Advertisement

ಹುಲ್ಲಿನ ಬೀಜದಿಂದ ಭತ್ತದ ಕಣಜದವರೆಗೆ

10:06 AM Mar 14, 2020 | mahesh |

ಕಷ್ಟದ ದಿನಗಳನ್ನು ನೋಡಿದ್ದೇವೆ ಎಂದು ಕೃಷಿಕರು ಹೇಳಿದರೆ ಅದೊಂದು ಸಾಮಾನ್ಯ ಹೇಳಿಕೆಯಾದೀತು. ಆದರೆ, ಕಷ್ಟಕಾಲದಲ್ಲಿ ನಮ್ಮನ್ನು ಕೈಹಿಡಿದು ಮೇಲೆತ್ತಿದ್ದು ಹುಲ್ಲಿನ ಬೀಜಗಳು ಎಂದರೆ ನೀವು ನಂಬುತ್ತೀರಾ… ಸುಮಾರು ನಾಕೂವರೆ ಎಕರೆ ಪ್ರದೇಶವು ಬರೀ ಒಣಪ್ರದೇಶವಾಗಿಯೇ ಇತ್ತು. ಅಲ್ಲೊಂದು ಇಲ್ಲೊಂದು ಮರಗಳು ಬಿಟ್ಟರೆ ಬಿಸಿಲಿಗೆ ಬಿರುಕುಬಿಟ್ಟ ಈ ಭೂಮಿಯಲ್ಲಿ ಏನು ಬೆಳೆಯಲಾದೀತು ಎಂಬ ನಿರಾಸೆಯಲ್ಲಿ ಬದುಕು ಸಾಗಿಸುವುದಕ್ಕೆ ಬಹಳ ಪಡಿಪಾಟಲು ಪಡುತ್ತಿದ್ದೆವು. ಆ ಸಂದರ್ಭದಲ್ಲಿ ಧರ್ಮಸ್ಥಳದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುರಿತು ಮಾಹಿತಿ ಸಿಕ್ಕಿತು. ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಹುಲ್ಲಿನ ಬೀಜಗಳನ್ನು ಕೊಟ್ಟರು. ಒಣನೆಲದಲ್ಲಿ ಮೊದಲು ಹುಲ್ಲಿನ ಬೀಜಗಳನ್ನು ಹಾಕಿ ಅವು ಹುಲುಸಾಗಿ ಬೆಳೆದಾಗ ದನಗಳನ್ನು ಸಾಕುವುದು ಸಾಧ್ಯವಾಯಿತು. ಅವುಗಳು ಸೊಂಪಾದ ಹುಲ್ಲು ತಿಂದು, ಕೊಟ್ಟ ಹಾಲನ್ನು ಮಾರುತ್ತ, ಗೊಬ್ಬರವನ್ನು ಬಳಸಿ ಕೃಷಿಯನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸಿಕೊಂಡೆವು. ಆದರೆ, ನೀರಿನ ಕೊರತೆ ಇದ್ದೇ ಇತ್ತಲ್ಲ. ಇದ್ದ ಬಾವಿಯಲ್ಲಿ ಬಂದಷ್ಟು ನೀರು ಬಳಸಿ ಕೃಷಿಯನ್ನು ಬಹಳ ಗಮನವಿಟ್ಟು ಮಾಡುತ್ತಿದ್ದೆವು. ಆಗ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ನಡೆಯುತ್ತಿದ್ದ ಅನೇಕ ಕಾರ್ಯಕ್ರಮಗಳು ಕೃಷಿಯ ಬಗ್ಗೆ ಮಾಹಿತಿಯನ್ನು ಕೊಟ್ಟಿತು. ನಮ್ಮ ಜ್ಞಾನವನ್ನು ಹೆಚ್ಚಿಸುವುದಕ್ಕೆ ಅವು ಸಹಕಾರಿ ಆದವು. ಇಲ್ಲಿ ಬೆಳೆದ ಬೆಳೆಯನ್ನು ಜೋಪಾನ ಮಾಡಿ ಅವುಗಳ ಮೌಲ್ಯ ವೃದ್ಧಿಸುವುದು, ಹೆಚ್ಚು ಆದಾಯ ಮಾಡಿಕೊಂಡು ಮತ್ತಷ್ಟು ಕೃಷಿಯನ್ನು ವಿಸ್ತಾರ ಮಾಡುವುದು ಹೇಗೆ ಎಂಬ ಪಾಠಶಾಲೆಯೇ ಗ್ರಾಮಾಭಿವೃದಧಿ ಯೋಜನೆಯ ಕಾರ್ಯಕ್ರಮಗಳು. ಒಂದಿಬ್ಬರು ಕೆಲಸದವರ ಜೊತೆ ಸೇರಿ ನಮ್ಮ ಜಮೀನಿನಲ್ಲಿ ಮೂರು ಕೃಷಿ ಹೊಂಡಗಳನ್ನು ಮಾಡಿದೆವು. ಮಳೆಗಾಲದಲ್ಲಿ ಸುರಿದ ನೀರೆಲ್ಲವೂ ಒಣಬೆಟ್ಟದಲ್ಲಿ ಕೊಚ್ಚಿ ಹೋಗುವ ಬದಲಾಗಿ ಈ ಹೊಂಡಗಳಲ್ಲಿ ಶೇಖರಣೆಯಾಗುತ್ತಿದ್ದವು. ಹಾಗಾಗಿ, ಈ ಹೊಂಡದಲ್ಲಿ ಜನವರಿ ತಿಂಗಳವರೆಗೂ ಮಳೆನೀರು ನಿಂತಿರುತ್ತದೆ. ಫೆಬ್ರವರಿ ವೇಳೆಗೆ ಈ ಹೊಂಡದಲ್ಲಿ ನೀರು ಖಾಲಿಯಾದರೂ ನಮ್ಮ ಬಾವಿಯಲ್ಲಿ ನೀರಿಗೆ ಕೊರತೆಯಿಲ್ಲ. ಬೋರ್‌ವೆಲ್‌ಗೆ ಈ ಹೊಂಡಗಳ ಮೂಲಕವೇ ನೀರಿನ ಮರುಪೂರಣ ನಡೆಯುತ್ತದೆ. ಹಾಗಾಗಿ, ನೀರಿನ ತಲೆಬಿಸಿ ನೀಗಿದಂತಾಯಿತಲ್ಲವೇ.

Advertisement

ಲಾಭ ಬಹಳ ದೂರ
ಹೀಗೆ ಒಂದಾದ ಮೇಲೆ ಒಂದರಂತೆ ಕೃಷಿಯನ್ನು ವಿಸ್ತರಿಸುತ್ತ ಇರುವುದು ನಮಗೆ ಖುಷಿಯೂ ಹೌದು. ಹಾಗಂತ ಎಲ್ಲವೂ ಹೂವಿನ ಸರವೆತ್ತಿದಷ್ಟು ಸುಲಭವಾಗುವುದಿಲ್ಲ. ಒಂದು ಕೃಷಿಯಿಂದ ಬಂದ ಆದಾಯವನ್ನು ಮತ್ತೆ ಹೊಸ ಕೃಷಿಗಾಗಿ ಸುರಿಯಬೇಕು. ಇತ್ತ ಮೂವರು ಗಂಡು ಮಕ್ಕಳಾದ ಶ್ರೀಕಂಠ, ಶ್ರೀಕಾಂತ ಶ್ರೀನಿಧಿಯ ವಿದ್ಯಾಭ್ಯಾಸಕ್ಕೆ ದುಡ್ಡು ಹೊಂದಿಸಬೇಕು. ಸರೀಕರೆದುರು ಸರಿಯಾಗಿ ಜೀವನ ಸಾಗಿಸಬೇಕಲ್ಲ. ಹಾಗಾಗಿ ಖರ್ಚುವೆಚ್ಚಗಳನ್ನು ಸೂಕ್ಷ್ಮವಾಗಿ ನಿಭಾಯಿಸುತ್ತ ಕೃಷಿಯನ್ನು ದೇವರೆಂದೇ ನಂಬಿ ಮುನ್ನಡೆದಿದ್ದೇವೆ. ಪತಿ ಕೃಷ್ಣ ಕುಲಾಲ್‌ ಹಗಲು ರಾತ್ರಿಯೆನ್ನದೇ ಕೆಲಸ ಮಾಡುತ್ತ ಇರುತ್ತಾರೆ.

ಈ ಒಣ ಪ್ರದೇಶದಲ್ಲಿ ಗೇರು ಬೆಳೆ ಚೆನ್ನಾಗಿ ಬರಬಹುದು ಎಂಬ ದೃಷ್ಟಿಯಿಂದ ನಾವು ಗೇರು ಸಸಿಗಳನ್ನು ಉಳ್ಳಾಲದಿಂದ ತಂದು ಹಾಕಿದೆವು. ಗೇರುಗಿಡಗಳ ನಡುವೆ ತರಕಾರಿ ಮಾಡಲು ಶುರುಮಾಡಿದೆವು. ಹಾಗಲಕಾಯಿ, ಪಡುವಲಕಾಯಿ, ಸೋರೆಕಾಯಿ, ಅಲಸಂಡೆ, ಕುಂಬಳಕಾಯಿ, ಹರಿವೆ… ನಾವು ಬೆಳೆಯದ ತರಕಾರಿಯೇ ಇಲ್ಲವೇನೋ. ಲೋಡುಗಟ್ಟಲೆ ತರಕಾರಿಯನ್ನು ಮಾರುಕಟ್ಟೆಗೆ ಹಾಕುತ್ತಿದ್ದೆವು. ಜೊತೆಗೆ ಬೀಜವನ್ನು ಸಂರಕ್ಷಣೆ ಮಾಡುವ ವಿಧಾನವನ್ನೂ ಕಲಿತುಕೊಂಡೆ. ಅಲಸಂಡೆಯ ಕೋಡುಗಳನ್ನು ಗಿಡದಲ್ಲಿಯೇ ಪೋಷಿಸಿ, ಅದು ಒಣಗಿದಾಗ ಕೋಡು ಒಡೆದು ಬೀಜಗಳನ್ನು ಮಾಡಿಕೊಳ್ಳುತ್ತಿದ್ದೆ. ಹರಿವೆ ಬೀಜಗಳನ್ನು ಮಾಡುವುದಂತೂ ದೊಡ್ಡ ಸವಾಲೇ ಸರಿ. ಹರಿವೆ ಹೂವನ್ನು ಒಣಗಿಸಿ ಸಾಸಿವೆಗಿಂತಲೂ ಪುಟ್ಟ ಕಾಳುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದೆ. ಈ ಕೌಶಲವನ್ನು ಕಲಿತ ಮೇಲೆ ಒಂದು ಕೃಷಿ ಮೇಳದಲ್ಲಿ ನಾನು ಬೆಂಡೆ, ಅಲಸಂಡೆ ಕೋಡುಗಳನ್ನು ಮಾರಾಟ ಮಾಡಿದರೆ ಹೇಗೆ ಎಂಬ ಯೋಚನೆ ಬಂತು. ಕೃಷಿ ಮೇಳದಲ್ಲಿ ಬೆಂಡೆಯ ಕೋಡುಗಳನ್ನು ಖರೀದಿಸಿದ ಪಕ್ಕದ ಅಂಗಡಿಯವರು, ಅದನ್ನೆಲ್ಲ ಸ್ವಚ್ಛ ಮಾಡಿ ಕೇವಲ ಬೀಜಗಳನ್ನು ಮಾತ್ರ ಪ್ಯಾಕೆಟ್‌ನೊಳಗೆ ಹಾಕಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು. ಅರೆ… ಇದೇ ತಂತ್ರವನ್ನು ನಾನೂ ಅನುಸರಿಸಬಹುದು ಎನಿಸಿತು. ಈಗ ಕೃಷಿಮೇಳಗಳಲ್ಲಿ ಬೀಜಗಳನ್ನು ಪ್ಯಾಕೆಟ್‌ಗಳಲ್ಲಿ ಮಾರುವುದನ್ನು ಕಲಿತಿದ್ದೇನೆ.

ಹೇಳಿ ಮುಗಿಯದ ಕತೆ
ಕೃಷಿಯ ಕತೆ ಹೇಳಿ ಮುಗಿಯಲಿಕ್ಕಿಲ್ಲ. ನಾನು ಹುಟ್ಟಿದ್ದು ಇಲ್ಲೇ ಪಕ್ಕದ ಆಲಗೋಳಿಯಲ್ಲಿ. 5ನೆಯ ತರಗತಿಯವರೆಗೆ ಓದಿಸಿದ ಅಪ್ಪನಿಗೆ ಮತ್ತೆ ಓದಿಸುವುದು ಸಾಧ್ಯವಾಗಲಿಲ್ಲ. ಕೃಷಿಕೂಲಿ ಕೆಲಸವೇ ನಮ್ಮ ಜೀವನಾಧಾರ. ಹಾಗಾಗಿ ಮದುವೆಯಾಗಿ ಈ ಮನೆಗೆ ಬರುವಾಗ ಕೃಷಿ ಕೆಲಸ ಎಲ್ಲವನ್ನೂ ಕಲಿತವಳೇ ಆಗಿದ್ದೆ. 19 ವರ್ಷಕ್ಕೇ ಮದುವೆಯಾದ್ದರಿಂದ ಈಗ ಮಕ್ಕಳೆಲ್ಲ ಕಾಲೇಜು ಓದುತ್ತಿದ್ದಾರೆ. ಹಿಂದೆಲ್ಲ ಯಕ್ಷಗಾನ ನೋಡಲು ಹೋಗುವ ಹವ್ಯಾಸ ಇತ್ತು. ಆದರೆ ಈಗ ಹವ್ಯಾಸ, ಕೆಲಸ ಎಲ್ಲವೂ ಇದೇ ಗದ್ದೆ, ಬೆಟ್ಟಗಳಲ್ಲಿಯೇ ಎನ್ನಿ. ಆದರೆ, ದನಗಳೆಂದರೆ ನನಗೆ ಇಷ್ಟ. ಲಕ್ಷ್ಮೀ, ಬಂಗಾರಿ ಮತ್ತು ಕೆಂಪಿ ದನಗಳಿವೆ. ಗೋಬರ್‌ ಗ್ಯಾಸ್‌ ಕೂಡ ಇದೆ. ಹಿಂದೆ ಇನ್ನೂ ಹೆಚ್ಚು ದನಗಳು ಹಟ್ಟಿಯಲ್ಲಿದ್ದವು. ಆದ್ದರಿಂದಲೇ ನಾನು ಆವರ್ಸೆಯಲ್ಲಿ ಮಹಿಳಾ ಹಾಲು ಉತ್ಪಾದಕ ಸ್ವಸಹಾಯ ಸಹಕಾರಿ ಸಂಘ ಮಡಿಲುವಿನಲ್ಲಿ ನಿರ್ದೇಶಕಿಯಾಗಿದ್ದೇನೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆಯುವ ಕೃಷಿ ಮೇಳಗಳಲ್ಲಿ ಆವರ್ಸೆ ಘಟಕದ ಮಳಿಗೆಯೊಂದಿರುತ್ತದೆ ನೋಡಿ. ಅಲ್ಲಿ ಸಾವಯವ ತರಕಾರಿ ಬೀಜಗಳನ್ನು ನಾವೇ ಮಾರುವುದು. 2008ರಲ್ಲಿ ನಡೆದ ಕೃಷಿ ಮೇಳದಲ್ಲಿ ನನಗೆ ಜಿಲ್ಲಾ ಮಟ್ಟದ ಪ್ರಗತಿ ಶೀಲ ಕೃಷಿ ಮಹಿಳೆ ಪ್ರಶಸ್ತಿಯೂ ಬಂದಿತ್ತು.

ನಮ್ಮ ಈ ಜಮೀನಿನಲ್ಲಿ ಎಲ್ಲ ಬಗೆಯ ಕೃಷಿಯೂ ಇರುವುದರಿಂದ ಅನೇಕ ಕೃಷಿಪ್ರಿಯರು ಪ್ರವಾಸದ ಸಂದರ್ಭ ಈ ಜಮೀನಿಗೆ ಭೇಟಿ ನೀಡುತ್ತಾರೆ.

Advertisement

ಹಲ್ಲರ್‌ ಇರುವುದರಿಂದ ಸಾವಯವ ಅಕ್ಕಿಯನ್ನೂ ಮಾರಾಟ ಮಾಡುತ್ತೇವೆ. ಅಕ್ಕಿಯನ್ನು ಮನೆಗೇ ಬಂದು ಕೊಂಡೊಯ್ಯುತ್ತಾರೆ. ಈಗ ಜೊತೆಗೆ ನಾಟಿಕೋಳಿಯ ಸಾಕಾಣಿಕೆಯೂ ಇದೆ. ಪೇಟೆ ಜನರಿಗೆ ನಾಟಿಕೋಳಿ ಅಪರೂಪವಾಗಿದೆಯಲ್ಲ. ಹಾಗಾಗಿ, ಮನೆಗೇ ಬಂದು ಕೋಳಿ ಕೊಂಡೊಯ್ಯುತ್ತಾರೆ. ಒಂದೇ ಬೆಳೆಯನ್ನು ನಂಬದೇ, ಅಡಿಕೆ, ಕಾಳುಮೆಣಸು, ಭತ್ತ, ಹಲ್ಲರ್‌, ಕೋಳಿ ಮತ್ತು ತರಕಾರಿ, ಗೇರುಬೆಳೆಯನ್ನು ನಾವು ಅವಲಂಬಿಸಿರುವುದರಿಂದ ಒಂದು ಬೆಳೆಯಲ್ಲಿ ಸೋತರೆ ಮತ್ತೂಂದು ಬೆಳೆ ಕೈಹಿಡಿದು ನಡೆಸುತ್ತದೆ. ದುಡಿಯುತ್ತಲೇ ಇದ್ದರೆ ಉಣ್ಣುವುದಕ್ಕೆ ತತ್ವಾರ ಇಲ್ಲ. ಅಷ್ಟು ಸಾಕಲ್ಲ ! ಕಷ್ಟಪಟ್ಟು ಸಾಕಿ ಸಲಹಿದ ಅಮ್ಮ ಕನಕ, ಈಗ ನನ್ನನ್ನು ನೋಡಿ ಖುಷಿ ಪಡುತ್ತಾರೆ.

“ಹೆಂಗಸರಿಗೆ ಕೃಷಿಯಂಥ ಪರಿಶ್ರಮದ ಕೆಲಸ ಕಷ್ಟ ಎಂದು ಎಲ್ಲರೂ ಹೇಳುತ್ತಿದ್ದರೆ ನಾನು ಮಾತ್ರ ಕೈಯಲ್ಲಿ ನೇಗಿಲು ಹಿಡಿದು ಹೊಲಕ್ಕೆ ಹೊರಟೇಬಿಟ್ಟಿದ್ದೆ ! ‘
-ಜ್ಯೋತಿ ಕುಲಾಲ್‌ ಆವರ್ಸೆ, ಹಿಲಿಯಾಣ

ಜ್ಯೋತಿ ಕೆ. ಕುಲಾಲ್‌ ಆವರ್ಸೆ

Advertisement

Udayavani is now on Telegram. Click here to join our channel and stay updated with the latest news.

Next