Advertisement

Police station: ಮದುವೆ ಆಗುವುದಾಗಿ ನಂಬಿಸಿ ವಂಚನೆ; ಠಾಣೆ ಮುಂದೆ ಯುವತಿ ಏಕಾಂಗಿ ಧರಣಿ

12:04 PM Jan 24, 2024 | Team Udayavani |

ಬೆಂಗಳೂರು:  ಪ್ರೀತಿಸಿ, ಮದುವೆ ಆಗುವುದಾಗಿ ನಂಬಿಸಿದ ಕಾನ್‌ಸ್ಟೇಬಲ್‌ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿರುವುದಾಗಿ ಆರೋಪಿಸಿ ಸಂತ್ರಸ್ತೆ ನ್ಯಾಯಕ್ಕಾಗಿ ಬಸವನಗುಡಿ ಠಾಣೆಯ ಪ್ರತಿಭಟನೆ ನಡೆಸುತ್ತಿದ್ದಾಳೆ.

Advertisement

ಬಸವನಗುಡಿ ಠಾಣೆಯ ಪೊಲೀಸ್‌ ಪೇದೆ ಅನಿಲ್‌ಕುಮಾರ್‌ ಎಂಬಾತ ವಂಚಿಸಿರುವುದಾಗಿ ಚಿತ್ರದುರ್ಗ ಜಿಲ್ಲೆಯ, ಉತ್ತರಹಳ್ಳಿಯ ನಿವಾಸಿ ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ.

ಅನಿಲ್‌ ಕುಮಾರ್‌ ಹಾಗೂ ಪ್ರತಿಭಟನೆ ನಡೆಸುತ್ತಿರುವ ಯುವತಿಯು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು. ಮದುವೆ ಆಗುವುದಾಗಿ ಅನಿಲ್‌ ಹೇಳಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸಿರ್ಸಿ ಸರ್ಕಲ್‌ ಬಳಿಯ ಪೊಲೀಸ್‌ ಕ್ವಾಟ್ರಸ್‌ಗೆ ಕರೆದೊಯ್ದ ಬಲತ್ಕಾರ ಮಾಡಿದ್ದಾನೆ. ಮದುವೆಯಾಗುವಂತೆ ಕೇಳಿದ್ದರೆ ಇದೀಗ ನಿರಾಕರಿಸುತ್ತಿದ್ದಾನೆ. ಇದೀಗ ಇನ್ನೊಬ್ಬರ ಜತೆ ಮದುವೆಗೆ ತಯಾರಿ ನಡೆಸಿದ್ದಾನೆ. ಇದನ್ನು ಪ್ರಶ್ನಿಸಲು ಹೋದರೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. 2023ರ ಆಗಸ್ಟ್‌ನಲ್ಲಿ ನಾಗವೇಣಿ ಪೊಲೀಸರಿಗೆ ದೂರು ನೀಡಿದ್ದಳು. ಆದರೆ, ಅನಿಲ್‌ ಈ ಪ್ರಕಣದಲ್ಲಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ.

ಠಾಣೆ ಮುಂದೆ ಸಂತ್ರಸ್ತೆ ಪ್ರತಿಭಟನೆ: ಇದೀಗ ಏನು ಮಾಡಬೇಕೆಂದು ತೋಚದೇ ಯುವತಿಯು ಬಸವನಗುಡಿ ಠಾಣೆಯ ಮುಂದೆ ಒಂಟಿಯಾಗಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾಳೆ. ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಅನಿಲ್‌ ಕರ್ತವ್ಯದಲ್ಲಿ ಇದ್ದಾಗಲೇ ಯುವತಿ ಬಂದು ಠಾಣೆ ಮುಂದೆ ಕುಳಿತುಕೊಂಡಿದ್ದಾಳೆ. ನ್ಯಾಯ ಸಿಗುವವರೆಗೂ ನಾನು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಸಂತ್ರಸ್ತೆ ಬರುತ್ತಿದ್ದಂತೆ ಅನಿಲ್‌ ಕುಮಾರ್‌ ಪರಾರಿಯಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next