Advertisement

ಶುಕ್ರವಾರ ಇಲ್ಲವೇ ಭಾನುವಾರ ಸಚಿವ ಸಂಪುಟ ವಿಸ್ತರಣೆ?

11:52 PM Jan 28, 2020 | Team Udayavani |

ಬೆಂಗಳೂರು: ವರಿಷ್ಠರು ಅವಕಾಶ ನೀಡಿದರೆ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದೆಹಲಿಗೆ ತೆರಳುವ ಚಿಂತನೆಯಲ್ಲಿದ್ದು, ಹೈಕಮಾಂಡ್‌ ಒಪ್ಪಿಗೆ ದೊರೆತರೆ ಶುಕ್ರವಾರ ಇಲ್ಲವೇ ಭಾನುವಾರ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಉಪಚುನಾವಣೆಯಲ್ಲಿ ಗೆದ್ದವರು ಸಚಿವಗಿರಿ ಸಿಗುವ ನಿರೀಕ್ಷೆಯಲ್ಲಿದ್ದರೆ, ಕೆಲ ಆಕಾಂಕ್ಷಿಗಳು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನವನ್ನೇ ಒಪ್ಪಿಕೊಳ್ಳಲು ಮಾನಸಿಕವಾಗಿ ಸಿದ್ಧವಾದಂತೆ ಕಾಣುತ್ತಿದೆ.

Advertisement

ಪಕ್ಷದ ನೂತನ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಅವರು ಚುನಾಯಿತರಾದ ಬಳಿಕ ಅವರನ್ನು ಯಡಿಯೂರಪ್ಪ ಭೇಟಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಅವಕಾಶ ಸಿಕ್ಕರೆ ನಡ್ಡಾ ಅವರನ್ನು ಭೇಟಿಯಾಗಿ ಶುಭಾಶಯ ಕೋರಲು ಚಿಂತನೆ ನಡೆಸಿದ್ದಾರೆ. ಇದೇ ವೇಳೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಗೆ ಅವಕಾಶ ಸಿಕ್ಕರೆ ಚರ್ಚಿಸಿ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ. ಒಪ್ಪಿಗೆ ದೊರೆತರೆ ಶುಕ್ರವಾರ ಇಲ್ಲವೇ ಫೆ.2ರಂದು ಸಂಪುಟ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಆದರೆ, ಸಂಪುಟ ವಿಸ್ತರಣೆ ಕುರಿತು ವರಿಷ್ಠರೊಂದಿಗೆ ಚರ್ಚಿಸಲು ಸಮಯಾ ವಕಾಶ ಸಿಗುವ ಸಾಧ್ಯತೆ ಕ್ಷೀಣ. ದೆಹಲಿ ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠೆ ಯಾಗಿ ಪರಿಗಣಿಸಿರುವ ವರಿಷ್ಠರು ಚುನಾ ವಣಾ ಕಾರ್ಯದಲ್ಲೇ ಸಕ್ರಿಯರಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಲು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂಬುದನ್ನು ಕಾದು ನೋ ಡಬೇಕಿದೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ, ಮಹೇಶ್‌ ಕುಮಟಳ್ಳಿ ಫೆ.17ರೊಳಗೆ ಸಂಪುಟ ವಿಸ್ತರಣೆ ಯಾಗುವ ನಿರೀಕ್ಷೆ ಇದೆ. ಸಚಿವ ಸ್ಥಾನ ಸಿಗುವುದೋ, ಇಲ್ಲ ನಿಗಮ, ಮಂಡಳಿ ಕೊಡುತ್ತಾರೋ ನೋಡೋಣ. ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದು, ಕುತೂಹಲ ಮೂಡಿಸಿದೆ. ಶಾಸಕ ಎಸ್‌.ಟಿ. ಸೋಮಶೇಖರ್‌, ಇಷ್ಟು ದಿನವೇ ಕಾದಿದ್ದೇವೆ. ಇನ್ನೂ ಕೆಲ ದಿನ ಕಾಯುತ್ತೇವೆ ಎಂದು ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next