Advertisement

ಐಪಿಎಸ್‌ ಅಧಿಕಾರಿ ಹೆಸರಿನಲ್ಲಿ ವಂಚನೆ

10:17 AM Dec 24, 2022 | Team Udayavani |

ಬೆಂಗಳೂರು: ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರ ಆಪ್ತ ಸಹಾಯಕ ಎಂದು ಹೇಳಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಬನಶಂಕರಿ ನಿವಾಸಿ ಹೇಮಂತ್‌(25) ಬಂಧಿತ. ಆರೋಪಿ ಬನಶಂಕರಿ ನಿವಾಸಿ ನಾಗರಾಜು ಎಂಬುವರಿಗೆ ಬಿಬಿಎಂಪಿಯಲ್ಲಿ ಉದ್ಯೋಗ ಕೊಡಿಸುವುದಾಗಿ 3.50 ಲಕ್ಷ ರೂ. ಪಡೆದು ವಂಚಿಸಿದ್ದ. ಜತೆಗೆ ಹಿರಿಯ ಐಪಿಎಸ್‌ ಅಧಿಕಾರಿ, ಎಡಿಜಿಪಿ ಹೇಮಂತ್‌ ನಿಂಬಾಳ್ಕರ್‌ ಆಪ್ತ ಎಂದು ಹೇಳಿಕೊಂಡಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ದೂರುದಾರ ಹಲವು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು. ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. 2020ರಲ್ಲಿ ಅವರಿಗೆ ಆರೋಪಿ ಹೇಮಂತ್‌ ಪರಿಚಯವಾಗಿತ್ತು. ನಾನು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ಐಪಿಎಸ್‌ ಅಧಿಕಾರಿಯೊಬ್ಬರ ಆಪ್ತ ಸಹಾಯಕ. ದೊಡ್ಡ ಅಧಿಕಾರಿಗಳು ನನಗೆ ಪರಿಚಯ. ನಿಮಗೆ ಬಿಬಿಎಂಪಿಯಲ್ಲಿ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದ. ಅಲ್ಲದೆ, ಕರ್ನಾಟಕ ಪೊಲೀಸ್‌ ಇಲಾಖೆ ಹೆಸರಿನಲ್ಲಿದ್ದ ಗುರುತಿನ ಚೀಟಿ ತೋರಿಸಿದ್ದ. ಹೀಗಾಗಿ ಆರೋಪಿ ನಂಬಿದ್ದ ದೂರುದಾರ ನಾಗರಾಜ್‌, ಸರ್ಕಾರಿ ಕೆಲಸ ಪಡೆಯುವ ಸಲುವಾಗಿ 3.50 ಲಕ್ಷ ರೂ. ಅನ್ನು ಆರೋಪಿಗೆ ನೀಡಿದ್ದರು. ಬಳಿಕ ಕೆಲಸ ಕೊಡಿಸದೆ ವಂಚಿಸಿದ್ದ. ಜತೆಗೆ ಆರೋಪಿಯ ಮೊಬೈಲ್‌ ನಂಬರ್‌ ಅನ್ನು ಕೂಡ ಎಡಿಜಿಪಿ ಹೇಮಂತ್‌ ಎಂದು ಬರುವಂತೆ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.

ಹೀಗಾಗಿ ಕೆಲ ಸಾರ್ವಜನಿಕರು ಆರೋಪಿಗೆ ಹಣ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next