Advertisement

ನವೆಂಬರ್‌ದೊಳಗೆ ಏತ ನೀರಾವರಿ ಯೋಜನೆ ಪೂರ್ಣ

09:22 PM Oct 23, 2021 | Team Udayavani |

ರಬಕವಿ-ಬನಹಟ್ಟಿ: ಜಮಖಂಡಿ, ರಬಕವಿ-ಬನಹಟ್ಟಿ ಹಾಗೂ ಮುಧೋಳ ತಾಲೂಕಿನ ಸಾವಿರಾರು ರೈತರ ಸಂಜೀವಿನಿಯಾಗಿರುವ ವೆಂಕಟೇಶ್ವರ ಹಾಗೂ ಕುಲಹಳ್ಳಿ-ಹುನ್ನೂರ ಏತ ನೀರಾವರಿ ಯೋಜನೆ ಕಾಮಗಾರಿ ನವೆಂಬರ್‌ನೊಳಗೆ ಸಂಪೂರ್ಣ ಮುಕ್ತಾಯಗೊಂಡು ರೈತರ ಗದ್ದೆಗೆ ನೀರು ಹರಿಸುವುದಾಗಿ ರಾಜ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗಂಗೆ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಕುಲಹಳ್ಳಿಯಲ್ಲಿ ಅ ಧಿಕಾರಿ ಹಾಗೂ ರೈತರೊಂದಿಗೆ ಶುಕ್ರವಾರ ಸಮಾಲೋಚನೆ ನಡೆಸಿ ಕಾಮಗಾರಿ ಪ್ರಗತಿ ವೀಕ್ಷಿಸಿ ನಂತರ ಪತ್ರಿಕೆಯೊಂದಿಗೆ ಅವರು ಮಾತನಾಡಿದರು. ಯೋಜನೆಗೆ ಸಂಬಂಧ ಬೆಳೆ ಪರಿಹಾರ ಒದಗಿಸಿ ಪೈಪ್‌ ಲೈನ್‌ ಅಳವಡಿಕೆ, ವಿದ್ಯುತ್‌ ಒದಗಿಸುವ ಕಾರ್ಯ ಮಾತ್ರ ಬಾಕಿ ಉಳಿದಿದ್ದು, ವೇಗವಾಗಿ ಈ ಕಾರ್ಯ ನಡೆಯಲಿದೆ. ಭೂಸ್ವಾಧೀನ ಬಗ್ಗೆ ರೈತರಿಗೆ ಮನವರಿಕೆ ಮಾಡಿದ್ದು, ಅವರ ಇಚ್ಛೆಯಂತೆ
ಪರಿಹಾರ ಒದಗಿಸುವುದಾಗಿ ತಿಳಿಸಿದರು.

ವೆಂಕಟೇಶ್ವರ ಏತ ನೀರಾವರಿ ಯೋಜನೆ 174.4 ಕೋಟಿ ರೂ. ವೆಚ್ಚದಲ್ಲಿ ಮುಧೋಳ ತಾಲೂಕಿನ ಶಿರೋಳ, ಬೆಳಗಲಿ, ಮುಗಳಖೋಡ, ಕುಳಲಿ, ಮಾಲಾಪುರ, ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ, ಜಗದಾಳ, ಕಲಹಳ್ಳಿ, ಬಂಡಿಣಿ, ಚಿಮ್ಮಡ ಹಾಗೂ ಜಮಖಂಡಿ ತಾಲೂಕಿನ ಸೈದಾಪುರ, ಹುಲ್ಯಾಳ, ಮರೇಗುದ್ದಿ, ಬುದ್ನಿ ಗ್ರಾಮಗಳ 7200 ಹೆಕ್ಟೇರ್‌ ಪ್ರದೇಶದ ಸುಮಾರು 15 ಸಾವಿರಕ್ಕೂ ಅಧಿಕ ರೈತರಿಗೆ ಪ್ರತಿ 6 ತಿಂಗಳಲ್ಲಿ 0.75 ಟಿಎಂಸಿ ನೀರು ಒದಗಿಸುವ ಯೋಜನೆಯಾಗಿದೆ ಎಂದರು.

ಕುಲಹಳ್ಳಿ-ಹುನ್ನೂರ ಏತ ನೀರಾವರಿ ಯೋಜನೆ 73.75 ಕೋಟಿ ರೂ. ವೆಚ್ಚದಲ್ಲಿ ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಹುನ್ನೂರ, ಹಿಪ್ಪರಗಿ, ಮೈಗೂರ, ಶಿರಗುಪ್ಪಿ, ಮದರಖಂಡಿ, ಕುಂಬಾರಹಳ್ಳ, ಕುಲಹಳ್ಳಿ, ಸನಾಳ, ಕಡಪಟ್ಟಿ, ಹಂಚನಾಳ, ಕಂಕಣವಾಡಿ, ಆಲಬಾಳ, ಮುತ್ತೂರ, ಕುಂಚನೂರ ಗ್ರಾಮಗಳ 9163 ಹೆಕ್ಟೇರ್‌ ಪ್ರದೇಶದ ಸುಮಾರು 30 ಸಾವಿರಕ್ಕೂ ಅಧಿಕ ರೈತರಿಗೆ ನೀರಾವರಿ ಕೃಷಿ ಭೂಮಿಯಾಗಿ ಪರಿವರ್ತನೆಯಾಗಲಿದೆ ಎಂದರು.

ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಕಾಮಗಾರಿ ಅಂತಿಮ ಹಂತದಲ್ಲಿದ್ದು, ದೀಪಾವಳಿಯೊಳಗಾಗಿಯೇ ಯೋಜನೆಗೆ ಚಾಲನೆ ನೀಡಬೇಕಿತ್ತು. ವಿದ್ಯುತ್‌ ಅಳವಡಿಕೆ ಸಮಸ್ಯೆಯಿಂದ ತಡವಾಗಿದೆ ಎಂದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೋಳ್ಳಿ, ತಹಶೀಲ್ದಾರ್‌ ಸಂಜಯ ಇಂಗಳೆ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next