ಬಳ್ಳಾರಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಾಜಿ ಶಾಸಕ ಅನಿಲ್ ಲಾಡ್ ಬಿಜೆಪಿ ಪಕ್ಷ ಸೇರುವ ಕುರಿತಂತೆ ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು, ಸಿಎಂ, ಪಕ್ಷದ ಹಿರಿಯ ಮುಖಂಡರೊಂದಿಗೆ ಚೆರ್ಚೆ ಮಾಡಿದ್ದೇನೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಅನಿಲ್ ಲಾಡ್ ಅವರು ಬಿಜೆಪಿ ಸೇರುವ ಕುರಿತು ಅವರು ಸತತವಾಗಿ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ನನ್ನ ಬಳಿಗೆ ಬಂದು ಮಾತನಾಡಿಯೂ ಹೋಗಿದ್ದಾರೆ. ಆ ಬಳಿಕ ನಾನು ಸಹ ನಮ್ಮ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಯಡಿಯೂರಪ್ಪ, ರಾಜ್ಯ ನಾಯಕರ ಬಳಿ ಈ ಬಗ್ಗೆ ಚರ್ಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಶಾಸಕ ಅನಿಲ್ ಲಾಡ್ ಅವರು, ಈ ಭಾಗದಲ್ಲಿ ದೊಡ್ಡ ಶಕ್ತಿಯಾಗಿದ್ದಾರೆ. ಅವರದ್ದು ಮತ್ತು ಅವರೊಂದಿಗೆ ದೊಡ್ಡ ಸಮಾಜ ಇದೆ. ಶಕ್ತಿ ಇದೆ. ಅವರು ಪಕ್ಷಕ್ಕೆ ಬರುವುದರಿಂದ ಉಪ ಚುನಾವಣೆಯಲ್ಲಿ ಸಹಾಯ ಆಗಬಹುದು. ಯಾವ ಸಮಯದಲ್ಲಿ ಸೇರಿಸಿಕೊಳ್ಳಬೇಕೆಂಬುದು ಚರ್ಚೆ ಮಾಡುತ್ತೇವೆ. ಚುನಾವಣೆ ಇರೋದರಿಂದ ನಮ್ಮ ನಾಯಕರೆಲ್ಲರೂ ಬ್ಯುಸಿ ಇದ್ದಾರೆ ಎಂದು ಹೇಳಿದರು.
ಲಾಡ್ ಅವರು, ಮೂಲ ಬಿಜೆಪಿಯವರೇ. ಮೊದಲು ಬಿಜೆಪಿಯಿಂದಲೇ ಶಾಸಕರಾಗಿದ್ದರು. ಬೇರೆ, ಬೇರೆ ಕಾರಣದಿಂದ ದೂರಾವಾಗಿದ್ದರು. ಎತ್ತರಕ್ಕೆ ಬೆಳೆದಿದ್ದಾರೆ. ಈ ಭಾಗದ ದೊಡ್ಡ ನಾಯಕರಾಗಿದ್ದು, ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಿರವಾಗಿದೆ. ವಾಲ್ಮೀಕಿ ಜನಾಂಗಕ್ಕೆ 7.5 ಮೀಸಲಾತಿ ನೀಡಬೇಕು. ಈ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಇದಕ್ಕಾಗಿ ಜಸ್ಟಿಸ್ ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಲಾಗಿದೆ. ಎರಡು ತಿಂಗಳ ಕಾಲ ಮಿತಿ ನಿಗದಿ ಮಾಡಲಾಗಿದೆ. ಈ ಹಿಂದೆ ವಾಲ್ಮೀಕಿ ಜಯಂತಿಯನ್ನೂ ಸಿಎಂ ಯಡಿಯೂರಪ್ಪ ಅವರೇ ಜಾರಿ ಮಾಡಿದ್ದು, ಇದೀಗ ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿಯನ್ನೂ ಅವರೇ ಜಾರಿಗೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.