Advertisement

ಉಚಿತ ವಿದ್ಯುತ್‌, ಸಾಲಮನ್ನಾ ತಾತ್ಕಾಲಿಕ

12:14 AM Jan 08, 2020 | mahesh |

ಬೆಂಗಳೂರು: ಕೃಷಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಉಚಿತ ವಿದ್ಯುತ್‌, ಸಾಲಮನ್ನಾದಂತಹ ಯೋಜನೆಗಳು ತಾತ್ಕಾಲಿಕ ಪರಿಹಾರಗಳಾಗಿರಬಹುದು. ಇವುಗಳಾಚೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಅದು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಮಾತ್ರ ಸಾಧ್ಯ ಎಂದು
ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ತಿಳಿಸಿದರು.

Advertisement

ಮಂಗಳವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 5 ದಿನಗಳ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು. ಭಾರತೀಯ ವಿಜ್ಞಾನ ಕಾಂಗ್ರೆಸ್‌ ಸಂಘದ ಮಹಾ ಅಧ್ಯಕ್ಷ ಪ್ರೊ.ಕೆ.ಎಸ್‌.ರಂಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಡಾ.ಅನೂಪ್‌ ಕುಮಾರ್‌ ಜೈನ್‌, ಪ್ರೊ.ಎಸ್‌.ರಾಮಕೃಷ್ಣ, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಉಪಸ್ಥಿತರಿದ್ದರು. ಇದೇ ವೇಳೆ, ಯುವ ವಿಜ್ಞಾನಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. “ವಿಜ್ಞಾನ ಜ್ಯೋತಿ’ಯನ್ನು ಸಂಘದ ಮುಂದಿನ ಮಹಾ ಅಧ್ಯಕ್ಷೆ ಅಧ್ಯಕ್ಷೆ ಪ್ರೊ. ವಿಜಯಲಕ್ಷ್ಮೀ ಸಕ್ಸೆನಾ ಅವರಿಗೆ ಹಸ್ತಾಂತರಿಸಲಾಯಿತು.

ಸಮಾರೋಪ ಭಾಷಣದಲ್ಲಿ ವಿಜ್ಞಾನಿಗಳಿಗೆ ಉಪ ರಾಷ್ಟ್ರಪತಿ ನೀಡಿದ ಸಲಹೆಗಳಿವು:
∙ ಕೃಷಿ ಈ ನೆಲದ ಮೂಲ ಸಂಸ್ಕೃತಿಯಾಗಿದ್ದು, ದೇಶದ ಅರ್ಥ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಈಗದು ತೀವ್ರ ಸಂಕಷ್ಟದಲ್ಲಿದೆ.

∙ ಇಂತಹ ಸಂದರ್ಭದಲ್ಲಿ ಘೋಷಿಸುವ ಸಾಲಮನ್ನಾ, ಉಚಿತ ವಿದ್ಯುತ್‌ನಂತಹ ಯೋಜನೆಗಳು
ತಾತ್ಕಾಲಿಕ ಪರಿಹಾರ ಕ್ರಮಗಳಾಗಬಹುದು. ಆದರೆ, ಸಂಕಷ್ಟದಿಂದ ಹೊರ ಬರಲು ಹೊಸ
ತಂತ್ರಜ್ಞಾನಗಳು, ಆವಿಷ್ಕಾರಗಳು, ಮುಂದುವರಿದ ಪದ್ಧತಿಗಳಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ
ವಿಜ್ಞಾನಿಗಳು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗೆ ಎಂದಿಗಿಂತ ಹೆಚ್ಚು ಒತ್ತು ನೀಡುವ ಅವಶ್ಯಕತೆ ಇದೆ.

∙ ಮೊದಲು ಪ್ರಿ ಪವರ್‌ (ಉಚಿತ ಪವರ್‌) ಇದ್ದದ್ದು, ನಂತರ ಲೋ ಪವರ್‌ (ಕಡಿಮೆ ವಿದ್ಯುತ್‌), ಕೊನೆಗೆ
ನೊ ಪವರ್‌ (ವಿದ್ಯುತ್‌ ಇಲ್ಲ) ಆಗುತ್ತದೆ. ಅದೇ ರೀತಿ, ಸಾಲಮನ್ನಾ ಪರಿಕಲ್ಪನೆ ಕೂಡ ಇದಕ್ಕಿಂತ
ಭಿನ್ನವಲ್ಲ. ಆರಂಭದಲ್ಲಿ ಸಾಲಮನ್ನಾ ಮಾಡಲಾಗುತ್ತದೆ. ಅಂತಿಮವಾಗಿ ಸಾಲಗಾರನೇ ಮನ್ನಾ ಆಗುತ್ತಾನೆ. ಆದ್ದರಿಂದ ಇಂತಹ ಯೋಜನೆಗಳ ಬಗ್ಗೆ ಇರುವ ರೈತರ ಮನ:ಸ್ಥಿತಿಯನ್ನೂ ಬದಲಾಯಿಸುವ ಅಗತ್ಯವಿದೆ.

Advertisement

∙ ಕೃಷಿ, ವಿಜ್ಞಾನದ ಭಾಗವಾಗಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಕಾರ್ಯಕ್ರಮಗಳನ್ನು
ರೂಪಿಸುತ್ತಿವೆ. ಇದರೊಂದಿಗೆ ಖಾಸಗಿ ಸಂಸ್ಥೆಗಳೂ ಸಂಶೋಧನೆಯಲ್ಲಿ ಕೈಜೋಡಿಸಬೇಕು.

∙ ಇಂದು ಒಂದೆಡೆ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ, ಮತ್ತೂಂದೆಡೆಯಿಂದ ಸುಸ್ಥಿರ ಆಹಾರ ಭದ್ರತೆಯನ್ನು ಹೊಂದಬೇಕಿದೆ. ಇವೆರಡೂ ಸವಾಲುಗಳಿಗೆ ಒಟ್ಟೊಟ್ಟಿಗೆ ಪರಿಹಾರ ಕಂಡುಕೊಳ್ಳಬೇಕಿದೆ.

∙ ಇಂದು ಹೊಸ ತಂತ್ರಜ್ಞಾನಗಳು, ಸಂಶೋಧನೆಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ
ತುರ್ತು ಅವಶ್ಯಕತೆ ಇದೆ. ಇದೇ ಸ್ಥಿತಿ ಮುಂದುವರಿದರೆ, ಭವಿಷ್ಯದಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ.

∙ ದೇಶದಲ್ಲಿ ಈಗಲೂ ಶೇ.60ರಷ್ಟು ಜನ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಬಹುತೇಕರು ಕೃಷಿ ಅವಲಂಬಿತರು. ಇದಲ್ಲದೆ, ಬೇಸಾಯ ನಮ್ಮ ಮೂಲ ಸಂಸ್ಕೃತಿ. ಜತೆಗೆ, ಈ ಬಾರಿಯ ವಿಜ್ಞಾನ
ಸಮ್ಮೇಳನದ ಥೀಮ್‌ ಕೂಡ ಗ್ರಾಮೀಣಾಭಿವೃದ್ಧಿ.  ಈ ಎಲ್ಲ ದೃಷ್ಟಿಯಿಂದ ಇದು ಆದ್ಯತೆಯ ಕ್ಷೇತ್ರವಾಗಿದೆ.

∙ ನೀರಿನ ಸಂರಕ್ಷಣೆ ಮತ್ತು ಸದ್ಬಳಕೆ ಹೇಗೆ? ಮಣ್ಣಿನ ಫ‌ಲವತ್ತತೆಯನ್ನು ಕಾಪಾಡಿಕೊಳ್ಳುವುದು ಹೇಗೆ?.
ಆಹಾರ ಉತ್ಪಾದನೆಯಲ್ಲಿ ಹೆಚ್ಚಳ, ತಂತ್ರಜ್ಞಾನ ಆಧಾರಿತ ಪೂರಕ ಮಾರುಕಟ್ಟೆ ವ್ಯವಸ್ಥೆ, ಹವಾಮಾನ
ಆಧಾರಿತ ಬೆಳೆ ಪದಟಛಿತಿ…ಇವಿಷ್ಟೂ ವಿಜ್ಞಾನಿಗಳ ಮುಂದಿರುವ ಸವಾಲುಗಳು.

ವಿಜ್ಞಾನ ಇದೆ; ನೈತಿಕತೆ ಬಿಟ್ಟು ಹೋಗಿದೆ
ಈಗಲೂ ನನಗೆ ನೆನಪಿದೆ. ನಾನು ವಿದ್ಯಾರ್ಥಿಯಾಗಿದ್ದಾಗ “ನೈತಿಕ ವಿಜ್ಞಾನ’ ಪಾಠ ಇತ್ತು. ಇಂದು ಅದರಲ್ಲಿನ ವಿಜ್ಞಾನ ಮಾತ್ರ ಮುಂದುವರಿದಿದ್ದು, ನೈತಿಕತೆ ಬಿಟ್ಟು ಹೋಗಿದೆ. ಹೊಸ ತಂತ್ರಜ್ಞಾನಗಳು ವಿಪುಲ ಅವಕಾಶಗಳನ್ನು ಸೃಷ್ಟಿಸಿರಬಹುದು. ಆದರೆ, ಅದರ ಬೆನ್ನಲ್ಲೇ ಹೊಸ ಸಮಸ್ಯೆಗಳನ್ನೂ ಹುಟ್ಟು ಹಾಕುತ್ತದೆ. ಆದ್ದರಿಂದ ವಿಜ್ಞಾನದ ಜತೆಗೆ ನೈತಿಕ ಮೌಲ್ಯಗಳನ್ನು ಒಟ್ಟೊಟ್ಟಿಗೆ ಕೊಂಡೊಯ್ಯಬೇಕಿದೆ.
ಹಿರಿಯ ವಿಜ್ಞಾನಿಗಳು ಕಿರಿಯರಿಗೆ ತಮ್ಮ ಅನುಭವವನ್ನು ಧಾರೆಯೆರೆಯಬೇಕು. ನಗರ ಎದುರಿಸುತ್ತಿರುವ
ಹವಾಮಾನ ವೈಪರೀತ್ಯದಂತಹ ಗಂಭೀರ ಸಮಸ್ಯೆಗಳಿಗೂ ವಿಜ್ಞಾನ ಪರಿಹಾರ ಕಂಡುಕೊಳ್ಳಬೇಕಿದೆ. ವಿಜ್ಞಾನದ ಪರಮ ಗುರಿ “ಸುಸ್ಥಿರ ಜಗತ್ತು’ ನಿರ್ಮಾಣ ಆಗಿರಬೇಕು ಎಂದು ನಾಯ್ಡು ಸಲಹೆ ನೀಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಲೋಕಕಲ್ಯಾಣ ಆಗಬೇಕು. ಈ ಐದು ದಿನಗಳ ವಿಜ್ಞಾನ ಸಮ್ಮೇಳನವು ಜನ ಎದುರಿಸುತ್ತಿರುವ ಸಮಸ್ಯೆಗಳಿಗೆ ಭವಿಷ್ಯದಲ್ಲಿ ಪರಿಹಾರ ಕಂಡುಕೊಳ್ಳಲು ನೆರವಾಗಲಿದೆ.
● ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next