Advertisement

ರೈಸ್ ಮಿಲ್ ಕ್ಲರ್ಕ್ ಟು ಮುಖ್ಯಮಂತ್ರಿ ಗಾದಿವರೆಗೆ…ಬಿಎಸ್ ಯಡಿಯೂರಪ್ಪ ರಾಜಕೀಯ ಪಯಣ!

02:14 PM Jul 26, 2021 | ನಾಗೇಂದ್ರ ತ್ರಾಸಿ |

ಮಣಿಪಾಲ/ಶಿವಮೊಗ್ಗ: ಬಿಎಸ್ ಯಡಿಯೂರಪ್ಪ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುವ ಮೂಲಕ ಸುದೀರ್ಘ ಐದು ದಶಕಗಳ ಕಾಲದ ಸಕ್ರಿಯ ರಾಜಕಾರಣಕ್ಕೆ ತೆರೆ ಬೀಳುವ ಮೂಲಕ ಪಕ್ಷದಲ್ಲಿ ಇನ್ನು ಯಾವ ರೀತಿ ತೊಡಗಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

ಬಿಎಸ್ ವೈ ಭಾವುಕರಾಗಿಯೇ ತಮ್ಮ ಭಾಷಣ ಆರಂಭಿಸಿದ್ದ ಅವರು ಚುಟುಕು ರೂಪದಲ್ಲಿ ಧನ್ಯವಾದ ಅರ್ಪಿಸಿ ವಿದಾಯ ಭಾಷಣ ಮುಕ್ತಾಯಗೊಳಿಸಿದ್ದರು. ಆದರೆ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ರಾಜಕೀಯ ಸಾಧನೆಯ ಹಾದಿಯ ಹಿಂದೆ ಅಪಾರ ಪರಿಶ್ರಮವಿದೆ ಎಂಬುದು ಸತ್ಯ.

ಮಂಡ್ಯದ ಬೂಕನಕೆರೆ ಗ್ರಾಮದಲ್ಲಿ 1943ರ ಫೆಬ್ರುವರಿ 27ರಂದು ಜನಿಸಿದ್ದರು. ಕಲಾ ವಿಭಾಗದಲ್ಲಿ ಪದವಿ ಪಡೆದ ಬಳಿಕ ಯಡಿಯೂರಪ್ಪನವರು ರಾಜ್ಯ ಸರ್ಕಾರದ ಸಮಾಜ ಕಲ್ಯಾಣಾಭಿವೃದ್ಧಿ ಇಲಾಖೆಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಯಡಿಯೂರಪ್ಪನವರು ಶಿಕಾರಿಪುರಕ್ಕೆ ಬಂದು ನೆಲೆಸಿದ್ದರು. ಅದಕ್ಕೆ ಕಾರಣ ವೀರಭದ್ರ ಶಾಸ್ತ್ರಿ ಅವರ ಅಕ್ಕಿ ಮಿಲ್ ನಲ್ಲಿ ಕ್ಲರ್ಕ್ ಕೆಲಸ ದೊರೆತಿರುವುದು.

ಈ ಸಂದರ್ಭದಲ್ಲಿಯೇ ಯಡಿಯೂರಪ್ಪನವರು ಅಕ್ಕಿ ಮಿಲ್ ಮಾಲೀಕರ ಮಗಳಾದ ಮೈತ್ರಾದೇವಿಯನ್ನು ಪ್ರೇಮಿಸತೊಡಗಿದ್ದರು. ನಂತರ ಮೈತ್ರಾದೇವಿ ಜತೆ ಯಡಿಯೂರಪ್ಪ ಹಸೆಮಣೆ ಏರಿದ್ದರು. ವಿವಾಹದ ಬಳಿಕ ಬಿಎಸ್ ವೈ ಹಾರ್ಡ್ ವೇರ್ ಅಂಗಡಿಯನ್ನು ತೆರೆದಿದ್ದರು ಕೂಡಾ ಅದ್ಯಾಕೋ ಅವರಿಗೆ ಸಮಾಧಾನ ತಂದುಕೊಡಲಿಲ್ಲ. ಹೀಗೆ ಕಾಲಚಕ್ರ ಉರುಳುತ್ತಿದ್ದಾಗ ಯಡಿಯೂರಪ್ಪ ಆರ್ ಎಸ್ ಎಸ್ ಗೆ ಕಾರ್ಯಕರ್ತನಾಗಿ ಸೇರಿಕೊಂಡಿದ್ದರು. ಇದಾದ ಮೇಲೆ ಬಿಎಸ್ ವೈ ಅವರನ್ನು ಸಂಘ ಶಿವಮೊಗ್ಗ ಜಿಲ್ಲಾ ಆರ್ ಎಸ್ ಎಸ್ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು.

Advertisement

ಟರ್ನಿಂಗ್ ಪಾಯಿಂಟ್:

ಆರ್ ಎಸ್ ಎಸ್ ನಲ್ಲಿ ತೊಡಗಿಸಿಕೊಂಡಿದ್ದ ಯಡಿಯೂರಪ್ಪ ಜನರ ಜತೆ ಹೆಚ್ಚು ಸಂಪರ್ಕ ಸಾಧಿಸತೊಡಗಿದ್ದರು. ಇದರ ಪರಿಣಾಮ 1973ರಲ್ಲಿ ಶಿಕಾರಿಪುರ ಪುರಸಭೆಗೆ ಕೌನ್ಸಿಲರ್ ಆಗಿ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದು, ಬಿಎಸ್ ವೈ ಬದುಕಿನ ಟರ್ನಿಂಗ್ ಪಾಯಿಂಟ್ ಆಗಲು ಕಾರಣವಾಯ್ತು. 1977ರಲ್ಲಿಯೂ ಯಡಿಯೂರಪ್ಪನವರು ಪುಸರಸಭೆ ಸದಸ್ಯರಾಗಿ ಪುನರಾಯ್ಕೆಗೊಂಡಿದ್ದರು.

1970ರ ದಶಕದಲ್ಲಿ ಶಿವಮೊಗ್ಗದಲ್ಲಿ ಯಡಿಯೂರಪ್ಪನವರು ಭೂರಹಿತ ಕೃಷಿಕರ ಪರವಾಗಿ ಹೋರಾಟ ಆರಂಭಿಸಿದ್ದರು. ಈ ವೇಳೆ ಸುಮಾರು 1700 ಜೀತದಾಳು ತಂಡದೊಂದಿಗೆ ಶಿವಮೊಗ್ಗ ಡೆಪ್ಯುಟಿ ಕಮಿಷನರ್ ಕಚೇರಿ ಮುಂಭಾಗ ಧರಣಿ ನಡೆಸಿದ್ದರು. ಜೀತದಾಳುಗಳನ್ನು ಕೂಡಲೇ ಬಿಡುಗಡೆಗೊಳಿಸಿ, ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದ್ದರು.

1980ರಲ್ಲಿ ಯಡಿಯೂರಪ್ಪ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 1983ರಲ್ಲಿ ಬಿಎಸ್ ಯಡಿಯೂರಪ್ಪ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾಗಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಕೂಡಾ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 1985ರಿಂದ 1988ರವರೆಗೆ ಬಿಎಸ್ ವೈ ಅವರು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಪ್ರಮುಖವಾಗಿ ಯಡಿಯೂರಪ್ಪನವರು ಜನರ ವಿಶ್ವಾಸಗಳಿಸಿದ್ದು, 1987ರಲ್ಲಿ. ಶಿವಮೊಗ್ಗ ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದ್ದು, ಇಡೀ ಜಿಲ್ಲೆಯನ್ನು ಸೈಕಲ್ ಮೂಲಕ ಸುತ್ತಿದ್ದ ಯಡಿಯೂರಪ್ಪನವರು ಜನರ ಕಷ್ಟವನ್ನು ಆಲಿಸಿ, ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

1988ರಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. 1989 ಮತ್ತು 1994ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಗೆಲುವು ಸಾಧಿಸಿದ್ದರು. 2000ನೇ ಇಸವಿಯಲ್ಲಿ ಯಡಿಯೂರಪ್ಪನವರನ್ನು ಮೇಲ್ಮನೆ ಸದಸ್ಯರನ್ನಾಗಿ ಆಯ್ಕೆ ಮಾಡಿತ್ತು. 2004ರವರೆಗೆ ಬಿಎಸ್ ವೈ ಎಂಎಲ್ ಸಿಯಾಗಿದ್ದರು.

ಯಡಿಯೂರಪ್ಪನವರ ದೀರ್ಘ ಹೋರಾಟ, ಶಾಸಕಾಗಿ, ವಿಧಾನಪರಿಷತ್ ಸದಸ್ಯರಾದ ನಂತರವೂ  ಭಾರತೀಯ ಜನತಾ ಪಕ್ಷ ಮುಖ್ಯಮಂತ್ರಿ ಹುದ್ದೆಯ ಆಫರ್ ಕೊಡುವ ಬಗ್ಗೆ ಮೀನಾಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ಬಿಎಸ್ ವೈ ಜೆಡಿಎಸ್ ಪಕ್ಷ ಸೇರುವ ಬಗ್ಗೆ ಚಿಂತನೆ ನಡೆಸಿದ್ದಾರೆನ್ನಲಾಗಿತ್ತು. ಆದರೆ 2004ರ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ನೀಡಿದ್ದ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಅಧಿಕೃತವಾಗಿ ಘೋಷಿಸಿತ್ತು. ಇದರ ಪರಿಣಾಮ 2004ರಲ್ಲಿ ಬಿಜೆಪಿ 79 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಏಕೈಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.. ಕಾಂಗ್ರೆಸ್ 64 ಸ್ಥಾನ ಮತ್ತು ಜೆಡಿಎಸ್ 58 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಅವಧಿಯಲ್ಲಿ ಯಡಿಯೂರಪ್ಪ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.

ಆರಂಭದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ಬೆಂಬಲ ಹಿಂಪಡೆದು ಭಾರತೀಯ ಜನತಾ ಪಕ್ಷದ ಜತೆ ಕೈಜೋಡಿಸುವ ಮೂಲಕ ಸರ್ಕಾರ ರಚಿಸಿತ್ತು. 2006ರಲ್ಲಿ ಬಿಎಸ್ ವೈ ಉಪಮುಖ್ಯಮಂತ್ರಿಯಾಗಿ ಹಾಗೂ ವಿತ್ತ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. 2007ರಲ್ಲಿ ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಜೆಡಿಎಸ್, ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಬಿಎಸ್ ವೈ ಮುಖ್ಯಮಂತ್ರಿ ಗದ್ದುಗೆ ಏರಿದ್ದರು. ಆದರೆ ಸಿಎಂ ಹುದ್ದೆ ವಿಷಯದಲ್ಲಿ ಅಸಮಾಧಾನಗೊಂಡ ಕುಮಾರಸ್ವಾಮಿ ಬೆಂಬಲ ಹಿಂಪಡೆದ ಪರಿಣಾಮ, ಕೇವಲ ಏಳು ದಿನಗಳ ಕಾಲ ಸಿಎಂ ಆಗಿದ್ದ ಬಿಎಸ್ ವೈ ಅಧಿಕಾರದಿಂದ ಕೆಳಗಿಳಿಯುವಂತಾಗಿತ್ತು. ಹೀಗೆ ರಾಜಕೀಯದ ಏಳು ಬೀಳುಗಳನ್ನು ಕಂಡು ನಾಲ್ಕು ಬಾರಿ ಮುಖ್ಯಮಂತ್ರಿ ಗದ್ದುಗೆ ಏರಿದ್ದ ಬಿಎಸ್ ಯಡಿಯೂರಪ್ಪನವರ ಮುಂದೆ ನಡೆ ಏನಿರಬಹುದು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next