Advertisement

“ಉಚಿತ ನೀರು-ಎಲ್ಲ ಅಗತ್ಯಕ್ಕೂ ಬೇಕಾದ ನೀರು ತೆಗೆದುಕೊಳ್ಳಿ’

07:21 PM May 18, 2019 | Team Udayavani |

ವಿದ್ಯಾನಗರ:ಕಳೆದ ಬಾರಿ ಎದುರಾದ ಪ್ರಳಯದ ಆತಂಕ ಮಾಸುವ ಮುನ್ನವೇ ಬರಗಾಲದ ಭಯ ಜನರನ್ನು ಆವರಿಸಲಾರಂಭಿಸಿದೆ. ಅಂತರ್ಜಲ ಕುಸಿದು ಬಾವಿ, ಬೋರ್‌ ಬತ್ತಿ ಹೋಗಿದೆ. ಪಂಚಾಯತು ಹಾಗೂ ನಗರಸಭೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿ ಜನರ ಅಗತ್ಯಕ್ಕೆ ಸ್ಪಂ ಸುವ ಪ್ರಯತ್ನ ಮಾಡುತ್ತಿದೆಯಾದರೂ ಅದು ಪೇಟೆ ಪಟ್ಟಣಗಳಿಗೆ ಮಾತ್ರ ಸೀಮಿತವಾಗಿದ್ದು ಒಳಪ್ರದೇಶದ ಜನರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.

Advertisement

ಇಂತಹ ಸಂದರ್ಭದಲ್ಲಿ ನೀರು ಬತ್ತಿಹೋಗಿ ಮುಂದೆ ತಮ್ಮ ಅಗತ್ಯಕ್ಕೂ ನೀರಿಲ್ಲದ ಪರಿಸ್ಥಿತಿ ಎದುರಾಗಬಹುದು ಎಂಬ ಕಾರಣದಿಂದ ನೀರಿದ್ದವರೂ ಇಲ್ಲದವರಿಗೆ ನೀರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಇಲ್ಲೊಬ್ಬರು ಉಚಿತವಾಗಿ ಅಗತ್ಯಕ್ಕೆ ಬೇಕಾದಷ್ಟು ನೀರನ್ನು ಪೂರೈಸಿ ಮಾದರಿಯಾಗಿದ್ದಾರೆ.

”ಉಚಿತ ನೀರು-ಎಲ್ಲ ಅಗತ್ಯಕ್ಕೂ ಬೇಕಾದ ನೀರು ತೆಗೆದುಕೊಳ್ಳಿ” ಎಂದು ಕೆಂಪು ಬಣ್ಣದಲ್ಲಿ ಕನ್ನಡ ಮತ್ತು ಮಲಯಾಳ ಅಕ್ಷರಗಳಲ್ಲಿ ಬರೆದಿರುವ ಬಿಳಿಬಣ್ಣದ ಟ್ಯಾಂಕ್‌ ಕುಂಬಳೆ-ಬದಿಯಡ್ಕ ಮಧ್ಯೆ ಸೂರಂಬೆ„ಲಿನ ಮಾರ್ಗಬದಿಯಲ್ಲಿ ಗಮನ ಸೆಳೆಯುತ್ತಿದೆ. ಈಮಾರ್ಗವಾಗಿ ಸಂಚರಿಸುವವರು ಒಂದು ಕ್ಷಣ ತನ್ನತ್ತ ನೋಡುವಂತೆ ಮಾಡುತ್ತದೆ. ಕಬ್ಬಿಣದ ಸ್ಟೇಂಡ್‌ನ‌ ಮೇಲೆ ಇಟ್ಟಿರುವ ಟ್ಯಾಂಕ್‌ಗೆ ಪೈಪನ್ನು ಅಳವಡಿಸಲಾಗಿದ್ದು ಅಗತ್ಯದ ನೀರನ್ನು ಯಾರುಬೇಕಾದರೂ ಇದರಿಂದ ಸುಲಭವಾಗಿ ಸಂಗ್ರಹಿಸಬಹುದಾಗಿದೆ.

ಮಾತ್ರವಲ್ಲದೆ ಹೆಚ್ಚಿನ ನೀರಿಗೆ ಕರೆಮಾಡಿ ಎಂದು ನಂಬರನ್ನೂ ನೀಡಲಾಗಿದೆ. ಈ ಪ್ರದೇಶದ ಖಾಸಗಿ ವ್ಯಕ್ತಿಯೊಬ್ಬರು ಕಳೆದ ಮೂರು ವರ್ಷಗಳಿಂದ ಈ ರೀತಿ ಜನರ ದಾಹವನ್ನು ನೀಗುವ ಪುಣ್ಯಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಯಾರು ಎಷ್ಟು ನೀರು ಬೇಕಾದರೂ ತೆಗೆಯ ಬಹುದು. ನೀರು ಕೇಳಿದರೆ, ಹೆಚ್ಚು ತೆಗೆದೆವೆಂದು ಆರೋಪಿಸುವರೆಂಬ ಭಯವೂ ಇಲ್ಲಿಲ್ಲ.

ಯಾರೇ ನೀರು ಕೇಳಿ ಬಂದರೂ ಇಲ್ಲ ಎನ್ನದೆ ಬೇಕಾದಷ್ಟು ನೀರು ನೀಡುವ ಇವರ ಹಿತ್ತಿಲಲ್ಲಿ ಎರಡು ಕೊಳವೆಬಾವಿಗಳಿದ್ದು ಎರಡರಲ್ಲೂ ನೀರಿದೆ. ಎಪ್ರಿಲ್‌ ಪ್ರಾರಂಭದಿಂದ ಅಕ್ಕಪಕ್ಕದ ಮನೆಗಳಿಗೂ ಈ ನೀರೇ ಆಸರೆ. ಸೀತಾಂಗೋಳಿ, ಬೇಳ, ದರ್ಬಾರ್‌ಕಟ್ಟೆ ಮುಂತಾದ ಕಡೆಗಳಿಂದಲೂ ನೀರಿಗಾಗಿ ಬರುತ್ತಿದ್ದರು. ಆದರೆ ನೀರು ಕೊಂಡೊಯ್ಯಲು ಹೆಚ್ಚಿನ ಬಾಡಿಗೆ ತೆರಬೇಕಾಗಿ ಬರುವುದರಿಂದ ಸದ್ಯ ಸುತ್ತುಮುತ್ತ ಪ್ರದೇಶದ ಜನರು ಮಾತ್ರವೇ ಇಲ್ಲಿಂದ ನೀರು ಸಂಗ್ರಹಿಸುತ್ತಾರೆ.

Advertisement

ಹೆಸರಿಗಾಗಿ, ದುಡ್ಡಿಗಾಗಿ ಹೋರಾಡುವ ಈ ಸಮಾಜದಲ್ಲು ನಿಸ್ವಾರ್ಥ ಭಾವದಿಂದ ಅದೆಷ್ಟೋ ಜೀವಗಳಿಗೆ ಆಸರೆಯಾಗುವ ಇವರು ಮೂರು ವರ್ಷಗಳ ಹಿಂದೆ ನವಂಬರ್‌-ಡಿಸೆಂಬರ್‌ ತಿಂಗಳಲ್ಲೇ ನೀರಿಗಾಗಿ ಇಲ್ಲಿನ ಜನರು ಕಷ್ಟಪಡುವಂತಾಗಿತ್ತು. ಆ ಸಂದರ್ಭದಲ್ಲಿ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಈ ರೀತಿ ಟ್ಯಾಂಕ್‌ಲ್ಲಿ ನೀರು ತುಂಬಿ ಇಟ್ಟಾಗ ಅದು ಹಲವಾರು ಮಂದಿಗೆ ನೆರವಾಯಿತು. ಹಾಗಾಗಿ ಮುಂದಿನ ವರ್ಷಗಳಲ್ಲೂ ಇದನ್ನು ಮುಂದುವರೆಸಿದೆ. ಎಂದು ಅಭಿಪ್ರಾಯಪಡುತ್ತಾರೆ.

ಇಂತಹ ಮಾದರಿ ಕಾರ್ಯವನ್ನು ನಮ್ಮ ನಡುವೆ ಇರುವ ಯುವ ಸಂಘಟನೆಗಳು, ಸಮಾಜ ಸೇವಾ ಘಟಕಗಳೂ ಎಚ್ಚೆತ್ತು ಕೊಂಢೂ ನೀರು ಸಂಗ್ರಹ ಮತ್ತು ಸರಬರಾಜು ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಲ್ಲಿ ಜಿಲ್ಲೆಯ ಮೂಲೆಮೂಲೆಗಳಲ್ಲೂ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯ.

ಶ್ಲಾಘನೀಯ
ನೀರು ಸಾರ್ವಜನಿಕ ಆಸ್ತಿ. ಅದನ್ನು ಹಂಚಿಕೊಂಡು ಬದುಕಿದಾಗ ನೀರಿನ ಸಮಸ್ಯೆ ಬಹಳಷ್ಟು ಕಡಿಮೆಯಾಗುತ್ತದೆ. ಇದನ್ನೇ ಸೂರಂಬೆ„ಲಿನ ಖಾಸಗಿ ವ್ಯಕ್ತಿಯೊಬ್ಬರು ಮಾಡುತ್ತಿರುವುದು ಮಾದರಿ ಹಾಗೂ ಶ್ಲಾಘನೀಯ.
ದುಡ್ಡಿಗಾಗಿ ನೀರಿನ ಮಾರಾಟ ಸಲ್ಲದು. ಮಾರುಕಟ್ಟೆಗಳಲ್ಲಿ ಬಾಟಲಿಗಳಲ್ಲಿ ಕುಡಿಯುವ ನೀರು ಧಾರಾಳವಾಗಿ ಲಭಿಸುತ್ತದೆ. ಸರಕಾರ ಇಂತಹ ಕಂಪೆನಿಗಳಿಗೆ ಸಬ್ಸಿಡಿ ನೀಡಿ ಪೊÅàತ್ಸಾಹಿಸುವ ಬದಲು ಕೋಟಿಗಟ್ಟಲೆ ಲೀಟರು ನೀರನ್ನು ಜನರಿಗೆ ಉಚಿತವಾಗಿ ಲಭಿಸುವಂತೆ ಮಾಡುವ ಕ್ರಮ ಕೈಗೊಂಡಲ್ಲಿ ನೀರಿನ ಹಾಗೂ ಪ್ಲಾಸ್ಟಿಕ್‌ ಬಾಟಲಿಗಳಿಂದ ಉಂಟಾಗುವ ತ್ಯಾಜ್ಯ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯ
 -ರಾಜು ಕಿದೂರು, ಸ್ಥಳೀಯರು.

  • ವಿದ್ಯಾಗಣೇಶ್‌ ಅಣಂಗೂರು
Advertisement

Udayavani is now on Telegram. Click here to join our channel and stay updated with the latest news.

Next