Advertisement
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವ ಆಚರಣೆಗೆ ಕಳೆದ ಹಲವು ವರ್ಷಗಳಿಂದ ಪ್ರತ್ಯೇಕ ಪ್ರಾಧಿಕಾರ ರಚನೆ ಕೂಗು ಕೇಳಿ ಬರುತ್ತಿದೆ. ದಸರಾವನ್ನು ವೈಜ್ಞಾನಿಕ ಹಾಗೂ ವ್ಯವಸ್ಥಿತವಾಗಿ ಆಚರಣೆ ಮಾಡಲು ಪ್ರತ್ಯೇಕ ಪ್ರಾಧಿಕಾರ ಅಗತ್ಯವಿದ್ದು, ಇದೀಗ ನೂತನ ಸರ್ಕಾರ ಪ್ರಾಧಿಕಾರವ ರಚ ನೆಗೆ ಮುಂದಾಗಬೇಕಿದೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆಯ ಪ್ರಾಧಿಕಾರ ರಚನೆ ಬೇಡಿಕೆಯನ್ನು ಈಡೇರಿಸಲಿ ಎನ್ನುವುದು ಮೈಸೂರಿಗರ ಬೇಡಿಕೆಯಾಗಿದೆ.
Related Articles
Advertisement
ಪ್ರವಾಸೋದ್ಯಮಕ್ಕೂ ಪೂರಕ : ಹೆಚ್ಚು ಪ್ರವಾಸೋದ್ಯಮವನ್ನೇ ಅವಲಂಭಿಸಿರುವ ಮೈಸೂರಿನಲ್ಲಿ ಹತ್ತಾರು ಪ್ರೇಕ್ಷಣಿಯ ಸ್ಥಳಗಳು, ಧಾರ್ಮಿಕ ಕೇಂದ್ರಗಳಿವೆ. ಇದರ ಜತೆಗೆ ವರ್ಷಕ್ಕೊಮ್ಮೆ ನವರಾತ್ರಿಯಂದು ಆಚರಿಸುವ ದಸರಾ ಉತ್ಸವವನ್ನು ಕೇವಲ ಒಂಭತ್ತು ದಿನಗಳಿಗೆ ಸೀಮಿತಗೊಳಿಸದೇ ಪ್ರಾಧಿಕಾರ ರಚಿಸಿ ಕನಿಷ್ಠ 3 ತಿಂಗಳವರೆಗೆ ನಡೆಸಿದರೆ ಮೈಸೂರು ಜಿಲ್ಲೆ ಮಾತ್ರವಲ್ಲದೇ, ಸುತ್ತಲಿನ ಮೂರ್ನಾಲ್ಕು ಜಿಲ್ಲೆಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಾಗೆಯೇ ನೂರಾರು ಕೋಟಿ ರೂ. ಆರ್ಥಿಕ ವಹಿವಾಟಿಗೆ ಪೂರಕವಾಗಲಿದೆ.
ಅವಳಿ ನಗರ ಚಿಂತನೆಗೆ ಒತ್ತು: ಚಾಮುಂಡಿ ಬೆಟ್ಟ ಮತ್ತು ನಂಜನಗೂಡು ಶ್ರೀಕಂಠೇಶ್ವರ ದೇಗುಲವನ್ನು ದಸರಾ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆ ಮಾಡಿದರೆ ಮೈಸೂರು-ನಂಜನಗೂಡು ಅವಳಿ ನಗರ ಚಿಂತನೆಗೆ ಜೀವ ಬರಲಿದೆ. ಇದರಿಂದ ಸಹಜವಾಗಿಯೇ ನಂಜನಗೂಡು ವೇಗವಾಗಿ ಅಭಿವೃದ್ಧಿ ಕಾಣಲಿದೆ. ಜತೆಗೆ ಎರಡೂ ನಗರಗಳ ಸುತ್ತಲಿನ ಪ್ರವಾಸಿ ತಾಣಗಳೂ ಮತ್ತಷ್ಟು ಬೆಳವಣಿಗೆ ಕಾಣಲಿವೆ.
ಉಪ ಸಮಿತಿಗಳ ಗೊಂದಲಕ್ಕೆ ತೆರೆ: ಪ್ರತಿವರ್ಷ ದಸರಾ ಉತ್ಸವದಲ್ಲಿ ನಾಡಹಬ್ಬವನ್ನು ವ್ಯವಸ್ಥಿತವಾಗಿ ಆಚರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹತ್ತಾರು ಉಪ ಸಮಿತಿಗಳನ್ನು ರಚೆನೆ ಮಾಡಲಾಗುತ್ತದೆ. ಇದರಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿದ್ದು, ಇಬ್ಬರ ನಡುವೆ ಸಹಮತ ಮೂಡದೇ ಒಂದಿಲ್ಲೊಂದು ಗೊಂದಲ ಉಂಟಾಗುವುದು ಸಾಮಾನ್ಯ ಎಂಬಂತಾಗಿದೆ. ಹೀಗಾಗಿ ಈ ಎಲ್ಲಾ ಗೊಂದಲಗಳಿಗೆ ಪ್ರಾಧಿಕಾರ ರಚನೆ ಮದ್ದಾಗಲಿದೆ. ದಸರಾ ವೇಳೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ದರ್ಬಾರ್ ನಡೆಯುತ್ತಿದ್ದು, ಕೊನೆಯ ಕ್ಷಣದಲ್ಲಿ ಎಲ್ಲಾ ಕಾರ್ಯಕ್ರಮಗಳು ನಿರ್ಧಾರವಾಗುತ್ತವೆ. ಇದರಿಂದ ದೇಶ, ವಿದೇಶಗಳಿಂದ ನಿರೀಕ್ಷತ ಮಟ್ಟದ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ. ಈ ಹಿನ್ನೆಲೆ ಪ್ರತಿವರ್ಷ ದಸರಾ ನಡೆಸಲು ಜಿಲ್ಲಾಧಿಕಾರಿಗೆ ಆದೇಶಿಸುವುದರ ಬದಲು, ವಿಶೇಷ ದಸರಾ ಅಧಿಕಾರಿ ಎಂದು ಶಾಶ್ವತವಾಗಿ ಘೋಷಿಸಿ ಪ್ರಾಧಿಕಾರ ರಚಿಸಿ ಎಂಬುದು ಮೈಸೂರಿಗರ ಬೇಡಿಕೆಯಾಗಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಸಂಬಂಧ ಶೀಘ್ರದಲ್ಲೇ ದಸರಾ ಉನ್ನತ ಸಮಿತಿ ಸಭೆ ಕರೆದು ತೀರ್ಮಾನ ಮಾಡುತ್ತೇವೆ. ಜತೆಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕೇ ಅಥವಾ ಬೇಡವೇ ಎಂಬುದರ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು. – ಸಿದ್ದರಾಮಯ್ಯ, ಮುಖ್ಯಮಂತ್ರಿಗಳು
ನಾಡಹಬ್ಬ ದಸರಾ ಉತ್ಸವವನ್ನು ಯಾವುದೇ ಗೊಂದಲ ಇಲ್ಲದಂತೆ ವ್ಯವಸ್ಥಿತವಾಗಿ ಮಾಡಲು ಪ್ರಾಧಿಕಾರದ ಅಗತ್ಯವಿದೆ. ಇದಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ಈಗ ಮೈಸೂರಿನವರೇ ಮುಖ್ಯಮಂತ್ರಿ ಆಗಿರುವುದರಿಂದ ನಮ್ನ ಬೇಡಿಕೆ ಈಡೇರುವ ನಂಬಿಕೆ ಇದೆ. ದಸರಾ ಪ್ರಾಧಿಕಾರದ ಜತೆಗೆ ಪ್ರವಾಸೋದ್ಯಮ ಪ್ರಾಧಿಕಾರವನ್ನೂ ರಚನೆ ಮಾಡಿದರೆ ಮೈಸೂರಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ. – ಸಿ. ನಾರಾಯಣಗೌಡ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮೈಸೂರು
-ಸತೀಶ್ ದೇಪುರ