ಶಿರ್ವ: ಪ್ರಗತಿಪರ ಕೃಷಿಕ,ಹಿರಿಯ ಕಾಂಗ್ರೆಸ್ ಧುರೀಣ, ಉಡುಪಿ ತಾ.ಪಂ. ಮಾಜಿ ಉಪಾಧ್ಯಕ್ಷ ಇಗ್ನೇಶಿಯಸ್ ಡಿಸೋಜಾ(70) ಅವರು ಮಟ್ಟಾರು ಧರ್ಮೆಟ್ಟುವಿನ ಸ್ವಗೃಹದಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಕಳೆದೊಂದು ವರ್ಷದಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಅವರು ಅನಾರೋಗ್ಯದಿಂದ ಕಳೆದ 3-4 ದಿನಗಳ ಹಿಂದೆ ಮೃತಪಟ್ಟಿರ ಬಹುದೆಂದು ಶಂಕಿಸಲಾಗಿದೆ.
ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ ಮತ್ತು ಸಹಾಯಕ ನಾಗರಾಜ್ ಸಹಕಾರದೊಂದಿಗೆ ಮೃತದೇಹವನ್ನು ಮಣಿಪಾಲದ ಕೆಎಂಸಿ ಶವಾಗಾರಕ್ಕೆ ರವಾನಿಸಲಾಗಿದೆ. ಪುತ್ರ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ , 6 ಮಂದಿ ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಉಡುಪಿ ತಾ.ಪಂ.ಸದಸ್ಯರಾಗಿ 2 ಬಾರಿ ಆಯ್ಕೆಯಾಗಿದ್ದ ಅವರು ತಾ.ಪಂ. ಉಪಾಧ್ಯಕ್ಷರಾಗಿ, ಶಿರ್ವ ಮಂಡಲ ಪಂಚಾಯತ್ನ ಮಂಡಲ ಪ್ರಧಾನರಾಗಿ,3 ಅವಧಿಗೆ ಮಂಡಲ ಪಂ. ಸದಸ್ಯರಾಗಿ,ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಿರಿಯ ಕಾಂಗ್ರೆಸ್ಸಿಗ ದಿ| ಆಸ್ಕರ್ ಫೆರ್ನಾಂಡಿಸ್ ಅವರ ಒಡನಾಡಿಯಾಗಿದ್ದ ಅವರು 10 ವರ್ಷಗಳ ಕಾಲ ಕಾಪು ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರಾಗಿ,ಜಿಲ್ಲಾ ಕಾಂಗ್ರೆಸ್ನ ಅಲ್ಪಸಂಖ್ಯಾಕ ವಿಭಾಗದ ಅಧ್ಯಕ್ಷರಾಗಿ,ಭೂನ್ಯಾಯ ಮಂಡಳಿಯ ಸದಸ್ಯರಾಗಿ,ಜಿಲ್ಲಾ ಕೆಡಿಪಿ ಸದಸ್ಯರಾಗಿ,ಶಿರ್ವ ಚರ್ಚ್ ಆರ್ಥಿಕ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.ಪ್ರಸ್ತುತ ಉಡುಪಿಜಿಲ್ಲಾ ಕಾಂಗ್ರೆಸ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಅವರ ನಿಧನಕ್ಕೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ,ಕೆಪಿಸಿಸಿ ಸಂಯೋಜಕ ನವೀನ್ಚಂದ್ರ ಶೆಟ್ಟಿ ಪಡುಬಿದ್ರಿ,ಕಾಪು ಬ್ಲಾಕ್ ಕಾಂಗ್ರೆಸ್ಅಧ್ಯಕ್ಷ ನವೀನ್ಚಂದ್ರ ಸುವರ್ಣ,ಮಾಜಿ ಜಿ.ಪಂ. ಸದಸ್ಯ ವಿಲ್ಸನ್ ರೊಡ್ರಿಗಸ್,ಮಾಜಿ ಶಿರ್ವ ಗ್ರಾ.ಪಂ. ಅಧ್ಯಕ್ಷರಾದ ಹಸನಬ್ಬ ಶೇಖ್,ಕೆ.ಆರ್.ಪಾಟ್ಕರ್,ರತನ್ ಶೆಟ್ಟಿ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.