Advertisement

ನ್ಯಾಯದಾನ ವ್ಯವಸ್ಥೆ ಮೇಲೆ ಕಳಕಳಿ ನಮಗಿದೆ

03:23 AM Jan 13, 2018 | |

ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸುಪ್ರೀಂಕೋರ್ಟ್‌ನ ನಾಲ್ವರು ಹಾಲಿ ಮುಖ್ಯ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ (ಮೆಮೊರಾಂಡಮ್‌ ಆಫ್ ಪ್ರೊಸೀಜರ್‌), ನ್ಯಾಯಮೂರ್ತಿಗಳಿಗೆ ಹಾಗೂ ನ್ಯಾಯಪೀಠಕ್ಕೆ ಪ್ರಕರಣಗಳನ್ನು ಹಂಚಿಕೆ ಮಾಡುವ ಬಗ್ಗೆ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರದ ಪೂರ್ಣ ಪಾಠ ಇಲ್ಲಿದೆ.

Advertisement

ಸನ್ಮಾನ್ಯ ಮುಖ್ಯ ನ್ಯಾಯಮೂರ್ತಿಗಳೇ,
ಇತ್ತೀಚೆಗೆ ಈ ಕೋರ್ಟ್‌ ನೀಡಿದ ಕೆಲವೊಂದು ತೀರ್ಪುಗಳಿಂದಾಗಿ ಒಟ್ಟಾರೆ ನ್ಯಾಯದಾನ ವ್ಯವಸ್ಥೆ ಮತ್ತು ಹೈಕೋರ್ಟ್‌ಗಳ ಸ್ವಾತಂತ್ರ್ಯದ ಮೇಲೆಯೇ ಪರಿಣಾಮ ಬೀರಿದೆ. ಇದರ ಜತೆಗೆ ಗೌರವಾನ್ವಿತ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯ ಆಡಳಿತಾತ್ಮಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹೀಗಾಗಿ ಅತ್ಯಂತ ಕಳಕಳಿ ಮತ್ತು ಕಳವಳದಿಂದ ನಾವು ನಿಮಗೆ ಈ ಪತ್ರದ ಮೂಲಕ ನಮ್ಮ ಅಭಿಪ್ರಾಯ ತಿಳಿಯಪಡಿಸುತ್ತಿದ್ದೇವೆ.

ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್‌ ಹೈಕೋರ್ಟ್‌ಗಳ ಸ್ಥಾಪನೆ ಬಳಿಕ ವ್ಯವಸ್ಥಿತವಾದ ಮತ್ತು ಕ್ರಮಬದ್ಧವಾದ ನ್ಯಾಯದಾನ ವ್ಯವಸ್ಥೆ ಜಾರಿಗೆ ಬಂದಿತು. ಇನ್ನು ಈ ನ್ಯಾಯಾಲಯದ ವ್ಯವಸ್ಥೆ ಮತ್ತು ಕಾರ್ಯವಿಧಾನಗಳು ಈ ಮೂರು ಹೈಕೋರ್ಟ್‌ಗಳು ಸ್ಥಾಪನೆಯಾಗಿ ಶತಮಾನಗಳು ಕಳೆದ ಬಳಿಕ ರೂಪಿತಗೊಂಡವು. ಬ್ರಿಟಿಷರು ರೂಪು ಗೊಳಿಸಿದ ನ್ಯಾಯಶಾಸ್ತ್ರಗಳಿಂದ ನಮ್ಮಲ್ಲಿ ರುವ ನ್ಯಾಯದಾನ ವ್ಯವಸ್ಥೆ ರೂಪುಗೊಂಡಿದೆ.

ನ್ಯಾಯದಾನದ ಒಟ್ಟಾರೆ ವ್ಯವಸ್ಥೆಯಲ್ಲಿ ಮುಖ್ಯ ನ್ಯಾಯ ಮೂರ್ತಿ ಇತರರಿಗೆ ಕರ್ತವ್ಯವನ್ನು ನಿಗದಿ ಮಾಡುತ್ತಾರೆ. ವಿವಿಧ ಕೋರ್ಟ್‌ಗಳಲ್ಲಿ ಇರುವ ಪ್ರಕರಣಗಳಿಗೆ ತಕ್ಕಂತೆ ಯಾವ ನ್ಯಾಯಮೂರ್ತಿಗೆ ಅಥವಾ ಪೀಠಕ್ಕೆ ಪ್ರಕರಣವನ್ನು ವಹಿಸಬೇಕು ಎಂಬ ವಿಚಾರವನ್ನು ಆಯಾ ವಿಷಯಗಳ ಗಂಭೀರತೆಯನ್ನು ಅನುಸರಿಸಿ ನಿರ್ಧರಿಸಬೇಕು. ಯಾವುದೇ ನ್ಯಾಯಮೂರ್ತಿ ಅಥವಾ ಪೀಠಕ್ಕೆ ಪ್ರಕರಣಗಳನ್ನು ಹಂಚಿಕೆ ಮಾಡುವ ವ್ಯವಸ್ಥೆ ಶಿಸ್ತುಬದ್ಧ ಮತ್ತು ಪಾರದರ್ಶಕವಾಗಿರ ಬೇಕು. ಅದು ಮುಖ್ಯ ನ್ಯಾಯಮೂರ್ತಿಗಳ ಅಥವಾ ಅವರ ಸಹೋದ್ಯೋಗಿಯ ಕೋರ್ಟ್‌ ವ್ಯವಹಾರದ ಆದ್ಯತೆಯಾಗ ಬೇಕೇ ಹೊರತು ಅದುವೇ ಪರಮಾಧಿಕಾರ, ಕಾನೂನಿನ ಸೂಚಕವಾಗಬಾರದು. 

ನಮ್ಮ ದೇಶದ ನ್ಯಾಯದಾನ ವ್ಯವಸ್ಥೆ ಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಎಂದರೆ ಸಮಾನರಲ್ಲಿ ಮೊದಲಿಗ ಅಂದರೆ, ಯಾರು ಹೆಚ್ಚಾ ಅಲ್ಲ; ಕಡಿಮೆಯೂ ಅಲ್ಲ. ಇನ್ನು ಪ್ರಕರಣಗಳ ಹಂಚಿಕೆಗೆ ಸಂಬಂಧಿಸಿದಂತೆಯೂ ಅದಕ್ಕಾಗಿಯೇ ಮೀಸಲಾಗಿ ಇರುವ ಪದ್ಧತಿ ಇದೆ. ಬದಲಾಗಿ ರುವ ಕಾಲಕ್ಕೆ ತಕ್ಕಂತೆ ಮುಖ್ಯ ನ್ಯಾಯಮೂರ್ತಿಗಳೂ ಇರ ಬೇಕು. ಇದರ ಜತೆಗೆ ಯಾವುದೇ ನಿಗದಿತ ಪ್ರಕರಣವನ್ನು ನ್ಯಾಯಪೀಠ ಅಥವಾ ನ್ಯಾಯ ಮೂರ್ತಿಗೆ ಹಂಚಿಕೆ ಮಾಡುವ ವೇಳೆ ಅವರಿಗೆ ಅದನ್ನು ನಿರ್ವಹಿಸಲು ಸಾಧ್ಯವೇ ಎನ್ನುವುದನ್ನು ಪರಿಶೀಲಿಸಬೇಕು.

Advertisement

ಈ ವಿಚಾರಗಳು ಮಾತ್ರವಲ್ಲದೆ, ಈ ಕೋರ್ಟ್‌ನಲ್ಲಿರುವ ನ್ಯಾಯಮೂರ್ತಿಗಳು ಸೇರಿದಂತೆ ಹಲವು ನ್ಯಾಯಪೀಠ ಗಳಲ್ಲಿರುವ ಸದಸ್ಯರು ನಿಗದಿತ ಪ್ರಕರಣವನ್ನು ಇದೇ ಪೀಠದಲ್ಲಿಯೇ ವಿಚಾರಣೆ ನಡೆಸಬೇಕು, ಪೀಠದಲ್ಲಿ ಇಷ್ಟೇ ಮಂದಿ ಸದಸ್ಯರಿರಬೇಕು, ಯಾರು ನೇತೃತ್ವ ವಹಿಸಬೇಕು ಎಂಬುದರ ಬಗ್ಗೆ ತರ್ಕಕ್ಕೆ ನಿಲ್ಲಬಾರದು.

ಮೇಲ್ಕಂಡ ಎರಡು ವಿಚಾರಗಳು ಉಲ್ಲಂಘನೆಯಾದರೆ ಅಹಿತಕರ ಮತ್ತು ಅನಪೇಕ್ಷಿತ ಪರಿಣಾಮಗಳು ಉಂಟಾಗು ತ್ತವೆ. ಇದರ ಜತೆಗೆ ಈ ಸಂಸ್ಥೆಯ ಮೇಲೆ ಇರಿಸಿಕೊಂಡಿರುವ ನಂಬುಗೆಯ ಮೇಲೆ ಪ್ರಶ್ನೆಗಳು ಉಂಟಾಗುತ್ತವೆ. ಇದರ ಜತೆಗೆ ಹಲವು ಮಾತುಗಳು ಕೇಳುವಂತಾಗುತ್ತದೆ.

ವಿಷಾದಪೂರ್ವಕವಾಗಿ ಹೇಳುವುದಾದರೆ ಮೇಲ್ಕಂಡ ಎರಡೂ ವಿಚಾರಗಳನ್ನು ಗಂಭೀರವಾಗಿಯೇ ಪರಿಗಣಿಸಲಾ ಗಿಲ್ಲ. ರಾಷ್ಟ್ರದ ಮತ್ತು ಈ ಸಂಸ್ಥೆ ಮೇಲೆ ಮೇಲೆ ಪ್ರಭಾವ ಮತ್ತು ದೂರಗಾಮಿ ಪರಿಣಾಮ ಬೀರಬಹುದಾದ ಪ್ರಕರಣಗಳ ಹಂಚಿಕೆಯನ್ನು ಮುಖ್ಯ ನ್ಯಾಯಮೂರ್ತಿಗಳು ತಮಗೆ ಬೇಕಾದ ನ್ಯಾಯಪೀಠಗಳಿಗೆ ನೀಡಿದ್ದಾರೆ. ಅದಕ್ಕೆ ಯಾವುದೇ ಮಹತ್ವ ಇಲ್ಲ ಎನ್ನುವುದೇ ನಮ್ಮ ಪ್ರತಿಪಾದನೆ. ಘನತೆಯುಳ್ಳ ಈ ಸಂಸ್ಥೆಯ ವರ್ಚಸ್ಸಿಗೆ ಧಕ್ಕೆಯಾಗಬಾರದು ಎಂಬ ಕಾರಣದಿಂದಲೇ ಕೆಲವೊಂದು ಅಂಶಗಳನ್ನು ನಾವು ಪ್ರಸ್ತಾಪಿಸುತ್ತಿಲ್ಲ. ಆದರೆ ಸಂಸ್ಥೆಯ ವರ್ಚಸ್ಸು ಕಳೆಗುಂದಿದ್ದಂತೂ ಹೌದು. 

ಹೀಗಾಗಿಯೇ 2017ರ ಅ.27ರಂದು ಆರ್‌.ಪಿ.ಲೂತ್ರಾ ಮತ್ತು ಯೂನಿಯನ್‌ ಆಫ್ ಇಂಡಿಯಾ ಪ್ರಕರಣದಲ್ಲಿ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ (ಮೆಮೊರಾಂಡಮ್‌ ಆಫ್ ಪ್ರೊಸೀಜರ್‌) ಬಗ್ಗೆ ತೀರ್ಪು ನೀಡಲಾಗಿತ್ತು. ಒಟ್ಟಾರೆ ವ್ಯವಸ್ಥೆಯ ಹಿತದೃಷ್ಟಿಯಿಂದ ಅದನ್ನು ಶೀಘ್ರವೇ ಇತ್ಯರ್ಥ ಪಡಿಸ ಲಾಯಿತು. ಸಾಂವಿಧಾನಿಕ ಪೀಠದಲ್ಲಿ ತೀರ್ಮಾನ ಕೈಗೊಂಡಿದ್ದ ಪ್ರಕರಣವನ್ನು ಇದೇ ಕೋರ್ಟ್‌ನ ಮತ್ತೂಂದು ನ್ಯಾಯಪೀಠದ ಮುಂದೆ ವಿಚಾರಣೆ ಬಂದಿದ್ದ ಸುಪ್ರೀಂ ಕೋರ್ಟ್‌ ನ್ಯಾಯವಾದಿಗಳ ಸಂಘ ಮತ್ತು ಯೂನಿಯನ್‌ ಆಫ್ ಇಂಡಿಯಾ ನಡುವಿನ ಪ್ರಕರಣದ ವಿಚಾರಣೆ ವೇಳೆ ಹೇಗೆ ನಿರ್ಧಾರವಾಗುತ್ತದೆ.

ಈ ಹಿನ್ನೆಲೆಯಲ್ಲಿ ಐವರು ಸದಸ್ಯರಿರುವ ನ್ಯಾಯಮೂರ್ತಿ ಗಳ ಉನ್ನತಾಧಿಕಾರದ ಸಮಿತಿ (ಕೊಲೀಜಿಯಂ)ಯಲ್ಲಿ ಚರ್ಚೆಯಾಯಿತು. ಅದರಲ್ಲಿ ನೀವು ಕೂಡ ಭಾಗವಹಿಸಿದ್ದೀರಿ. ಅದೇ ಸಂದರ್ಭದಲ್ಲಿ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ (ಮೆಮೊರಾಂಡಮ್‌ ಆಫ್ ಪ್ರೊಸೀಜರ್‌) ಅಂತಿಮ ಗೊಳಿಸಿ ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯ ಮೂರ್ತಿಗಳು 2017ರ ಮಾರ್ಚ್‌ನಲ್ಲಿ ಭಾರತ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ಸರ್ಕಾರದ ವತಿಯಿಂದ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಮತ್ತು ಅದಕ್ಕೆ ಸಂಬಂಧಿಸಿದಂತೆ ಬರೆದ ಪತ್ರಗಳಿಗೂ ಪ್ರತಿಕ್ರಿಯೆ ನೀಡಲಿಲ್ಲ.  

ಹೀಗಾಗಿ ಸುಪ್ರೀಂ ಕೋರ್ಟ್‌ ನ್ಯಾಯವಾದಿಗಳ ಸಂಘ ಮತ್ತು ಯೂನಿಯನ್‌ ಆಫ್ ಇಂಡಿಯಾ ಪ್ರಕರಣದ ಅನುಸಾರ ನೇಮಕ ಪ್ರಕ್ರಿಯೆಯನ್ನು ಅಂತಿಮಪಡಿಸಲು ಸರ್ಕಾರ ಒಪ್ಪಿಕೊಂಡಿದೆ ಅಥವಾ ಈ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲು ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು. 

ಗೌರವಾನ್ವಿತ ನ್ಯಾಯಮೂರ್ತಿ ಸಿ.ಎಸ್‌.ಕರ್ಣನ್‌ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರ ಜು.4ರಂದು ಏಳು ಸದಸ್ಯರನ್ನೊಳಗೊಂಡ ನ್ಯಾಯಪೀಠ ನಿರ್ಧಾರ ಕೈಗೊಂಡು ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ಪ್ರಕ್ರಿಯೆ ಗಳಲ್ಲಿ ಬದಲು ಮಾಡಬೇಕು. ಜತೆಗೆ ವಾಗ್ಧಂಡನೆ ಯಲ್ಲದೆ ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಇತರ ವ್ಯವಸ್ಥೆಗಳಬಗ್ಗೆ ವಿಚಾರ ನಡೆಸಿದವು. ಆದರೆ ನೇಮಕ ಪ್ರಕ್ರಿಯೆ ಬಗ್ಗೆ ಏಳು ನ್ಯಾಯಮೂರ್ತಿಗಳು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ. 

ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ಅತ್ಯಂತ ಪ್ರಮುಖ ವಿಚಾರವಾಗಿರುವದರಿಂದ ಅದರ ಬಗ್ಗೆ ಏನೇ ವಿಚಾರ ಇದ್ದರೂ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನ ಮತ್ತು ಸಂಪೂರ್ಣ ಕೋರ್ಟ್‌ನಲ್ಲಿಯೇ ಚರ್ಚೆಯಾಗಬೇಕು. ಒಂದು ವೇಳೆ ಕೋರ್ಟಲ್ಲಿಯೇ ನಿರ್ಧಾರವಾಗಬೇಕೆಂದರೆ ಸಾಂವಿಧಾನಿಕ ಪೀಠದಲ್ಲಿರುವ ನಾವು ಯಾರೊಬ್ಬರೂ ಅದನ್ನು ನಿರ್ವಹಿಸಬಾರದು. 

ಈ ಬೆಳವಣಿಗೆ ನಿಜಕ್ಕೂ ಗಂಭೀರ ವಿಚಾರ ಮತ್ತು ಕಳವಳಕಾರಿ. ಹೀಗಾಗಿ ಕರ್ತವ್ಯ ಬದ್ಧರಾಗಿರುವ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಈ ಬಗ್ಗೆ ಗಮನ ಹರಿಸಿ, ಪರಿಸ್ಥಿತಿಯನ್ನು ಸರಿಪಡಿಸಬೇಕು. ಜತೆಗೆ ಅಗತ್ಯಪಟ್ಟ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕಿಂತ ಮೊದಲು ನ್ಯಾಯ ಮೂರ್ತಿಗಳ ಉನ್ನತಾಧಿಕಾರದ ಸಮಿತಿ (ಕೊಲೀಜಿಯಂ) ಯಲ್ಲಿ ಸದಸ್ಯರ ಅಭಿಪ್ರಾಯ ಪಡೆದುಕೊಳ್ಳಬೇಕು. ಒಂದು ವೇಳೆ ಅಗತ್ಯ ಬಿದ್ದರೆ ಮುಂದಿನ ಹಂತಗಳಲ್ಲಿ ಇದೇ 

ಕೋರ್ಟ್‌ನ ಇತರ ಮುಖ್ಯ ನ್ಯಾಯಮೂರ್ತಿಗಳ ಜತೆ ಸಮಾಲೋಚನೆ ನಡೆಸಬೇಕು. 2017 ಅ.27ರಂದು ಆರ್‌.ಪಿ.ಲೂತ್ರಾ ಮತ್ತು ಯೂನಿ ಯನ್‌ ಆಫ್ ಇಂಡಿಯಾ ಪ್ರಕರಣದ ತೀರ್ಪಿನಿಂದ ಉಂಟಾದ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಅಗತ್ಯ ಬಿದ್ದರೆ ಪರಿಸ್ಥಿತಿ ಸರಿಪಡಿಸಬೇಕು. ಅದಕ್ಕೆ ಪೂರಕವಾಗಿ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದೇ ಕೋರ್ಟ್‌ ನೀಡಿದ ಆದೇಶಗಳನ್ನು ಪರಿಶೀಲಿಸುತ್ತೇವೆ.

ಇಂತಿ ನಮಸ್ಕಾರಗಳೊಂದಿಗೆ
ನ್ಯಾ.ಜೆ.ಚಲಮೇಶ್ವರ್‌
ನ್ಯಾ.ರಂಜನ್‌ ಗೊಗೋಯ್‌
ನ್ಯಾ.ಮದನ್‌ ಬಿ.ಲೋಕುರ್‌
ನ್ಯಾ.ಕುರಿಯನ್‌ ಜೋಸೆಫ್

ನ್ಯಾಯಮೂರ್ತಿಗಳ ಕಿರು ಪರಿಚಯ
ನ್ಯಾ.ಜೆ.ಚಲಮೇಶ್ವರ್‌
ಸುಪ್ರೀಂಕೋರ್ಟಲ್ಲಿ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿ. ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಯನದ ಬಳಿಕ ಆಂಧ್ರ ವಿವಿಯಿಂದ ಕಾನೂನು ಪದವಿ ಪಡೆದರು. 1995ರಲ್ಲಿ ಅವರು ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿಯಾಗಿ ನೇಮಕಗೊಂಡರು. 1997ರಲ್ಲಿ ಹಿಂದಿನ ಆಂಧ್ರಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಗುವಾಹಟಿ ಮತ್ತು ಕೇರಳ ಹೈಕೋರ್ಟ್‌ ಗಳಲ್ಲಿಯೂ ಅವರು ಸೇವೆ ಸಲ್ಲಿಸಿದ್ದರು. 2011ರ ಅಕ್ಟೋಬರ್‌ನಲ್ಲಿ ಹಾಲಿ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಜತೆಗೇ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2015ರಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ (ಎನ್‌ಜೆಎಸಿ) ರಚನೆ ಮಾಡುವ ಬಗ್ಗೆ ಐವರು ಸದಸ್ಯರು ತೀರ್ಪು ನೀಡಿದ್ದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಲ್ಲದೆ ಖಾಸಗಿತನ ವಿಚಾರ ಮೂಲಭೂತ ಹಕ್ಕು ಎಂದು ತೀರ್ಪು ನೀಡದ ನ್ಯಾಯಪೀಠದಲ್ಲಿ ಇವರೂ ಇದ್ದರು. ಈ ವರ್ಷದ ಅಕ್ಟೋಬರ್‌ನಲ್ಲಿ ಅವರು ಸೇವಾ ನಿವೃತ್ತಿಗೊಳ್ಳಲಿದ್ದಾರೆ.

ನ್ಯಾ.ರಂಜನ್‌ ಗೊಗೋಯ್‌
ನ್ಯಾ.ಚಲಮೇಶ್ವರ್‌ ನಂತರದ ಹಿರಿಯ ನ್ಯಾಯಮೂರ್ತಿ. ಈ ವರ್ಷದ ಅಕ್ಟೋಬರ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಅಲಂಕರಿಸುವವರು. ಈಗಿನಂತೆಯೇ ಆದರೆ ಈಶಾನ್ಯ ರಾಜ್ಯ ದಿಂದ ಮೊದಲ ಬಾರಿಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹುದ್ದೆ ವಹಿಸಿಕೊಳ್ಳಲಿರುವ ಮೊದಲ ವ್ಯಕ್ತಿ. 2019ರ ನವೆಂಬರ್‌ನಲ್ಲಿ ಅವರು ಸೇವಾ ನಿವೃತ್ತಿಯಾಗಲಿದ್ದಾರೆ. 2001ರಲ್ಲಿ ಅವರು ಗುವಾಹಟಿ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿ ಯಾಗಿದ್ದರು. ನಂತರ ಅವರು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾದರು. 2012ರಲ್ಲಿ ಅವರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾದರು.

ನ್ಯಾ.ಎಂ.ಬಿ.ಲೋಕುರ್‌
ದೆಹಲಿ ವಿವಿಯಲ್ಲಿ ಕಾನೂನು ಅಧ್ಯಯನಕ್ಕೆ ಮೊದಲು ಸ್ಟೀಫ‌ನ್‌ ಕಾಲೇಜಿನಲ್ಲಿ ಇತಿಹಾಸ ಕಲಿತರು. 1997ರಲ್ಲಿ ಅವರು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿಯಾಗಿ ನೇಮಕಗೊಂಡರು. ಅದೇ ವರ್ಷ ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ನೇಮಕಗೊಂಡರು.  ದೆಹಲಿ ಹೈಕೋರ್ಟ್‌ ನ್ಯಾಯವಾದಿಯಾಗಿಯೂ ಅವರು ಸೇವೆ ಸಲ್ಲಿಸಿದರು. 1999ರಲ್ಲಿ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಮತ್ತು ಪ್ರಭಾರ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 2012ರಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆವ ಮುನ್ನ ಗುವಾಹಟಿ ಮತ್ತು ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಈ ವರ್ಷದ ಡಿಸೆಂಬರ್‌ನಲ್ಲಿ ನಿವೃತ್ತಿಯಾಗಲಿದ್ದಾರೆ.

ನ್ಯಾ.ಕುರಿಯನ್‌ ಜೋಸೆಫ್
ಕೇರಳದಲ್ಲಿ ಜನಿಸಿದ ಅವರು, ತಿರುವನಂತಪುರದ ಕೇರಳ ಲಾ ಅಕಾಡೆಮಿಯ ಕಾನೂನು ಕಾಲೇಜಿನಲ್ಲಿ ಪದವಿ ಪಡೆದರು. 1979ರಲ್ಲಿ ಅವರು ಕೇರಳ ಹೈಕೋರ್ಟಲ್ಲಿ ನ್ಯಾಯವಾದಿಯಾಗಿ ವೃತ್ತಿ ಜೀವನ ಆರಂಭಿಸಿದರು. 2000ನೇ ಇಸ್ವಿಯಲ್ಲಿ ನ್ಯಾಯ ಮೂರ್ತಿಯಾಗಿ ನೇಮಕಗೊಳ್ಳುವುದಕ್ಕಿಂತ ಮೊದಲು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಮತ್ತು ಹಿರಿಯ ನ್ಯಾಯವಾದಿಯಾಗಿ ದ್ದರು. ಕೇರಳ ಹೈಕೋರ್ಟ್‌ನ ಪ್ರಭಾರ ಮುಖ್ಯ ನ್ಯಾಯಮೂರ್ತಿ ಯಾಗಿಯೂ ಇದ್ದರು. 2010ರ ಫೆ.8ರಿಂದ 2013 ಮಾ.7ರ ವರೆಗೆ ಅವರು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 2013ರಲ್ಲಿ ಅವರು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದರು. ಈ ವರ್ಷದ ನವೆಂಬರ್‌ನಲ್ಲಿ ಅವರು ನಿವೃತ್ತಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next