Advertisement

ನೆರೆಯಲ್ಲಿ ಸಾಗಿ ಬಂದ ನಾಲ್ಕು ಕತೆಯ ಹನಿಗಳು

06:00 AM Oct 07, 2018 | Team Udayavani |

ತಮ್ಮನು ಬರೆದ ಚಿತ್ರಗಳು
ಉರುಳಿದ ಗೋಡೆಗಳು, ಪ್ರೇಮ್ ಕಿತ್ತುಹೋದ ಫೋಟೋಗಳು, ಮಣ್ಣಲ್ಲಿ ಮುಳುಗಿ ಎದ್ದಂತಿದ್ದ ಹಾಸಿಗೆ, ಕಾಲಿಟ್ಟಲ್ಲೆಲ್ಲ ಕೆಸರು. ತಮ್ಮ ಮನೆಯೇ ಇದು ! ತಡವಿ ತಡವಿ ನೋಡುತ್ತಿದ್ದ ಕಂಗಳು ಮಂಜಾಗಿ ಏನೂ ಕಾಣದಂತಾದವು ರವೀಂದ್ರನಿಗೆ. ಯಾರೋ ಆಧಾರಕ್ಕೆ ಹಿಡಿದಂತೆನಿಸಿ ತಿರುಗಿ ನೋಡಿದ ಹೆಂಡತಿ ಮೀನಾಕ್ಷಿ , ಮಗುವನ್ನು ಮಲಗಿಸಿ ಜೋಗುಳ ಹಾಡುತ್ತಿದ್ದ ತೊಟ್ಟಿಲ ಕಡೆ ಕೈ ತೋರಿಸಿದಳು. ಎಲ್ಲಿದೆ ಅದು? ಸೂರಿಗೆ ಕಟ್ಟಿದ್ದ ಹಗ್ಗ ತಮ್ಮ ಕನಸುಗಳಿಗೆ ನೇಣು ಹಾಕಿದಂತೆ ಅನ್ನಿಸಿತು. ಮಾತಾಡದೆ ಎದೆಗೊತ್ತಿ ಹೆಂಡತಿಯನ್ನು ಸಂತೈಸಿದನು.

Advertisement

ಅಧಿಕಾರಿಗಳು ಎಲ್ಲವನ್ನು ಗುರುತು ಹಾಕಿಕೊಳ್ಳುತ್ತಿದ್ದರು. ಜೊತೆಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಗಂಜಿ ಕೇಂದ್ರದಿಂದ ಇದೀಗ ತಾನೇ ಇದ್ದಕ್ಕಿದ್ದಂತೆ ಜೋರಾಗಿ ಮಗುವಿನ ಅಳುವಿನ ದನಿ ಕೇಳಿಸಿತು. ಮೀನಾಕ್ಷಿ ಓಡಿ ಮೂರು ವರ್ಷದ ತನ್ನ ಪಾಪುವನ್ನು ಎತ್ತಿಕೊಂಡು ಬಂದಳು. ಮಗು ತನ್ನ ಪುಟ್ಟ ಕೈಯಲ್ಲಿ ಅಮ್ಮನಿಗೆ ಪಟಪಟ ಹೊಡೆಯುತ್ತ ತನ್ನನ್ನು ಕೆಳಗಿಳಿಸುವಂತೆ ಹಟ ಮಾಡುತ್ತಿತ್ತು. ಅಳು ನಿಲ್ಲದಿರಲು ಮೀನಾಕ್ಷಿ ಮಗುವನ್ನು ಕೆಳಗಿಳಿಸಿದಳು. ಮಗು ಮತ್ತೆ ಉರುಳಿ ಬಿದ್ದು ತಮ್ಮ ಮನೆಯ ಗೋಡೆಯನ್ನು ಸವರುತ್ತ ಜೋರಾಗಿ ಅಳಲು ಪ್ರಾರಂಭಿಸಿತು. ಮಗುವನ್ನು ಸಮಾಧಾನಿಸಲು ಮಾಡಿದ ಸರ್ವಪ್ರಯತ್ನಗಳು ನಿರರ್ಥಕವಾದವು. ಪರಿವೀಕ್ಷಣೆಗೆಂದು ಬಂದ ಅಧಿಕಾರಿಗಳಿಗೆ ತಮ್ಮ ಕೆಲಸ ಸಾಗದಂತೆನಿಸಿ ಮಗುವಿನಲ್ಲಿ ಅಂದರು, “”ಮಗು, ನಿಮಗೆ ಹೊಸಮನೆ, ಚೆಂದದ ಮನೆ, ಕಟ್ಟಿಕೊಡುತ್ತೇವೆ” ತಮ್ಮ ಮೊಬೈಲ್‌ನಿಂದ ಯಾವುದೋ ಒಂದು ಮನೆಯ ಫೋಟೋ ತೋರಿಸಿ ಸಮಾಧಾನಿಸಿದರು. ಮಗು ಮುಗ್ಧವಾಗಿ ಆ ಚಿತ್ರವನ್ನು ನೋಡುತ್ತ ಅವ‌ರಲ್ಲಿ ತೊದಲು ಮಾತಲ್ಲಿ ಕೇಳಿತು,  “”ಈ ಮನೆಯ ಗೋಡೆಗಳಲ್ಲಿ ಪುಟಾಣಿ ತಮ್ಮನು ಬರೆದ ಚಿತ್ರಗಳು ಇರುತ್ತಾ…”

ದೇವರಿಗೆ ಸಿಟ್ಟು ಬಂದಿದೆ
ಗಹನವಾದ ಚರ್ಚೆ. ಪ್ರಳಯಕ್ಕೆ ಊರೇ ಮುಳುಗಿದಂತೆ ಮಾತಿನ ಪ್ರವಾಹದಲ್ಲಿ ಸೇರಿದ್ದವರೆಲ್ಲ ಮುಳುಗಿದ್ದರು. ವಿಷಯ ಒಂದೇ ಪ್ರಳಯ, ಪ್ರಳಯ, ಪ್ರಳಯ… ಕಾರಣಗಳ ಹುಡುಕಾಟಕ್ಕೆ ವೇದಿಕೆಯಾಗಿತ್ತು. ಪ್ರಳಯದ ಹೊಡೆತಕ್ಕೆ ಇನ್ನೂ ಸಿಗದ ಆ ಜಾಗ ಸ್ವಲ್ಪ ಎತ್ತರದಲ್ಲಿತ್ತು. ಮಳೆ ಇನ್ನೂ ಹನಿಯುತ್ತಿತ್ತು, ಮಾತಿನ ಮಳೆಯಲ್ಲಿ ಕಾರಣಗಳನ್ನು ಪಟ್ಟಿ ಮಾಡುತ್ತಿದ್ದರು. ಇದಕ್ಕೆ ಕಾರಣ,  

 “”ಅನಂತಪದ್ಮನಾಭ ದೇವಸ್ಥಾನದ ರಹಸ್ಯ ಕೋಣೆಗಳ ಬಾಗಿಲು ತೆಗೆದದ್ದು” ಒಬ್ಬರೆಂದರು.
“”ಅದು ಬಿಡಿ, ಮೊನ್ನೆ ಬಂತಲ್ಲ ಕೋರ್ಟ್‌ ತೀರ್ಪು, ಹೆಂಗಸರು ಮಲೆಗೆ ಹೋಗಬಹುದೆಂದು. ಅದೇ ಕಾರಣ, ಯಾರೂ ಹೋಗುವುದೇ ಬೇಡ ಎಂದು ಅಯ್ಯಪ್ಪ ಸ್ವಾಮಿ ಎಲ್ಲವನ್ನು ನೀರಲ್ಲೇ ಮುಳುಗಿಸಿದ” ಮತ್ತೂಂದು ಅಧಿಕೃತ ಧ್ವನಿ. 
“”ಅದು ಮೊನ್ನೆ ನಡೆಯಿತಲ್ಲ ಏಳು ದಿನ ಯಜ್ಞ, ಅದಕ್ಕೆ ಅಸ್ಪೃಶ್ಯರ ಪ್ರವೇಶವಾಗಿರಬೇಕು”

“”ಸಾರ್ವಜನಿಕವಾಗಿ ಗೋವುಗಳನ್ನು ಕಡಿದು ಅಡುಗೆ ಮಾಡಿ ತಿಂದರೆ… ಅದಕ್ಕೆ ಸಿಕ್ಕಿದ ಶಿಕ್ಷೆ ಇದು”
ಅಂತೂ ಒಂದಂಶ ಸ್ಪಷ್ಟ. ದೇವರಿಗೆ ಸಿಟ್ಟು ಬಂದಿದೆ. ಜನರು ಬಿಸಿಬಿಸಿ ಚರ್ಚೆಯಲ್ಲಿರುವಾಗ ಜನರೆಲ್ಲ ಒಮ್ಮೆಲೆ ಎದ್ದು ನಿಂತರು. ಹತ್ತಿರದಲ್ಲೇ ಹರಿಯುತ್ತಿದ್ದ ನದಿ ನೆರೆ ಹೆಬ್ಟಾವಿನಂತೆ ಇವರಿದ್ದ ಜಾಗವನ್ನು ಆಕ್ರಮಿಸುತ್ತಿತ್ತು. ಚರ್ಚಿಸಬೇಕಿದ್ದ ವಿಚಾರಗಳೆಲ್ಲ ಮರೆತುಹೋಗಿ ಬದುಕುವ ದಾರಿ ಯಾವುದು ಎಂದು ಎಲ್ಲರೂ ಕ್ರಿಯಾಶೀಲರಾದರು.

Advertisement

ಎಲ್ಲಿದ್ದಾನೆ ದೇವರು
ನಂಬೂದಿರಿ ಮನೆಯಲ್ಲಿ ಸಮರೋಪಾದಿಯಲ್ಲಿ ಮನೆಯನ್ನು ಸ್ವತ್ಛಗೊಳಿಸುವ ಕಾರ್ಯ ನಡೆದಿತ್ತು. ಯಾರು ಯಾರೋ ಬಂದರು, ದೇವರೇ ನಿಯಮಿಸಿದಂತೆ. ಎಲ್ಲಿಯವರು? ಯಾರವರು? ಯಾವ ಭಾಷೆ? ಯಾವ ಮತ? ಬಂದರು ಬಂದವರು ಅವರಿವರೆನ್ನದೆ ಒಂದಾಗಿ ದುಡಿದರು. ಕೆಸರು ಮಣ್ಣು ಎತ್ತಿ ಹಾಕುವುದೇನು, ನೆಲ ಸ್ವತ್ಛಗೊಳಿಸುವುದೇನು? ಕೆಟ್ಟು ಹೋದ ವಿದ್ಯುತ್‌ ಸಂಪರ್ಕ, ನಳ್ಳಿ ವ್ಯವಸ್ಥೆ ಸರಿಪಡಿಸುವುದೇನು? ಒಂದೇ ಎರಡೇ, ತಮ್ಮವರೆಂಬಂತೆ, ತಮ್ಮ ಮನೆಯವರೆಂಬಂತೆ ದುಡಿದರು, ದಣಿದರು, ಧನ್ಯತೆಯ ಭಾವದಲ್ಲಿ ಮಿಂದರು. ಒಳ ಪ್ರವೇಶಿಸಿದ ನಂಬೂದಿರಿ ತಮ್ಮ ಮನೆಯನ್ನೊಮ್ಮೆ ನೋಡಿದರು. ಪ್ರಳಯಕ್ಕೆ ಸಿಲುಕಿ ಮೇಲ್ಛಾವಣಿ ಮಾತ್ರ ಕಾಣುತ್ತಿದ್ದ ತಮ್ಮ ಮನೆ ಹೇಗಿತ್ತು? ಹೇಗಾಯಿತು? ತೃಪ್ತಿಯ ಭಾವ ಮುಖದಲ್ಲಿ ಕಾಣಿಸುತ್ತಿತ್ತು. 

ಸ್ವಚ್ಛಗೊಳಿಸಿದವರಲ್ಲಿ ನಂಬೂದಿರಿ ಕೇಳಿದರು, “”ಯಾವ ಜಾತಿ ನೀವು? ಬೇರೇನಿಲ್ಲ. ದಿನಾ ದೇವರ ಪೂಜೆ ಮಾಡುತ್ತಿದ್ದ ಮನೆ ಇದು. ಹಿಂದೆ ನಮ್ಮ ಪೂರ್ವಿಕರಿಗೆ ದೇವರು ಪ್ರತ್ಯಕ್ಷವಾದ ಜಾಗ ಇದು” ಎಂದು ದೇವರು ಪ್ರತ್ಯಕ್ಷವಾದ ಕೋಣೆಗೆ ಕೈತೋರಿಸಿ ತಿರುಗಿ ನೋಡಿದರು.

ಎಲ್ಲಿದ್ದಾರೆ ಅವರು! ದೇವರಂತೆ ಮಾಯವಾಗಿದ್ದರು. ನಂಬೂದಿರಿ ಹುಚ್ಚರಂತೆ ಮನೆಯ ಒಳ ಹೊರಗೆ ಓಡಿದರು.

ಹೆಣಗಳು
ಕತ್ತಲೆ ಮಳೆಯಾಗಿ ಸುರಿಯಿತು. ಮಾತಿಲ್ಲ ಮೌನದ್ದೇ ಧ್ವನಿ. ನಾಡು ಮರಣವನ್ನು ಕಂಡು ನಿಶ್ಯಕ್ತಿಯಿಂದ ನಟ ನಟನೆ ನರಳಿತು. ಎಲ್ಲವನ್ನು ದಾಖಲಿಸುವುದಕ್ಕಾಗಿ ಆತ ಸರಕಾರದ ಆದೇಶದ ಮೇರೆಗೆ ನದಿಯ ದಂಡೆಯಲ್ಲಿ ನಿಂತು ಜನರ ಸಾವುಗಳನ್ನು ಗಂಟೆ ಗಂಟೆಗೆ ದಾಖಲಿಸಿ ಮೇಲಿನ ಅಧಿಕಾರಿಗಳಿಗೆ ತಿಳಿಸುತ್ತಿದ್ದನು. ತನ್ನ ಸಹಾಯಕರೊಂದಿಗೆ ಉಕ್ಕಿ ಸೊಕ್ಕಿ ಹರಿಯುವ ಈ ನದಿ ಇನ್ನೂ ಎಷ್ಟು ಹೆಣಗಳನ್ನು ತರುತ್ತದೆಯೋ? ಈ ಸಾವಿನ ಬಗ್ಗೆ ಒಂದು ನಿರ್ದಿಷ್ಟ ಲೆಕ್ಕವನ್ನು ಕೊಡಲು ಆತನಿಗೆ ಇನ್ನೂ ಸಾಧ್ಯವಾಗಲಿಲ್ಲ. ಅದಕ್ಕಾಗಿ ಆತ ಮೇಲಿನ ಅಧಿಕಾರಿಗಳ ಪಿರಿಪಿರಿಯನ್ನು ನಿರಂತರ ಕೇಳುತ್ತಿದ್ದಾನೆ. “”ಇನ್ನೂರ ಹದಿನೆಂಟು, ಇನ್ನೂರ ಹಂತ್ತೂಂಬತ್ತು, ಇನ್ನೂರ ಇಪ್ಪತ್ತು…” “”ಸಾರ್‌, ಇನ್ನೊಂದು ಹೆಣ ಬಂತು” ಸಹಾಯಕ ಹೇಳಿದ. “”ಅಯ್ಯೋ…” ಮತ್ತೆ ದಾಖಲೆಯಲ್ಲಿ “ಇನ್ನೂರ ಇಪ್ಪತ್ತೂಂದು’ ಎಂದು ಬರೆದು ಮೇಲಿನ ಅಧಿಕಾರಿಗಳಿಗೆ ಅದನ್ನು ಹೇಳಿದ. ಸಂಜೆಯಾಗಿತ್ತು ನದಿಯ ನೀರು ತೇಕುತ್ತ ತೇಕುತ್ತ ಸಾಗುತ್ತಿತ್ತು. ತನ್ನ ದಾಖಲೆಯನ್ನು ಆತ ನೋಡಿದ. ಇನ್ನೂರ ಇಪ್ಪತ್ತೂಂದು ಎಂದು ಬರೆದಿತ್ತು.
ನದಿಯಲ್ಲಿ ಮತ್ತೆ ಏನೋ ತೇಲುತ್ತ ಬರುತ್ತಿತ್ತು. ಆತ ಸರಿಯಾಗಿ ನೋಡಿದ. ಒಬ್ಬಳು ತಾಯಿ, ಒಂದು ಮಗು ತಿರು ತಿರುಗಿ ಬರುತ್ತಿತ್ತು. ಆ ಹೆಣಗಳು ಅವನ ಹತ್ತಿರ ಬಂದುವು.  

ಆತ ಮತ್ತೆ ಮತ್ತೆ ನೋಡಿದ. ಕಣ್ಣೀರು ಸುರಿಸುತ್ತ ತನ್ನ ದಾಖಲೆಗಳನ್ನು ತನ್ನ ಸಹಾಯಕನಿಗೆ ಕೊಟ್ಟು ನದಿಗೆ ಹಾರಿದ. ನದಿ ಯಾವುದೇ ಆಶ್ಚರ್ಯ ವ್ಯಕ್ತಪಡಿಸದೆ ನಿರ್ಭಾವುಕವಾಗಿ ಆತನನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಸಹಾಯಕನು ಹೆಣಗಳ ದಾಖಲೆಯ ಪುಸ್ತಕದಲ್ಲಿ ಇನ್ನೂರ ಇಪ್ಪತ್ತೆರಡು ಎಂದು ದಾಖಲಿಸಿ ಮುಂದಿನ ಹೆಣಗಳಿಗಾಗಿ ಕಾಯಲಾರಂಭಿಸಿದ.

ಕವಿತಾ ಕೂಡ್ಲು

Advertisement

Udayavani is now on Telegram. Click here to join our channel and stay updated with the latest news.

Next