Advertisement

ರಾಜ್ ಸಮಾಧಿ ಬಳಿ ಮಣ್ಣಲ್ಲಿ ಮಣ್ಣಾದ ಪಾರ್ವತಮ್ಮ ರಾಜ್ ಕುಮಾರ್

05:13 PM May 31, 2017 | Team Udayavani |

ಬೆಂಗಳೂರು:ಕಳೆದ 16 ದಿನಗಳಿಂದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ವರನಟ ಡಾ.ರಾಜ್ ಕುಮಾರ್ ಅವರ ಪತ್ನಿ, ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ, ವಿತರಕಿ ಪಾರ್ವತಮ್ಮ ರಾಜ್ ಕುಮಾರ್ (78ವರ್ಷ) ಅವರ ಅಂತ್ಯಕ್ರಿಯೆ ಬುಧವಾರ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಸಮಾಧಿ ಬಲಭಾಗದಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ(ಮೂರು ಸುತ್ತು ಕುಶಾಲ ತೋಪು ಹಾರಿಸಿ ಗೌರವ ಸಲ್ಲಿಕೆ) ನೆರವೇರಿತು.

Advertisement

ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ ಅವರು ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ, ವಿಧಾನ ನೆರವೇರಿಸಿದರು. ದಾಸಯ್ಯ ಪದ್ಧತಿಯಂತೆ ಅಂತ್ಯಕ್ರಿಯೆ ನೆರವೇರಿತ್ತು. ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಮೊಮ್ಮಕ್ಕಳು ಹಾಗೂ ಸಚಿವರಾದ ಕೆಜೆ ಜಾರ್ಜ್, ಡಿಕೆ ಶಿವಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಹಾಜರಿದ್ದರು.

ಮಧ್ಯಾಹ್ನ 3.30ರ ಬಳಿಕ ಸದಾಶಿವನಗರ ನಿವಾಸದ ಬಳಿ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಸಾಲಂಕೃತ ಮುಕ್ತಿ ವಾಹನದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಅಂತಿಮ ಯಾತ್ರೆ ಮೂಲಕ ಕಂಠೀರವ ಸ್ಟುಡಿಯೋಕ್ಕೆ ಕೊಂಡೊಯ್ಯಲಾಯಿತು.

ಸದಾಶಿವನಗರ, ಯಶವಂತಪುರ, ಗೋವರ್ಧನ್, ಗೋರಗುಂಟೆ ಪಾಳ್ಯ ಮೂಲಕ ಕಂಠೀರವ ಸ್ಟುಡಿಯೋದವರೆಗೆ ಮೆರವಣಿಗೆ ಮೂಲಕ ಪಾರ್ಥಿವ ಶರೀರ ತರಲಾಗಿತ್ತು. ದಾರಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಾರ್ಥಿವ ಶರೀರ ಸಾಗಿದ ಸಂಚಾರದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿಯೂ ಜನ ಸಾಗರ ನಿಂತು ಅಂತಿಮ ನಮನ ಸಲ್ಲಿಸಿತ್ತು. 

ಸಾರ್ವಜನಿಕರಿಗೆ ನಿರ್ಬಂಧ:
ಜನಸ್ತೋಮವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಂಠೀರವ ಸ್ಟುಡಿಯೋಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಏತನ್ಮಧ್ಯೆ ಕಂಠೀರವ ಸ್ಟುಡಿಯೋ ಒಳಗಡೆ ಹೋಗಲು ಯತ್ನಿಸಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next