ಮಾಗಡಿ: ಮಾಗಡಿ-ಬೆಂಗಳೂರು ಕೆಶಿಫ್ ರಸ್ತೆಗೆ ಸ್ವಾಧೀನಪಡಿಸಿಕೊಂಡಿರುವ ಕಂದಾಯ ಭೂಮಿ ಯನ್ನು ಅಧಿಕಾರಿಗಳು ಅಕ್ರಮವಾಗಿ ಪುರಸಭೆಗೆ ಸೇರಿಸಿಕೊಂಡು, ಭೂಮಾಲಿಕರಿಗೆ ಇ-ಖಾತೆ ಮಾಡಿ ಕೊಟ್ಟು ಅವ್ಯವಹಾರದಲ್ಲಿ ಭಾಗಿಯಾಗಿ, ವಂಚಿಸಿದ್ದಾರೆ ಎಂದು ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ನ ಸದಸ್ಯರು ಗಂಭೀರ ಆರೋಪ ಮಾಡಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷೆ ವಿಜಯ ರೂಪೇಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯ ರಾದ ರಂಗಹನುಮಯ್ಯ, ಎಚ್.ಜೆ.ಪುರುಶೋತ್ತಮ್ ಹಾಗೂ ಶಿವಕುಮಾರ್ ಪುರಸಭೆ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬೆಂಗ ಳೂರು- ಸೋಮವಾರ ಪೇಟೆ ಕೆಶಿಫ್ ರಸ್ತೆಗೆ ಪಟ್ಟಣದ ಗಡಿ ಯಲ್ಲಿ ಸ್ವಾಧೀನಪಡಿಸಿಕೊಂಡ ರೆವಿನ್ಯೂ ಭೂಮಿಗೆ ಪುರಸಭೆ ಮೌಲ್ಯದ ಪರಿಹಾರ ಕೊಡಿಸಲು ಭೂ ಪರಿವರ್ತನೆ ಆಗದೇ, ಪುರಸಭೆಗೆ ಸೇರಿಸಿ ಇ-ಖಾತೆ ಮಾಡಿಕೊಡುವ ಮೂಲಕ ಕೋಟ್ಯಂತರ ರೂ. ಹಣವು ದುರ್ಬಳಕೆ ಆಗಿದೆ. ಸಹಕರಿಸಿರುವ ಅಧಿಕಾ ರಿಗಳ ವಿರುದ್ಧ ತನಿಖೆ ನಡೆಸಲು ಒತ್ತಾಯಿಸಿದರು.
ಮಳಿಗೆ ಹರಾಜು ಪ್ರಕ್ರಿಯೆ ನಡೆಸಿಲ್ಲ: ಪುರಸಭೆಯಲ್ಲಿ ಅಧಿಕಾರಿಗಳಿಂದ ನಡೆದಿರುವ ಅಕ್ರಮ ಖಾತೆ, ಕೆಶಿಫ್ ರಸ್ತೆ, ಐಡಿಎಸ್ಎಂಟಿ ಬಡಾವಣೆ ನಿವೇಶನ ಮತ್ತು ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆ ನಡೆಸಿಲ್ಲ, ವಿದ್ಯುತ್ ದೀಪ ಅಳವಡಿಕೆ ಸಮರ್ಪಕವಾಗಿಲ್ಲ, ಇದ ರಿಂದ ಪುರಸಭೆಗೆ ಕೋಟ್ಯಂತರ ರೂ. ನಷ್ಟವಾಗಿದೆ. ಇದಕ್ಕೆ ಅಧಿಕಾರಿಗಳು ಉತ್ತರ ಕೊಡಲಿಲ್ಲ. ಹೀಗಾಗಿ ಸಭೆ ಮುಂದೂಡುವಂತೆ ಒತ್ತಾಯಿಸಿದರು.
25ಕ್ಕೆ ಸಭೆ ಮುಂದೂಡಿಕೆ: ಹಿಂದಿನ ಸಭಾ ನಡಾವಳಿಯಲ್ಲಿ ಚರ್ಚಿಸಿದ ಸಮಸ್ಯೆಗಳನ್ನು ಬಗೆಹರಿಸಿಲ್ಲ, ಸಭೆ ನಿರ್ಣಯಕ್ಕೆ ಅನುಮೋದನೆ ಇಲ್ಲ, ಇದರಿಂದ ಪುರ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಸದಸ್ಯರು ದೂರಿದರು. ಇದನ್ನು ಅಧ್ಯಕ್ಷರೂ ಒಪ್ಪಿಕೊಂಡು ಸಮರ್ಪಕ ಅಂಕಿಅಂಶಗಳ ಸಮೇತ ಜ.25ರಂದು ವಿಶೇಷ ಸಭೆ ಕರೆದು, ತಮ್ಮೆಲ್ಲರ ಪ್ರಶ್ನೆ ಗಳಿಗೂ ಉತ್ತರ ನೀಡುವುದಾಗಿ ಸಭೆ ಮುಂದೂ ಡಿದರು. ಪಟ್ಟಣದಲ್ಲಿರುವ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸುವಂತೆ ಡೀಸಿ ಆದೇಶ ವಿದ್ದರೂ, ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ. ಪುರಸಭೆ ಆದಾಯಕ್ಕೂ ಹೊಡೆತ ಬಿದ್ದಿದೆ ಎಂದು ಸದಸ್ಯ ಎಚ್.ಜೆ.ಪುರುಶೋತ್ತಮ್ ಮತ್ತು ರಂಗಹನು ಮಯ್ಯ ಇತರರು ಆಕ್ರೋಶ ವ್ಯಕ್ತಪಡಿಸಿದರು.
Related Articles
ಪುರಸಭೆ ಉಪಾಧ್ಯಕ್ಷ ರೆಹಮತ್, ಸದಸ್ಯರಾದ ಕೆ.ವಿ.ಬಾಲರಘು, ಅನಿಲ್ಕುಮಾರ್, ಶಿವರುದ್ರಮ್ಮ, ಅಶ್ವತ್ಥ, ಜಯರಾಮು, ಮಮತಾ, ಆಶಾ, ಭಾಗ್ಯಮ್ಮ, ಮುಖ್ಯಾಧಿಕಾರಿ ಪಿ.ಸಿ.ಶಿವಾನಂದ್, ಮ್ಯಾನೇಜರ್ ರವಿಕುಮಾರ್, ಶ್ರೀನಿವಾಸ್, ನಾಗೇಂದ್ರ, ನಾಗರಾಜು ಇತರರು ಇದ್ದರು. ಪುರಸಭಾ ಸದಸ್ಯ ಎಂ.ಎನ್. ಮಂಜುನಾಥ್ ಮಾತನಾಡಿ, ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಧಿಕಾರಿ ವರ್ಗ ಕೆಲಸ ಕಾರ್ಯಗಳನ್ನು ಕಾನೂನಿನಡಿ ನಿರ್ವಹಿಸುವಂತೆ ತಿಳಿಸಿದರು.
ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ : ಪುರಸಭಾ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ , ಮುಖ್ಯಾಧಿಕಾರಿಗಳು ಇಲ್ಲದಿದ್ದರೂ ಪ್ರತಿ ತಿಂಗಳು ಕೋಟ್ಯಂತರ ರೂ. ಬಿಲ್ಗಳು ಪಾವತಿಯಾಗುತ್ತಿದೆ. ಹೇಗೆ ಎಂದು ಸಾಮಾನ್ಯ ಸಭೆಯಲ್ಲಿ ಸದಸ್ಯ ಶಿವಕುಮಾರ್ ಪ್ರಶ್ನಿಸಿದರು. ಶಾಸಕ ಎ.ಮಂಜುನಾಥ್ ಅವರು, ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ವಿಷಯಗಳ ಚರ್ಚಿಸದೇ ಕಡಲೇ ಪುರಿ ತಿನ್ನುತ್ತಿರುತ್ತಾರಾ ಎಂದು ಆರೋಪ ಮಾಡುತ್ತಾರೆ.
ಆದರೆ, ಅವರ ಪಕ್ಷದವರು ಸಭೆಯಲ್ಲಿ ಸಮರ್ಪಕ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ. ಈ ಸಂಬಂಧ ಶಾಸಕರು ಸಭೆಗೆ ಹಾಜರಾಗಿ, ಇಲ್ಲಿ ನಡೆಯುವ ವಿಷಯದ ಬಗ್ಗೆ ಚರ್ಚಿಸಬೇಕಲ್ಲವೇ ಎಂದು ಕಾಂಗ್ರೆಸ್ ಸದಸ್ಯರು ಟಾಂಗ್ ನೀಡಿದರು.
ಪಟ್ಟಣ ಮತ್ತು ತಿರುಮಲೆಯಲ್ಲಿ ಸ್ಲಂ ಬೋರ್ಡ್ನಿಂದ ನಿರ್ಮಾಣಗೊಂಡಿರುವ ಮನೆಗಳು ಉದ್ಘಾಟನೆಗೆ ಮುನ್ನವೇ ಬೀಳುತ್ತಿವೆ. ಮನೆ ಪಡೆದ ಬಡಪಾಯಿಗಳ ಮೇಲೆ ಗೋಡೆ ಕುಸಿದರೆ ಪುರಸಭೆ ಅಧಿಕಾರಿ ಗಳೇ ಹೊಣೆ ಹೊರಬೇಕು. ಕೆಶಿಫ್ ರಸ್ತೆ ವಿಚಾರ, ಜೋಗಿಕಟ್ಟೆಯ ನಿವೇಶನಗಳ ಹಕ್ಕು ಪತ್ರ ಸಂಗ್ರಹ ಮಾಡಿ ನಕಲಿ, ಅಸಲಿ ಬಗ್ಗೆ ಪರಿಶೀಲನೆ ನಡೆಸಬೇಕು. – ಎಂ.ಆರ್.ರಾಘವೇಂದ್ರ, ನಾಮಿನಿ ಸದಸ್ಯ.
ಅಧಿಕಾರಿಗಳು ಅಕ್ರಮ ಖಾತೆಗಳನ್ನು ಮಾಡಿ, ಮುಂದಿನ ಚುನಾವಣೆಯಲ್ಲಿ ನಮ್ಮ ವಿರುದ್ಧವೇ ಸ್ಪರ್ಧಿಸಿ, ಗೆಲ್ಲುವಷ್ಟರ ಮಟ್ಟಿಗೆ ಹಣ ಗಳಿಸಿದ್ದಾರೆ. – ರಾಮು, ಪುರಸಭೆ ಸದಸ್ಯ.