾರೆ. ಮತದಾನಕ್ಕೆ ಮಾತ್ರ ಬರಲ್ಲ ಎಂಬ ಬೆಂಗಳೂರಿಗರ ಮೇಲಿನ ಅಪವಾದ ದೂರ ಮಾಡಲು ಪಣ ತೊಟ್ಟಿರುವ ಚುನಾವಣಾ ಆಯೋಗ, ಮತದಾನದ ಬಗ್ಗೆ ಜಾಗೃತಿ ಮೂಡಿಸಲು “ಭವಿಷ್ಯದ ನಾಯಕ’ ರಾಗಿರುವ ವಿದ್ಯಾರ್ಥಿಗಳ ಸೇವೆ ಪಡೆಯುತ್ತಿದೆ.
ಇದಕ್ಕಾಗಿ ವರ್ಷಾರಂಭದಿಂದಲೇ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಶಾಲೆ, ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು 4,652ಕ್ಕೂ ಹೆಚ್ಚು “ಮತದಾರರ ಸಾಕ್ಷರತಾ ಕ್ಲಬ್‌” (ಇಎಲ್‌ಸಿ) ಚುನಾವಣಾ ಆಯೋಗದ ಜಾಗೃತಿ ತಂಡ (ಸ್ವೀಪ್‌) ಆರಂಭಸಿದೆ. ಈ ಕ್ಲಬ್‌ಗ ಒಬ್ಬ ವಿದ್ಯಾರ್ಥಿಯನ್ನು ಕ್ಯಾಂಪಸ್‌ ರಾಯಭಾರಿ ಹಾಗೂ ಸಂವಿಧಾನ ಪರಿಚಯವಿರುವ ಶಿಕ್ಷಕರನ್ನು ಸಮಾಲೋಚಕರಾಗಿ ನೇಮಕ ಮಾಡಿದ್ದಾರೆ.  ರಾಯಭಾರಿಯು ತನ್ನೊಡನೆ ನಾಲ್ಕು ಗೆಳೆಯರನ್ನು ಸೇರಿಸಿಕೊಂಡು ಮತದಾನ ಕುರಿತು ವಿವಿಧ ಜಾಗೃತಿ ಕೆಲಸ ಮಾಡುತ್ತಿದ್ದಾರೆ.
ರಾಯಭಾರಿಗಳ ಕೊಡುಗೆ ಏನು?: “ಮತದಾರರ ಸಾಕ್ಷರತಾ ಕ್ಲಬ್‌’ನಲ್ಲಿ 9ನೇ ತರಗತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳು ಕ್ಯಾಂಪಸ್‌ ರಾಯಭಾರಿಗಳಿದ್ದಾರೆ. ಈ ರಾಯಭಾರಿಗಳು ಜನವರಿಯಿಂದ ಮತದಾರರ ಪಟ್ಟಿಗೆ ನೋಂದಣಿ ಅರ್ಜಿಗಳನ್ನು ತುಂಬಿಸಿದ್ದಾರೆ. ಚುನಾವಣೆ ಘೋಷಣೆಯಾದ ನಂತರ ತಮ್ಮ ಶಾಲೆ, ಕಾಲೇಜು ಸುತ್ತ, ಮನೆ ಅಕ್ಕ ಪಕ್ಕದ ಬಡಾವಣೆಗಳಲ್ಲಿ ಜಾಥಾ, ಬೀದಿ ನಾಟಕ, ಪ್ರತಿಜ್ಞೆ ಸ್ವೀಕಾರದಂತಹ ವಿವಿಧ ಕಾರ್ಯಕ್ರಮ ನಡೆಸಿ ಮತದಾರರ ಜವಾಬ್ದಾರಿ ಹಾಗೂ ಕರ್ತವ್ಯ ತಿಳಿಸುತ್ತಿದ್ದಾರೆ. ಮುಂದೆ ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು ಹೇಗೆ, ಬೂತ್‌ ಯಾವುದೆಂದು ತಿಳಿಯುವ ವಿಧಾನಗಳನ್ನು ಜನರಿಗೆ ತಿಳಿಸಿಕೊಡಲಿದ್ದಾರೆ.
ನಾಲ್ಕು ಲಕ್ಷಕ್ಕೂ ಅಧಿಕ ಸಂಕಲ್ಪ ಪತ್ರಕ್ಕೆ ಸಹಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತದಾನ ವ್ಯಾಪ್ತಿಗೆ ಒಳಪಡದ 9, 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಡಿ “ಮತದಾನ ಸಂಕಲ್ಪ ಪತ್ರ’ ನೀಡಿ ತಮ್ಮ ಪೋಷಕರಿಂದ ಸಹಿ ಹಾಕಿಸಿಕೊಂಡು ಬಂದು ಜಾಗೃತಿ ಕಾರ್ಯಕ್ರಮದ ಸಂಯೋಜಕ ಶಿಕ್ಷಕರಿಗೆ ನೀಡಲು ಸೂಚಿಸಲಾಗಿತ್ತು.
ಈ ಪತ್ರದಲ್ಲಿ “ಮತದಾನ ನಡೆಯುವ ದಿನದಂದು ತಪ್ಪದೇ ನಾವು ಮತಗಟ್ಟೆಗೆ ತೆರಳಿ ಮತದಾನ ಮಾಡುತ್ತೇವೆ, ಜತೆಗೆ ಇತರರನ್ನು ಮತದಾನಕ್ಕೆ ಪ್ರೇರೇಪಿಸುತ್ತೇವೆ’ ಎಂಬಿತ್ಯಾದಿ ಹೇಳಿಕೆಗಳಿದ್ದು, ಅವುಗಳಿಗೆ ಒಪ್ಪಿ ಪೋಷಕರು ಸಹಿ ಹಾಕಬೇಕಾಗುತ್ತದೆ. ಮೂರೂ ಲೋಕಸಭೆ ವ್ಯಾಪ್ತಿಯಿಂದ ನಾಲ್ಕು ಲಕ್ಷಕ್ಕೂ ಅಧಿಕ ಸಂಕಲ್ಪ ಪತ್ರಗಳು ಸಂಗ್ರಹವಾಗಿವೆ ಎಂದು ಸ್ವೀಪ್‌ನ ನೋಡಲ್‌ ಅಧಿಕಾರಿಗಳು ತಿಳಿಸಿದರು.
 ಜಯಪ್ರಕಾಶ್‌ ಬಿರಾದಾರ್‌
Advertisement

Udayavani is now on Telegram. Click here to join our channel and stay updated with the latest news.

Next