Advertisement

ಉಚಿತ ಜ್ಞಾನ ವಿತರಣೆ

10:10 AM Dec 25, 2019 | mahesh |

ಕ್ರಿಕೆಟ್‌ ಕೋಚಿಂಗ್‌, ಸ್ಪರ್ಧಾತ್ಮಕ ಪರೀಕ್ಷೆಯ ಕೋಚಿಂಗ್‌ ಎರಡೂ ದುಬಾರಿ. ಈ ಮಾತಿಗೆ ವಿದ್ಯಾಕಾಶಿ ಧಾರವಾಡವೂ ಹೊರತಲ್ಲ. ಎಷ್ಟೋ ಮಕ್ಕಳು, ಕೋಚಿಂಗ್‌ ಗಾಗಿಯೇ ರೂಮ್‌ ಹಿಡಿದು, ಅಲ್ಲಿ ಇದ್ದು, ಕಲಿತು ಹೋಗುವುದುಂಟು. ಆದರೆ, ಬಡವರ ಪಾಡೇನು? ಸಾವಿರಾರು ರೂ. ಸುರಿದು ಕೋಚಿಂಗ್‌ ಕೊಡಿಸಲು ಇವರಿಗೆ ಸಾಧ್ಯವೇ? ಇದನ್ನೆಲ್ಲಾ ಗಮನಿಸಿದ ಅನಿಲ್‌ ರಜಪೂತ್‌, ಪುಕ್ಕಟ್ಟೆ ಕೋಚಿಂಗ್‌ ಕ್ಲಾಸ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವರ್ಷಕ್ಕೆ ನೂರಾರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡೆ ತಟ್ಟಿ ಗೆದ್ದು ಬರುತ್ತಿದ್ದಾರೆ. ಎಲ್ಲವೂ ಪುಕ್ಕಟ್ಟೆ ಕೋಚಿಂಗ್‌ ಮಹಿಮೆ.

Advertisement

ಧಾರವಾಡ ಅಂದ್ರೆ ಕೋಚಿಂಗ್‌ ಕ್ಲಾಸ್‌, ಕೋಚಿಂಗ್‌ ಅಂದ್ರೆ ಧಾರವಾಡ. ಏಕೆಂದರೆ, ಧಾರವಾಡ ವಿದ್ಯಾಕಾಶಿ. ಈ ಮೇಲಿನ ಮಾತು ಎಷ್ಟು ನಿಜ ಅಂದರೆ, ಅದಕ್ಕೆ ಸಾಕ್ಷಿ ಎಂಬಂತೆ ಧಾರವಾಡದ ತುಂಬಾ ಕೋಚಿಂಗ್‌ ಕ್ಲಾಸ್‌ಗಳು ತುಂಬಿ ತುಳುಕುತ್ತಿವೆ. ಆದರೆ ಅವು ಯಾವುವೂ ಉಚಿತವಲ್ಲ. ಹೆಚ್ಚಿನ ಕೋಚಿಂಗ್‌ ಸೆಂಟರ್‌ಗಳಲ್ಲಿ ಹತ್ತರಿಂದ ಅರವತ್ತು ಸಾವಿರಗಟ್ಟಲೆ ಹಣ ಸುರಿಯಬೇಕು. ಅದು ಮೂರು ತಿಂಗಳಿಗೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಯು ಬರಿ ಮೂರುತಿಂಗಳ ತಯಾರಿಗೆ ಒಲಿಯುವುದಿಲ್ಲ. ಅದಕ್ಕೆ ನಿರಂತರ ಪರಿಶ್ರಮವಿರಬೇಕು .ವರ್ಷಗಟ್ಟಲೆ ತಯಾರಿ ಅಗತ್ಯವಾಗಿ ಇರಬೇಕು. ಹೀಗಿರುವಾಗ, ಮಧ್ಯಮ ವರ್ಗದ ಮಕ್ಕಳು ಕೋಚಿಂಗ್‌ ಕನಸು ಕಾಣುವುದೇ ತಪ್ಪು ಎನ್ನುವಂತಾಗಿದೆ. ಅವರ ಆರ್ಥಿಕ ಸ್ಥಿತಿ ಆರಕ್ಕೆ ಏರದು, ಮೂರಕ್ಕೆ ಇಳಿಯದು. ಹೀಗಾಗಿ, ಸಾವಿರಗಟ್ಟಲೆ ಹಣ ತುಂಬಿ, ರೂಮ್‌ ಮಾಡಿ ಮಕ್ಕಳನ್ನು ಓದಿಸುವುದು ಕಷ್ಟ ಕಷ್ಟ. ಪರಿಸ್ಥಿತಿ ಹೀಗಿರಬೇಕಾದರೆ, ಬಡವರ ಪಾಲಿಗೆ ಆಪದಾºಂಧವರಾರು? ಇಲ್ಲೊಬ್ಬರಿದ್ದಾರೆ. ಹೆಸರು ಅನಿಲ್‌ ಎಚ್‌. ರಜಪೂತ. ಬಡವರು, ಆರ್ಥಿಕ ನಿಶ್ಯಕ್ತರು, ಐಎಎಸ್‌ ಪಾಸು ಮಾಡುವ ದೊಡ್ಡ ಕನಸು ಹೊತ್ತಿರುವವರು ಎಲ್ಲ ಸೇರಿ ಪಾಠ ಹೇಳಿಸಿಕೊಳ್ಳುತ್ತಿರುವ ದೃಶ್ಯ ಕಾಣಬೇಕಾದರೆ, ಧಾರವಾಡದ ಕರ್ನಾಟಕ ವಿವಿಯ ಸಸ್ಯ ಉದ್ಯಾನವನಕ್ಕೆ ( green library) ಬರಬೇಕು. ಅದೂ ಸಂಜೆ ಹೊತ್ತು. ಪ್ರತಿದಿನ ಅಲ್ಲಿ ಮೂರು ತಾಸಿಗೂ ಹೆಚ್ಚು ಸ್ಫರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಬಗೆ ಹೇಗೆ ಎನ್ನುವ ವಿಚಾರವಾಗಿ ಉಚಿತ ತರಬೇತಿ ನಡೆಯುತ್ತಿರುತ್ತದೆ. ಇಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಜಗತ್ತಿನಾದ್ಯಂತ ಬದುಕು ಕಟ್ಟಿಕೊಂಡಿದ್ದಾರೆ. ಇದರ ರೂವಾವರಿ ಅನಿಲ. ಎಚ್‌. ರಜಪೂತ. ಇವರು ಸಮಾನ ಮನಸ್ಕರ ಜೊತೆ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗೆ ಅವಶ್ಯಕವಾಗಿರುವ ವಿಷಯಗಳನ್ನು ಉಚಿತವಾಗಿ ಪಾಠ ಮಾಡುತ್ತಿದ್ದಾರೆ. ಅನೇಕ ವಿಷಯ ಪರಿಣಿತರು ಇವರಿಗೆ ಸಾತ್‌ ಕೊಡುತ್ತಿದ್ದಾರೆ. ಇದರ ಉದ್ದೇಶ ತಾವು ಕಲಿತ ವಿದ್ಯೆಯ ಮೂಲಕ ಈ ಸಮಾಜಕ್ಕೆ ಏನಾದರೂ ಮರಳಿ ಕೊಡಬೇಕು ಎನ್ನುವುದು.

ಟರ್ನಿಂಗ್‌ ಪಾಯಿಂಟ್‌
ಎಲ್ಲರೂ ಶಿಕ್ಷಣದ ಹೆಸರಲ್ಲಿ ದುಡ್ಡು ಮಾಡುತ್ತಿರುವಾಗ, ಈ ರೀತಿಯ ಕೋಚಿಂಗ್‌ ಏಕೆ ಶುರು ಮಾಡಿದಿರಿ? ಎಂದು ರಜಪೂತರನ್ನು ಕೇಳಿದಾಗ ಅವರು ಹೇಳಿದ್ದು ಇಷ್ಟು; -
“ಒಂದು ಮಧ್ಯಾಹ್ನ ಧಾರವಾಡ ವಿಶ್ವ ವಿದ್ಯಾಲಯದ ಉದ್ಯಾನವನದಲ್ಲಿ ಕುಳಿತುಕೊಂಡಿದ್ದೆ. ಅಲ್ಲಿಗೆ ಮಗನೊಂದಿಗೆ ದೂರದ ಊರಿನಿಂದ ಹೆತ್ತವರು ಬಂದಿದ್ದರು. ಬಿಸಿಲಿಗೆ ಬಸವಳಿದ ಅವರನ್ನು ಮಾತಿಗೆಳೆದಾಗ, ಅವರ ಕನಸುಗಳನ್ನು ನನ್ನ ಮುಂದೆ ಹರಡಿದರು. ಮಗನ ವಿಚಾರವಾಗಿ ಅವರಿಗೆ ಬಹಳ ದೊಡ್ಡ ಕನಸಿತ್ತು. ಇವನನ್ನು ಎಂಜಿನಿಯರ್‌ ಮಾಡಬೇಕು, ಆನಂತರ ಅವನು ನಮ್ಮನ್ನು ಸಾಕುತ್ತಾನೆ. ಇದಕ್ಕಾಗಿ ಜೀವನವನ್ನು ಪೂರ್ತಿ ಸೆವೆಸಿ, ಅವನನ್ನು ಓದಿಸಲು ತೀರ್ಮಾನಿಸಿ ಮಗನನ್ನು ಕೋಚಿಂಗ್‌ ಸೇರಿಸಲು ಬಂದಿದ್ದರು. ಹೀಗೆ, ಕಷ್ಟಪಟ್ಟು, ದೊಡ್ಡ ಕನಸಿನ ಮೂಟೆ ಹೊತ್ತು ಬಂದ ಅವರಿಗೆ ಕೋಚಿಂಗ್‌ ಸೆಂಟರ್‌ನ ತರಬೇತಿಯು ಉದ್ಯೋಗ ದೊರಕಿಸಿ ಕೊಡುತ್ತದಾ? ಈ ಮೂರು ನಾಲ್ಕು ತಿಂಗಳ ತಯಾರಿ ಅವನಿಗೆ ಎಲ್ಲಾ ವಿಷಯವನ್ನು ತಿಳಿಸಿಕೊಡುತ್ತದಾ ? ಕೋಚಿಂಗ್‌ಗೆ ಫೀ , ರೂಮ್‌ ಬಾಡಿಗೆ ಎಲ್ಲವನ್ನೂ ಒದಗಿಸಿ ಕೊಡಲು ಅವರು ಎಷ್ಟು ಕಷ್ಟ ಪಡುತ್ತಾರೆ? ಎಲ್ಲ ತಿಳಿದು ಮನಸು ಮರುಗಿತು. ನಾನು ಕೊಡಾ ಒಂದೆರಡು ಬಾರಿ ಈ ಕೋಚಿಂಗ್‌ ಸೆಂಟರ್‌ಗಳ ಕದ ತಟ್ಟಿದ್ದೆ. ಆದರೆ, ಅಲ್ಲಿ ಇವರು ಕೊಡುವ ಹಣಕ್ಕೂ , ನೀಡುವ ತರಬೇತಿಗೂ ಅಜಗಜಾಂತರ. ಅಲ್ಲಿ ಗುಣಮಟ್ಟ ನಿರೀಕ್ಷಿಸುವುದು ಕಷ್ಟವೇ. ನಮ್ಮ ಮಗ ಯಾವುದಾದರೊಂದು ನೌಕರಿ ಹಿಡಿದರೆ ಮುಪ್ಪಿನ ಕಾಲಕ್ಕೆ ಆಸರೆ ಆದಾನು ಎನ್ನುವುದು ತಂದೆ ತಾಯಿಯ ಆಸೆ. ನನ್ನ ಸಂಶೋಧನೆ ಮುಗಿಯಲು ಇನ್ನೂ ನಾಲ್ಕು ವರ್ಷ ಸಮಯವಿದೆ. ಏಕೆ ಈ ರೀತಿ ಕಷ್ಟ ಪಡುವವರಿಗಾಗಿ ಉಚಿತವಾಗಿ ತರಬೇತಿಯನ್ನು ನೀಡಬಾರದು ಎಂದುಕೊಂಡಾಗ ಹುಟ್ಟಿಕೊಂಡಿದ್ದು ಈ ಜ್ಞಾನ ದಾಸೋಹದ ಕಲ್ಪನೆ…’

ಎಲ್ಲ ಓದಿರೋರೇ
ನಂತರ ಕೆಲವೇ ದಿನಗಳಲ್ಲಿ, ಅನಿಲ್‌ ಧಾರವಾಡದ ವಿಶ್ವವಿದ್ಯಾಲಯದ ಬಯಲು ಉದ್ಯಾನವನದಲ್ಲಿ ಕೋಚಿಂಗ್‌ ಶುರುಮಾಡಿಯೇ ಬಿಟ್ಟರು. ಇಂದು ಇಲ್ಲಿ ಪ್ರತಿದಿನ 3.30ರಿಂದ 7 ಗಂಟೆಯ ತನಕ ಸುಮಾರು ಮುನ್ನೂರು, ನಾನ್ನೂರು ವಿದ್ಯಾರ್ಥಿಗಳು ಕೋಚಿಂಗ್‌ ಪಡೆಯುತ್ತಾರೆ. ಕೆಎಎಸ್‌, ಐಎಎಸ್‌, ಎಸ್‌ಐ, ಎಫ್ಡಿಎ, ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಅಗತ್ಯವಿರುವ ಕೋಚಿಂಗ್‌ ಇಲ್ಲಿ ಕೊಡಲಾಗುತ್ತದೆ.

ಭೂಗೋಳ ಶಾಸ್ತ್ರ ಹಾಗೂ ಪರಿಸರ ವಿಜ್ಞಾನವನ್ನು ಅನೀಲ್‌ ರಜಪೂತ್‌, ಇಂಗ್ಲೀಷ್‌ ವಿಷಯವನ್ನು ಮೋಹನ್‌ ಸಿದ್ದಾಂತಿ, ಇತಿಹಾಸವನ್ನು ಗುಂಡಪ್ಪ, ಕನ್ನಡ ವ್ಯಾಕರಣ ಸಾಶಿಯಾಳ್‌, ಅರ್ಥಶಾಸ್ತ್ರವನ್ನು ಸುನೀಲ್‌ ರಾಥೋಡ್‌ ಹೀಗೆ ಸಮಾನ ಮನಸ್ಕರರು ಹೇಳಿಕೊಡುತ್ತಾರೆ. ಇದರಲ್ಲಿ ಬಹುತೇಕರು ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದವರು. ಬಡ ಮಕ್ಕಳಿಗೆ, ಕೋಚಿಂಗ್‌ ಕ್ಲಾಸ್‌ಗೆ ಹಣ ಪೂರೈಸಲು ಆಗದವರು ಇಲ್ಲಿ ಬಂದು ಪಾಠ ಕೇಳುತ್ತಾರೆ.

Advertisement

ಪ್ರತಿ ಮೂರು ತಿಂಗಳಿಗೊಮ್ಮೆ ಹೊಸತಾಗಿ ಕ್ಲಾಸ್‌ ಶುರುವಾಗುತ್ತದೆ. ಇಲ್ಲಿ ಪಾಠ ಕೇಳಬೇಕಾದರೆ ಯಾವುದೇ ನೋಂದಣಿ ಇಲ್ಲ. ಪ್ರತಿದಿನ ಅರ್ಧಗಂಟೆಗೆ ಒಂದರಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಎಲ್ಲ ವಿಷಯಗಳನ್ನೂ ಪಾಠ ಮಾಡುತ್ತಾರೆ. ಹೀಗಾಗಿ, ಯಾರಿಗೆ, ಯಾವ ವಿಚಾರ ಅಗತ್ಯವಿದೆಯೋ ಅವರು ಬಂದು ಕೂತು, ಕಲಿತು, ಅನುಮಾನಗಳಿದ್ದರೆ ಬರೆದುಕೊಂಡು ಬಂದು, ಪ್ರಶ್ನೆ ಕೇಳಿ ಪರಿಹರಿಸಿಕೊಂಡು ಹೋಗುತ್ತಾರೆ.

ಇಂಥದೇ ಪಾಠವನ್ನು ಕೋಚಿಂಗ್‌ ಕ್ಲಾಸ್‌ನಲ್ಲಿ ಕೇಳಬೇಕಾದರೆ, ಹೆಚ್ಚು ಕಮ್ಮಿ 60-70 ಸಾವಿರ ಫೀಸು ಕಟ್ಟಬೇಕಾಗುತ್ತದೆ. ಕೋಚಿಂಗ್‌ ಕೇಂದ್ರ ಶುರುವಾದಾಗಿನಿಂದ ಇಲ್ಲಿವರೆಗೆ ತರಬೇತಿಯನ್ನು ಪಡೆದ ನೂರಾರು ವಿದ್ಯಾರ್ಥಿಗಳ ಪೈಕಿ 20, 30 ಮಂದಿ ಸರ್ಕಾರದ ವಿವಿಧ ಇಲಾಖೆಯಲ್ಲಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಕೆಲವರು ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿದ್ದಾರೆ.

“ದೇವಸ್ಥಾನಕ್ಕೆ ಹೋದಾಗ ಪ್ರಸಾದವನ್ನು ಹೆಸರು, ಕುಲ, ಜಾತಕ ಕೇಳಿ ಕೊಡ್ತಾರ? ಇಲ್ಲ ತಾನೆ. ಹಾಗೇನೆ, ಯಾರಿಗೆ ಜ್ಞಾನ ದಾಹ ಇದೆಯೋ, ಉದ್ಯೋಗ ಹಿಡೀಬೇಕು ಅನ್ನೋ ಹಂಬಲ ಇದೆಯೋ. ಅಂಥವರು ಇಲ್ಲಿ ಬಂದು ಕಲೀತಾರೆ. ಅವರಿಗೆ ಯಾವ ನಿಬಂಧನೆಗಳೂ ಇಲ್ಲ’ ಅಂತಾರೆ ರಜಪೂತ್‌.

ವೃಶ್ಚಿಕ ಮುನಿ

Advertisement

Udayavani is now on Telegram. Click here to join our channel and stay updated with the latest news.

Next