Advertisement

ನಾಲ್ಕನೇ ಚಂಡಮಾರುತದ ಭೀತಿ !

11:29 AM Sep 22, 2018 | Team Udayavani |

ಮಹಾನಗರ: ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಚಂಡಮಾರುತ ದುರ್ಬಲಗೊಂಡು ಪಶ್ಚಿಮದಿಂದ ವಾಯುವ್ಯ ದಿಕ್ಕಿನೆಡೆಗೆ ಸಾಗುತ್ತಿರುವಂತೆಯೇ ಅರಬಿ ಸಮುದ್ರದಲ್ಲೂ ಮೇಲ್ಮೆ„ ಸುಳಿಗಾಳಿ ಸೃಷ್ಟಿಯಾಗಿದೆ. ಸಾಂಧ್ರತೆ ಜಾಸ್ತಿಯಾದರೆ ಇದು ಚಂಡಮಾರುತವಾಗಿ ಮಾರ್ಪಾಡಾಗುವ ಸಾಧ್ಯತೆಯೂ ಇದೆ.

Advertisement

ಬಂಗಾಲಕೊಲ್ಲಿಯ ಚಂಡಮಾರುತದಿಂದ ರಾಜ್ಯದ ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಮಳೆಯ ನಿರೀಕ್ಷೆಯನ್ನು ಮೂಡಿಸಿದೆ.

ಅರಬಿ ಸಮುದ್ರದಲ್ಲಿನ ಸುಳಿಗಾಳಿ ತೀವ್ರಗೊಂಡರೆ ಕರಾವಳಿಯಲ್ಲಿ ಉತ್ತಮ ಮಳೆಯಾಗುವ ಸಂಭವ ಇದೆ. ಈ ವರ್ಷದ ಮೇ 29ರಂದು ಚಂಡಮಾರುತದಿಂದಾಗಿ ಮಂಗಳೂರು ಪರಿಸರದಲ್ಲಿ ಭಾರೀ ಮಳೆಯಾಗಿತ್ತು. ಇದಾದ ಬಳಿಕ ಅಷ್ಟೊಂದು ತೀವ್ರತೆಯ ಮಳೆ ಸುರಿದಿರಲಿಲ್ಲ.

ಮೂರು ಪ್ರಬಲ ಚಂಡಮಾರುತ
ಕಳೆದ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಮೂರು ಪ್ರಬಲ ಚಂಡಮಾರುತ ಕರಾವಳಿ ಮೇಲೆ ಪರಿಣಾಮ ಬೀರಿದೆ. ಅದರಲ್ಲಿಯೂ ಡಿಸೆಂಬರ್‌ನಲ್ಲಿ ‘ಓಖೀ’ ಹೆಸರಿನ ಚಂಡಮಾರುತ ದಕ್ಷಿಣ ಭಾರತದ ಕರಾವಳಿಯನ್ನು ಅಪ್ಪಳಿಸಿತ್ತು. ಸಾಕಷ್ಟು ಬೆಳೆನಾಶ ಹಾಗೂ ಪ್ರಾಣ ಹಾನಿಯಾಗಿತ್ತು.

ಇದಾದ ಬಳಿಕ ಮೇ ತಿಂಗಳಿನಲ್ಲಿ ‘ಸಾಗರ್‌’ ಹೆಸರಿನ ಮತ್ತೊಂದು ಚಂಡಮಾರುತದ ಪರಿಣಾಮದಿಂದಾಗಿ ಕರ್ನಾಟಕ ಕರಾವಳಿ ತೀರದಲ್ಲಿ ಗಾಳಿ, ಮಳೆಯಾಗಿತ್ತು. ಇದಾದ ಕೆಲವೇ ದಿನದಲ್ಲಿ ‘ಮೆಕುನು’ ಎಂಬ ಮತ್ತೊಂದು ಪ್ರಬಲ ಚಂಡಮಾರುತ ಅರಬಿ ಸಮುದ್ರದಲ್ಲಿ ಸೃಷ್ಟಿಯಾಗಿ ಒಮಾನ್‌ ದೇಶದಲ್ಲಿ ಸಾಕಷ್ಟು ನಷ್ಟ-ಹಾನಿಯುಂಟು ಮಾಡಿತ್ತು. ಇದರ ಪರಿಣಾಮ ಕೂಡ ಕರ್ನಾಟಕ ಕರಾವಳಿ ಪ್ರದೇಶಕ್ಕೆ ಉಂಟಾಗಿತ್ತು.

Advertisement

ಮಳೆ ತೀರಾ ಕಡಿಮೆ
ಕಳೆದ ವರ್ಷದ ಸೆಪ್ಟಂಬರ್‌ ತಿಂಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಲಿಲ್ಲ. 2017 ಸೆ. 1ರಿಂದ ಸೆ. 20ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 245.8 ಮಿ.ಮೀ. ಮಳೆಯಾಗಿತ್ತು. ಆದರೆ ಈ ವರ್ಷ ಕೇವಲ 23.6 ಮಿ.ಮೀ. ಮಳೆಯಾಗಿದೆ.

ಸಮುದ್ರದ ಮೇಲ್ಮೈ ಸುಳಿಗಾಳಿ
ಅರಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಇದು ತೀವ್ರಗೊಂಡಲ್ಲಿ ದ.ಕ., ಉಡುಪಿ ಸಹಿತ ಕರಾವಳಿ ಪ್ರದೇಶಗಳಲ್ಲಿ ಮಳೆಯಾಗುವ ಸಂಭವ ಇದೆ.
– ಶ್ರೀನಿವಾಸ ರೆಡ್ಡಿ, ರಾಜ್ಯ ನೈಸರ್ಗಿಕ
ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next