Advertisement

ಹಸಿದ ಪಾರಿವಾಳಕ್ಕೆ ಫ‌ುಲ್‌ ಊಟ!

03:23 PM May 20, 2017 | |

ಪಾರಿವಾಳ ಪ್ರೀತಿಯ ಸಂಕೇತ. ಆದರೆ, ನಾವೆಷ್ಟು ಮಂದಿ ಪಾರಿವಾಳವನ್ನು ಪ್ರೀತಿಯಿಂದ ಕಾಣುತ್ತಿದ್ದೇವೆ? ಬೆಂಗ್ಳೂರಿನ ಬ್ಯುಸಿ ಬದುಕಿನಲ್ಲಿ ಹಾಗೆ ಪ್ರೀತಿ ತೋರುವುದೂ ಕನಸಿನ ಮಾತೇ. ಆದರೆ, ಇಲ್ಲೊಂದು ಸಂಸ್ಥೆ ಇದೆ; 20 ವರ್ಷಗಳಿಂದ ಪಾರಿವಾಳಗಳಿಗೆ ಮೇವು ಉಣ್ಣಿಸುತ್ತಿದೆ! ಪ್ರೀತಿಯಿಂದ ಆರೈಕೆ ಮಾಡುತ್ತಿದೆ! ಅದರ ಹೆಸರು, ಕಬೂತರ್‌ ದಾನಾ ಸೇವಾ ಸಮಿತಿ.

Advertisement

ರಾಜಾಜಿನಗರದ ಪುಖ್‌ರಾಜ್‌ ಎಂಬವರು ಗೆಳೆಯ ಪನಾಲಾಲ್‌ ಜತೆ ಸೇರಿ ಈ ಸಮಿತಿಯನ್ನು ಹುಟ್ಟುಹಾಕಿದ್ದರು. ಈಗ ಅದನ್ನು ವಸಂತ್‌ರಾಜ್‌ ಮುನ್ನಡೆಸುತ್ತಿದ್ದಾರೆ. ತಮ್ಮ ಕೆಲಸದ ಜೊತೆ  ಪಾರಿವಾಳಗಳ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಹಸಿದ ಪಾರಿವಾಳಗಳಿಗೆ ಆಹಾರ- ನೀರು ನೀಡುತ್ತಾರೆ!

ಪಾರಿವಾಳಗಳಿಗೆ ಜೋಳವೇ ಮುಖ್ಯ ಆಹಾರ. ಶುದ್ಧ ಸಸ್ಯಾಹಾರವನ್ನಷ್ಟೇ ತಿನ್ನುವ, ಹಗಲು ನಿ¨ªೆ ಮಾಡದ, ರಾತ್ರಿ ಆಹಾರ ಸೇವಿಸದ ವಿಶೇಷ ಪಕ್ಷಿ ಪಾರಿವಾಳ. ಗೋಧಿ, ಹೆಸರುಕಾಳು, ಹುರಿಗಡಲೆ ಇದರ ಇಷ್ಟದ ಆಹಾರ. ಆದರೆ, ಜೋಳ ಮಾತ್ರ ಹೊಟ್ಟೆ ತುಂಬುವಂಥ ಆಹಾರ. ಬೆಂಗಳೂರಿನಲ್ಲಿ ಸುಮಾರು 40- 50 ಸಾವಿರ ಪಾರಿವಾಳಗಳಿದ್ದು, ಅವುಗಳಿಗೆ ಅವಿರತ ದಾಸೋಹ ನೀಡುತ್ತಿದ್ದಾರೆ ವಸಂತರಾಜ್‌. ಇವರ ಸಮಿತಿಯಲ್ಲಿ 23 ಸದಸ್ಯರಿದ್ದಾರೆ.

ದಿನಕ್ಕೆ 600 ಕಿ.ಗ್ರಾಂ. ಜೋಳ!
20 ವರ್ಷಗಳ ಹಿಂದೆ ಕೇವಲ 10 ಕಿ.ಗ್ರಾಂ.ನಷ್ಟು ಜೋಳ ತಿನ್ನುವಷ್ಟು ಪಾರಿವಾಳಗಳು ಮಾತ್ರ ಇದ್ದವಂತೆ. ಈಗ ಪಾರಿವಾಳಗಳ ಸಂಖ್ಯೆ ಬೆಳೆದು ದಿನಕ್ಕೆ 600 ಕಿ.ಗ್ರಾಂ. ಜೋಳವನ್ನು ಪ್ರತಿದಿನ ಪಾರಿವಾಳಗಳಿಗೆ ತಿನ್ನಲು ಕೊಡುತ್ತಾರೆ! ಆದರೆ, ಇವಕ್ಕೆ ಇಷ್ಟು ಸಾಲುತ್ತಿಲ್ಲವಂತೆ. ಜೋಳದ ಬೆಳೆ ಕಡಿಮೆಯಾಗಿ, ಬೆಲೆ ಹೆಚ್ಚಾಗಿರುವುದರಿಂದ ಕೈಲಾದಷ್ಟು ಆಹಾರವನ್ನು ಒದಗಿಸಲಾಗುತ್ತಿದೆ. ಜೋಳ ದಾನ ನೀಡುವವರು, ಪಕ್ಷಿಪ್ರಿಯರು ಈ ಸಂಸ್ಥೆಗೆ ನೆರವಾಗಬಹುದು.

ಎಲ್ಲೆಲ್ಲಿ ದಾಸೋಹ?
ಪ್ರತಿದಿನ ಬೆಳಗ್ಗೆ ಪಾರಿವಾಳಗಳ ಆಹಾರ ವಿತರಣೆಗೆಂದೇ ನಾಲ್ಕು ಜನರ ತಂಡ ಹೊರಡುತ್ತದೆ. ಬೆಳಗ್ಗೆ 6.30ಕ್ಕೆ ರಾಜಾಜಿನಗರದ ತಮ್ಮ ಉಗ್ರಾಣದಿಂದ ಧಾನ್ಯಗಳನ್ನು ಗಾಡಿಗಳಲ್ಲಿ ತುಂಬಿಕೊಂಡು ಹೊರಟು, ನೇತಾಜಿ ಪಾರ್ಕ್‌, ಸಾಣೆ ಗುರವನಹಳ್ಳಿ, ದೇವಯ್ಯ ಪಾರ್ಕ್‌, ಸ್ಯಾಂಕಿ ಟ್ಯಾಂಕ್‌, ಪ್ರಸ್‌ಕ್ಲಬ್‌ ವಾಹನ ನಿಲ್ದಾಣ, ಕಬ್ಬನ್‌ ಪಾರ್ಕ್‌ ಹಾಗೂ ಫ್ರೀಡಂ ಪಾರ್ಕ್‌ ಇಷ್ಟೂ ಸ್ಥಳಗಳಲ್ಲಿ ಆಹಾರ ಒದಗಿಸುತ್ತಾರೆ. ನಿತ್ಯವೂ ತಪ್ಪದೆ ಸಾಗುವ ಕಾಯಕವಿದು. ಹಬ್ಬ, ಹರಿದಿನ, ಉತ್ಸವ, ಜಾತ್ರೆ, ಚಳಿ, ಮಳೆ, ಬಿಸಿಲು ಇವ್ಯಾವುದರ ಲೆಕ್ಕವಿಲ್ಲದೆ, ಮೂಕ ಪಕ್ಷಿಗಳ ಹೊಟ್ಟೆ ತಣಿಸುವ ಕಾರ್ಯ ಸಣ್ಣದಲ್ಲ.

Advertisement

ಪಾರಿವಾಳಗಳಿಗೆ ಆಹಾರ ನೀಡುವ ಕಾರ್ಯವನ್ನು ನೋಡಬಯಸುವವರು, ಮೇಲೆ ಹೇಳಿದ ಸ್ಥಳಗಳಿಗೆ ಬೆಳಗ್ಗಿನ ಸಮಯ ಭೇಟಿ ನೀಡಬಹುದು. ಸಾವಿರಾರು ಪಾರಿವಾಳಗಳು ಒಟ್ಟಿಗೆ ಆಹಾರ ಸೇವಿಸುವ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು.

ಚಿಕಿತ್ಸೆ ಕೊಡ್ತಾರೆ…
ಗಾಯಗೊಂಡ ಪಾರಿವಾಳಗಳ ಚಿಕಿತ್ಸೆಗೆ ಒಬ್ಬರು ವೆಟರ್ನರಿ ವೈದ್ಯರನ್ನು ನೇಮಿಸುವ ಯೋಜನೆ ಇದೆಯಂತೆ. ಸದ್ಯಕ್ಕೆ ಇಲ್ಲಿ, ಗಾಯಗೊಂಡ ಪಾರಿವಾಳಗಳನ್ನು ತಂದು, ಅವುಗಳನ್ನು ಒಂದು ಗೂಡಿನಲ್ಲಿಟ್ಟು, ಚಿಕಿತ್ಸೆ ನೀಡಿ, ಸಂಪೂರ್ಣ ಗುಣಮುಖವಾದ ಮೇಲೆ ಹೊರಗೆ ಬಿಡುವ ವ್ಯವಸ್ಥೆ ಇದೆ.

ಪ್ರೇರಣೆ ಏನು?
ಪಾರಿವಾಳಗಳ ಹಸಿವು ತಣಿಸುವ ಈ ಕಾರ್ಯಕ್ಕೆ ವಸಂತ್‌ರಾಜ್‌ ಅವರಿಗೆ ಜೈನಧರ್ಮದ ಒಂದು ಘಟನೆಯೇ ಪ್ರೇರಣೆ. 16ನೇ ತೀರ್ಥಂಕರರಾದ ಶಾಂತಿನಾಥರು ರಾಜರಾಗಿ¨ªಾಗ, ಒಬ್ಬ ಬೇಟೆಗಾರ ಬಿಟ್ಟ ಬಾಣ, ಪಾರಿವಾಳಕ್ಕೆ ಹೊಕ್ಕು, ಅದು ಬಂದು ಶಾಂತಿನಾಥರ ತೊಡೆಯ ಮೇಲೆ ಕೂರುತ್ತದೆ. ಬೇಟೆಗಾರ ತನ್ನ ಬೇಟೆಯನ್ನು ತನಗೆ ಕೊಡಬೇಕೆಂದು ಶಾಂತಿನಾಥರಲ್ಲಿ ಆಗ್ರಹಿಸುತ್ತಾನೆ. ಆಗ ಶಾಂತಿನಾಥರು, “ನಿನಗೆ ಬೇಕಿರುವುದು ಮಾಂಸ ತಾನೇ? ತೆಗೆದುಕೋ ನನ್ನ ಮಾಂಸ’ ಎಂದು ತಮ್ಮ ತೊಡೆಯ ಮಾಂಸವನ್ನು ಆತನಿಗೆ ಕೊಟ್ಟು ಅರೆ ಜೀವವಾಗಿದ್ದ ಪಾರಿವಾಳಕ್ಕೆ ಶುಶ್ರೂಷೆ ನೀಡಿ, ಬದುಕಿಸಿದರಂತೆ!

ವಸಂತರಾಜ್‌ ಸಂಪರ್ಕ: ಮೊ. 9845221309

ರಶ್ಮಿ ಗೋಖಲೆ

Advertisement

Udayavani is now on Telegram. Click here to join our channel and stay updated with the latest news.

Next