Advertisement

ಹೊಸಳ್ಳಿಯಲ್ಲಿ ಹೊಸ ವೀರಗಲ್ಲು ಪತ್ತೆ

05:10 PM Apr 20, 2022 | Team Udayavani |

ಶಿರಸಿ: ತಾಲೂಕಿನ ನೆಗ್ಗು ಗ್ರಾಪಂ ವ್ಯಾಪ್ತಿಯ ಹೊಸಳ್ಳಿಯಲ್ಲಿ 1401ನೇ ಇಸವಿಯ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಇತಿಹಾಸಕಾರ ಲಕ್ಷ್ಮೀಶ ಸೋಂದಾ ಅವರ ತಂಡ ಅಪ್ರಕಟಿತ ಈ ಶಾಸನದ ಮೇಲೆ ಬೆಳಕು ಚೆಲ್ಲಿದೆ. ಇದರಿಂದಾಗಿ ನೆಗ್ಗು ಪಂಚಾಯಿತಿ ವ್ಯಾಪ್ತಿಯ ಇತಿಹಾಸದ ಬಗ್ಗೆ ಇದೇ ಮೊದಲ ಬಾರಿ ಹೆಚ್ಚಿನ ಮಾಹಿತಿ ಲಭ್ಯವಾದಂತಾಗಿದೆ.

Advertisement

ಇಲ್ಲಿಯ ಹೊಸಳ್ಳಿ ಗ್ರಾಮದಲ್ಲಿ ಈ ವೀರಗಲ್ಲು ಮಣ್ಣು ಅಡಿಯಲ್ಲಿ ಹೂತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಇತಿಹಾಸಕಾರ ಲಕ್ಷ್ಮೀಶ್ ಸೋಂದಾ, ಈ ಕುರಿತು ಅಭ್ಯಸಿಸಿದಾಗ ಇದೊಂದು ವೀರಗಲ್ಲು ಶಾಸನವಾಗಿದ್ದು ಕ್ರಿ.ಶ. 1401 ರ ಕಾಲಮಾನದ್ದಾಗಿದೆ. ವಿಶೇಷವೆಂದರೆ ಆರುನೂರು ವರ್ಷಗಳ ಹಿಂದೆಯೇ ನೆಬ್ಬೂರು ಪ್ರದೇಶ ಅದೇ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎಂಬ ಅಪೂರ್ವ ಸಂಗತಿ ಈ ಶಾಸನದಿಂದ ತಿಳಿಯುತ್ತದೆ ಎಂದು ತಿಳಿಸಿದ್ದಾರೆ.

ಆಸವರಸ ಒಡೆಯರು ಸತ್ತಗೋವೆಯ (ಸಪ್ತಕೊಂಕಣ)ರಾಜ್ಯವನ್ನಾಳುವ ಸಂದರ್ಭದಲ್ಲಿ ಬಳ್ಳಿಗಾವಿಯ ಅರಸು ಶಷ್ಠಿರಾಯನಿಗೂ ಮತ್ತು ನಾರಣಪ್ಪ ದಂಡನಾಯಕರಿಗೂ ನಡೆದ ಯುದ್ಧದಲ್ಲಿ ನೆಬ್ಬೂರಿನ ತಾಳೆಯ ನಾಯಕನು ರಣರಂಗದಲ್ಲಿ ಕಾದಾಡಿ ಎದುರಾದ ವೈರಿಗಳನ್ನು ಗೆದ್ದು ರಣದೊಳಗೆ ಮಡಿದು ವೀರ ಸ್ವರ್ಗವ ಸಂಗತಿಯನ್ನು ಈ ವೀರಗಲ್ಲು ಶಾಸನ ತಿಳಿಸುತ್ತದೆ ಎಂದಿದ್ದಾರೆ.

ಶಾಸನದ ಸುತ್ತ ಮಹಾಸತಿ ಕಲ್ಲುಗಳೂ ಪತ್ತೆಯಾಗಿವೆ. ಸಾಮಾನ್ಯವಾಗಿ ವೀರಗಲ್ಲುಗಳು ಗಾಳಿ, ಮಳೆಯ ಅಬ್ಬರಕ್ಕೆ ಶತ ಶತಮಾನಗಳಿಂದ ಸಿಲುಕಿ ಉಲ್ಲೇಖೀಸಲಾದ ಅಕ್ಷರಗಳು ಸವಕಳಿ ಹೊಂದಿರುತ್ತವೆ. ಆದರೆ, ಹೊಸಳ್ಳಿಯಲ್ಲಿ ಈ ವೀರಗಲ್ಲು ಮಣ್ಣಿನ ಅಡಿಯಲ್ಲಿ ಸಿಲುಕಿದ್ದರಿಂದ ಹೆಚ್ಚಿನ ಸವಕಳಿ ಹೊಂದಿಲ್ಲ. ವೀರಗಲ್ಲಿನ ಮೊದಲ ಸಾಲಿನಲ್ಲಿ ಯುದ್ಧದ ಚಿತ್ರವಿದೆ. ಈ ಕುರಿತಂತೆ ಶಾಸನದಲ್ಲಿ ಎರಡು ಸಾಲಿನಲ್ಲಿ ಹಿರಿಯ ಶಾಸನ ತಜ್ಞ ಬರಹವಿದೆ. ಎರಡನೇ ಸಾಲಿನಲ್ಲಿ ವೀರ ಯೋಧನನ್ನು ವೈರಿಗಳು ಖಡ್ಗದಿಂದ ಇರಿಯುತ್ತಿರುವ ಚಿತ್ರಗಳು ಮತ್ತು ಈ ಕುರಿತ ಬರಹಗಳಿವೆ.

Advertisement

ಮೂರನೇ ಸಾಲಿನಲ್ಲಿ ದೇವತೆಗಳು ವೀರನನ್ನು ಸ್ವರ್ಗಕ್ಕೆ ಒಯ್ಯುತ್ತಿರುವ ಚಿತ್ರಗಳು ಮತ್ತು ಈ ಕುರಿತ ಬರಹ ಕೆತ್ತನೆ ಮಾಡಲಾಗಿದೆ. ನಾಲ್ಕನೇ ಸಾಲಿನಲ್ಲಿ ವೀರ ಸ್ವರ್ಗಸ್ಥನಾದ ಚಿತ್ರವಿದ್ದರೆ ಇನ್ನೂ ಮೇಲ್ಗಡೆ ಸೂರ್ಯ, ಚಂದ್ರರ ಚಿತ್ರವಿದೆ. ಸೂರ್ಯ ಚಂದ್ರ ಇರುವವರೆಗೂ ಈ ಯೋಧನ ಕೀರ್ತಿ ಅಮರವಾಗಿರುತ್ತದೆ ಎಂಬುದರ ಸಂಕೇತವಾಗಿದೆ. ಇದರ ಅಧ್ಯಯನಕ್ಕೆ ಎಂ.ನಾಗರಾಜ್‌ರಾವ್‌ ಸಹಕರಿಸಿದ್ದಾರೆ ಎನ್ನುತ್ತಾರೆ. ಕ್ಷೇತ್ರಾನ್ವೇಷಣೆ ಸಂದರ್ಭದಲ್ಲಿ ವಿ.ಎನ್‌. ಹೆಗಡೆ ಗೌಡನಮನೆ, ಮಂಜುನಾಥ ಸಾಯಿಮನೆ, ಎಂ.ಡಿ. ಹೆಗಡೆ ಹೊಸಳ್ಳಿ, ಎಸ್‌.ವಿ. ಹೆಗಡೆ ಹಳ್ಳದಕೈ ಮುಂತಾದವರು ಇದ್ದರು.

ಇತಿಹಾಸ ಅರಿವು ಮುಖ್ಯ: ಈಗಿನ ನೆಬ್ಬೂರು ಸಂಪಖಂಡ ಹೋಬಳಿ ಜಾನ್ಮನೆ ಪಂಚಾಯತದ ಕೇವಲ 15 ಮನೆಗಳಿರುವ ಒಂದು ಪುಟ್ಟ ಹಳ್ಳಿ. ಕೃಷಿಕರು, ಕೂಲಿ ಕಾರ್ಮಿಕರೇ ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಕಾಲ ಚಕ್ರದ ತಿರುಗುವಿಕೆಯ ನಡುವೆ 600 ವರ್ಷಗಳಲ್ಲಿ ಪ್ರಾಂತ್ಯವೊಂದು ಹಳ್ಳಿಯಾಗಿ ಬದಲಾವಣೆಯಾಗಿರುವ ಸೋಜಿಗವನ್ನು ಈ ವೀರಗಲ್ಲು ತೆರೆದಿಟ್ಟಿದೆ. ಇತಿಹಾಸದ ಪುಟಗಳಲ್ಲಿ ಎಲ್ಲೆಲ್ಲಿಯದೋ ಇತಿಹಾಸಗಳನ್ನು, ಯುದ್ಧಗಳನ್ನು ಉರು ಹಾಕುವ ನಮ್ಮ ಮಕ್ಕಳಿಗೆ ನಮ್ಮದೇ ಊರಿನ ಇತಿಹಾಸದ ಬಗ್ಗೆ ತಿಳಿಸಬೇಕಾದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಅಧ್ಯಯನಗಳಿಗೆ ಉತ್ತೇಜನ ನೀಡಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತಗೊಂಡಿದೆ.

ಇತ್ತೀಚೆಗೆ ಸಿಕ್ಕ ವೀರಗಲ್ಲುಗಳ ಪೈಕಿ ಹೊಸಳ್ಳಿಯಲ್ಲಿ ಸಿಕ್ಕಿದ್ದು ಯಾವುದೇ ಹಾನಿ ಆಗದ ಸ್ಥಿತಿಯಲ್ಲಿದೆ. ಸ್ಥಳೀಯ ಇತಿಹಾಸ ಅಧ್ಯಯನಕ್ಕೆ ಈ ವೀರಗಲ್ಲು ಪ್ರಮುಖ ಮೆಟ್ಟಿಲಾಗಲಿದೆ.  -ಲಕ್ಷ್ಮೀಶ ಸೋಂದಾ.

Advertisement

Udayavani is now on Telegram. Click here to join our channel and stay updated with the latest news.

Next