Advertisement
ಖರ್ಚುರಹಿತ ಕೃಷಿಒಂದು ಎಕ್ರೆ ಪ್ರದೇಶದಲ್ಲಿ ಮೀನು ಕೃಷಿ ನಡೆದರೆ ವಾರ್ಷಿಕ ಕನಿಷ್ಠ ಒಂದೂವರೆ ಲಕ್ಷ ರೂ.ಗಳಿಗೂ ಮಿಕ್ಕಿ ಆದಾಯ ಗಳಿಸಲು ಸಾಧ್ಯವಿದೆ. ವಿಶೇಷವೆಂದರೆ ಮೀನು ಕೃಷಿಗೆ ಯಾವುದೇ ಖರ್ಚುಗಳಿಲ್ಲ. ಪ್ರಾಕೃತಿಕ ದತ್ತ ಕೆರೆಗಳಿದ್ದರೆ, ಅವುಗಳಲ್ಲೇ ಮೀನು ಮರಿಗಳನ್ನು ತಂದು ಹಾಕಿದರಾಯಿತು. ಒಂದು ವೇಳೆ ಕೆರೆ ಇಲ್ಲದಿದ್ದರೆ, ಕೆರೆ ನಿರ್ಮಾಣಕ್ಕೆ ಸುಮಾರು ಒಂದು ಲಕ್ಷ ರೂ. ಖರ್ಚಾಗುತ್ತದೆ. ಬಳಿಕ ಖರ್ಚು ರಹಿತ ಆದಾಯ ಗಳಿಸಬಹುದು ಎನ್ನುತ್ತಾರೆ ಮೀನು ಕೃಷಿಕ ಬಂಟ್ವಾಳದ ರೊನಾಲ್ಡ್ ಡಿ’ಸೋಜಾ. ಅವರು ತೋಟದೊಂದಿಗೆ ಸುಮಾರು 30 ಸೆಂಟ್ಸ್ ಜಾಗದಲ್ಲಿ ಕಳೆದೈದು ವರ್ಷಗಳಿಂದ ಮೀನು ಕೃಷಿ ನಡೆಸುತ್ತಿದ್ದು, ವಾರ್ಷಿಕ ಸರಾಸರಿ 50 ಸಾವಿರ ರೂ.ಗಳಷ್ಟು ಆದಾಯ ಪಡೆಯುತ್ತಿದ್ದಾರೆ.
ಮೀನು ಕೃಷಿ ಲಾಭದಾಯಕ ವ್ಯವಸಾಯ. ತರಕಾರಿ, ಕಾಫಿ ಬೆಳೆಗೆ ಮತ್ತು ಇತರ ಬೆಳೆಗಳಿಗೆ ನೀರು ಹಾಯಿಸಲೆಂದು ಹೊಂಡಗಳನ್ನು ಅಗೆದಿದ್ದರೆ, ಅವುಗಳನ್ನು ಖಾಲಿ ಬಿಡದೆ ಅದರಲ್ಲಿ ಕೃಷಿ ಮಾಡಲು ಸಾಧ್ಯ. ಸಗಟು ಭೂಮಿಗಳಲ್ಲಿಯೂ ಕೆರೆ ನಿರ್ಮಿಸಿ ಮೀನು ಕೃಷಿ ಆರಂಭಿಸಬಹುದು. ಸರ್ವಋತುವಿನ ಆದಾಯ ಕೃಷಿ
ಸರ್ವಋತುಗಳಲ್ಲಿಯೂ ಆದಾಯ ತರಬಲ್ಲ ಕೃಷಿ ಇದಾಗಿದೆ. ಆದರೆ ನೀರು ಅಗತ್ಯವಾಗಿ ಬೇಕಾಗುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಸಮುದ್ರ ಮೀನುಗಾರಿಕೆ ಚಟುವಟಿಕೆಗಳು ಸ್ತಬ್ಧಗೊಳ್ಳುವುದರಿಂದ ಮೀನು ಕೃಷಿಕರು ತಮ್ಮ ಕೆರೆಗಳ ಮೀನು ಹಿಡಿದು ಮಾರಾಟ ಮಾಡುತ್ತಾರೆ. ಅಲ್ಲದೆ ಕಾರ್ಮಿಕರೂ ಅಗತ್ಯವೂ ಇರುವುದಿಲ್ಲ.
Related Articles
ವಿಜ್ಞಾನಿಗಳಾದ ಹೀರಾಲಾಲ್ ಚೌದ್ರಿ ಮತ್ತು ಕೆ.ಎಚ್. ಆಲಿಕುನ್ನಿ ಅವರು 1957ರ ಜು. 10ರಂದು ಮೀನಿನ ಪಿಟ್ಯುಟರಿ ಗ್ರಂಥಿಯಿಂದ ತಯಾರಿಸಿದ ಹಾರ್ಮೋನ್ನ್ನು ಬಳಸಿಕೊಂಡು ಕೃತಕ ವಿಧಾನದಿಂದ ಗೆಂಡೆ ಮೀನುಗಳ ವಂಶಾಭಿವೃದ್ಧಿ ಮಾಡಿಸಿ ಯಶಸ್ವಿಯಾದರು. ಈ ದಿನದ ನೆನಪಿಗಾಗಿ ಪ್ರತಿ ವರ್ಷ ಜು. 10ನ್ನು ರಾಷ್ಟ್ರೀಯ ಮೀನು ಕೃಷಿಕರ ದಿನವಾಗಿ ಆಚರಿಸಲಾಗುತ್ತದೆ. ಭಾರತವು ಜಾಗತಿಕ ಮಟ್ಟದಲ್ಲಿ ಮೀನು ಕೃಷಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಹರಿಯಾಣ, ಅಸ್ಸಾಂ, ಆಂಧ್ರ, ಹೈದರಾಬಾದ್ ಕರ್ನಾಟಕ, ಪಶ್ಚಿಮ ಬಂಗಾಳ ಮುಂತಾದೆಡೆಗಳಲ್ಲಿ ಮೀನು ಕೃಷಿ ವ್ಯಾಪಕವಾಗಿದೆ.
Advertisement
ದ.ಕ.ದಲ್ಲಿ ನಿರಾಸಕ್ತಿ ಯಾಕೆ?ಮೀನು ಕೃಷಿಗೆ ಸೂಕ್ತವಾಗಿರುವ ದ.ಕ. ಜಿಲ್ಲೆಯಲ್ಲಿ ಮೀನು ಕೃಷಿಯತ್ತ ಒಲವು ಬೆಳೆಸಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಪ್ರಮುಖವಾಗಿ ಇಲ್ಲಿ ಸಮುದ್ರ ಮೀನುಗಾರಿಕೆ ಇರುವುದರಿಂದ ಜನ ಮೀನು ಕೃಷಿಯತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿಲ್ಲ. ಅಲ್ಲದೆ ಮೀನು ಕೃಷಿಯ ಬಗ್ಗೆ ಅರಿವಿನ ಕೊರತೆಯೂ ಕಾರಣವಾಗಿರಬಹುದು ಎನ್ನುತ್ತಾರೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು. ದೊಡ್ಡ ಗೆಂಡೆಗೆ ಬೇಡಿಕೆ
ಜಿಲ್ಲೆಯಲ್ಲಿ ದೊಡ್ಡ ಗೆಂಡೆ ಮೀನು ಮತ್ತು ಸಾಮಾನ್ಯ ಗೆಂಡೆ ಮೀನು ಎಂಬ ಎರಡು ತಳಿಗಳನ್ನು ಬೆಳೆಸಲು ಅವಕಾಶವಿದೆ. ದೊಡ್ಡ ಗೆಂಡೆ ಮೀನಿನಲ್ಲಿ ಕಟ್ಲ, ರೋಹು, ಮೃಗಾಲ್ ಮತ್ತು ಸಾಮಾನ್ಯ ಗೆಂಡೆಯಲ್ಲಿ ಕಾಮನ್ ಕಾರ್ಪ್ ಎಂಬ ಮೀನು ಮರಿಗಳನ್ನು ಸಾಕಬಹುದು. ಕಾರ್ಕಳದಲ್ಲಿ ಮೀನು ಮರಿ ಪಾಲನಾ ಕೇಂದ್ರವಿದ್ದು, ರೈತರಿಗೆ ಬೇಕಾದಲ್ಲಿ ಮರಿ ತರಿಸಿ ಕೊಡುವ ಕೆಲಸವನ್ನು ಮೀನುಗಾರಿಕಾ ಇಲಾಖೆ ಮಾಡುತ್ತಿದೆ. ಎಕ್ಕೂರಿನಲ್ಲಿರುವ ಮೀನುಗಾರಿಕಾ ಕಾಲೇಜಿನಲ್ಲಿಯೂ ಮೀನು ಮರಿಗಳು ದೊರೆಯುತ್ತವೆ. ಸಾಕಿದ ಮೀನುಗಳಿಗೆ ಆಹಾರವಾಗಿ ತೌಡು, ನೆಲಗಡಲೆ ಹಿಂಡಿ, ಮನೆಯ ಉಳಿಕೆ ಆಹಾರಗಳನ್ನೆಲ್ಲ ನೀಡಬಹುದು. ಮೀನು ಕೃಷಿಗೆ ಪ್ರಾಶಸ್ತ್ಯ
ಪರ್ಯಾಯ ಜೀವನ ನಿರ್ವಹಣಾ ಉದ್ಯಮವಾಗಿ ಮೀನು ಕೃಷಿಯನ್ನು ಅಭಿವೃದ್ಧಿ ಪಡಿಸಬಹುದು. ಇದರಿಂದ ಜನರಿಗೆ ಯಾವುದೇ ನಷ್ಟ ಉಂಟಾಗದು. ಮುಂದಿನ ದಿನಗಳಲ್ಲಿ ಸಮುದ್ರ ಮೀನುಗಾರಿಕೆ ಕಡಿಮೆಯಾದಲ್ಲಿ ಮೀನು ಕೃಷಿಗೆ ಪ್ರಾಶಸ್ತ್ಯ ಹೆಚ್ಚಾಗಲೂಬಹುದು. ಮೀನು ಕೃಷಿ ಬಗ್ಗೆ ಮೀನುಗಾರಿಕಾ ಇಲಾಖೆಯಿಂದ ಹಲವು ಮಾಹಿತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.
- ಮಹೇಶ್ಕುಮಾರ್,
ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ಮಂಗಳೂರು