Advertisement

Fraud Case ಟೂರ್‌ ಪ್ಯಾಕೇಜ್‌ ಹೆಸರಿನಲ್ಲಿ ವಂಚನೆ; ದೂರು

11:50 PM May 20, 2024 | Team Udayavani |

ಕೋಟ: ಟೂರ್‌ ಪ್ಯಾಕೇಜ್‌ ಹೆಸರಿನಲ್ಲಿ ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಡೆದು ವಂಚನೆ ನಡೆಸಿದ ಘಟನೆ ಮಣಿಪಾಲದಲ್ಲಿ ಸಂಭವಿಸಿದೆ. ಸಾಲಿಗ್ರಾಮ ಸಮೀಪದ ಬಡಾಹೋಳಿ ನಿವಾಸಿ ಗುರುರಾಜ್‌ ವಂಚನೆಗೊಳಗಾದವರು.

Advertisement

ಗುರುರಾಜ್‌ ಅವರಿಗೆ ಮುಂಬಯಿ ಮೂಲದ ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿಯೊಂದರಿಂದ ಟೂರ್‌ ಪ್ಯಾಕೇಜ್‌ ಹೆಸರಲ್ಲಿ ಕರೆ ಬಂದಿದ್ದು, ಮಣಿಪಾಲದ ಖಾಸಗಿ ಹೊಟೇಲ್‌ನಲ್ಲಿ ನಡೆಯುವ ಕಂಪೆನಿಯ ಮೀಟಿಂಗ್‌ನಲ್ಲಿ ಭಾಗವಹಿಸುವಂತೆ ಮೇಲಿಂದ ಮೇಲೆ ಕರೆ ಮಾಡಿ ತಿಳಿಸಲಾಗಿತ್ತು. ಆದರೆ ಇವರು ಆರಂಭದಲ್ಲಿ ಪ್ರಸ್ತಾವವನ್ನು ಒಪ್ಪಿಕೊಂಡಿರಲಿಲ್ಲ. ಅನಂತರ ಬೇರೆ ಕೆಲಸದ ಮೇರೆಗೆ ಮಣಿಪಾಲಕ್ಕೆ ತೆರಳಿದಾಗ ಮೀಟಿಂಗ್‌ನಲ್ಲಿ ಭಾಗವಹಿಸಿದ್ದರು.

ಮೂರು ವರ್ಷಗಳವರೆಗೆ ಇ.ಎಂ.ಐ. ಮೂಲಕ ವಾರ್ಷಿಕ 75 ಸಾವಿರ ರೂ. ಪಾವತಿಸಿದರೆ ವರ್ಷದಲ್ಲಿ ಮೂರು ಬಾರಿ ಅಂತಾರಾಜ್ಯ ಹಾಗೂ ಎರಡು ಬಾರಿ ಏಷ್ಯಾ ಖಂಡದೊಳಗೆ ಪ್ರವಾಸವಿರುತ್ತದೆ ಎಂದು ಕಂಪೆನಿಯ ಪ್ರತಿನಿಧಿ ಎಂದು ಹೇಳಿಕೊಂಡಾತ ತಿಳಿಸಿದ್ದು, ಅನಂತರ ಗುರುರಾಜ್‌ ಅವರ ಇ.ಎಂ.ಐ. ಕಾರ್ಡ್‌ ಪಡೆದು ಅದರಿಂದ 48 ಸಾವಿರ ರೂ. ಕಡಿತಗೊಳಿಸಿಕೊಂಡಿದ್ದಾರೆ. ಕಡಿತಗೊಂಡ ಹಣ ಏಳು ದಿನದೊಳಗೆ ವಾಪಸಾಗುವುದಾಗಿಯೂ ತಿಳಿಸಿದ್ದರು. ಆದರೆ ಮಾಡಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

50-60 ಮಂದಿಗೆ ಮೋಸ?
ಆರಂಭದಲ್ಲಿ ಒಂದೆರಡು ದಿನ ಪ್ರಥ್ವಿರಾಜ್‌ ಎನ್ನುವಾತ ಮೊಬೈಲ್‌ ಕರೆಗೆ ಸಿಕ್ಕಿದ್ದು, ಅನಂತರ ಯಾವುದೇ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಟೂರ್‌ ಪ್ಯಾಕೇಜ್‌ ಹೆಸರಲ್ಲಿ ವಂಚನೆ ಮಾಡುವ ಜಾಲ ಇದಾಗಿದ್ದು, ನನ್ನಂತೆ 50-60 ಮಂದಿ ಮೋಸ ಹೋಗಿರುವ ಸಾಧ್ಯತೆ ಇದೆ. ಈ ಜಾಲವನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಗುರುರಾಜ್‌ ಅವರು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next